ಕನ್ನಡಪ್ರಭ ವಾರ್ತೆ ಹಾಸನ
ಕಾರ್ಯನಿರತ ಪತ್ರಕರ್ತರ ಮೇಲೆ ಗೂಂಡಾ ವರ್ತನೆ ತೋರಿಸಿ ಹಲ್ಲೆ ಮಾಡಿದ ತುಮಕೂರಿನ ಎಎಸ್ಪಿ ಅಬ್ದುಲ್ ಖಾದರ್ ಅವರನ್ನು ಹಾಸನಾಂಬೆ ಸೇವೆಯಿಂದ ರಿಲೀವ್ ಮಾಡಿದಲ್ಲದೇ, ಎಲ್ಲಾ ಪತ್ರಕರ್ತರ ಸಮ್ಮುಖದಲ್ಲಿ ಕ್ಷಮೆ ಯಾಚಿಸಿದ ಪ್ರಸಂಗ ಶುಕ್ರವಾರ ಮಧ್ಯಾಹ್ನ ನಡೆದಿದೆ. ಕರ್ತವ್ಯದಲ್ಲಿದ್ದ ಸ್ಥಳೀಯ ಚಾನೆಲ್ ಒಂದರ ಕ್ಯಾಮರಾಮೆನ್ ಮೇಲೆ ಪೊಲೀಸ್ ಅಧಿಕಾರಿ ಸೇರಿ ನಾಲ್ಕೈದು ಜನ ಹಲ್ಲೆ ಮಾಡಿದ ಘಟನೆ ಶುಕ್ರವಾರ ಮಧ್ಯಾಹ್ನ ನಡೆದು ನಂತರ ಐಜಿ ಬೋರಲಿಂಗಯ್ಯ, ಜಿಲ್ಲಾಧಿಕಾರಿ ಸಿ. ಸತ್ಯಭಾಮ ಸೇರಿದಂತೆ ಪೊಲೀಸ್ ಅಧಿಕಾರಿಗಳ ಸಮಕ್ಷಮದಲ್ಲಿ ಪತ್ರಕರ್ತರ ಜೊತೆ ಸಭೆ ನಡೆಸಿ ರಾಜಿ ಮಾಡಿದಲ್ಲದೇ ಹಲ್ಲೆ ಮಾಡಿದ ಪೊಲೀಸ್ ಅಬ್ದುಲ್ರಿಂದ ಕ್ಷಮೆ ಕೇಳಿಸಿ ಹಾಸನಾಂಬೆ ದೇವಾಲಯದ ಕರ್ತವ್ಯದಿಂದ ವಾಪಸ್ ಕಳುಹಿಸಲಾಯಿತು.ಕ್ಷುಲ್ಲಕ ಕಾರಣಕ್ಕಾಗಿ ತುಮಕೂರಿನ ಎಎಸ್ಪಿ ಅಬ್ದುಲ್ ಖಾದರ್ ಅಮೋಘ ಟಿವಿ ಕ್ಯಾಮಾರಮೆನ್ ಚಂದನ್ ಎಂಬುವವರ ಮೇಲೆ ಹಲ್ಲೆ ಮಾಡಿದ್ದಾರೆ . ಚಂದನ್ ಮೇಲೆ ಹಲ್ಲೆ ನಡೆದ ಬಗ್ಗೆ ಪ್ರಶ್ನೆ ಮಾಡಲು ಬಂದ ಪಬ್ಲಿಕ್ ಟಿವಿ ಜಿಲ್ಲಾ ವರದಿಗಾರ ಶಶಿಧರ್ ಮತ್ತು ಸಚಿನ್ ಅವರನ್ನು ಕೂಡ ತಳ್ಳಿದ್ದಾರೆ. ನ್ಯಾಯ ಸಿಗದೆ ಇದ್ದಾಗ ಸ್ಥಳದಲ್ಲಿ ಪತ್ರಕರ್ತರು ಕೆಲ ಸಮಯ ಪ್ರತಿಭಟಿಸಿದರು. ನಂತರ ವಿಚಾರ ತಿಳಿದ ದಕ್ಷಿಣ ವಲಯ ಐಜಿ ಬೋರಲಿಂಗಯ್ಯ ಅವರು ಸ್ಥಳಕ್ಕೆ ಬಂದು ಘಟನೆ ಬಗ್ಗೆ ಆಲಿಸಿದರು. ಸಮಾಧಾನ ಮಾಡಿ ಸಮಸ್ಯೆ ಇಷ್ಟಕ್ಕೆ ಮುಗಿಸಲು ಮುಂದಾದಾಗ ಒಪ್ಪಲಿಲ್ಲ. ನಂತರ ಪತ್ರಕರ್ತರನ್ನು ವಾರ್ ರೂಂಗೆ ಕರೆದುಕೊಂಡು ಹೋಗಿ ಕೆಲ ಸಮಯ ಘಟನೆ ಬಗ್ಗೆ ಚರ್ಚೆ ನಡೆಸಿದರು. ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷರಾದ ಕೆ.ಎಚ್. ವೇಣುಕುಮಾರ್ ನೇತೃತ್ವದಲ್ಲಿ ಚರ್ಚಿಸಿ ಕೊನೆಯಲ್ಲಿ ಎಎಸ್ಪಿ ಅಬ್ದುಲ್ ಖಾದರ್ನಿಂದ ಕ್ಷಮೆಯಾಚನೆ ಮಾಡಿಸಿ, ಕಸಿದುಕೊಂಡಿದ್ದ ಮೊಬೈಲನ್ನು ಅವರಿಂದಲೇ ಕೊಡಿಸಲಾಯಿತು.