ಸಚಿವ ನಗರಾಭಿವೃದ್ದಿ ಸಚಿವ ಬೈರತಿ ಸುರೇಶ್ ರಿಂದ ಕನಕ ಜಯಂತಿ ಮಹೋತ್ಸವ ಉದ್ಘಾಟನೆ
ಕಡೂರು ಕ್ಷೇತ್ರದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಸುಮಾರು 100 ಕೋಟಿ ರು.ಗೂ ಹೆಚ್ಚಿನ ಅನುದಾನ ನೀಡಲಾಗಿದೆ ಎಂದು ನಗರಾಭಿವೃದ್ಧಿ ಸಚಿವ ಭೈರತಿ ಸುರೇಶ್ ಪ್ರಕಟಿಸಿದರು.
ಸೋಮವಾರ ಪಟ್ಟಣದ ಸಂಗೊಳ್ಳಿ ರಾಯಣ್ಣ ವೇದಿಕೆಯಲ್ಲಿ ತಾಲೂಕು ಕುರುಬ ಸಮಾಜದಿಂದ ಅದ್ಧೂರಿಯಾಗಿ ನಡೆದ 136ನೇ ಕನಕ ಜಯಂತಿ ಮಹೋತ್ಸವ ಉಧ್ಘಾಟಿಸಿ ಮಾತನಾಡಿ, ನಮ್ಮ ನಾಯಕರು ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ಸಮ ಸಮಾಜ ನಿರ್ಮಾಣದ ಪರಿಕಲ್ಪನೆಯ ಬಸವಣ್ಣ , ಕನಕದಾಸರು ಮತ್ತು ಅಂಬೇಡ್ಕರ್ ಹಾದಿಯಲ್ಲಿ ಸಾಗುತ್ತಿದ್ದಾರೆ. ಧರ್ಮ ಮತ್ತು ಜಾತಿಯಿಂದ ರಾಜಕಾರಣ ಮಾಡಲು ಸಾದ್ಯವಿಲ್ಲ. ಅಂತಹ ವ್ಯಕ್ತಿಗಳ ಬಗ್ಗೆ ನಾವು ಗಮನಹರಿಸಬಾರದು. ಕಾಂಗ್ರೆಸ್ ನೇತೃತ್ವದ ಸರ್ಕಾರ ರಾಜ್ಯದಲ್ಲಿ ಜಾತ್ಯತೀತ ಆಡಳಿತ ನೀಡುತ್ತಿದೆ. ಕಳೆದ ಚುನಾವಣೆ ಸರ್ವೆಯಲ್ಲಿ ಆನಂದ್ ಅವರ ಗೆಲುವಿನ ವರದಿ ಬೆನ್ನಲ್ಲೇ ಅವರಿಗೆ ಬಿ ಫಾರಂ ನೀಡಲಾಯಿತು. ರಾಜಕಾರಣವನ್ನು ಹೊಟ್ಟೆ ಪಾಡಿಗೆ ಮಾಡಿದರೆ ಸೇವೆ ಮಾಡಲು ಸಾಧ್ಯವಿಲ್ಲ. ನಾವುಗಳು ಜನ ಸೇವೆಗಾಗಿ ರಾಜಕಾರಣ ಮಾಡುತ್ತಿದ್ದೇವೆ. ಕಾಂಗ್ರೆಸ್ ಪಕ್ಷದ ಮೇಲೆ ಅಭಿಮಾನವಿಟ್ಟು ಜನರು ನಮ್ಮನ್ನು ಗೆಲ್ಲಿಸಿದ್ದಾರೆ ಎಂದರು.ಅಮೃತ್ ಯೋಜನೆಯಲ್ಲಿ ಕಡೂರು ಕ್ಷೇತ್ರದ ಕುಡಿವ ನೀರಿನ ನೂತನ ಪೈಪ್ ಲೈನ್ ಅಳವಡಿಕೆಗೆ 60 ಕೋಟಿ ನೀಡಿದ್ದೇನೆ. ಸುಮಾರು 100 ಕೋಟಿ ವೆಚ್ಚದ ಕಡೂರು -ಬೀರೂರು ಪಟ್ಟಣಗಳ ಯುಜಿಡಿ ಕಾಮಗಾರಿಗೆ ಈಗಾಗಲೇ 25 ಕೋಟಿ ರು. ನೀಡಿದ್ದೇನೆ. ರಸ್ತೆ ನಿರ್ಮಾಣಕ್ಕೆ 10 ಕೋಟಿ ನೀಡಲಾಗಿದೆ. ಬರುವ ಮೂರು ತಿಂಗಳಲ್ಲಿ ಕಡೂರು ಪುರಸಭೆಯನ್ನು ನಗರಸಭೆಯಾಗಿ ಮಾಡಲು ಕ್ರಮ ಕೈಗೊಳ್ಳು ವುದಾಗಿ ಭರವಸೆ ನೀಡಿದರು.
