ಕನ್ನಡಪ್ರಭ ವಾರ್ತೆ, ತುಮಕೂರು
ಉತ್ತಮ ಮಾನಸಿಕ ಆರೋಗ್ಯ ವ್ಯಕ್ತಿಗಳು ಒತ್ತಡ ನಿಭಾಯಿಸಲು, ಸಕಾರಾತ್ಮಕ ಆಯ್ಕೆ ಮಾಡಲು ಮತ್ತು ಆರೋಗ್ಯಕರ ಸಂಬಂದಗಳನ್ನು ಕಟ್ಟಿಕೊಳ್ಳಲು ಸಹಾಯ ಮಾಡುತ್ತದೆ ಎಂದು ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯ ಹಾಗೂ ತುಮಕೂರು ಮನೋವಿಜ್ಞಾನ ಸಂಘದ ಸಂಸ್ಥಾಪಕ ಡಾ. ತಿಪ್ಪೇಸ್ವಾಮಿ ಕೆ.ಟಿ. ಹೇಳಿದರು.ಅವರು ತುಮಕೂರು ಮನೋವಿಜ್ಞಾನ ಸಂಘ ಹಾಗೂ ತುಮಕೂರು ನಗರದ ವಿದ್ಯಾ ಪ್ರಥಮ ದರ್ಜೆ ಕಾಲೇಜಿನ ಸಂಯುಕ್ತಾಶ್ರದಲ್ಲಿ ವಿಶ್ವ ಮಾನಸಿಕ ಆರೋಗ್ಯ ದಿನಾಚರಣೆ ಉದ್ಘಾಟಿಸಿ ಮಾತನಾಡಿದರು.
ಇತ್ತೀಚೆಗೆ ಹದಿಹರೆಯದವರಲ್ಲಿ ಮಾನಸಿಕ ಒತ್ತಡ, ಖಿನ್ನತೆ, ಆತ್ಮಹತ್ಯಾ ಪ್ರವೃತ್ತಿ ಹೆಚ್ಚುತ್ತಿದ್ದು ಆತಂಕಕಾರಿಯಾಗಿದೆ. ಈ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳ ಭಾವನಾತ್ಮಕ ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡಬೇಕಿದೆ. ಇಂತಹ ಭಾವನಾತ್ಮಕ ಯೋಗಕ್ಷೇಮವನ್ನು ಉತ್ತೇಜಿಸಲು ಶಾಲೆಗಳು, ಕುಟುಂಬಗಳು ಮತ್ತು ಸಮುದಾಯಗಳು ಒಟ್ಟಾಗಿ ಕೆಲಸ ಮಾಡಬೇಕು. ಅದರಲ್ಲೂ ವಿದ್ಯಾರ್ಥಿ ಸಮುದಾಯಕ್ಕೆ ಜೀವನ ಕೌಶಲ್ಯಗಳ ತರಬೇತಿ ನೀಡುವುದು ಮಾನಸಿಕ ಆರೋಗ್ಯದ ದೃಷ್ಟಿಯಿಂದ ಮಹತ್ವದ್ದಾಗಿದೆ ಎಂದರು.ಸ್ನೇಹ ಮನೋವಿಕಾಸ ಕೇಂದ್ರದ ಮನೋವೈದ್ಯ ಡಾ.ಲೋಕೇಶ್ ಬಾಬುರವರು ಮಿದುಳಿನ ಕಾರ್ಯಾಚರಣೆಯ ಬಗ್ಗೆ ಮಾತನಾಡುತ್ತ ಅತಿಯಾದ ಒತ್ತಡ, ಒಂಟಿತನ ಮತ್ತು ಬಗೆಹರಿಯದ ಭಾವನೆಗಳಂತಹ ಅಂಶಗಳು ಆತಂಕ ಮತ್ತು ಖಿನ್ನತೆಯಂತಹ ಮಾನಸಿಕ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು. ಮಾನಸಿಕ ಅಸ್ವಸ್ಥತೆಯ ಕಂಡುಬಂದಾಗ ಜನರು ಭಯ ಅಥವಾ ನಾಚಿಕೆ ಪಡದೆ ವೃತ್ತಿಪರರಿಂದ ಸಹಾಯ ಪಡೆಯಬೇಕು. ಸ್ನೇಹಿತರೊಂದಿಗೆ ಮಾತನಾಡುವುದು, ಹವ್ಯಾಸಗಳಲ್ಲಿ ತೊಡಗಿಸಿಕೊಳ್ಳುವುದು, ವ್ಯಾಯಾಮ ಮಾಡುವುದು ಮತ್ತು ಸಮತೋಲಿತ ಜೀವನಶೈಲಿಯನ್ನು ಕಾಪಾಡಿಕೊಳ್ಳುವಂತಹ ಸರಳ ಅಭ್ಯಾಸಗಳಿಂದ ಮಾನಸಿಕ ಆರೋಗ್ಯವನ್ನು ಸುಧಾರಿಸಬಹುದು ಎಂದರು.
ತುಮಕೂರು ಮನೋವಿಜ್ಞಾನ ಸಂಘದ ಕಾರ್ಯದರ್ಶಿ ಡಾ. ವಿಕುಮಾರ್ ಎಸ್.ಪಿ ತಮ್ಮ ಪ್ರಾಸ್ತಾವಿಕ ನುಡಿಯ ಮುಖಾಂತರ ಮಾನಸಿಕ ಆರೋಗ್ಯದ ಬಗ್ಗೆ ತಿಳಿಸಿದರು. ತುಮಕೂರು ಮನೋವಿಜ್ಞಾನ ಸಂಘದ ಅಧ್ಯಕ್ಷ ಪ್ರೊ. ಗಂಗಾದರ್ ರವರು ಮಾತನಾಡಿ ಸಂಘದ ಉಗಮ ಕಾರ್ಯವೈಖರಿ, ಮಾನಸಿಕ ಆರೋಗದ ಮಹತ್ವದ ಬಗ್ಗೆ ತಿಳಿಸಿದರು. ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿಯ ಅಧ್ಯಕ್ಷರಾದ ಸೌಮ್ಯ ಜಿ ಎಲ್ ರವರು ಆಟಗಳು ಮತ್ತು ಉತ್ತಮ ಹವ್ಯಾಸಗಳು ಮಾನಸಿಕ ಆರೋಗ್ಯವನ್ನು ವೃದ್ದಿಸಿಕೊಳ್ಳಲು ಸಹಾಯಮಾಡುತ್ತವೆ ಎಂದರು. ಈ ಸಂದರ್ಭದಲ್ಲಿ ವಿದ್ಯಾ ಪ್ರಥಮ ದರ್ಜೆ ಕಾಲೇಜಿನ ವ್ಯವಸ್ಥಾಪಕ ನಿರ್ದೇಶಕ ಅರ್ಜುನ್, ಪ್ರಾಂಶುಪಾಲರಾದ ಶಿಲ್ಪ, ನಿರ್ದೇಶಕರಾದ ರಾಜೇಶ್ ಮತ್ತು ಕಾಲೇಜಿನ ಉಪನ್ಯಾಸಕರು ಹಾಗೂ ವಿದ್ಯಾರ್ಥಿಗಳು ಹಾಜರಿದ್ದರು.