ಬಿಆರ್‌ಟಿಎಸ್‌ ಎಂಡಿ ವಿರುದ್ಧ ಗೌರ್ನರ್‌ಗೆ ಪತ್ರ

KannadaprabhaNewsNetwork |  
Published : Aug 26, 2025, 01:05 AM IST
ಸಾಮಾನ್ಯಸಭೆ | Kannada Prabha

ಸಾರಾಂಶ

ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಸಾಮಾನ್ಯಸಭೆಯಲ್ಲಿ ಬಿಆರ್‌ಟಿಎಸ್‌ ಎಂಡಿ ಅವರನ್ನು ಆಹ್ವಾನಿಸಲಾಗಿತ್ತು. ಈ ಹಿಂದಿನ ಸಭೆಯಲ್ಲಿ ಬರುವಂತೆ ಪಾಲಿಕೆ ಕೋರಿತ್ತು. ಇದೀಗ 5 ದಿನಗಳ ಮುಂಚಿತವಾಗಿಯೇ ಮೇಯರ್‌ ಜ್ಯೋತಿ ಪಾಟೀಲ ಅವರು, ಪತ್ರ ಬರೆದು ಬಿಆರ್‌ಟಿಎಸ್‌ ಸಮಸ್ಯೆ ಬಗ್ಗೆ ಚರ್ಚಿಸಲು ಬರುವಂತೆ ತಿಳಿಸಿದ್ದರು.

ಹುಬ್ಬಳ್ಳಿ: ಎರಡ್ಮೂರು ಸಲ ಮೇಯರ್‌ ಕರೆದರೂ ಸಾಮಾನ್ಯ ಸಭೆಗೆ ಬಾರದ ಬಿಆರ್‌ಟಿಎಸ್‌ ವ್ಯವಸ್ಥಾಪಕ ನಿರ್ದೇಶಕರು, ಪಾಲಿಕೆಯ ಕ್ಷಮಾಪಣೆ ಕೇಳಬೇಕು. ಅವರ ದುರ್ವರ್ತನೆ ವಿರುದ್ಧ ರಾಜ್ಯಪಾಲರು ಹಾಗೂ ಸರ್ಕಾರಕ್ಕೆ ಪತ್ರ ಬರೆಯಲು ಪಾಲಿಕೆ ಸಾಮಾನ್ಯಸಭೆ ಠರಾವ್‌ ಪಾಸ್‌ ಮಾಡಬೇಕು.

ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಸಾಮಾನ್ಯಸಭೆಯಲ್ಲಿ ಬಿಆರ್‌ಟಿಎಸ್‌ ಎಂಡಿ ಅವರನ್ನು ಆಹ್ವಾನಿಸಲಾಗಿತ್ತು. ಈ ಹಿಂದಿನ ಸಭೆಯಲ್ಲಿ ಬರುವಂತೆ ಪಾಲಿಕೆ ಕೋರಿತ್ತು. ಇದೀಗ 5 ದಿನಗಳ ಮುಂಚಿತವಾಗಿಯೇ ಮೇಯರ್‌ ಜ್ಯೋತಿ ಪಾಟೀಲ ಅವರು, ಪತ್ರ ಬರೆದು ಬಿಆರ್‌ಟಿಎಸ್‌ ಸಮಸ್ಯೆ ಬಗ್ಗೆ ಚರ್ಚಿಸಲು ಬರುವಂತೆ ತಿಳಿಸಿದ್ದರು.