ಶಾಸಕ ಕೆ.ಎಸ್. ಆನಂದ್ ಮಾತನಾಡಿ, ಕನಕದಾಸ ಮಹೋತ್ಸವ ಭಾವೈಕ್ಯತೆಯ ಸಮಾವೇಶ ವಾಗಬೇಕೆಂಬ ನನ್ನ ಆಶಯ ಯಶಸ್ವಿಯಾಗಿದೆ. ಕನಕದಾಸರು ಒಂದು ವರ್ಗಕ್ಕೆ ಸೀಮಿತವಲ್ಲ. ಸರ್ವ ಧರ್ಮಕ್ಕೂ ಅವರು ಆದರಣೀಯರು ಜಿಲ್ಲೆಯಲ್ಲಿ ಕಡೂರು ಮೊದಲಿನಿಂದಲೂ ಉಪೇಕ್ಷೆಗೊಳಗಾಗಿದೆ. ಕಡೂರು ಪುರಸಭೆಯನ್ನು ನಗರಸಭೆಯನ್ನಾಗಿ ಮೇಲ್ದರ್ಜೆಗೇರಿಸಲು ಸಚಿವರು ಮುಂದಾಗಬೇಕು. ಕಡೂರು ಬೀರೂರು ಪಟ್ಟಣದಲ್ಲಿ ಯುಜಿಡಿ ಕಾರ್ಯಕ್ಕೆ ಕಡಿಮೆಯಾಗಿರುವ ಹಣವನ್ನು ಮಂಜೂರು ಮಾಡುವ ಜೊತೆ ಭದ್ರಾ ಉಪಕಣಿವೆ ಯೋಜನೆಯನ್ನು ನಬಾರ್ಡ್ ಯೋಜನೆಗೆ ಸೇರ್ಪಡೆಗೊಳಿಸಬೇಕು. ಕ್ಷೇತ್ರದ ಸಮಗ್ರ ಅಭಿವೃದ್ಧಿ ಮಾಡುವ ಜವಾಬ್ದಾರಿ ನನ್ನ ಮೇಲೆ ಹೊರಿಸಿದ್ದಾರೆ. ನನಗೆ ನಿಗಮ ಮಂಡಳಿ ಅಧ್ಯಕ್ಷ ಅಥವಾ ಮಂತ್ರಿ ಸ್ಥಾನ ಬೇಡ. ಕ್ಷೇತ್ರದ ಅಭಿವೃದ್ಧಿಗೆ ನೀವೆಲ್ಲರೂ ಸಹಕಾರ ನೀಡಬೇಕೆಂದು ಮನವಿ ಮಾಡಿದರು.
136ನೇ ಕನಕ ಜಯಂತಿ ಮಹೋತ್ಸವ ಆಚರಣಾ ಸಮಿತಿ ಅಧ್ಯಕ್ಷ ತೋಟದಮನೆ ಮೋಹನ್ ಮಾತನಾಡಿ, ಈ ಬಾರಿ ಶಾಸಕರ ಮತ್ತು ಸಮಾಜದ ಮುಖಂಡರ ಸಲಹೆ ಸಹಕಾರಗಳ ಮೂಲಕ ಜಾತ್ಯಾತೀತವಾದ ಸೋದರ ಸಮಾಜಗಳ ಮುಖಂಡರನ್ನು ಗೌರವಿಸಿ ಕನಕ ಜಯಂತಿ ಆಚರಿಸುತ್ತಿದ್ದು, ಈ ಮಹೋತ್ಸವ ಯಶಸ್ಸಿಗೆ ಕಾರಣರಾದ ಎಲ್ಲರಿಗೂ ಕೃತಜ್ಞತೆ ಅರ್ಪಿಸುತ್ತೇನೆ ಎಂದರು.
ಕಾರ್ಯಕ್ರಮಕ್ಕೂ ಮುನ್ನ ಕನಕ ಜ್ಯೋತಿ ಮೆರವಣಿಗೆಯನ್ನು ಜಾನಪದ ಕಲಾ ತಂಡದೊಂದಿಗೆ ವಿಜೃಂಭಣೆಯಿಂದ ಕಡೂರಿನ ಪ್ರಮುಖ ರಸ್ತೆಗಳಲ್ಲಿ ನಡೆಸಲಾಯಿತು.
ವಿರೋಧ ಪಕ್ಷಗಳ ಮಾತುಗಳನ್ನು ನಂಬಬೇಡಿ ಸರ್ಕಾರದ ಯೋಜನೆಗಳ ಜೊತೆ ಗ್ಯಾರಂಟಿಗಳನ್ನು ನೀಡುತ್ತಿದೆ. ಯಾರೂ ಆತಂಕ ಪಡುವುದು ಬೇಡ. ಮೂರು ತಿಂಗಳಲ್ಲಿ ಕಡೂರು ಪುರಸಭೆಯನ್ನು ನಗರಸಭೆ ಯಾಗಿ ಮಾಡಲಾಗುವುದು