ಕನ್ನಡಪ್ರಭ ವಾರ್ತೆ ಮಡಿಕೇರಿರಾಜ್ಯದಲ್ಲಿ ದುರದೃಷ್ಟವಶಾತ್ ಕಾಂಗ್ರೆಸ್ ಅಧಿಕಾರಕ್ಕೆ ಬಂದಿದೆ. 8 ತಿಂಗಳಲ್ಲಿ 8 ಮೀಟರ್ ರಸ್ತೆ ಕೂಡ ಮಾಡಿಕೊಡಲು ಸಾಧ್ಯವಾಗಿಲ್ಲ. ರಾಜ್ಯದಲ್ಲಿ 80 ಲಕ್ಷ ರೈತಾಪಿ ವರ್ಗವಿದೆ. ಪರ ಪರಿಸ್ಥಿತಿಯಿಂದ ರೈತರು ಪರಿತಪಿಸುತ್ತಿದ್ದಾರೆ. ಆದ್ದರಿಂದ ರು.10 ಸಾವಿರ ಕೋಟಿ ಬಿಡುಗಡೆ ಮಾಡುವಂತೆ ವಿಧಾನ ಪರಿಷತ್ ವಿಪಕ್ಷ ನಾಯಕ ಕೋಟ ಶ್ರೀನಿವಾಸ್ ಪೂಜಾರಿ ಆಗ್ರಹಿಸಿದ್ದಾರೆ. ಕೊಡಗು ಜಿಲ್ಲಾ ಬಿಜೆಪಿ ನೂತನ ಅಧ್ಯಕ್ಷರ ಪದಗ್ರಹಣ ಹಾಗೂ ಜಿಲ್ಲಾ ಕಾರ್ಯಕಾರಿಣಿ ಕಾರ್ಯಕ್ರಮವನ್ನು ಮಡಿಕೇರಿಯಲ್ಲಿ ಶುಕ್ರವಾರ ಉದ್ಘಾಟಿಸಿ ಅವರು ಮಾತನಾಡಿದರು.
ಸಂಸದ ಡಿ.ಕೆ.ಸುರೇಶ್ ಭಾರತ ವಿಭಜನೆ ಮಾಡಬೇಕೆಂದು ಹೇಳಿರುವ ಕೆಟ್ಟ ಮಾತುಗಳನ್ನು ಸಿದ್ದರಾಮಯ್ಯ ವಿರೋಧಿಸುತ್ತಾರೆ ಎಂದು ತಿಳಿದುಕೊಂಡಿದ್ದೆ. ಆದರೆ ದುರಾದೃಷ್ಟವಶಾತ್ ಇದು ಕಾಂಗ್ರೆಸ್ ನ ಒಟ್ಟು ಭಾವನೆಯನ್ನು ಡಿ.ಕೆ. ಸುರೇಶ್ ಹೇಳಿದ್ದಾರೆ. ಮಂಡ್ಯದಲ್ಲಿ ಹನುಮ ಧ್ವಜವನ್ನು ಲಾಠಿ ಚಾರ್ಜ್ ಮಾಡುವ ಮೂಲಕ ಇಳಿಸಿದ್ದಾರೆ. ಮುಂದಿನ ಚುನಾವಣೆ ಹನುಮ ಭಕ್ತರಿಗೆ ಟಿಪ್ಪು ಭಕ್ತರಿಗೆ ನಡೆಯುವ ಸಂಘರ್ಷದ ಚುನಾವಣೆಯಾಗಿದೆ ಎಂದು ಹೇಳಿದರು. ರಾಜ್ಯ ಬಿಜೆಪಿ ಕಾರ್ಯದರ್ಶಿ ಕ್ಯಾ ಬೃಜೇಶ್ ಚೌಟ ಮಾತನಾಡಿ, ಡಿ.ಕೆ. ಸುರೇಶ್ ದೇಶ ವಿರೋಧಿ ಮಾನಸಿಕತೆಯ ವಿರುದ್ದ ನಮ್ಮ ಹೋರಾಟವಾಗಿದೆ. ಡಿ.ಕೆ. ಸುರೇಶ್ ಗೆ ನಾಚಿಕೆಯಾಗಬೇಕು ಎಂದರು. ವಿಧಾನ ಪರಿಷತ್ ಸದಸ್ಯ ಸುಜಾ ಕುಶಾಲಪ್ಪ ಮಾತನಾಡಿ, ಮೋದಿ ಅವರ ಆಡಳಿತದಲ್ಲಿ ಭಾರತವನ್ನು ವಿಶ್ವಗುರುವಾಗಿ ನೋಡುವಂತಾಗಿದೆ. ಮುಂದಿನ ಚುನಾವಣೆಯಲ್ಲಿ ಕೂಡ ಮೋದಿ ಪ್ರಧಾನಿಯಾಗಲಿದ್ದಾರೆ ಎಂದರು.ಬಿಜೆಪಿ ನೂತನ ಜಿಲ್ಲಾಧ್ಯಕ್ಷ ನಾಪಂಡ ರವಿ ಕಾಳಪ್ಪ ಮಾತನಾಡಿ, ಜಿಲ್ಲಾಧ್ಯಕ್ಷ ಸ್ಥಾನಕ್ಕೆ 22 ಮಂದಿ ಆಕಾಂಕ್ಷಿಗಳಾಗಿದ್ದರು. ಅವರೆಲ್ಲರೂ ಕೂಡ ಅರ್ಹರು. ಮುಂದಿನ ದಿನಗಳಲ್ಲಿ ಎಲ್ಲರನ್ನು ಒಳಗೊಂಡು ಕಾರ್ಯಕ್ರಮ ರೂಪಿಸಲಾಗುವುದು ಎಂದರು. ಕೊಡಗು ಪ್ರಭಾರಿ ಉದಯ ಕುಮಾರ್ ಶೆಟ್ಟಿ, ದಕ್ಷಿಣ ಕನ್ನಡ ಪ್ರಭಾರಿ ಭಾರತೀಶ್, ನಿಕಟ ಪೂರ್ವ ಜಿಲ್ಲಾಧ್ಯಕ್ಷ ರಾಬಿನ್ ದೇವಯ್ಯ, ಮುಖಂಡರಾದ ರೀನಾ ಪ್ರಕಾಶ್, ಮನು ಮುತ್ತಪ್ಪ, ಮಡಿಕೇರಿ ನಗರಸಭೆ ಅಧ್ಯಕ್ಷೆ ಅನಿನಿತಾ ಪೂವಯ್ಯ, ಡಿಸಿಸಿ ಬ್ಯಾಂಕ್ ಅಧ್ಯಕ್ಷ ಬಾಂಡ್ ಗಣಪತಿ ಮತ್ತಿತರರು ಪಾಲ್ಗೊಂಡಿದ್ದರು.