ಆದರೂ ಸಭೆಗೆ ಎಂಡಿ ಬಾರದೇ ತಮ್ಮ ಇಲಾಖೆಯ ಸಾರ್ವಜನಿಕ ಸಂಪರ್ಕ ಅಧಿಕಾರಿಯನ್ನು ಕಳುಹಿಸಿದ್ದರು. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಸದಸ್ಯ ಶಿವು ಹಿರೇಮಠ, ನಾವು ಹೇಳುವ ಸಮಸ್ಯೆ ಬಗೆಹರಿಸಲು ನಿಮ್ಮಿಂದ ಸಾಧ್ಯವೇ? ಎಂದು ಪ್ರಶ್ನಿಸಿದರು. ಆದರೆ, ಬಂದಂಥ ಅಧಿಕಾರಿ, ನೀವು ಹೇಳುವ ಸಮಸ್ಯೆ ಬಗ್ಗೆ ಹಿರಿಯ ಅಧಿಕಾರಿಗಳಿಗೆ ತಿಳಿಸಬಹುದಷ್ಟೇ ಆದರೆ, ಪರಿಹರಿಸಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದರು.

ಅದಕ್ಕೆ ತೀವ್ರ ತರಾಟೆ ತೆಗೆದುಕೊಂಡ ಹಿರೇಮಠ ಸೇರಿದಂತೆ ಇತರೆ ಸದಸ್ಯರು, ಸಮಸ್ಯೆ ಬಗೆಹರಿಸಲು ನಿಮ್ಮಿಂದ ಸಾಧ್ಯವಿಲ್ಲ ಎಂದಾದರೆ ಸಭೆಗೆ ಏಕೆ ಬಂದೀರಿ. ನಮ್ಮ ಸಮಸ್ಯೆ ಹೇಳಿ ಕಳುಹಿಸಲು ಕರೆಯಿಸಿಲ್ಲ. ಪರಿಹಾರ ಬೇಕು ಎಂದು ತಾಕೀತು ಮಾಡಿದರು.

ಎಲ್ಲೆಂದರಲ್ಲಿ ಬಿಆರ್‌ಟಿಎಸ್‌ ಬಸ್‌ಗಳಿಗೆ ಬೆಂಕಿ ತಗುಲುತ್ತಿದೆ. ಎಕ್ಸಲ್‌ ಕಟ್‌ ಆಗುತ್ತಿವೆ. ಬ್ಯಾರಿಕೇಡ್‌ಗಳೆಲ್ಲ ಹಾಳಾಗಿವೆ. ಸಾರ್ವಜನಿಕರಿಗೆ ಸೇವೆಗಿಂತ ಸಮಸ್ಯೆಯನ್ನು ಜಾಸ್ತಿ ನೀಡುತ್ತಿವೆ. ಈ ಬಗ್ಗೆ ಚರ್ಚಿಸಲು ಎಂಡಿ ಅವರಿಗೆ ಮೇಯರ್‌ ಅವರೇ ಖುದ್ದಾಗಿ ಕರೆದರೂ ಅವರಿಂದ ಸ್ಪಂದನೆ ಇಲ್ಲ. ಪಾಲಿಕೆ ಸಾಮಾನ್ಯಸಭೆಗೆ ಗೌರವ ಇಲ್ಲವೇ? ನೀವು ಭಾಗವಹಿಸುವುದು ಬೇಡ ಹೊರಡಿ ಎಂದು ಕಳುಹಿಸಿದರು.

ಬಳಿಕ ಸಭೆಗೆ ಬಾರದ ಎಂಡಿ ಅವರ ವಿರುದ್ಧ ಠರಾವು ಪಾಸ್‌ ಮಾಡಬೇಕು. ರಾಜ್ಯಪಾಲರು ಹಾಗೂ ಸರ್ಕಾರಕ್ಕೆ ಅವರ ವಿರುದ್ಧವಾಗಿ ಪತ್ರ ಬರೆಯಬೇಕು. ಜತೆಗೆ ಸಭೆಗೆ ಬಂದು ಕ್ಷಮೆ ಕೇಳಬೇಕು ಎಂದು ಸರ್ವಪಕ್ಷದ ಸದಸ್ಯರು ಒಕ್ಕೊರಲಿನಿಂದ ಆಗ್ರಹಿಸಿದರು. ಬಳಿಕ ಜ್ಯೋತಿ ಪಾಟೀಲ ಅವರು, ರಾಜ್ಯಪಾಲರಿಗೆ ಹಾಗೂ ಸರ್ಕಾರಕ್ಕೆ ಪತ್ರ ಬರೆಯುವಂತೆ ಆಯುಕ್ತರಿಗೆ ಸೂಚಿಸಿ ಆದೇಶಿಸಿದರು.

