ಬ್ರಾಹ್ಮಣ ಸಮುದಾಯದಲ್ಲಿನ ಕನಿಷ್ಟ ೧೦ ಸಾವಿರ ಮಂದಿ ಉಳ್ಳವರಿಂದ ತಲಾ ೧ ಲಕ್ಷ ಸಂಗ್ರಹಿಸಿ ರಾಜ್ಯ ಬ್ರಾಹ್ಮಣ ಮಹಾಸಭಾದಲ್ಲಿ ೧೦೦ ಕೋಟಿ ನಿಧಿ ಇಡುವ ಗುರಿ ಇದ್ದು, ಈಗಾಗಲೇ ೩ ತಿಂಗಳಲ್ಲಿ ೮೦ ಲಕ್ಷ ಸಂಗ್ರಹವಾಗಿದೆ. ಈ ಕಾರ್ಯದಲ್ಲಿ ಪಾರದರ್ಶಕತೆ ಕಾಪಾಡಲು ಮತ್ತು ಲೋಪವಾದಂತೆ ಎಚ್ಚರವಹಿಸಲು ಉಪಸಮಿತಿ ರಚಿಸಲಾಗುವುದು.
ಕನ್ನಡಪ್ರಭ ವಾರ್ತೆ ಕೋಲಾರವಿಪ್ರ ಸಮುದಾಯದಲ್ಲಿನ ಹಿಂದುಳಿದವರ ನೆರವಾಗುವ ದೃಷ್ಟಿಯಿಂದ ೧೦೦ ಕೋಟಿ ರು.ಗಳ ಕ್ಷೇಮಾಭಿವೃದ್ದಿ ನಿಧಿ ಸಂಗ್ರಹಿಸುವ ಗುರಿ ಹೊಂದಿದ್ದು ಈ ಸಂಬಂಧ ಕಾರ್ಯಯೋಜನೆ ರೂಪಿಸಿದೆ ಎಂದು ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಅಧ್ಯಕ್ಷ ಎಸ್.ರಘುನಾಥ್ ಹೇಳಿದರು.ನಗರದ ಕೆಇಬಿ ಸಮುದಾಯ ಭವನದಲ್ಲಿ ಕೋಲಾರ ಜಿಲ್ಲಾ ಬ್ರಾಹ್ಮಣ ಮಹಾಸಭಾ ಉದ್ಘಾಟನೆ ಹಾಗೂ ರಾಜ್ಯ ಪದಾಧಿಕಾರಿಗಳ ಅಭಿನಂದನಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.ಉಪಸಮಿತಿ ರಚಿಸುವ ಭರವಸೆ
ಬ್ರಾಹ್ಮಣ ಸಮುದಾಯದಲ್ಲಿನ ಕನಿಷ್ಟ ೧೦ ಸಾವಿರ ಮಂದಿ ಉಳ್ಳವರಿಂದ ತಲಾ ೧ ಲಕ್ಷ ಸಂಗ್ರಹಿಸಿ ೧೦೦ ಕೋಟಿ ನಿಧಿ ಇಡುವ ಗುರಿ ಇದ್ದು, ಈಗಾಗಲೇ ೩ ತಿಂಗಳಲ್ಲಿ ೮೦ ಲಕ್ಷ ಸಂಗ್ರಹವಾಗಿದೆ. ಈ ಕಾರ್ಯದಲ್ಲಿ ಪಾರದರ್ಶಕತೆ ಕಾಪಾಡಲು ಮತ್ತು ಲೋಪವಾದಂತೆ ಎಚ್ಚರವಹಿಸಲು ಉಪಸಮಿತಿ ರಚಿಸುವುದಾಗಿ ತಿಳಿಸಿದರು.ಸಮುದಾಯದಲ್ಲಿನ ಆರ್ಥಿಕವಾಗಿ ಹಿಂದುಳಿದವರ ಕೈಹಿಡಿಯುವ ಕಾರ್ಯದಲ್ಲಿ ಅತಿ ಕಡಿಮೆ ಜನಸಂಖ್ಯೆ ಇರುವ ಜೈನ ಸಂಘಟನೆ ಕಾರ್ಯ ನಮಗೆ ಮಾದರಿಯಾಗಬೇಕಿದೆ, ಬ್ರಾಹ್ಮಣ ಸಮುದಾಯಕ್ಕೆ ಸರ್ಕಾರಿ ಕೆಲಸದ ಆಸೆ ಕ್ಷೀಣಿಸ ತೊಡಗಿದೆ, ಖಾಸಗಿ ವಲಯದಲ್ಲಿ ಉದ್ಯೋಗ ಸಿಗುತ್ತಿದೆ, ಮತ್ತು ಸಮುದಾಯದ ಉದ್ಯೋಗದಾತರು ಬಡ ವಿಪ್ರರ ನೆರವಿಗೆ ಮುಂದಾಗಬೇಕು ಎಂದರು.
