ಹೆಸ್ಕಾಂ ಗ್ರಾಹಕರಿಗೆ ಪ್ರತಿ ಯೂನಿಟ್‌ಗೆ 10 ಪೈಸೆ ಮರುಪಾವತಿ

KannadaprabhaNewsNetwork |  
Published : May 02, 2026, 02:00 AM IST
ವೈಶಾಲಿ | Kannada Prabha

ಸಾರಾಂಶ

ಹುಬ್ಬಳ್ಳಿ ವಿದ್ಯುತ್ ಸರಬರಾಜು ಕಂಪನಿ (ಹೆಸ್ಕಾಂ) 2024-25ನೇ ಸಾಲಿನಲ್ಲಿ ₹ 153.46 ಕೋಟಿ ಉಳಿತಾಯ ಮಾಡಿದ್ದು, ಈ ಹಣವನ್ನು ಇದೀಗ ಗ್ರಾಹಕರಿಗೆ ಪ್ರತಿ ಯೂನಿಟ್‌ಗೆ 10 ಪೈಸೆಯಂತೆ 12 ಕಂತುಗಳಲ್ಲಿ ಮರುಪಾವತಿಸಲು ನಿರ್ಧರಿಸಿದೆ.

ಹುಬ್ಬಳ್ಳಿ:

ಹುಬ್ಬಳ್ಳಿ ವಿದ್ಯುತ್ ಸರಬರಾಜು ಕಂಪನಿ (ಹೆಸ್ಕಾಂ) 2024-25ನೇ ಸಾಲಿನಲ್ಲಿ ₹ 153.46 ಕೋಟಿ ಉಳಿತಾಯ ಮಾಡಿದ್ದು, ಈ ಹಣವನ್ನು ಇದೀಗ ಗ್ರಾಹಕರಿಗೆ ಪ್ರತಿ ಯೂನಿಟ್‌ಗೆ 10 ಪೈಸೆಯಂತೆ 12 ಕಂತುಗಳಲ್ಲಿ ಮರುಪಾವತಿಸಲು ನಿರ್ಧರಿಸಿದೆ. ಇದು 2024-25 ಸಾಲಿನಲ್ಲಿ ಇದ್ದು ಈಗಲೂ ಗ್ರಾಹಕರಾಗಿರುವವರಿಗೆ ಮಾತ್ರ ಅನ್ವಯವಾಗಲಿದೆ.

ಈ ಕುರಿತು ಪ್ರಕಟಣೆ ನೀಡಿರುವ ಹೆಸ್ಕಾಂ, 2024-25ನೇ ಸಾಲಿನಲ್ಲಿ ವಿದ್ಯುತ್‌ ಖರೀದಿ, ನಿರ್ವಹಣೆ ಹಾಗೂ ವೆಚ್ಚದಲ್ಲಿನ ಕಾರ್ಯಕ್ಷಮತೆಯನ್ನು ಅತ್ಯುತ್ತಮವಾಗಿ ನಿರ್ವಹಿಸಲಾಗಿದೆ. ಈ ಅವಧಿಯಲ್ಲಿ ವಿದ್ಯುತ್‌ ಮಾರಾಟ ಸೇರಿ ವಿವಿಧೆಡೆಯಿಂದ ಒಟ್ಟು ₹12,112.20 ಕೋಟಿ ಬಂದಿದ್ದು, ₹11,958.74 ಕೋಟಿ ವೆಚ್ಚವಾಗಿ ಒಟ್ಟು ₹153.46 ಕೋಟಿ ಉಳಿತಾಯವಾಗಿದೆ. ಈ ಮೊತ್ತವನ್ನು 2026-27ರಲ್ಲಿ ಗ್ರಾಹಕರಿಗೆ ಹಿಂತಿರುಗಿಸಲು ನಿರ್ಧರಿಸಿದೆ.

ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗದ (ಕೆಇಆರ್‌ಸಿ) ಆದೇಶದ ಅನ್ವಯ 2024-25ನೇ ಆರ್ಥಿಕ ವರ್ಷದ ಪ್ರತಿಯೊಬ್ಬ ಗ್ರಾಹಕರಿಗೆ ಮಾತ್ರ ಈ ಅವಧಿಯಲ್ಲಿನ ಬಳಕೆ ಆಧರಿಸಿ ಪ್ರತಿ ಯೂನಿಟ್‌ಗೆ 10 ಪೈಸೆಯಂತೆ ಒಟ್ಟು ಮೊತ್ತವನ್ನು ಪ್ರತಿ ತಿಂಗಳು ಸಮಾನ ಕಂತುಗಳಲ್ಲಿ (12 ಕಂತುಗಳು) ಮರು ಪಾವತಿಸಲಾಗುತ್ತದೆ. ಈ ಮೊತ್ತವನ್ನು ವಿದ್ಯುತ್‌ ಬಿಲ್‌ನಲ್ಲಿ ಆರ್ಥಿಕ ವರ್ಷ (FY) 25 ಟ್ರೂ ಅಪ್‌ ಶುಲ್ಕ ಎಂದು ಪ್ರತ್ಯೇಕವಾಗಿ ನಮೂದಿಸಲಾಗುತ್ತದೆ. ಹೆಸ್ಕಾಂ ವ್ಯಾಪ್ತಿಯ ಧಾರವಾಡ, ಬಾಗಲಕೋಟೆ, ವಿಜಯಪುರ, ಬೆಳಗಾವಿ, ಗದಗ, ಹಾವೇರಿ ಹಾಗೂ ಉತ್ತರ ಕನ್ನಡ ಜಿಲ್ಲೆಯ ಗೃಹಬಳಕೆದಾರರು, ವಾಣಿಜ್ಯೋದ್ಯಮಿಗಳು ಸೇರಿದಂತೆ ಎಲ್ಲ ಗ್ರಾಹಕರಿಗೆ ಇದರ ಲಾಭ ಸಿಗಲಿದೆ ಎಂದು ತಿಳಿಸಿದ್ದಾರೆ.2024-25ರಲ್ಲಿ ಹೆಸ್ಕಾಂನ ಉತ್ತಮ ಕಾರ್ಯಕ್ಷಮತೆಯಿಂದ ₹153.46 ಕೋಟಿ ಉಳಿತಾಯವಾಗಿದೆ. ಇದನ್ನು ಗ್ರಾಹಕರಿಗೆ ಪ್ರತಿ ಯೂನಿಟ್‌ಗೆ 10 ಪೈಸೆಯಂತೆ ಮರುಪಾವತಿಸಲು ಕೆಇಆರ್‌ಸಿ ಆದೇಶಿಸಿದೆ. ಮೇ 1ರಿಂದ ಗ್ರಾಹಕರ ವಿದ್ಯುತ್‌ ಬಿಲ್‌ನಲ್ಲಿ ಸದರಿ ಮೊತ್ತವನ್ನು 12 ತಿಂಗಳು ಸಮನಾಗಿ ವರ್ಗಾಯಿಸಲಾಗುತ್ತದೆ.

ವೈಶಾಲಿ ಎಂ.ಎಲ್‌, ವ್ಯವಸ್ಥಾಪಕ ನಿರ್ದೇಶಕರು, ಹೆಸ್ಕಾಂ

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕಾರ್ಮಿಕರ ಭದ್ರತೆಗೆ ಕೇಂದ್ರ ಸರ್ಕಾರ ಬದ್ಧ: ಸಚಿವೆ ಶೋಭಾ ಕರಂದ್ಲಾಜೆ
32 ಕೋಟಿ ಅಸಂಘಟಿತ ಕಾರ್ಮಿಕರು ಇಎಸ್‌ಐ -ಇಪಿಎಫ್‌ಒ ವ್ಯಾಪ್ತಿಗೆ