ಪೇಯ್ಡ್‌ ಪಾರ್ಕಿಂಗ್‌: ಈ ನಡುವೆ ನಗರದಲ್ಲಿ ಪೇಯ್ಡ್‌ ಪಾರ್ಕಿಂಗ್‌ ಬಗ್ಗೆ ಮತ್ತೆ ಅಸಮಾಧಾನ ವ್ಯಕ್ತವಾಯಿತು. ನಗರದ ದುರ್ಗದ ಬೈಲ್‌ ಸೇರಿದಂತೆ ವಿವಿಧೆಡೆ ಪಾಲಿಕೆಯಿಂದ ಗುತ್ತಿಗೆ ಪಡೆದಿರುವ ಪೇಯ್ಡ್‌ ಪಾರ್ಕಿಂಗ್‌ನ ಸಿಬ್ಬಂದಿ ಸಾರ್ವಜನಿಕರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸುತ್ತಾರೆ. ದರ ನಿಗದಿಯಲ್ಲೂ ವ್ಯತ್ಯಾಸವಾಗುತ್ತದೆ. ಜತೆಗೆ ಈ ವಿಷಯವಾಗಿ ಜಗಳ ವಾಗ್ವಾದಗಳೆಲ್ಲ ಆಗುತ್ತಿವೆ. ಪೇಯ್ಡ್‌ ಪಾರ್ಕಿಂಗ್‌ ರದ್ದುಪಡಿಸಿಬಿಡಿ ಎಂದು ಸದಸ್ಯ ಶಿವು ಮೆಣಸಿನಕಾಯಿ ಆಗ್ರಹಿಸಿದರು. ಇದಕ್ಕೆ ವಿರೋಧ ಪಕ್ಷದ ನಾಯಕ ಇಮ್ರಾನ್‌ ಎಲಿಗಾರ ಆಕ್ಷೇಪಿಸಿ, ವರ್ಷಕ್ಕೆ ಲಕ್ಷಗಟ್ಟಲೇ ಹಣ ನೀಡಿ ಟೆಂಡರ್‌ ಕರೆದಿರುತ್ತಾರೆ. ಈಗ ಏಕಾಏಕಿ ರದ್ದುಪಡಿಸಿದರೆ ಅವರ ಗತಿ ಏನಾಗಬೇಡ? ಆದಕಾರಣ ರದ್ದುಪಡಿಸುವುದು ಬೇಡ ಎಂದರು. ಇದಕ್ಕೆ ಕಾಂಗ್ರೆಸ್‌ ಸದಸ್ಯರು ದ್ವನಿಗೂಡಿಸಿದರು. ಬಳಿಕ ಪಾಲಿಕೆ ಅಧಿಕಾರಿಗಳು ಪಾರ್ಕಿಂಗ್‌ ಸ್ಥಳಗಳಲ್ಲಿ ಪರಿಶೀಲನೆ ನಡೆಸಿ ಒಂದು ವೇಳೆ ಅವಾಚ್ಯ ಶಬ್ದಗಳಿಂದ ನಿಂದಿಸುತ್ತಿದ್ದರೆ, ಆತನಿಗೆ ನೋಟಿಸ್‌ ನೀಡಿ ಕ್ರಮ ಕೈಗೊಳ್ಳುವಂತೆ ಆದೇಶಿಸಿ ಮೇಯರ್‌ ಠರಾವ್‌ ಪಾಸ್‌ ಮಾಡಿದರು.

