ಕನ್ನಡಪ್ರಭ ವಾರ್ತೆ ಮದ್ದೂರು
ತಾಲೂಕಿನ ಗೆಜ್ಜಲಗೆರೆ ಗ್ರಾಪಂ ಎದುರು ಗ್ರಾಮಸ್ಥರು ರೈತ ಸಂಘದ ಬೆಂಬಲದೊಂದಿಗೆ ನಡೆಸುತ್ತಿರುವ ಅಹೋರಾತ್ರಿ ಧರಣಿ 100ನೇ ದಿನ ಪೂರೈಸಿದ ಹಿನ್ನೆಲೆಯಲ್ಲಿ ಮಂಗಳವಾರ ಚಳವಳಿ ನಿರತರು ಕಪ್ಪು ಪಟ್ಟಿ ಧರಿಸಿ ಕಪ್ಪು ಬಾವುಟ ಹಿಡಿದು ಕರಾಳ ದಿನವನ್ನು ಆಚರಿಸಿದರು.
ನಗರಸಭೆಗೆ ಗ್ರಾಪಂಗಳ ಸೇರ್ಪಡೆ ವಿವಾದ ರಾಜ್ಯ ನ್ಯಾಯಾಲಯದಲ್ಲಿದೆ. ಇದರಲ್ಲಿ ನಮ್ಮ ಹೋರಾಟದ ವಿರುದ್ಧವಾಗಿ ವ್ಯತಿರಿಕ್ತ ತೀರ್ಪು ಬಂದರೆ ಚಳವಳಿ ತೀವ್ರಗೊಳಿಸಲು ಗ್ರಾಮಸ್ಥರು ಗ್ರಾಮದ ಮಣ್ಣನ್ನು ಮುಷ್ಟಿಯಲ್ಲಿ ಹಿಡಿದು ಪ್ರತಿಜ್ಞೆ ಸ್ವೀಕರಿಸಿದರು.ಈಗ ನಡೆಯುತ್ತಿರುವ ಚಳವಳಿ 100 ದಿನ ಅಲ್ಲ. ಸಾವಿರ ದಿನವಾದರೂ ಸಹ ಹೋರಾಟದಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ ಎಂದು ರೈತಪರ ಹೋರಾಟಗಾರ್ತಿ ಸುನಂದ ಜಯರಾಂ ತಿಳಿಸಿದರು.
ಗ್ರಾಮದಲ್ಲಿ ಈ ಹಿಂದೆ ನಡೆದ ರೈತ ಚಳವಳಿಯಲ್ಲಿ ಇಬ್ಬರು ರೈತರು ಪ್ರಾಣ ಪ್ರಾಣಾರ್ಪಣೆ ಮೂಲಕ ಗ್ರಾಮ ಹೋರಾಟದ ಗ್ರಾಮ ಎಂದು ಸಾಬೀತು ಪಡಿಸಿದ್ದಾರೆ. ಇಂಥ ಪರಿಸ್ಥಿತಿ ಪುನರಾವರ್ತನೆ ಆಗಬಾರದು ಎಂಬ ಉದ್ದೇಶ ಸರ್ಕಾರ ಅಥವಾ ಜನಪ್ರತಿನಿಧಿಗಳಿಗೆ ಇದ್ದರೆ ತಕ್ಷಣ ಸಮಸ್ಯೆ ಬಗೆಹರಿಸುವ ಪ್ರಯತ್ನ ಮಾಡಬೇಕು ಎಂದು ಸಲಹೆ ನೀಡಿದರು.
ನಿಯಮ ಬಾಹಿರವಾಗಿ ಗೆಜ್ಜಲಗೆರೆ ಗ್ರಾಮವನ್ನು ಮದ್ದೂರು ನಗರಸಭೆಗೆ ಸೇರ್ಪಡೆ ಮಾಡಿರುವುದು ಸೇರಿದಂತೆ ವಿವಿಧ ಬೇಡಿಕೆ ಒಳಗೊಂಡ ನಿರ್ಣಯದ ಪ್ರತಿಯನ್ನು ಧರಣಿನಿರತರು ಮುಖ್ಯಮಂತ್ರಿ ಸಿದ್ದರಾಮಯ್ಯರಿಗೆ ಸಲ್ಲಿಸಿದರು.
ಈ ವೇಳೆ ಗ್ರಾಮದ ಮುಖಂಡರಾದ ಜಿ.ಟಿ.ಚಂದ್ರಶೇಖರ್, ವೀರಪ್ಪ, ಮೋಹನ್ ಕುಮಾರ್, ಚಂದ್ರಶೇಖರ್, ಜಿ.ಸಿ.ಮಹೇಂದ್ರ, ಜಿ.ಪಿ.ಯೋಗೇಶ್, ಮತ್ತಿತರರಿದ್ದರು.ಸರ್ಕಾರಕ್ಕೆ ಜನ ಬುದ್ಧಿ ಕಲಿಸುವ ದಿನಗಳು ಸನ್ನಿಹಿತ: ರೈತ ಮುಖಂಡರ ಎಚ್ಚರಿಕೆ
ತಾಲೂಕಿನ ಗೆಜ್ಜಲಗೆರೆ ಗ್ರಾಮದಲ್ಲಿ ನಡೆದ ಧರಣಿಯ ಕರಾಳ ದಿನ ಸಭೆಯಲ್ಲಿ ರಾಜ್ಯ ರೈತ ಸಂಘದ ಅಧ್ಯಕ್ಷ ಬಡಗಲಪುರ ನಾಗೇಂದ್ರ, ರೈತ ಮುಖಂಡರಾದ ಕೆ.ಬೋರಯ್ಯ, ಇಂಡುವಾಳು ಚಂದ್ರಶೇಖರ್, ಕೆಂಪುಗೌಡ ಸೇರಿದಂತೆ ಮುಖಂಡರು ಗ್ರಾಮಸ್ಥರು ಹೋರಾಟಕ್ಕೆ ಬೆಂಬಲ ಸೂಚಿಸಿ ಸಭೆ ಮಾತನಾಡಿದರು.ಜನರು ಬೇಡ ಎನ್ನುವ ವಿಷಯವನ್ನು ಸ್ವೀಕರಿಸದಿರುವುದು ನಾಗರಿಕ ಸರ್ಕಾರದ ಕರ್ತವ್ಯ. ಒಂದು ವೇಳೆ ಜನರ ತೀರ್ಪಿಗೆ ವಿರುದ್ಧವಾಗಿ ನಡೆದುಕೊಂಡರೆ ಅದು ಅನಾಗರಿಕ ಸರ್ಕಾರ. ಮಂಡ್ಯದ ಜನರು ಹೃದಯವಂತ ಉಳ್ಳವರು. ಈ ಜನಕ್ಕೆ ಹೋರಾಟವು ಗೊತ್ತು ಮತ್ತು ಹಸಿದವರಿಗೆ ಅನ್ನ ಹಾಕುವ ಜಾಯಮಾನ ಉಳ್ಳವರು. ಜಿಲ್ಲೆಯ ಜನರ ಇಚ್ಚೆಗೆ ವಿರುದ್ಧವಾಗಿ ಯಾವುದೇ ಸರ್ಕಾರ ನಡೆದುಕೊಂಡರು ಆ ಸರ್ಕಾರ ಸರ್ವನಾಶವಾಗುವುದು ಖಚಿತ ಎಂದು ಎಚ್ಚರಿಸಿದರು.