ಕನ್ನಡಪ್ರಭ ವಾರ್ತೆ, ಮಂಡ್ಯಭಾರತ ಚುನಾವಣಾ ಆಯೋಗದ ಆದೇಶದಂತೆ ಜೂ.೩೦ ರಿಂದ ಆ.೧೭ರ ಅಂತ್ಯದವರೆಗೆ ನಡೆಸಲಾದ ವಿಶೇಷ ಸಮಗ್ರ ಮತದಾರರ ಪರಿಷ್ಕರಣೆ ನಡೆಸಲಾಗಿದ್ದು, ಅದರಲ್ಲಿ ಜಿಲ್ಲೆಯೊಳಗೆ ೧೪,೦೮,೩೬೪ ಮಂದಿ ಮತದಾರರ ಕರಡುಪಟ್ಟಿಯನ್ನು ಬಿಡುಗಡೆಗೊಳಿಸಲಾಗಿದೆ ಎಂದು ಜಿಲ್ಲಾಧಿಕಾರಿ ಡಾ.ಕುಮಾರ ಹೇಳಿದರು.ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಜಿಲ್ಲೆಯಲ್ಲಿ ೧೫,೭೫,೮೪೯ ಮಂದಿ ಮತದಾರರಿದ್ದು, ಅದರಲ್ಲಿ ೧,೬೭,೪೮೫ ಮತದಾರರನ್ನು ಕೈಬಿಡಲಾಗಿದೆ. ಉಳಿದ ೧೪,೦೮,೩೬೪ ಮತದಾರರ ಕರಡು ಪಟ್ಟಿಯನ್ನು ಗಣಕೀಕರಣ ಮಾಡಲಾಗಿದೆ. ಆ ಪ್ರಕಾರ ಜಿಲ್ಲೆಯಲ್ಲಿ ೬,೯೧,೩೧೪ ಪುರುಷರು, ೭,೧೬,೯೬೨ ಮಹಿಳೆಯರು, ೮೮ ತೃತೀಯ ಲಿಂಗಿಗಳು ಸೇರಿ ಒಟ್ಟು ೧೪,೦೮,೩೬೪ ಮತದಾರರಿದ್ದಾರೆ. ಪುರುಷ ಮತದಾರರಿಗಿಂತ ಮಹಿಳಾ ಮತದಾರರು ೨೫,೬೪೮ ಮಂದಿ ಹೆಚ್ಚಾಗಿದ್ದಾರೆ. ಈ ಮತದಾರರ ಕರಡುಪಟ್ಟಿಯನ್ನು ಎಲ್ಲಾ ರಾಜಕೀಯ ಪಕ್ಷಗಳ ಏಜೆಂಟರಿಗೆ ನೀಡಲಾಗಿದೆ ಎಂದು ತಿಳಿಸಿದರು. ಕರಡುಪಟ್ಟಿಯಲ್ಲಿರುವ ೧,೧೪,೦೮,೩೬೪ ಮತದಾರರ ಪಟ್ಟಿಯಲ್ಲಿ ೧,೩೦,೯೮೪ ಮಂದಿ ಸಲ್ಲಿಸಿರುವ ದಾಖಲೆಗಳಲ್ಲಿ ತಪ್ಪುಗಳಿರುವವರು, ೨೦೦೨ರ ಮತದಾರರ ಪಟ್ಟಿಗೆ ಹೊಂದಾಣಿಕೆಯಾಗದಿರುವ ೧೯,೨೮೫ ಮಂದಿ ಸೇರಿ ೧,೫೦,೨೬೯ ಮಂದಿಗೆ ನೋಟೀಸ್ ಜಾರಿಗೊಳಿಸಲಾಗುತ್ತಿದೆ. ಇವರು ಸರಿಯಾದ ದಾಖಲೆಗಳನ್ನು ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ ಎಂದು ಹೇಳಿದರು.ಹಕ್ಕು-ಆಕ್ಷೇಪಣೆಗಳಿಗೆ ಅವಕಾಶಹಕ್ಕು ಮತ್ತು ಆಕ್ಷೇಪಣೆಗಳನ್ನು ಸಲ್ಲಿಸಲು ಆ.೨೪ ರಿಂದ ಸೆಪ್ಟೆಂಬರ್ ೨೩ರವರೆಗೆ ಅವಕಾಶ ಕಲ್ಪಿಸಲಾಗಿದೆ. ಈ ಅವಧಿಯಲ್ಲಿ ಸಂಬಂಧಿಸಿದ ಮತಗಟ್ಟೆ ಅಧಿಕಾರಿಗಳು ನೋಟೀಸನ್ನು ಸಂಬಂಧಪಟ್ಟ ಮತದಾರರಿಗೆ ಜಾರಿ ಮಾಡುವರು. ಆ ನೋಟೀಸನ್ನು ಮತದಾರರು ಹಾಗೂ ಕುಟುಂಬದ ಸದಸ್ಯರು ಸ್ವೀಕರಿಸಬಹುದು. ನೋಟೀಸ್ ಜಾರಿಗೊಳಿಸುವ ವೇಳೆ ಅಗತ್ಯವಿರುವ ದಾಖಲೆಗಳನ್ನು ಸ್ಥಳದಲ್ಲೇ ಸಲ್ಲಿಸಿ ಗಣಕೀಕರಣ ಮಾಡಿಸಿಕೊಳ್ಳುವುದಕ್ಕೆ ವ್ಯವಸ್ಥೆ ಮಾಡಲಾಗಿದೆ ಎಂದರು.