ಈ ಸಲವೂ ಅನುಮೋದನೆ ಸಿಗಲಿಲ್ಲ: ಮುಖ್ಯಮಂತ್ರಿ ವಿವೇಚನೆಯಡಿ ನೀಡಿರುವ ₹10 ಕೋಟಿ ಅನುದಾನದ ಕ್ರಿಯಾಯೋಜನೆಗೆ ಈ ಸಾಮಾನ್ಯಸಭೆಯಲ್ಲೂ ಅನುಮೋದನೆ ಸಿಗಲಿಲ್ಲ. ಕಾಂಗ್ರೆಸ್‌ ಶಾಸಕ ವಿನಯ ಕುಲಕರ್ಣಿ ತಮ್ಮ ಕ್ಷೇತ್ರದ ವಾರ್ಡ್‌ಗಳಿಗೆ ₹10 ಕೋಟಿ ಅನುದಾನ ತಂದಿದ್ದಾರೆ. ಕಳೆದ ಬಾರಿಯೂ ಈ ವಿಷಯಕ್ಕೆ ಅನುಮೋದನೆ ನೀಡಲು ವಿರೋಧ ವ್ಯಕ್ತವಾಗಿತ್ತು. ಕೆಲವೊಂದಿಷ್ಟು ಸ್ಪಷ್ಟನೆ ಬಯಸಿ ಸರ್ಕಾರಕ್ಕೆ ಪತ್ರ ಬರೆಯುವಂತೆ ಸೂಚಿಸಲಾಗಿತ್ತು. ಆಗ ವಿರೋಧ ಪಕ್ಷವೂ ಸಭಾತ್ಯಾಗ ಮಾಡಿತ್ತು. ಈ ಸಲವಾದರೂ ಠರಾವ್‌ ಪಾಸಾಗಬಹುದು ಎಂಬ ನಿರೀಕ್ಷೆ ವಿಪಕ್ಷದಾಗಿತ್ತು. ಆಡಳಿತ ಪಕ್ಷದ ಸದಸ್ಯರು, ಈ ವಿಷಯವಾಗಿ ಸರ್ಕಾರಕ್ಕೆ ಪತ್ರ ಬರೆಯುವಂತೆ ಸೂಚಿಸಲಾಗಿತ್ತು ಪತ್ರ ಬರೆಯಲಾಗಿದೆಯೇ? ಎಂದು ಪ್ರಶ್ನಿಸಿದರು. ಅದಕ್ಕೆ ಆಯುಕ್ತರು ಸರ್ಕಾರಕ್ಕೆ ಪತ್ರ ಬರೆಯಲಾಗಿದೆ ಎಂದು ಸ್ಪಷ್ಟಪಡಿಸಿದರು. ಅಲ್ಲಿಂದ ನಿರ್ದೇಶನ ಬಂದ ಬಳಿಕ ನಿರ್ಧಾರ ಕೈಗೊಳ್ಳುವಂತೆ ಕೇಳಿಕೊಂಡರು. ಅದಕ್ಕೆ ಮೇಯರ್‌ ಸರ್ಕಾರದ ನಿರ್ದೇಶನದ ಬಳಿಕ ನಿರ್ಣಯ ಕೈಗೊಳ್ಳುವುದಾಗಿ ಠರಾವ್‌ ಪಾಸ್‌ ಮಾಡಿದರು.

ಪಾಲಿಕೆ ಸಭೆಯಲ್ಲಿ ಧರ್ಮಸ್ಥಳ ಪ್ರಕರಣ

ಹುಬ್ಬಳ್ಳಿ: ಧರ್ಮಸ್ಥಳದ ಪ್ರಕರಣ ರಾಜ್ಯ ಹಾಗೂ ರಾಷ್ಟ್ರೀಯ ಮಟ್ಟದಲ್ಲಿ ಸಾಕಷ್ಟು ಸುದ್ದಿಯಾಗಿದ್ದು, ಧರ್ಮಸ್ಥಳದ ಎಸ್.ಐ.ಟಿ ತನಿಖೆಯ ವಿಷಯ ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯಲ್ಲಿ ಗಮನ ಸೂಚಕ ವಿಷಯವಾಗಿ ಚರ್ಚೆಗೆ ಬಂದಿದೆ.

