ಕನ್ನಡಪ್ರಭ ವಾರ್ತೆ ಹಾಸನ
ಕಳೆದ ಮೂರು ದಿನಗಳಿಂದ ನಿರಂತರವಾಗಿ ನಡೆದ ನಾಟಕ ಪ್ರದರ್ಶನಗಳು ರಂಗಭೂಮಿಯ ವೈಭವವನ್ನು ಮತ್ತೆ ನೆನಪಿಸಿವೆ. ಹಾಸನ ಜಿಲ್ಲೆ ರಾಜಕೀಯದಾಚೆಗೆ ಕಲೆ, ಸಾಹಿತ್ಯ ಮತ್ತು ಸಂಸ್ಕೃತಿಯಲ್ಲಿ ತನ್ನದೇ ಆದ ಗುರುತನ್ನು ಹೊಂದಿದೆ ಎಂಬುದನ್ನು ಈ ನಾಟಕೋತ್ಸವ ಮತ್ತೊಮ್ಮೆ ಸಾಬೀತುಪಡಿಸಿದೆ ಎಂದು ಹೇಳಿದರು.
ಮೊದಲ ದಿನ ಜ್ಞಾನಧಾರೆ ಪ್ಯಾರಾಮೆಡಿಕಲ್ ಕಾಲೇಜಿನ ವಿದ್ಯಾರ್ಥಿಗಳು ಪ್ರದರ್ಶಿಸಿದ ನನ್ನ ಅಂಬೇಡ್ಕರ್ ನಾಟಕವು ಪ್ರೇಕ್ಷಕರಿಂದ ಭರ್ಜರಿ ಪ್ರತಿಕ್ರಿಯೆ ಪಡೆದಿತು. ಕೋಟಿಗಾನಹಳ್ಳಿ ರಾಮಯ್ಯ ಅವರ ಸಾಹಿತ್ಯ ಮತ್ತು ಬಾಬಾಸಾಹೇಬ್ ಕಾಂಬಳೆ ಅವರ ಸಂಗೀತ ನಿರ್ದೇಶನ ಈ ನಾಟಕಕ್ಕೆ ವಿಶೇಷ ಮೆರಗು ನೀಡಿತು. ಅಂಬೇಡ್ಕರ್ ಅವರ ಚಿಂತನೆಗಳು ಮತ್ತು ಸಮಾಜ ಪರಿವರ್ತನೆಗೆ ಅವರ ಕೊಡುಗೆಗಳನ್ನು ಪರಿಣಾಮಕಾರಿಯಾಗಿ ಚಿತ್ರಿಸಿದ ಈ ನಾಟಕ ಪ್ರೇಕ್ಷಕರ ಮನದಲ್ಲಿ ಆಳವಾದ ಪ್ರಭಾವ ಬೀರಿತು. ಎರಡನೇ ದಿನ ಬೆಳಿಗ್ಗೆ ಮಹಿಳಾ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿನಿಯರು ಲೋಕಾಯುಕ್ತರು ಬರುತ್ತಾರೆ ಎಂಬ ನಾಟಕವನ್ನು ಯಶಸ್ವಿಯಾಗಿ ಪ್ರದರ್ಶಿಸಿದರು. ವಿದೇಶಿ ಕೃತಿ ಆಧಾರಿತ ಈ ನಾಟಕವು ಭ್ರಷ್ಟಾಚಾರದ ವಿರುದ್ಧದ ಹೋರಾಟವನ್ನು ಹಾಸ್ಯಮಯವಾಗಿ ಮತ್ತು ಚಿಂತನೆಗೆ ಪ್ರೇರೇಪಿಸುವ ರೀತಿಯಲ್ಲಿ ನಿರೂಪಿಸಿತು.