ಕನ್ನಡಪ್ರಭ ವಾರ್ತೆ ತುಮಕೂರುಯಾವುದೇ ಶಾಲೆ, ಕಾಲೇಜು, ವಿಶ್ವವಿದ್ಯಾನಿಲಯ ಕಲಿಸದ ಪಾಠವನ್ನು ಜೀವನ ಕಲಿಸುತ್ತದೆ ಎಂದು ವಾಣಿಜ್ಯೋದ್ಯಮಿ, ಪ್ರವರ್ತಕ ಪ್ರದೀಪ್ ಬಿ.ಪಿ.ರವರು ತಿಳಿಸಿದರು. ಶ್ರೀದೇವಿ ತಾಂತ್ರಿಕ ಮಹಾವಿದ್ಯಾಲಯ ವತಿಯಿಂದ ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಸಮಾರಂಭ ಹಾಗೂ ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದರು.ಸಾಂಪ್ರದಾಯಿಕ ಶಿಕ್ಷಣಕ್ಕಿಂತ ಜೀವನ ಕಲಿಸುವ ಪಾಠ ಮತ್ತು ಶಿಕ್ಷಣ ಮುಖ್ಯವಾಗುತ್ತದೆ. ಶಿಕ್ಷಣ ಮನುಷ್ಯನನ್ನು ಎಷ್ಟು ಎತ್ತರಕ್ಕೆ ಬೇಕಾದರೂ ತೆಗೆದುಕೊಂಡು ಹೋಗುವ ಅಗಾಧ ಶಕ್ತಿ ಪಡೆದುಕೊಂಡಿದೆ. ಎಲ್ಲರೊಂದಿಗೆ ಸ್ನೇಹ, ವಿಶ್ವಾಸ ಮತ್ತು ಉತ್ತಮ ಸಂಪರ್ಕ ಬೆಳೆಸಿಕೊಂಡರೆ ಜೀವನದಲ್ಲಿ ಮತ್ತು ಉದ್ಯಮದಲ್ಲಿ ಎದುರಾಗುವ ಯಾವುದೇ ಸ್ಪರ್ಧೆ, ಅಡ್ಡಿಆತಂಕ ಎದುರಿಸಿ ಗುರಿ ಮುಟ್ಟಬಹುದು. ಪ್ರತಿಯೊಬ್ಬ ವಿದ್ಯಾರ್ಥಿಯೂ ಯಶಸ್ವಿ ವ್ಯಕ್ತಿಗೆ ಉದ್ಯಮಿ ಹಿಂದೆ ಶಿಕ್ಷಣದ ಪಾತ್ರ ಬಹಳವಾಗಿದೆ ಎಂದರು. ಡಾ. ಎಂ.ಆರ್.ಹುಲಿನಾಯ್ಕರ್ ಮಾತನಾಡಿ, ಭಾರತದಲ್ಲಿ ಎಂಜಿನಿಯರಿಂಗ್ ಕ್ಷೇತ್ರದಲ್ಲಿ ಬೇಕಾದಷ್ಟು ಅವಕಾಶಗಳಿವೆ. ಪ್ರಾಮಾಣಿಕತೆ, ಸರಳಜೀವನ ಉದಾತ್ತ ಆಲೋಚನೆಯಿಂದ ಏನು ಬೇಕಾದರೂ ಸಾಧಿಸಬಹುದು ಎಂಬುದಕ್ಕೆ ಹಲವು ನಿದರ್ಶನಗಳಿವೆ. ಶಿಕ್ಷಣದ ನಂತರ ಉದ್ಯೋಗ ಹುಡುಕಾಟದ ಬದಲು ಉದ್ಯಮಿಯಾಗಿ ನೀವೇ ಹತ್ತಾರು ಜನರಿಗೆ ಉದ್ಯೋಗ ನೀಡುವಂತಹ ಅವಕಾಶಗಳನ್ನು ಬಳಸಿಕೊಳ್ಳಬೇಕು. ಎಂಜಿನಿಯರಿಂಗ್ ಶಿಕ್ಷಣದಲ್ಲಿ ಸ್ನಾತಕೋತ್ತರ ಪದವಿ ಪಡೆದ ವಿದ್ಯಾರ್ಥಿಗಳಿಗೆ ಬೇಡಿಕೆ ಹೆಚ್ಚಾಗುತ್ತಿದೆ ಅದರಂತೆ ಜಾಗತಿಕ ಮಟ್ಟದಲ್ಲೂ ಅವಕಾಶಗಳು ಹೆಚ್ಚಾಗುತ್ತಿವೆ ಎಂದು ಹೇಳಿದರು.ಕಾರ್ಯಕ್ರಮದ ಗೌರವ ಅತಿಥಿಗಳಾಗಿ ಶ್ರೀದೇವಿ ಸಂಸ್ಥೆಯ ಮಾನವ ಸಂಪನ್ಮೂಲ ವಿಭಾಗದ ನಿರ್ದೇಶಕ ಎಂ.ಎಸ್.ಪಾಟೀಲ್ ಮಾತನಾಡಿ ವಿದ್ಯಾರ್ಥಿಗಳು ಕನಸು ಕಾಣಿ ನಂತರ ನಿದ್ದೆ ಮಾಡಬೇಡಿ, ಕನಸಿನ ಬೆನ್ನು ಹತ್ತಿ ಕಾರ್ಯರೂಪಕ್ಕೆ ಗುರಿಯಿಡಿ, ಶ್ರಮ ಹಾಕಿ ಇದರಿಂದ ಯಾವ ಸಾಧನೆಯನ್ನಾದರೂ ಮಾಡಬಹುದು. ಬೇರೆಯವರಿಗಿಂತ ನಮ್ಮ ಶಕ್ತಿಯ ಬಗ್ಗೆ ನಮಗೆ ಅರಿವಿರಬೇಕು ಜೊತೆಗೆ ಆತ್ಮವಿಶ್ವಾಸ ಬೆಳೆಸಿಕೊಂಡರೆ ಯಶಸ್ಸಿನ ದಾರಿ ತಾನಾಗಿಯೇ ತೆರೆದುಕೊಳ್ಳುತ್ತದೆ ಎಂದು ಹೇಳಿದರು. ಶ್ರೀದೇವಿ ಎಂಜಿನಿಯರಿಂಗ್ ಕಾಲೇಜಿನ ಪ್ರಾಂಶುಪಾಲ ಡಾ.ನರೇಂದ್ರ ವಿಶ್ವನಾಥ್ ಮಾತನಾಡಿದರು. ಅಶ್ವಿನ್, ದೀಪಾ ಐಸಿರಿ, ದೇವರಾಜ್, ಶೈಲಜಾ ಮತ್ತು ಅಂಕಿತ, ಡಾ.ಎನ್.ಚಂದ್ರಶೇಖರ್, ಡಾ.ಕೆ.ಎಸ್.ರಾಮಕೃಷ್ಣ, ಪ್ರೊ.ಕಾವ್ಯಕುಮಾರ್ ಇತರರಿದ್ದರು.