ಧರ್ಮಸ್ಥಳದ ಬಗ್ಗೆ ಇಲ್ಲಸಲ್ಲದ ಆರೋಪ ಮಾಡಿ ಹೆಸರು ಹಾಳು ಮಾಡುವವರ ವಿರುದ್ಧ ಕಾನೂನು ರೀತಿಯಲ್ಲಿ ಸೂಕ್ತ ಕ್ರಮ ಜರುಗಿಸುವಂತೆ, ಸರ್ಕಾರದ ಗಮನಕ್ಕೆ ತರಬೇಕೆಂದು ಪಾಲಿಕೆ ಸದಸ್ಯ ರಾಜಣ್ಣ ಕೊರವಿ ಆಗ್ರಹಿಸಿದರು.

ಇನ್ನು ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಅವರ ಕಾರ್ಯವನ್ನು ಹಾಗೂ ಎಸ್.ಕೆ.ಡಿ.ಆರ್.ಡಿ.ಪಿ ಯೋಜನೆ ಅಡಿಯಲ್ಲಿ ಮಾಡಿರುವ ಕಾರ್ಯಕ್ರಮದ ಬಗ್ಗೆ ಮಾಹಿತಿ ನೀಡಿದರು.

ಅನನ್ಯ ಭಟ್, ಸುಜಾತ ಭಟ್, ಮಾಸ್ಕ್ ಮ್ಯಾನ್ ಬಗ್ಗೆ ಎಸ್.ಐ.ಟಿ ಅಧಿಕಾರಿಗಳು ವರದಿ ಬಿಡುಗಡೆ ಮಾಡಬೇಕು, ಷಡ್ಯಂತ್ರ ಮಾಡಿದವರ ವಿರುದ್ಧ ಸೂಕ್ತ ಕ್ರಮಗಳನ್ನು ಜರುಗಿಸಬೇಕು ಎಂದು ಸರ್ಕಾರಕ್ಕೆ ಒತ್ತಾಯಿಸಿದರು.

ಇದಕ್ಕೆ ಉಳಿದ ಸದಸ್ಯರು ದ್ವನಿಗೂಡಿಸಿದರು. ವಿರೋಧ ಪಕ್ಷದ ನಾಯಕ ಇಮ್ರಾನ್‌ ಯಲಿಗಾರ ಮಾತನಾಡಿ, ಧರ್ಮಸ್ಥಳದ ವಿವಾದ ಕುರಿತು ಎಸ್‌ಐಟಿ ತನಿಖೆ ನಡೆಯುತ್ತಿದೆ. ಅನ್ಯಾಯ ಆದವರಿಗೆ ನ್ಯಾಯ ಸಿಗುತ್ತದೆ. ಆ ನಿಟ್ಟಿನಲ್ಲಿ ಸರ್ಕಾರ ಕೆಲಸ ಮಾಡುತ್ತಿದೆ. ಧರ್ಮಸ್ಥಳ ಧಾರ್ಮಿಕ ಕ್ಷೇತ್ರ, ಮಹಿಳಾ ಸಬಲೀಕರಣದ ಕೆಲಸ ಮಾಡುತ್ತಿದೆ. ಸರ್ಕಾರ ಅಲ್ಲಿನ ಸಮಸ್ಯೆ ಬಗೆಹರಿಸಬೇಕು ಎಂದರು.

PREV

Recommended Stories

ದಸರಾ ಉದ್ಘಾಟನೆಗೆ ಬಾನು : ಬಿಜೆಪಿ vs ಕಾಂಗ್ರೆಸ್ ಜಟಾಪಟಿ
ಧರ್ಮಸ್ಥಳ ಎಸ್‌ಐಟಿ ಅಧಿಕಾರಿ ಅನುಚೇತ್‌ ಅಮೆರಿಕ ಪ್ರವಾಸಕ್ಕೆ