ಬಿಎಲ್ಎ 2 ಕಾರ್ಯಾಗಾರವನ್ನು ಉದ್ಘಾಟಿಸಿ ಮಾಜಿ ಎಂಎಲ್ಸಿ ಬೆಮಲ್ ಕಾಂತರಾಜ್
ದೇಶದ ಸಧೃಢತೆಗಾಗಿ ಎಸ್ಐಆರ್ ಅನ್ನು ಸದುಪಯೋಗಪಡಿಸಿಕೊಳ್ಳಬೇಕು. ದೇಶದ ಪ್ರಜೆಗಳೆಂದು ಕರೆಸಿಕೊಳ್ಳಲು ಎಸ್ಐಆರ್ ಮುಖ್ಯವಾಗಿದೆ. ಪ್ರತಿಯೊಬ್ಬ ನಾಗರಿಕನೂ ದೇಶದ ಸವಲತ್ತುಗಳನ್ನು ಪಡೆಯಬೇಕೆಂದರೆ ಅವರು ಈಗ ಜಾರಿಗೆ ಬರುತ್ತಿರುವ ಎಸ್ಐಆರ್ನಲ್ಲಿ ತಮ್ಮ ಹೆಸರನ್ನು ನಮೂದಿಸಬೇಕು. ಹಾಗಾಗಿ ನಮ್ಮ ಕಾಂಗ್ರೆಸ್ ಕಾರ್ಯಕರ್ತರು ಯೋಧರಂತೆ ಕರ್ತವ್ಯ ನಿರ್ವಹಿಸಿ ಎಸ್ಐಆರ್ ಕುರಿತು ಜನರಲ್ಲಿ ಜಾಗೃತಿ ಉಂಟು ಮಾಡಬೇಕೆಂದು ವಿಧಾನ ಪರಿಷತ್ ಮಾಜಿ ಸದಸ್ಯ ಬೆಮಲ್ ಕಾಂತರಾಜ್ ಕಾಂಗ್ರೆಸ್ ಕಾರ್ಯಕರ್ತರಿಗೆ ಕರೆ ನೀಡಿದರು.
ಪಟ್ಟಣದ ಸಿದ್ದರಾಮೇಶ್ವರ ಸಮುದಾಯ ಭವನದಲ್ಲಿ ಬ್ಲಾಕ್ ಕಾಂಗ್ರೆಸ್ ವತಿಯಿಂದ ಎಸ್ಐಆರ್ ಪ್ರಕ್ರಿಯೆ ಜಾರಿಯ ಬಗ್ಗೆ ಬಿಎಲ್ಎ 2 ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷದ ಬಿಎಲ್ಎ 2ಗಳು ಪ್ರತಿ ಮತಗಟ್ಟೆಯಲ್ಲಿಯೂ ಯೋಧರ ರೀತಿಯಲ್ಲಿ ಕೆಲಸ ಮಾಡಬೇಕು. ಅರ್ಹ ಮತದಾರರಿಗೆ ಅನ್ಯಾಯವಾಗದಂತೆ ನೋಡಿಕೊಳ್ಳಬೇಕು.ಪ್ರತಿ ಕುಟುಂಬದ ಸದಸ್ಯರುಗಳ ದಾಖಲಾತಿಗಳನ್ನು ಸಮರ್ಪಕವಾಗಿ ಇಟ್ಟುಕೊಳ್ಳಲು ನೆರವಾಗಬೇಕಿದೆ. ಪ್ರತಿಯೊಬ್ಬ ಪ್ರಜೆಯ ಹೆಸರು ಒಂದೆಡೆ ಮಾತ್ರ ಇರಬೇಕು. ಬೇರೆ ಕಡೆಗಳಲ್ಲಿ ವಾಸ ಮಾಡುತ್ತಿರುವವರು ಅಲ್ಲಿಯೇ ದಾಖಲಾತಿಗಳನ್ನು ಮಾಡಿಕೊಳ್ಳುವುದು ಸೂಕ್ತ. ಮುಂದಿನ ದಿನಗಳಲ್ಲಿ ದೇಶದಲ್ಲಿ ಕಾನೂನು ಬಿಗಿಯಾಗಲಿದೆ. ಅರ್ಹ ಮತದಾರರನ್ನು ಪಟ್ಟಿಯಿಂದ ತೆಗೆಯದಂತೆ ನೋಡಿಕೊಳ್ಳಬೇಕೆಂದು ಬೆಮಲ್ ಕಾಂತರಾಜ್ ಕಾರ್ಯಕರ್ತರಿಗೆ ಕಿವಿಮಾತು ಹೇಳಿದರು. ಬೆಸ್ಕಾಂ ಮಾಜಿ ನಿರ್ದೇಶಕ ಬಿ.