ರಾಜ್ಯಾದ್ಯಂತ ಸದಸ್ಯತ್ವ ಅಭಿಯಾನ
ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಹಿರಿಯ ಉಪಾಧ್ಯಕ್ಷ ಆರ್.ಲಕ್ಷ್ಮೀಕಾಂತ್ ಮಾತನಾಡಿ, ಮಹಾಸಭಾ ಮುಖ್ಯ ಉದ್ದೇಶ ಪ್ರತಿಯೊಂದು ವಿಪ್ರ ಕುಟುಂಬದ ಸದಸ್ಯತ್ವವೂ ನೋಂದಣಿ ಮಾಡಿಸಬೇಕು, ಸಮುದಾಯದ ಯಾರೂ ಸಂಘಟನೆಯಿಂದ ದೂರ ಉಳಿಯಬಾರದು ಎಂಬುದಾಗಿದೆ, ಈ ನಿಟ್ಟಿನಲ್ಲಿ ರಾಜ್ಯಾದ್ಯಂತ ಸದಸ್ಯತ್ವ ಅಭಿಯಾನ ನಡೆಸಲಾಗುತ್ತಿದೆ ಎಂದರು.
ಉಪ ಪಂಗಡ ಹೆಸರು ಹೇಳಬೇಡಿ
ಕೋಲಾರ ಜಿಲ್ಲಾ ಬ್ರಾಹ್ಮಣ ಮಹಾಸಭಾ ಅಧ್ಯಕ್ಷ ವಿ.ಎಸ್.ಚಂದ್ರಶೇಖರ್, ಜಿಲ್ಲೆಯಲ್ಲಿ ೪೫ ಲಕ್ಷ ವಿಪ್ರರಿದ್ದಾರೆ ಆದರೆ ಸರ್ಕಾರ ೧೫ ಲಕ್ಷ ಎಂದು ಹೇಳುತ್ತಿದೆ, ಈ ಹಿನ್ನಲೆಯಲ್ಲಿ ಆ.೩೦ ರೊಳಗೆ ಜಿಲ್ಲೆಯಲ್ಲಿ ಇರುವ ವಿಪ್ರರ ಸರ್ವೇ ನಡೆಸಲು ಕ್ರಮವಹಿಸಿದ್ದು, ಈಗಾಗಲೇ ಕೆಲವು ಹೋಬಳಿಗಳ ಸರ್ವೇ ಕಾರ್ಯ ಮುಗಿದಿದೆ, ಜಾತಿ ಸರ್ವೇಗೆ ಬಂದಾಗ ಉಪಪಂಗಡಗಳ ಹೆಸರು ಹೇಳದಿರಿ ಎಂದು ಮನವಿ ಮಾಡಿದರು.
ಪದಾಧಿಕಾರಿಗಳಿಗೆ ಸನ್ಮಾನ
ಈ ಸಂದರ್ಭದಲ್ಲಿ ರಾಜ್ಯ ಮಹಾಸಭಾ ಅಧ್ಯಕ್ಷ ರಘುನಾಥ್ ಸೇರಿದಂತೆ ಪದಾಧಿಕಾರಿಗಳನ್ನು ಸನ್ಮಾನಿಸಲಾಯಿತು. ರಾಜ್ಯ ಸಂಘಟನಾ ಕಾರ್ಯದರ್ಶಿಗಳಾದ ಲಕ್ಷ್ಮೀಶ, ಜೆ.ಎನ್.ರಾಮಕೃಷ್ಣ, ಹೆಚ್.ಆರ್.ವೆಂಕಟೇಶ್,ಜಂಟಿ ಕಾರ್ಯದರ್ಶಿಗಳಾದ ಟಿ.ಕೆ.ವೆಂಕಟಾಚಲಪತಿ, ಶೇಷಗಿರಿರಾವ್, ವಲ್ಲಭಣ್ಣ, ಕೃಷ್ಣಮೂರ್ತಿ ಮತ್ತಿತರರನ್ನು ಅಭಿನಂದಿಸಿದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.