ವಿಚಾರಣೆಗೆ ಹಾಜರಿ ಕಡ್ಡಾಯಒಮ್ಮೆ ಆ ಸಮಯದಲ್ಲಿ ದಾಖಲೆಗಳನ್ನು ಸಲ್ಲಿಸಲು ಸಾಧ್ಯವಾಗದವರು ವಿಚಾರಣೆಗೆ ಹಾಜರಾಗಿ ದಾಖಲೆಗಳನ್ನು ಸಲ್ಲಿಸಬಹುದು. ನಗರ ವ್ಯಾಪ್ತಿಯವರುಗೆ ಉಪವಿಭಾಗಾಧಿಕಾರಿ, ತಾಲೂಕು ಕಚೇರಿ ಹಾಗೂ ನಗರಸಭೆ ಕಚೇರಿಗಳಲ್ಲಿ ವಿಚಾರಣೆಗೆ ಹಾಜರಾಗಬಹುದು. ಗ್ರಾಮಾಂತರ ಪ್ರದೇಶದವರು ಗ್ರಾಮ ಪಂಚಾಯಿತಿಗಳಲ್ಲಿ ವಿಚಾರಣೆಗೆ ಹಾಜರಾಗಲು ಅವಕಾಶ ನೀಡಲಾಗಿದೆ. ವಿಚಾರಣೆಗೆ ಹಾಜರಾಗುವುದಕ್ಕೆ ಮೂರು ಅವಕಾಶಗಳನ್ನು ಕಲ್ಪಿಸಿಕೊಟ್ಟಿರುವುದಾಗಿ ತಿಳಿಸಿದರು.೧೨ರಲ್ಲಿ ಒಂದು ದಾಖಲೆ ಕೊಡಿನೋಟೀಸ್ ಜಾರಿಗೊಳಿಸುವ ಮತದಾರರು ಆಧಾರ್ ಕಾರ್ಡ್, ಪಾಸ್ಪೋರ್ಟ್, ಜಮೀನು, ಮನೆ ಹಂಚಿಕೆ ಪ್ರಮಾಣಪತ್ರ, ಶೈಕ್ಷಣಿಕ ಪ್ರಮಾಣಪತ್ರ, ಅರಣ್ಯ ಹಕ್ಕುಪತ್ರ ಸೇರಿದಂತೆ ೧೨ ದಾಖಲೆಗಳಲ್ಲಿ ಯಾವುದಾದರೊಂದನ್ನು ಸಲ್ಲಿಸಿ ಮತದಾರರ ಪಟ್ಟಿಯಲ್ಲಿರುವ ದೋಷಗಳನ್ನು ಸರಿಪಡಿಸಿಕೊಳ್ಳಬಹುದು ಎಂದು ಹೇಳಿದರು.ಮತದಾರರ ಪಟ್ಟಿಗೆ ಹೊಸ ಸೇರ್ಪಡೆಹಾಗೂ ತಿದ್ದುಪಡಿಗಳಿಗೆ ಸಂಬಂಧಿಸಿದಂತೆ ನಮೂನೆ-೬ ಮತ್ತು ಘೋಷಣಾ ಪತ್ರ, ವರ್ಗಾವಣೆ, ತಿದ್ದುಪಡಿಗೆ ನಮೂನೆ-೮ ಮತ್ತು ಘೋಷಣಾ ಪತ್ರ ಹಾಗೂ ಕೈಬಿಡಬೇಕಾದ ಪ್ರಕರಣಗಳಿಗೆ ನಮೂನೆ-೭ನ್ನು ಸಲ್ಲಿಸಬೇಕು. ಅಕ್ಟೋಬರ್ ೨೭ರಂದು ಅಂತಿಮ ಮತದಾರರ ಪಟ್ಟಿಯನ್ನು ಪ್ರಚುರಪಡಿಸಲಾಗುವುದು ಎಂದು ತಿಳಿಸಿದರು.೬೬ ಹೆಚ್ಚುವರಿ ಮತಗಟ್ಟೆಜಿಲ್ಲೆಯಲ್ಲಿ ಇದುವರೆಗೂ ೧೮೨೩ ಮತಗಟ್ಟೆಗಳು ಮಾತ್ರ ಇದ್ದವು. ಇದೀಗ ಮತಗಟ್ಟೆಗಳ ಪುನರ್ವಿಂಗಡಣೆ ಬಳಿಕ ೬೬ ಹೆಚ್ಚುವರಿ ಮತಗಟ್ಟೆಗಳೊಂದಿಗೆ ಒಟ್ಟು ಮತಗಟ್ಟೆಗಳ ಸಂಖ್ಯೆ ೧೮೮೯ಕ್ಕೆ ಏರಿಕೆಯಾಗಿದೆ. ಹೊಸದಾಗಿ ಮಳವಳ್ಳಿ ತಾಲೂಕಿನಲ್ಲಿ ೧೯, ಮದ್ದೂರು-೮, ಮೇಲುಕೋಟೆ-೬, ಮಂಡ್ಯ-೨, ಶ್ರೀರಂಗಪಟ್ಟಣ-೪, ನಾಗಮಂಗಲ-೧೨, ಕೆ.ಆರ್.ಪೇಟೆ ತಾಲೂಕಿನಲ್ಲಿ ೧೫ ಹೆಚ್ಚುವರಿ ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ.