ಬಿಜೆಪಿ ಸಂಸ್ಥಾಪನಾ ದಿನದ ಅಂಗವಾಗಿ ಮಂಗಳವಾರದಿಂದ ಈ ತಿಂಗಳ 12ರವರೆಗೆ ‘ಹಳ್ಳಿಗೆ ನಡೆಯಿರಿ’ ಎಂಬ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್.ಅಶೋಕ್ ತಿಳಿಸಿದ್ದಾರೆ.
ಕನ್ನಡಪ್ರಭ ವಾರ್ತೆ ಬೆಂಗಳೂರು
ಬಿಜೆಪಿ ಸಂಸ್ಥಾಪನಾ ದಿನದ ಅಂಗವಾಗಿ ಮಂಗಳವಾರದಿಂದ ಈ ತಿಂಗಳ 12ರವರೆಗೆ ‘ಹಳ್ಳಿಗೆ ನಡೆಯಿರಿ’ ಎಂಬ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್.ಅಶೋಕ್ ತಿಳಿಸಿದ್ದಾರೆ.
ಸೋಮವಾರ ಬಿಜೆಪಿ ರಾಜ್ಯ ಕಚೇರಿಯಲ್ಲಿ ಬಿಜೆಪಿ ಸಂಸ್ಥಾಪನಾ ದಿನದ ಅಂಗವಾಗಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, ಹಳ್ಳಿಗೆ ನಡೆಯಿರಿ ಎಂಬ ಕಾರ್ಯಕ್ರಮವನ್ನು ದೊಡ್ಡ ರೀತಿ ಆಯೋಜಿಸಲಾಗಿದೆ. ಈ ಕಾರ್ಯಕ್ರಮದ ಭಾಗವಾಗಿ ಸಾರ್ವಜನಿಕ ಸ್ಥಳದಲ್ಲಿ ಸ್ವಚ್ಛತೆ ಹಮ್ಮಿಕೊಳ್ಳಲಾಗಿದೆ ಎಂದರು.
ಭಾರತೀಯ ಜನತಾ ಪಕ್ಷಕ್ಕಾಗಿ ದುಡಿದವರಿಗೆ ಗೌರವ ಸಲ್ಲಿಸುವ ಕಾರ್ಯಕ್ರಮ ನಡೆಸಲಾಗುವುದು. ಇದೇ ವೇಳೆ ಪ್ರಧಾನಿ ಮೋದಿ ಸರ್ಕಾರದ ಯೋಜನೆಗಳನ್ನು ವ್ಯಾಪಕವಾಗಿ ಜನರಿಗೆ ಮುಟ್ಟಿಸಲಾಗುವುದು. ಫಲಾನುಭವಿಗಳ ಸಂಪರ್ಕ ಅಭಿಯಾನವನ್ನೂ ಮಾಡುವುದಾಗಿ ಹೇಳಿದರು.
ಅತ್ಯಂತ ಹುರುಪಿನಿಂದ ಇಂದು ಸ್ಥಾಪನಾ ದಿನ ಆಚರಿಸುತ್ತಿದ್ದೇವೆ. ದೇಶದ ಹಲವು ರಾಜ್ಯದಲ್ಲಿ ಬಿಜೆಪಿ ಅಧಿಕಾರದಲ್ಲಿದೆ. ದೇಶದಲ್ಲೂ ಆಡಳಿತದಲ್ಲಿದೆ. 1975ರಲ್ಲಿ ಇಂದಿರಾಗಾಂಧಿ ಅವರ ದುರಾಡಳಿತ ಹಾಗೂ ಸರ್ವಾಧಿಕಾರದಿಂದ ತುರ್ತು ಪರಿಸ್ಥಿತಿ ಬಂತು. ಅದನ್ನು ವಿರೋಧಿಸಿ ಆಗಿನ ಜನಸಂಘ ಜನತಾ ಪಾರ್ಟಿಯಲ್ಲಿ ವಿಲೀನವಾಯಿತು ಎಂದು ತಿಳಿಸಿದರು.
ವಿ.ಪಿ.ಸಿಂಗ್ ಅವರ ಸರ್ಕಾರದಲ್ಲಿ ಜನರಿಗೆ ಒಳಿತು ಮಾಡಲು ಸಾಧ್ಯವಿಲ್ಲ. ಜಾತೀಯತೆ ತರುತ್ತಾರೆ. ನಮ್ಮ ಸಿದ್ಧಾಂತಕ್ಕೆ ಕೊಡಲಿ ಪೆಟ್ಟು ಬೀಳಲಿದೆ ಎಂಬುದನ್ನು ಅರಿತು ಬಿಜೆಪಿ ಆರಂಭವಾಯಿತು. ಅಟಲ್ ಬಿಹಾರಿ ವಾಜಪೇಯಿ, ಎಲ್.ಕೆ.ಅಡ್ವಾಣಿ, ಮುರುಳಿ ಮನೋಹರ ಜೋಷಿ ಅವರು ನೇತೃತ್ವ ವಹಿಸಿದ್ದರು. ಇಂಥ ಪಕ್ಷ ಇಂದು ಆಲದ ಮರದ ರೀತಿ ಇಡೀ ದೇಶದಲ್ಲಿ ವ್ಯಾಪಿಸಿದೆ. ಅತಿದೊಡ್ಡ ಪಕ್ಷದ ಸದಸ್ಯ ಎಂದು ಹೇಳಿಕೊಳ್ಳಲು ಹೆಮ್ಮೆ ಇದೆ ಎಂದು ಅಶೋಕ್ ಹೇಳಿದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.