ಶಿಗ್ಗಾಂವಿ: ಶಿಗ್ಗಾಂವಿ ಕ್ಷೇತ್ರದ ನೀರಾವರಿ ಕಾಮಗಾರಿಗೆ ₹೧೦೦ ಕೋಟಿ ಅನುದಾನ ಮಂಜೂರಾಗಿದ್ದು, ₹೩೦ ಕೋಟಿ ವೆಚ್ಚದಲ್ಲಿ ಸಣ್ಣ ನೀರಾವರಿ ಕಾಮಗಾರಿಗಳು ಪ್ರಗತಿಯಲ್ಲಿವೆ. ಸಾರ್ವಜನಿಕರ ಸಮಸ್ಯೆ ಪರಿಹರಿಸಲು ಪ್ರಾಮಾಣಿಕವಾಗಿ ಪ್ರಯತ್ನ ಮಾಡಲಾಗುವುದು ಎಂದು ಶಾಸಕ ಯಾಸಿರ್ ಅಹ್ಮದ್ಖಾನ್ ಪಠಾಣ ತಿಳಿಸಿದರು.ತಾಲೂಕಿನ ತಡಸ ಗ್ರಾಮದ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಮಂಗಳವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ತಾಲೂಕು ಆಡಳಿತದಿಂದ ಆಯೋಜಿಸಿದ್ದ ತಾಲೂಕು ಮಟ್ಟದ ಜನತಾ ದರ್ಶನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಬೆಣ್ಣಿಹಳ್ಳ ಅಭಿವೃದ್ಧಿಗೆ ಮನವಿ ಬಂದಿದ್ದು, ಕೆರೆಗಳ ಅಭಿವೃದ್ಧಿಗೆ ₹೧೦ ಕೋಟಿ ಅನುದಾನ ಮಂಜೂರಾಗಿದೆ ಎಂದರು.ಶಿಕ್ಷಣ ಎಷ್ಟು ಮುಖ್ಯವೋ ಆರೋಗ್ಯವೂ ಅಷ್ಟೇ ಮುಖ್ಯವಾಗಿದೆ. ತಡಸ, ಬಂಕಾಪುರ, ನಾಗನೂರು, ಮೋತಿತಲಾಬ ಸೇರಿದಂತೆ ಐದು ಸಾವಿರ ಜನಸಂಖ್ಯೆ ಇರುವ ೧೦ ಗ್ರಾಮಗಳ ಕೆರೆಗಳನ್ನು ಗುರುತಿಸಲಾಗಿದ್ದು, ಕೆರೆಗಳನ್ನು ಸುಂದರ ತಾಣವಾಗಿಸಲು ಒತ್ತು ನೀಡಲಾಗಿದೆ ಹಾಗೂ ವಾಕಿಂಗ್ ಟ್ರ್ಯಾಕ್ ನಿರ್ಮಾಣ ಕಾಮಗಾರಿಯನ್ನು ಶೀಘ್ರದಲ್ಲೇ ಆರಂಭಿಸಲಾಗುವುದು ಎಂದರು. ಜೋಂಡಲಗಟ್ಟಿ ಗ್ರಾಮದಲ್ಲಿ ಕುಡಿಯಲು ನೀರಿಲ್ಲ. ವಿದ್ಯುತ್ ಸಂಪರ್ಕ ಇಲ್ಲ. ರಾತ್ರಿ ಕಾಡುಪ್ರಾಣಿಗಳು ಮನೆ ಬಾಗಿಲಿಗೆ ಬರುತ್ತಿವೆ. ಕಳೆದ ೭೮ ವರ್ಷಗಳಿಂದ ವಾಸವಾಗಿರುವ ಸಾರ್ವಜನಿಕರಿಗೆ ಪಟ್ಟಾ ಇಲ್ಲದ ಕಾರಣ ಸರ್ಕಾರಿ ಯೋಜನೆಗಳಿಂದ ವಂಚಿತರಾಗಿದ್ದಾರೆ. ಇದು ನಾಗರಿಕ ಸಮಾಜದಲ್ಲಿ ತಲೆತಗ್ಗಿಸುವ ಕೆಲಸವಾಗಿದೆ. ಆದಷ್ಟು ಶೀಘ್ರದಲ್ಲೇ ಜೊಂಡಲಗಟ್ಟಿ ಗ್ರಾಮಕ್ಕೆ ಮೂಲ ಸೌಕರ್ಯ ಒದಗಿಸುವ ಕೆಲಸವಾಗಬೇಕು ಎಂದು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿದರು. ಜೊಂಡಲಗಟ್ಟಿ, ಮೂಕಬಸರಿಕಟ್ಟಿ ಸೇರಿದಂತೆ ಗ್ರಾಮೀಣ ಪ್ರದೇಶದಲ್ಲಿ ಖಾಸಗಿ ಹಾಗೂ ಸರ್ಕಾರಿ ಜಮೀನುಗಳಲ್ಲಿ ಮನೆ ನಿರ್ಮಾಣ ಮಾಡಿಕೊಂಡು ಉತಾರ ಇಲ್ಲದ ಸುಮಾರು ೧೫ ಸಾವಿರ ಹಾಗೂ ಶಿಗ್ಗಾವಿ, ಬಂಕಾಪುರ ಹಾಗೂ ಸವಣೂರ ಪುರಸಭೆ ವ್ಯಾಪ್ತಿಯಲ್ಲಿ ಏಳರಿಂದ ಎಂಟು ಸಾವಿರ ಮನೆಗಳಿವೆ. ಮೂರು ದಿನಗಳ ವಿಶೇಷ ಶಿಬಿರ ಆಯೋಜನೆ ಮೂಲಕ ಉತಾರ ಇಲ್ಲದ ಮನೆಗಳ ಮಾಹಿತಿಯನ್ನು ಪಡೆದುಕೊಳ್ಳಬೇಕು. ಅಕ್ರಮ ಮನೆಗಳನ್ನು ಸಕ್ರಮ ಮಾಡಿ ಉತಾರ ನೀಡುವ ಕೆಲಸವನ್ನು ಆಯಾ ಅಧಿಕಾರಿಗಳು ಮಾಡಬೇಕು ಎಂದರು.ದುಂಢಶಿ ಹಾಗೂ ತಡಸ ಗ್ರಾಮದಲ್ಲಿ ಅರಣ್ಯ ಪ್ರದೇಶದಲ್ಲಿ ಸಾಗುವಳಿ ಮಾಡುತ್ತಿದ್ದಾರೆ. ಇಂತಹ ಜಮೀನುಗಳ ಸಕ್ರಮಕ್ಕೆ ಅರ್ಜಿ ಸಲ್ಲಿಸಲಾಗುತ್ತಿದೆ. ಇವುಗಳನ್ನು ಪರಿಶೀಲಿಸಿ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಅಧಿಕಾರಿಗಳಿಗೆ ತಿಳಿಸಿದರು.ಇದೇ ಸಂದರ್ಭದಲ್ಲಿ ಮನಸ್ವಿನಿ, ವೃದ್ಧಾಪ್ಯವೇತನ, ವಿಧವಾ, ರೈತ ವಿಧವಾ ಸೇರಿದಂತೆ ವಿವಿಧ ಮಾಸಾಶನ ಆದೇಶ ಪತ್ರಗಳನ್ನು ಫಲಾನುಭವಿಗಳಿಗೆ ವಿತರಿಸಲಾಯಿತು.
ಸಾರ್ವಜನಿಕರ ಸಮಸ್ಯೆಗಳಿಗೆ ಸ್ಪಂದಿಸಿ..ಅಧಿಕಾರಿಗಳು ಹಾಗೂ ಸಾರ್ವಜನಿಕರ ನಡುವೆ ನಾವು ಜನಪ್ರತಿನಿಧಿಗಳು ಸಮನ್ವಯ ಮಾಡುತ್ತೇವೆ. ಯಾವುದೇ ಅಧಿಕಾರಿಗಳು ಬೇಸರ ಮಾಡಿಕೊಳ್ಳಬಾರದು. ನಾವು- ನೀವು ಜನರ ಸೇವಕರು. ಸಾರ್ವಜನಿಕರ ಕೆಲಸ ಮಾಡಲು ಬಂದಿದ್ದೇವೆ. ಸಾರ್ವಜನಿಕರ ಸಮಸ್ಯೆಗಳಿಗೆ ಸ್ಪಂದಿಸುವ ಮೂಲಕ ಅವರ ಸಮಸ್ಯೆಗಳಿಗೆ ಪರಿಹಾರ ನೀಡುವ ಕೆಲಸ ಮಾಡಬೇಕು ಎಂದು ಶಾಸಕ ಯಾಸಿರ್ ಅಹ್ಮದ್ಖಾನ್ ಪಠಾಣ ಸಲಹೆ ನೀಡಿದರು.