2 ನಿರ್ಣಯಗಳ ಮಂಡನೆಕಾರ್ಯಕ್ರಮದಲ್ಲಿ ಎರಡು ಪ್ರಮುಖ ನಿರ್ಣಯಗಳನ್ನು ಮಂಡಿಸಲಾಯಿತು. ಅಯೋಧ್ಯೆ ಶ್ರೀರಾಮ ಮಂದಿರ ಉದ್ಘಾಟನೆಗೆ ಧನ್ಯವಾದವನ್ನು ವಿ.ಕೆ. ಲೋಕೇಶ್ ಮಂಡಿಸಿದರು. ಕಾಂಗೀರ ಸತೀಶ್ ಅನುಮೋದಿಸಿದರು. ಕೊಡಗಿನ ಪಾರಂಪರಿಕ ವಸ್ತುಗಳ ರಕ್ಷಣೆ ಬಗ್ಗೆ ಬಿ.ಡಿ. ಮಂಜುನಾಥ್ ನಿರ್ಣಯ ಮಂಡಿಸಿದರು. ಜಿಲ್ಲಾ ವಕ್ತಾರ ಮಹೇಶ್ ಜೈನಿ ಅನುಮೋದಿಸಿದರು.ಸಿದ್ದರಾಮಯ್ಯಗೆ ಅಪ್ಪಚ್ಚು ರಂಜನ್ ತಿರುಗೇಟುಮುಖ್ಯಮಂತ್ರಿ ಸಿದ್ದರಾಮ್ಯಯ ಅವರ ಹೇಳಿಕೆಗೆ ಮಾಜಿ ಶಾಸಕ ಅಪ್ಪಚ್ಚು ರಂಜನ್ ತಿರುಗೇಟು ನೀಡಿದ್ದಾರೆ. ಇತ್ತೀಚೆಗೆ ಜಿಲ್ಲೆಗೆ ಭೇಟಿ ನೀಡಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹಿಂದಿನ ಬಿಜೆಪಿ ಶಾಸಕದ್ವಯರು ಕಡಿದು ಕಟ್ಟೆಹಾಕಿದ್ದು ಏನೆಂದು ಪ್ರಶ್ನಿಸಿದ್ದಾರೆ. ಅವರಿಗೆ ಹೇಳಲು ಬಯಸುತ್ತೇನೆ ಈ ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ 3 ಸಾವಿರ ಕೋಟಿ ರು. ಅನುದಾನ ತಂದಿದ್ದೇವೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಜಿಲ್ಲೆಯಲ್ಲಿ ಶಂಕುಸ್ಥಾಪನೆ, ಉದ್ಘಾಟನೆ ನೆರವೇರಿಸಿದ ಕಾಮಗಾರಿಗಳು ನಾವು ಪ್ರಸ್ತಾವನೆ ಕಳಿಸಿ ಮಂಜೂರಾದ ಕಾಮಗಾರಿಗಳು ಎಂದರು.ಕೊಡಗಿನಲ್ಲಿ ಮಡಿಕಲ್ ಕಾಲೇಜ್, ಸೈನಿಕ ಶಾಲೆ, ವಿಶ್ವವಿದ್ಯಾನಿಲಯದ ಸ್ಥಾಪನೆ ಇವೆಲ್ಲಾ ಮಾಡಿದ್ದು ಯಾರು ಎಂದು ಪ್ರಶ್ನಿಸಿದ ಅವರು, ನಾವು ಮಾಡಿದ ಅಭಿವೃದ್ದಿ ಕಾರ್ಯಗಳ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೊಂದಿಗೆ ಚರ್ಚೆಗೆ ಸಿದ್ದ ಎಂದು ಸವಾಲು ಹಾಕಿದರು.