ಧನಂಜಯ ದಿಯಾನ್ ಅವರ ನಿರ್ದೇಶನ ಮತ್ತು ಸಂಗೀತ ನಾಟಕವನ್ನು ಇನ್ನಷ್ಟು ಮನೋಜ್ಞಗೊಳಿಸಿತು ಎಂದರು. ಅದೇ ದಿನ ಮಧ್ಯಾಹ್ನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿಗಳು ``ಸರಸತಿಯಾಗಲೊಲ್ಲೆ ನಾಟಕವನ್ನು ಪ್ರದರ್ಶಿಸಿದರು. ಡಾ. ಎಂ. ಭೈರೇಗೌಡ ಅವರ ಸಾಹಿತ್ಯ ಮತ್ತು ಮಂಜು ಸಿರಿಗೆರೆ ಅವರ ನಿರ್ದೇಶನದಲ್ಲಿ ಮೂಡಿಬಂದ ಈ ನಾಟಕವು ಸಮಾಜದ ಕೆಲವು ಸೂಕ್ಷ್ಮ ವಿಚಾರಗಳನ್ನು ಪರಿಣಾಮಕಾರಿಯಾಗಿ ಅನಾವರಣಗೊಳಿಸಿತು. ಮೂರನೇ ಹಾಗೂ ಕೊನೆಯ ದಿನ ಸೆಂಟ್ರಲ್ ಕಾಮರ್ಸ್ ಕಾಲೇಜಿನ ವಿದ್ಯಾರ್ಥಿಗಳು ಲೇಖಕ ಜಿ. ಪ್ರಕಾಶ್ ಅವರ ಕಾದಂಬರಿಯನ್ನು ಆಧರಿಸಿದ ನನ್ಸಿರಿ ನಾಟಕವನ್ನು ವೇದಿಕೆಗೆ ತಂದರು.
ಈ ಮೂರು ದಿನಗಳ ನಾಟಕೋತ್ಸವವು ಕಲಾಭಿಮಾನಿಗಳಲ್ಲಿ ಭಾರೀ ಸ್ಪಂದನೆ ಮೂಡಿಸಿದ್ದು, ಪ್ರತಿದಿನವೂ ಕಲಾಕ್ಷೇತ್ರ ಜನರಿಂದ ತುಂಬಿ ತುಳುಕಿತು. ವಿದ್ಯಾರ್ಥಿಗಳ ಅಭಿನಯ, ನಿರ್ದೇಶನ ಹಾಗೂ ತಾಂತ್ರಿಕ ನಿರ್ವಹಣೆ ಎಲ್ಲವೂ ಪ್ರಶಂಸೆಗೆ ಪಾತ್ರವಾಯಿತು. ಕೊನೆಯ ದಿನದ ಕಾರ್ಯಕ್ರಮದಲ್ಲಿ ನಿರ್ದೇಶಕ ಧನಂಜಯ ದಿಯಾನ್, ಹಿರಿಯ ಕಲಾವಿದ ಗುಂಡಣ್ಣ. ಮೇಕಪ್ ಹನುಮಂತಣ್ಣ, ಪಿ.ಶಾಡ್ರಾಕ್, ಪ್ರಕಾಶ್ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಈ ಸಂದರ್ಭದಲ್ಲಿ ಹಾಸನ ಲೋಕಾಯುಕ್ತ ಡಾ. ಬಿ.ಎನ್. ನಂದಿನಿ, ಬುಕರ್ ಪ್ರಶಸ್ತಿ ವಿಜೇತೆ ಭಾನು ಮುಷ್ತಾಕ್, ರಂಗಕಲಾ ಪೋಷಕ ಶಾಡ್ರಾಕ್, ನಿರ್ದೇಶಕ ಧನಂಜಯ ದಿಯಾನ್, ಸೆಂಟ್ರಲ್ ಕಾಮರ್ಸ್ ಕಾಲೇಜಿನ ಅಧ್ಯಕ್ಷೆ ಪರಿಮಳ ಮಹೇಶ್, ಪ್ರಾಂಶುಪಾಲ ಚಂದ್ರಕಾಂತ ಪಡೆಸೂರು, ಕಾದಂಬರಿಕಾರ ಜಿ. ಪ್ರಕಾಶ್ ಸೇರಿದಂತೆ ಕಲಾಭಿಮಾನಿಗಳು ಉಪಸ್ಥಿತರಿದ್ದರು.