ಸಂಸದರ ಪರಿಕಲ್ಪನೆಯ ‘ಬೊಲ್ಪು’ ಕಾರ್ಯಯೋಜನೆ ಚಾಲನೆಗೆ

KannadaprabhaNewsNetwork |  
Published : Jul 13, 2025, 01:19 AM IST
ಬೊಲ್ಪು ಕಾರ್ಯಯೋಜನೆಗೆ ಚಾಲನೆ ನೀಡುತ್ತಿರುವ ಸಂಸದ ಕ್ಯಾ.ಬ್ರಿಜೇಶ್‌ ಚೌಟ  | Kannada Prabha

ಸಾರಾಂಶ

ಉದ್ಯಮಶೀಲತೆ ಹಾಗೂ ಉದ್ಯೋಗಾಕಾಂಕ್ಷಿಗಳಿಗೆ ನೆರವಾಗುವ ದಿಶೆಯಲ್ಲಿ ಇದನ್ನು ಹುಟ್ಟುಹಾಕಿದ್ದು, ಮಂಗಳೂರಿಗರಾಗಿದ್ದು, ಹೊರಗೆ ಉದ್ಯೋಗ ನಿರ್ವಹಿಸುವ ಮಂದಿ ಮರಳಿ ಊರಿಗೆ ಬಂದು ಉದ್ದಿಮೆ ನಡೆಸಲು ಇದು ವೇದಿಕೆ ಕಲ್ಪಿಸಲಿದೆ. ಅಲ್ಲದೆ ಉದ್ಯೋಗಾಕಾಂಕ್ಷಿಗಳಿಗೂ ಬೊಲ್ಪು ನೆರವಾಗಲಿದೆ.

5 ವರ್ಷಗಳಲ್ಲಿ ಉದ್ದಿಮೆ ಯಶೋಗಾಥೆ ಸೃಷ್ಟಿ: ಕ್ಯಾ.ಬ್ರಿಜೇಶ್‌ ಚೌಟ

ಕನ್ನಡಪ್ರಭ ವಾರ್ತೆ ಮಂಗಳೂರು

ಲೋಕಸಭಾ ಚುನಾವಣೆ ವೇಳೆ ಬಿಜೆಪಿ ಪ್ರಣಾಳಿಕೆಯಲ್ಲಿ ನೀಡಿದ ಭರವಸೆಯಂತೆ ನವಯುಗ-ನವಪಥ ಯೋಜನೆಯಡಿ ಮಂಗಳೂರಲ್ಲಿ ಉದ್ಯೋಗ ಸ್ಥಾಪನೆಗೆ ನೆರವಾಗಲು ದ.ಕ. ಸಂಸದ ಕ್ಯಾ.ಬ್ರಿಜೇಶ್‌ ಚೌಟರ ಕನಸಿನ ಅವಕಾಶಗಳ ಹೊಸ ಬೆಳಕಾದ ‘ಬೊಲ್ಪು’ ಕಾರ್ಯಯೋಜನೆಗೆ ನಗರದ ಖಾಸಗಿ ಹೊಟೇಲ್‌ನಲ್ಲಿ ಶನಿವಾರ ಚಾಲನೆ ನೀಡಲಾಯಿತು. ಉದ್ಯಮಶೀಲತೆ ಹಾಗೂ ಉದ್ಯೋಗಾಕಾಂಕ್ಷಿಗಳಿಗೆ ನೆರವಾಗುವ ದಿಶೆಯಲ್ಲಿ ಇದನ್ನು ಹುಟ್ಟುಹಾಕಿದ್ದು, ಮಂಗಳೂರಿಗರಾಗಿದ್ದು, ಹೊರಗೆ ಉದ್ಯೋಗ ನಿರ್ವಹಿಸುವ ಮಂದಿ ಮರಳಿ ಊರಿಗೆ ಬಂದು ಉದ್ದಿಮೆ ನಡೆಸಲು ಇದು ವೇದಿಕೆ ಕಲ್ಪಿಸಲಿದೆ. ಅಲ್ಲದೆ ಉದ್ಯೋಗಾಕಾಂಕ್ಷಿಗಳಿಗೂ ಬೊಲ್ಪು ನೆರವಾಗಲಿದೆ.

5 ವರ್ಷಗಳಲ್ಲಿ ಯಶೋಗಾಥೆ ಸೃಷ್ಟಿ:

ಉದ್ಯಮಿಗಳಿಗೆ ಮಾತ್ರವಲ್ಲ ನವೋದ್ಯಮಿಗಳಿಗೆ ಸೂಕ್ತ ನೆರವು, ಮಾರ್ಗದರ್ಶನ ನೀಡುವ ವೇದಿಕೆಯಾಗಿ ‘ಬೊಲ್ಪು’ ಉದಯಿಸಿದೆ. ಇದರ ಮೂಲಕ ಮುಂದಿನ ಐದು ವರ್ಷಗಳಲ್ಲಿ ಉದ್ದಿಮೆ ರಂಗದಲ್ಲಿ ಹೊಸ ಯಶೋಗಾಥೆ ಸೃಷ್ಟಿಸುವ ಉದ್ದೇಶ ಹಾಕಿಕೊಳ್ಳಲಾಗಿದೆ ಎಂದು ಸಂಸದ ಕ್ಯಾ.ಬ್ರಿಜೇಶ್‌ ಚೌಟ ಹೇಳಿದರು.

