ಮಂಡ್ಯ ಮಂಜುನಾಥ
ಕೃಷ್ಣರಾಜಸಾಗರ ಜಲಾಶಯದ ಬಳಿ ಪರೀಕ್ಷಾರ್ಥ ಸ್ಫೋಟ (ಟ್ರಯಲ್ ಬ್ಲಾಸ್ಟ್) ನಡೆಯದೇ ಇದ್ದರೂ ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳು ಟ್ರಯಲ್ ಬ್ಲಾಸ್ಟ್ ಹೆಸರಿನಲ್ಲಿ ೧.೧೧ ಕೋಟಿ ರು. ಖರ್ಚು ಮಾಡಿರುವುದು ಆಡಿಟ್ ವರದಿಯಿಂದ ಬೆಳಕಿಗೆ ಬಂದಿದೆ. ನಿಗಮದ ಅಧಿಕಾರಿಗಳು ಮಾಡಿರುವ ಖರ್ಚಿನ ಬಗ್ಗೆ ಅನುಮಾನಗಳು ಮೂಡಲಾರಂಭಿಸಿವೆ.
ಮೊದಲ ಬಾರಿಗೆ ೨೦೧೯ರ ಜ.೨೫ರಂದು ನಡೆಸಲು ಉದ್ದೇಶಿಸಿದ್ದ ಪರೀಕ್ಷಾರ್ಥ ಸ್ಫೋಟಕ್ಕೆ ೪೪,೬೧,೫೩೬ ರು., ಎರಡನೇ ಬಾರಿ ೨೫ ಮೇ ೨೦೨೨ರಲ್ಲಿ ನಡೆಸಲು ನಿರ್ಧರಿಸಿದ್ದ ಟ್ರಯಲ್ ಬ್ಲಾಸ್ಟ್ಗೆ ೫೯,೪೮,೭೧೫ ರು. ಹಾಗೂ ೨೦೨೪ರ ಜು.೭ರಂದು ನಡೆಸಲುದ್ದೇಶಿಸಿದ್ದ ಸ್ಫೋಟಕ್ಕೆ ೭,೫೫,೯೩೨ ರು. ಸೇರಿ ಒಟ್ಟು ೧,೧೧,೬೬,೧೮೩ ರು.ಗಳನ್ನು ವೆಚ್ಚ ಮಾಡಿರುವುದಾಗಿ ತಿಳಿಸಿದೆ.ತೆರಿಗೆ ಕಡಿತ ಮಾಡುವ ವೇಳೆ ಮೊದಲನೇ ಬಾರಿಗೆ ೩,೫೬,೯೨೨ ರು. ಕಡಿತ ಮಾಡುವುದಕ್ಕೆ ೮೯,೨೩೧ ರು., ಎರಡನೇ ಬಾರಿಗೆ ೪,೭೫,೮೯೫ ರು.ಗೆ ಬದಲಾಗಿ ೧,೧೮,೯೭೬ ರು. ಹಾಗೂ ಮೂರನೇ ಬಾರಿ ೬೦,೪೭೪ ರು. ಕಡಿತ ಮಾಡುವ ಬದಲು ೧೫,೧೧೯ ರು.ಗಳನ್ನು ಕಡಿತ ಮಾಡಿರುವುದನ್ನು ಲೆಕ್ಕ ಪರಿಶೋಧಕರು ಗುರುತಿಸಿದ್ದರು. ತೆರಿಗೆ ಹಣ ಕಡಿತ ಮಾಡುವ ವೇಳೆ ೮,೯೩,೨೯೧ ರು.ಗಳಿಗೆ ಬದಲಾಗಿ ೨,೨೩,೩೨೬ ರು. ಹಣವನ್ನು ಮಾತ್ರ ಕಡಿತಗೊಳಿಸಲಾಗಿದೆ. ಇನ್ನೂ ೬,೬೯,೯೬೫ ರು. ಬಾಕಿ ಹಣವನ್ನು ಸಂಬಂಧಿಸಿದ ಏಜೆನ್ಸಿಯವರಿಂದ ವಸೂಲಿ ಮಾಡುವಂತೆ ಸೂಚಿಸಿದ್ದರು. ಅದನ್ನು ಏಜೆನ್ಸಿಯವರಿಂದ ವಸೂಲಿ ಮಾಡುವಲ್ಲಿ ಅಧಿಕಾರಿಗಳು ವಿಫಲರಾಗಿದ್ದಾರೆ. ಈ ಬಗ್ಗೆ ಲೆಕ್ಕಪರಿಶೋಧಕರು ಆಕ್ಷೇಪವೆತ್ತಿದ್ದಾರೆ.
ಪರೀಕ್ಷಾರ್ಥ ಸ್ಫೋಟ ಯತ್ನ ನಡೆದಿದ್ದು ಯಾವಾಗ?
೨೦ ಕಿ.ಮೀ. ವ್ಯಾಪ್ತಿಯಲ್ಲಿ ಗಣಿಗಾರಿಕೆ ನಿಷೇಧಿಸಿರುವ ಆದೇಶ ಪ್ರಶ್ನಿಸಿ ೧೭ ಮಂದಿ ಕ್ರಷರ್ ಮಾಲೀಕರು ೨೦೨೧ರಲ್ಲಿ ಹೈಕೋರ್ಟ್ನಲ್ಲಿ ದಾವೆ ಹೂಡಿದ್ದರು. ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಲಯ ೧೨.೧.೨೦೨೨ರಲ್ಲಿ ಗಣಿಗಾರಿಕೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿ ವೈಜ್ಞಾನಿಕ ವರದಿ ಪಡೆದು, ಟ್ರಯಲ್ ಬ್ಲಾಸ್ಟ್ ನಡೆಸಿ ನಂತರ ಅನುಮತಿ ನೀಡುವಂತೆ ತಿಳಿಸಿತ್ತು.
ಮತ್ತೆ ಕೆಆರ್ಎಸ್ ಬಳಿ ಗಣಿಗಾರಿಕೆಗೆ ಅನುಮತಿ ನೀಡುವಾಗ ಜಿಲ್ಲಾಧಿಕಾರಿಗಳು ಟ್ರಯಲ್ ಬ್ಲಾಸ್ಟ್ ನಡೆಸಿ ಅನುಮತಿ ನೀಡಬೇಕು ಎಂದು ರಾಜ್ಯಸರ್ಕಾರದ ಅಣೆಕಟ್ಟು ಸುರಕ್ಷಾ ಸಮಿತಿ ನಿರ್ಧಾರ ಕೈಗೊಂಡು ೨೫ ಕಿ.ಮೀ. ವ್ಯಾಪ್ತಿಯಲ್ಲಿ ಗಣಿ ನಿಷೇಧ ಜಾರಿಗೊಳಿಸಿತು.
ಮೂರು ಬಾರಿ ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳು ಪರೀಕ್ಷಾರ್ಥ ಸ್ಫೋಟಕ್ಕೆ ಯತ್ನ ನಡೆಸಿದರೂ ಒಮ್ಮೆಯೂ ಒಂದು ಕಲ್ಲು ಕೂಡ ಸಿಡಿಯಲಿಲ್ಲ. ಆದರೂ ೧.೧೧ ಕೋಟಿ ರು. ಹಣವನ್ನು ಯಾವುದಕ್ಕೆ ಖರ್ಚು ಮಾಡಲಾಗಿದೆ. ಒಮ್ಮೆ ೪೪.೬೧ ಲಕ್ಷ ರು., ಇನ್ನೊಮ್ಮೆ ೫೯.೪೮ ಲಕ್ಷ ರು. ಕೊನೆಯ ಬಾರಿ ಕೇವಲ ೭.೫೫ ಲಕ್ಷ ರು. ಖರ್ಚು ಮಾಡಿರುವುದಾಗಿ ತೋರಿಸಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ಏಜೆನ್ಸಿಯವರಿಂದ ವಸೂಲಿಯಾಗಬೇಕಾದ ತೆರಿಗೆ ಕಡಿತ ಹಣದಲ್ಲಿ ೬.೬೯ ಲಕ್ಷ ರು. ಸರ್ಕಾರಕ್ಕೆ ನಷ್ಟ ಉಂಟುಮಾಡಿರುವುದು ಕಂಡುಬಂದಿದೆ.
ರೈತರ ವಿರೋಧದಿಂದಾಗಿ ಟ್ರಯಲ್ ಬ್ಲಾಸ್ಟ್ ಮೂರು ಬಾರಿಯೂ ನಡೆದೇ ಇಲ್ಲ. ಆದರೂ, 1.11 ಕೋಟಿ ಖರ್ಚಾಗಿರುವುದು ಅನುಮಾನಗಳಿಗೆ ಕಾರಣವಾಗಿದೆ. ಐಟಿ ಕಡಿತದಲ್ಲೂ ಸರ್ಕಾರಕ್ಕೆ ನಷ್ಟ ಉಂಟುಮಾಡಲಾಗಿದೆ. ಇವೆಲ್ಲವೂ ಸಂದೇಹಾಸ್ಪದ ನಡೆಯಾಗಿದೆ. ಹಾಗಾಗಿ ನಿಗಮದ ಅಧಿಕಾರಿಗಳ ವಿರುದ್ಧ ತನಿಖೆ ನಡೆಯುವುದು ಅವಶ್ಯವಾಗಿದೆ.