ಎಸ್. ವಸಂತ್ ಕುಮಾರ್ ಮಾತನಾಡಿ, ಬಿಜೆಪಿ ಎಸ್.ಐ.ಆರ್ ಮೂಲಕ ದೇಶದಲ್ಲಿ ಕುತಂತ್ರ ಮಾಡುತ್ತಿದೆ. ದಲಿತ, ಮುಸ್ಲಿಂ, ಹಿಂದುಳಿದ ವರ್ಗದ ಮತದಾರರು ಕಾಂಗ್ರೆಸ್ ಪಕ್ಷದ ಪರವಾಗಿ ಇದ್ದಾರೆ ಎಂದು ಬಿಜೆಪಿಗೆ ತಿಳಿದಿದೆ. ಆದ್ದರಿಂದ ಬಹುಪಾಲು ಮುಸ್ಲಿಂ ಮತಗಳನ್ನು ತೆಗೆಯುವ ಹುನ್ನಾರ ಮಾಡುತ್ತಿದೆ. ಬೇರೆ ರಾಜ್ಯಗಳಂತೆ ಕರ್ನಾಟಕದಲ್ಲಿ ಮಾಡಲು ಸಾಧ್ಯವಿಲ್ಲ. ರಾಜ್ಯದ ಜನರು ಬುದ್ದಿವಂತರಿದ್ದಾರೆ. ಆದರೂ ಎಸ್.ಐ.ಆರ್ ಬಗ್ಗೆ ನಮ್ಮ ಪಕ್ಷದ ಬಿ.ಎಲ್.ಎ 2 ಗಳು ಮೈಮರೆಯಬಾರದು. ಮತದಾರರ ಹೆಸರನ್ನು ತೆಗೆಯುವ ಬಗ್ಗೆ ಗೊಂದಲ ಇದ್ದಲ್ಲಿ ನಾವು ಬಂದು ಬಗೆಹರಿಸುತ್ತೇವೆ ಎಂದು ಹೇಳಿದರು.ಎದ್ದೇಳು ಕರ್ನಾಟಕ ಸಂಘಟನೆಯ ರಾಮಕೃಷ್ಣ ಹಾಗೂ ಇಂದ್ರಮ್ಮ ಎಸ್ ಐ ಆರ್ ಬಗ್ಗೆ ವಿಶೇಷ ಮಾಹಿತಿ ನೀಡಿದರು.ಕಾರ್ಯಕ್ರಮದಲ್ಲಿ ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಪ್ರಸನ್ನಕುಮಾರ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಕೋಳಾಲ ನಾಗರಾಜು, ದೇವರಾಜು, ಸೇವಾದಳದ ಅಧ್ಯಕ್ಷ ಕೊಂಡಜ್ಜಿ ಕುಮಾರ್, ಗ್ಯಾರಂಟಿ ಅನುಷ್ಠಾನ ಸಮಿತಿಯ ಮಾಜಿ ಅಧ್ಯಕ್ಷ ಗೋಣಿತುಮಕೂರು ಕಾಂತರಾಜು, ಮುಖಂಡರಾದ ಸುಬ್ರಮಣಿ ಶ್ರೀಕಂಠೇಗೌಡ, ಮಹೇಂದ್ರ, ಎನ್.ಆರ್.ಜಯರಾಮ್, ನಂಜುಂಡಪ್ಪ, ಮಂಜಯ್ಯ, ವಸಂತ್ ಕುಮಾರ್, ಯೋಗೀಶ್, ಮಾಳೆ ಕೃಷ್ಣಪ್ಪ, ದಬ್ಬೇಘಟ್ಟ ವೇಣುಗೋಪಾಲ್, ಹಟ್ಟಿಹಳ್ಳಿ ಪುಟ್ಟೇಗೌಡ, ಮಹಾಲಿಂಗಯ್ಯ, ಯೂಸುಫ್ ಸೇರಿದಂತೆ ಹಲವಾರು ಮುಖಂಡರು, ಕಾರ್ಯಕರ್ತರು ಇದ್ದರು.