ಮಂಗಳೂರು ಹಲವು ಉದ್ಯಮಗಳನ್ನು ನೋಡಿದೆ, ಬೀಡಿಯಿಂದ ತೊಡಗಿ ಗೋಡಂಬಿ ವಹಿವಾಟಿನ ವರೆಗೂ ನಮ್ಮಲ್ಲಿ ಹಲವು ಯಶಸ್ವಿ ಉದ್ಯಮಿಗಳಿದ್ದಾರೆ. ಇದು ಸ್ಫೂರ್ತಿದಾಯಕ. ಇದು ಇಷ್ಟಕ್ಕೇ ನಿಲ್ಲಬಾರದು, ಉದ್ಯಮಗಳು ಮತ್ತಷ್ಟು ಯಶಸ್ಸು ಕಾಣಬೇಕು ಹಾಗೂ ಪರಿಧಿಯನ್ನು ಮೀರಿ ಬೆಳೆಯಬೇಕು ಎಂಬ ಕಾರಣಕ್ಕೆ ಹಾಗೂ ಹೊಸ ಉದ್ಯಮಿಗಳಿಗೆ ನೆರವಾಗಲು ‘ಬೊಲ್ಪು’ ಎನ್ನುವ ಪರಿಕಲ್ಪನೆಯನ್ನು ತರಲಾಗಿದೆ ಎಂದರು.

ಇಸ್ರೇಲ್‌ ಕೃಷಿ ತಂತ್ರಜ್ಞಾನ ಬಳಕೆ ಇಂಗಿತ:

ನಾನು ಇಸ್ರೇಲಿನ ರಾಯಭಾರಿಯವರನ್ನು ಭೇಟಿಯಾಗಿದ್ದೇನೆ. ನಮ್ಮ ಜಿಲ್ಲೆಯಲ್ಲಿ ಸೀಮಿತ ಪ್ರಮಾಣದಲ್ಲಿರುವ ಕೃಷಿಭೂಮಿಯನ್ನು ಪರಿಣಾಮಕಾರಿಯಾಗಿ ಕೃಷಿಗೆ ಬಳಕೆ ಮಾಡುವುದಕ್ಕೆ ಇಸ್ರೇಲ್‌ ತಂತ್ರಜ್ಞಾನದ ಉಪಯೋಗದ ಬಗ್ಗೆ ಅವರೊಂದಿಗೆ ಚರ್ಚಿಸಿದ್ದೇನೆ. ಮುಖ್ಯವಾಗಿ ಮಹಿಳೆಯರು ತಮ್ಮ ಸಣ್ಣ ಭೂಮಿಯಲ್ಲೂ ತರಕಾರಿ-ಹಣ್ಣು ಬೆಳೆಸಿ ರಫ್ತು ಮಾಡುವುದಕ್ಕೆ ಉತ್ತೇಜನ ಕೊಡಬಹುದು, ಅಂತಹ ಕಾರ್ಯಕ್ಕೂ ಬೊಲ್ಪು ನೆರವಾಗಲಿದೆ. ಕೇವಲ ಕೆಟ್ಟಕಾರಣಗಳಿಗೆ ಮಂಗಳೂರು ಸುದ್ದಿಯಾಗುತ್ತಿದೆ, ಅದರ ಬದಲಿಗೆ ಇಂತಹ ಸ್ಫೂರ್ತಿದಾಯಕ ವಿಚಾರಗಳು ಪ್ರಚಾರ ಪಡೆಯಬೇಕಿದೆ ಎಂದರು.ಮಂಗಳೂರು ದಕ್ಷಿಣ ಶಾಸಕ ವೇದವ್ಯಾಸ ಕಾಮತ್‌ ಮಾತನಾಡಿ, ನಮ್ಮ ಜಿಲ್ಲೆಯಲ್ಲಿ ಎಲ್ಲ ಸಂಪನ್ಮೂಲಗಳೂ ಇವೆ, ಯಶಸ್ವಿ ಉದ್ಯಮಿಗಳಿದ್ದಾರೆ. ಆದರೆ ಯುವ ಸಂಸದ ಕ್ಯಾ. ಬ್ರಿಜೇಶ್‌ ಚೌಟ ಅವರು ಯಾವುದೇ ಉದ್ಯಮಕ್ಕೆ ಇನ್ನಷ್ಟು ಅವಕಾಶ ಕಲ್ಪಿಸಿದರೆ ಅದು ಬಹಳ ದೊಡ್ಡದಾಗಿ ಬೆಳೆಯಬಹುದು. ಹೊಸ ಉದ್ಯಮಿಗಳಿಗೆ ಅವಕಾಶ ಕೊಟ್ಟರೆ ಜಿಲ್ಲೆ ಅಭಿವೃದ್ಧಿಯಾಗಬಹುದು ಎನ್ನುವ ದೂರದೃಷ್ಟಿ ಹೊಂದಿದ್ದಾರೆ, ಇದು ಉತ್ತಮ ಪರಿಕಲ್ಪನೆ ಎಂದು ಶ್ಲಾಘಿಸಿದರು.ಮಾಜಿ ಸಚಿವ ಬಿ.ನಾಗರಾಜ ಶೆಟ್ಟಿ, ವಿಧಾನ ಪರಿಷತ್‌ ಮಾಜಿ ಸದಸ್ಯ ಕ್ಯಾ.ಗಣೇಶ್‌ ಕಾರ್ಣಿಕ್‌, ಬೊಲ್ಪು ವೇದಿಕೆಯ ಕಾರ್ಯನಿರ್ವಾಹಕ ಪಾಲುದಾರರಾದ ಜಾನ್ಸನ್‌, ರೋಹಿತ್‌ ಮತ್ತಿತರರಿದ್ದರು. ----------------2 ಟೈರ್‌ ಸಿಟಿಯಲ್ಲಿ ‘ಬೊಲ್ಪು’ ಕೆಲಸ

ಉದ್ಯಮಶೀಲರಿಗಾಗಿ ನೆರವಾಗಲಿ ಪ್ರಧಾನಿ ಮೋದಿಯವರ ಮುತುವರ್ಜಿಯಲ್ಲಿ ಸ್ಟ್ಯಾಂಡ್‌ ಅಪ್‌ ಇಂಡಿಯಾ, ಸ್ಕಿಲ್‌ ಇಂಡಿಯಾ, ಮುದ್ರಾ ಸಾಲ ಯೋಜನೆಯಂತಹ ಹಲವು ಕಾರ್ಯಕ್ರಮಗಳಿವೆ. ಅವುಗಳ ಬಗ್ಗೆ ಮಾಹಿತಿ ಪಡೆದುಕೊಳ್ಳಬೇಕು. ಎರಡನೇ ಸ್ತರದ (2 ಟೈರ್‌ ಸಿಟಿ) ನಗರಗಳು ಕೂಡಾ ಮುಂಚೂಣಿಗೆ ಬರಬೇಕು ಎನ್ನುವ ಪ್ರಧಾನಿಯವರ ಕನಸಿಗೆ ಪೂರಕವಾಗಿ ಈ ಬೊಲ್ಪು ಕೆಲಸ ಮಾಡಲಿದೆ. ಇದಕ್ಕಾಗಿ ಕೈಗಾರಿಕೋದ್ಯಮಿಗಳು, ಶಿಕ್ಷಣ ಸಂಸ್ಥೆಗಳ ಸಂಪರ್ಕದಲ್ಲಿ ಇದ್ದುಕೊಂಡು ಕೆಲಸ ಮಾಡಲಾಗುವುದು. ಬೊಲ್ಪು ಕೆಲಸದಲ್ಲಿ ಕೈಜೋಡಿಸಲು ಈ ವೆಬ್‌ಸೈಟ್‌ನ್ನು(www.bolpumangaluru.com) ಸಂಪರ್ಕಿಸಬಹುದು ಎಂದು ಕ್ಯಾ.ಬ್ರಿಜೇಶ್‌ ಚೌಟ ವಿವರಿಸಿದರು.

----------------------ಬೊಲ್ಪು ಎನ್ನುವುದು ತುಳು ಭಾಷೆಯ ಹೆಸರು. ಕನ್ನಡದಲ್ಲಿ ಬೆಳಕು ಎಂದು ಅರ್ಥ. ಬೊಲ್ಪು ಎಂದರೆ ಅವಕಾಶಗಳ ಆಗರ. ಮಂಗಳೂರು ಸಾಧ್ಯತೆಗಳ ನಗರವಾಗಿದ್ದು, ಮಂಗಳೂರನ್ನು ಜಾಗತಿಕ ಉದ್ಯಮ ಹಬ್‌ ಆಗಿ ಕಂಡುಕೊಳ್ಳುವ ಪ್ರಯತ್ನ ಇದು. ಉದ್ಯಮ ಸ್ಥಾಪನೆಗೆ ಉದ್ಯಮಿಗಳಿಗೆ ಹಾಗೂ ನವೋದ್ಯಮಿಗಳಿಗೆ ಬೊಲ್ಪು ಸೂಕ್ತ ವೇದಿಕೆ ಕಲ್ಪಿಸಲಿದೆ.

-ಕ್ಯಾ.ಬ್ರಿಜೇಶ್‌ ಚೌಟ, ಸಂಸದರು, ದ.ಕ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ನಾಗರಿಕ ಬಂದೂಕು ತರಬೇತಿ ನಿರಂತರವಾಗಬೇಕು
ನೈಸರ್ಗಿಕ ಕೃಷಿಯಲ್ಲಿ ವೆಚ್ಚ ಇಳಿಕೆ, ಮಣ್ಣಿನ ಆರೋಗ್ಯ ಏರಿಕೆ: ನಿತ್ಯಾನಂದ ನಾಯಕ್