ಎಕ್ಸ್‌ಪ್ರೆಸ್‌ ಕಾರಿಡಾರ್‌ನಲ್ಲಿ ಲಘು ವಾಹನ ಸಂಚಾರ ಬೇಡ

KannadaprabhaNewsNetwork | Published : Jun 4, 2025 1:09 AM
ಆಕಸ್ಮಾತ್ ಭಾರಿ ವಾಹನಗಳಿಂದ ಯಾವುದೇ ಲಘು ವಾಹನ ಅವಘಡಕ್ಕೆ ಸಿಲುಕಿದರೆ ಇನ್ಸೂರೆನ್ಸ್ ಹಣ ಸೇರಿದಂತೆ ಇತರೆ ಯಾವುದೇ ಅನುಕೂಲಗಳನ್ನು‌ ಪಡೆಯಲು ಸಾಧ್ಯವಿಲ್ಲ. ಆದ್ದರಿಂದ ಬೈಕ್, ಆಟೋ ಮತ್ತು ಟ್ರ್ಯಾಕ್ಟರ್ ಗಳನ್ನು‌ ಈ ರಸ್ತೆಯಲ್ಲಿ ಚಲಾಯಿಸಬಾರದು

ಕನ್ನಡಪ್ರಭವಾರ್ತೆ ಬಂಗಾರಪೇಟೆ

ಬೆಂಗಳೂರು ಚೆನ್ನೈ ಎಕ್ಸ್‌ಪ್ರೆಸ್ ಕಾರಿಡಾರ್ ರಸ್ತೆಯಲ್ಲಿ ಇತ್ತೀಚೆಗೆ ಹಲವು ಸರಣಿ ಅಪಘಾತಗಳು ನಡೆದ ಹಿನ್ನೆಲೆಯಲ್ಲಿ ಸಂಸದ ಮಲ್ಲೇಶ್ ಬಾಬು ಹೆದ್ದಾರಿ ಪ್ರಾಧಿಕಾರದ ಇತರೆ ಅಧಿಕಾರಿಗಳೊಂದಿಗೆ ಮಂಗಳವಾರ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ವೇಳೆ ಸಂಸದ ಮಲ್ಲೇಶ್ ಬಾಬು ಮಾತನಾಡಿ ಬೆಂಗಳೂರು- ಚೆನ್ನೈ ಎಕ್ಸ್‌ಪ್ರೆಸ್ ಕಾರಿಡಾರ್‌ನಲ್ಲಿ ಇತ್ತೀಚೆಗೆ ಕೆಲವು ಅವಘಡಗಳು ಸಂಭವಿಸಿವೆ. ಈ ರಸ್ತೆಯಲ್ಲಿ ಕೇವಲ ಲಾರಿ, ಬಸ್ಸು, ಕಾರು ಸೇರಿದಂತೆ ಇತರೆ ಬಾರಿ ವಾಹನಗಳ ಸಂಚಾರಕ್ಕೆ ಮಾತ್ರ ಅವಕಾಶವಿದೆ. ದ್ವಿಚಕ್ರ ವಾಹನ, ಆಟೋ ಮತ್ತು ಟ್ರ್ಯಾಕ್ಟರ್ ಸಂಚರಿಸಲು ಅವಕಾಶವಿಲ್ಲ ಎಂದರು.

ಲಘು ವಾಹನ ಚಲಾಯಿಸಬೇಡಿ

ಅಕಸ್ಮಾತ್ ಭಾರಿ ವಾಹನಗಳಿಂದ ಯಾವುದೇ ಲಘು ವಾಹನ ಅವಘಡಕ್ಕೆ ಸಿಲುಕಿದರೆ ಇನ್ಸೂರೆನ್ಸ್ ಹಣ ಸೇರಿದಂತೆ ಇತರೆ ಯಾವುದೇ ಅನುಕೂಲಗಳನ್ನು‌ ಪಡೆಯಲು ಸಾಧ್ಯವಿಲ್ಲ. ಆದ್ದರಿಂದ ಬೈಕ್, ಆಟೋ ಮತ್ತು ಟ್ರಾಕ್ಟರ್ ಗಳನ್ನು‌ ಈ ರಸ್ತೆಯಲ್ಲಿ ಚಲಾಯಿಸಬಾರದು. ಸುಮಾರು ೭೦ ಕಿ.ಮೀ ಮಾರ್ಗದ ರಸ್ತೆಯಲ್ಲಿ ಯಾವುದಾದರೂ ಅವಘಡ ಸಂಭವಿಸಿದರೆ ತುರ್ತು ಸೇವೆಗಾಗಿ ಮೂರು ಆಂಬ್ಯುಲೆನ್ಸ್ ಮತ್ತು ಮೂರು ಹೆಲ್ಪ್ ಲೈನ್ ವಾಹನಗಳು ಕಾರ್ಯನಿರ್ವಹಿಸಲಿವೆ ಎಂದರು.

ಪ್ರತಿ ಒಂದು ಕಿಮೀ‌ ದೂರದಲ್ಲಿ ಸಿಸಿ ಕ್ಯಾಮರಾದೊಂದಿಗೆ ಅಳವಡಿಸಿರುವ ಎಸ್.ವೈ.ಎಸ್ ದೂರವಾಣಿ ಬಾಕ್ಸ್ ಗಳು ಸಹ ಇದ್ದು, ತುರ್ತು ಸಮಯದಲ್ಲಿ ಅದರ ಬಳಕೆಯನ್ನು ಮಾಡಬಹುದು. ಈ ಮಾರ್ಗದಲ್ಲಿ ಸಂಚರಿಸುವಂತಹ ವಾಹನಗಳು ಬ್ರೇಕ್ ಡೌನ್ ಆದರೆ, ಪೆಟ್ರೋಲ್, ಡೀಸಲ್ ಖಾಲಿಯಾದರೆ ೧೦೩೩ ಟ್ರೋಲ್ ಫ್ರೀ ಸಂಖ್ಯೆಗೆ ಕರೆ ಮಾಡಿ ಸಹಾಯವನ್ನು ಪಡೆಯಬಹುದು. ರಸ್ತೆ ಚೆನ್ನಾಗಿದೆ ಎಂದು ೧೨೦ ಕಿ.ಮೀ ವೇಗ ಮಿತಿಗಿಂತ ಹೆಚ್ಚಿನ ವೇಗದಲ್ಲಿ ವಾಹನಗಳನ್ನು ಚಲಾಯಿಸಬಾರದು ಎಂದರು.

ಶೀಘದಲ್ಲೇ ಟೋಲ್‌ ಆರಂಭ

ಟೋಲ್ ಸಂಗ್ರಹವನ್ನು ಮುಂದಿನ ೨ ತಿಂಗಗಳಲ್ಲಿ ಆರಂಭಿಸುವ‌ ಸಾಧ್ಯತೆ ಇದ್ದು, ಟೋಲ್ ಆರಂಭವಾದರೆ ಹೆದ್ದಾರಿ ಪ್ರಾಧಿಕಾರದಿಂದ ಗಸ್ತು ವಾಹನಗಳು ಹೆಚ್ಚಿನ ಪ್ರಮಾಣದಲ್ಲಿ ಕಾರ್ಯನಿರ್ವಹಿಸಲಿದೆ ಎಂದರು. ಈ ವೇಳೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಯೋಜನಾ ನಿರ್ದೇಶಕಿ ಅರ್ಚನಾ, ಎಂಜಿನಿಯರ್ ಮನೋಜ್ ಇದ್ದರು.