ಉಡುಪಿ ನಗರ ಸಭೆಯ ಎಸ್.ಎಫ್.ಸಿ. ನಿಧಿಯಿಂದ 70 ಲಕ್ಷ ರು. ವೆಚ್ಚದಲ್ಲಿ ಮಂಜೂರಾದ ಮಣಿಪಾಲ ಇಂಡಸ್ಟ್ರಿಯಲ್ ಏರಿಯಾ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಶಾಸಕ ಯಶ್ಪಾಲ್ ಸುವರ್ಣ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿದರು.
ಕನ್ನಡಪ್ರಭ ವಾರ್ತೆ ಮಣಿಪಾಲ
ಉಡುಪಿ ಜಿಲ್ಲೆಯ ಪ್ರಮುಖ ಕೈಗಾರಿಕಾ ಪ್ರದೇಶವಾಗಿರುವ ಮಣಿಪಾಲ ಕೈಗಾರಿಕಾ ಪ್ರದೇಶದ ಮೂಲ ಸೌಕರ್ಯ ಅಭಿವೃದ್ಧಿಗೆ ವಿಶೇಷ ಆದ್ಯತೆ ನೀಡುವ ಮೂಲಕ ಸಾವಿರಾರು ಜನರಿಗೆ ಉದ್ಯೋಗಾವಕಾಶ ಕಲ್ಪಿಸುವ ಕೈಗಾರಿಕೋದ್ಯಮಿಗಳಿಗೆ ಶಾಸಕನ ನೆಲೆಯಲ್ಲಿ ಸಹಕಾರ ನೀಡಲು ಬದ್ಧ ಎಂದು ಉಡುಪಿ ಶಾಸಕ ಯಶ್ಪಾಲ್ ಸುವರ್ಣ ಹೇಳಿದರು.ಅವರು ಶನಿವಾರ ಉಡುಪಿ ನಗರ ಸಭೆಯ ಎಸ್.ಎಫ್.ಸಿ. ನಿಧಿಯಿಂದ 70 ಲಕ್ಷ ರು. ವೆಚ್ಚದಲ್ಲಿ ಮಂಜೂರಾದ ಮಣಿಪಾಲ ಇಂಡಸ್ಟ್ರಿಯಲ್ ಏರಿಯಾ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಗುದ್ದಲಿ ಪೂಜೆ ನಡೆಸಿ ಮಾತನಾಡಿದರು.ಮಣಿಪಾಲಕ್ಕೆ ಸುಮಾರು 10 ಕೋಟಿ ರು. ವೆಚ್ಚದಲ್ಲಿ ವ್ಯವಸ್ಥಿತ ಚರಂಡಿ, ರಸ್ತೆ ಸಹಿತ ಮೂಲ ಸೌಕರ್ಯಕ್ಕೆ ಮಾಸ್ಟರ್ ಪ್ಲಾನ್ ರಚಿಸಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದರು.
ಮಣಿಪಾಲ ವಾರ್ಡ್ ನಗರಸಭಾ ಸದಸ್ಯರಾದ ಕಲ್ಪನಾ ಸುಧಾಮ, ಜಿಲ್ಲಾ ಸಣ್ಣ ಕೈಗಾರಿಕೆ ಸಂಘ ಅಧ್ಯಕ್ಷ ಹರೀಶ್ ಕುಂದರ್, ಪ್ರಮುಖರಾದ ಚಿತ್ತರಂಜನ್ ಭಟ್, ರಿಷಿಕೇಶ್ ಹೆಗ್ಡೆ, ವಲ್ಲಭ್ ಭಟ್, ವಿಶ್ವನಾಥ ಭಟ್, ಜ್ಞಾನಾನಂದ, ವಿನ್ಸೆಂಟ್ ಪಿಂಟೋ, ಕೃಷ್ಣ ಪ್ರಸಾದ್ ಶೆಟ್ಟಿ, ಸ್ಥಳೀಯರಾದ ನಿತಿನ್ ಪೈ, ಪೃಥ್ವಿರಾಜ್ ಮೊದಲಾದವರು ಉಪಸ್ಥಿತರಿದ್ದರು.* ಮನೆ ಕೀ ಹಸ್ತಾಂತರಇದೇ ಸಂದರ್ಭ ಶಾಸಕ ಯಶ್ಪಾಲ್ ಸುವರ್ಣ ಅವರು ನಗರಸಭೆ ಆಶ್ರಯದಲ್ಲಿ ರಾಜ್ಯ ಕೊಳಚೆಗೇರಿ ಅಭಿವೃದ್ಧಿ ಮಂಡಳಿ ವತಿಯಿಂದ ಮಣಿಪಾಲ ಸಮೀಪದ ಹೆರ್ಗಾ ಗ್ರಾಮದ ಬಬ್ಬುಸ್ವಾಮಿ ಕಾಲನಿಯಲ್ಲಿ ನಿರ್ಮಿಸಲಾಗಿರುವ 420 ಮನೆಗಳ ಹಸ್ತಾಂತರ ಕಾರ್ಯಕ್ರಮದಲ್ಲಿ ಭಾಗವಹಿಸಿ ಫಲಾನುಭವಿಗೆ ಸಾಂಕೇತಿಕವಾಗಿ ಕೀ ಹಸ್ತಾಂತರಿಸಿ ಶುಭ ಹಾರೈಸಿದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.