ಕನ್ನಡಪ್ರಭ ವಾರ್ತೆ, ಚಿತ್ರದುರ್ಗ
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶುಕ್ರವಾರ, ಜಿಲ್ಲಾ ಪ್ರಾಣಿ ದಯಾ ಸಂಘದ ನಿರ್ವಹಣಾ ಸಮಿತಿ ಸಭೆ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ದೇವರ ಎತ್ತುಗಳು ಗೋ ಶಾಲೆಗಳಲ್ಲಿ ಇರದ ಕಾರಣ, ಬರಗಾಲದ ಸಂದರ್ಭದಲ್ಲಿ ಇವುಗಳಿಗೆ ಮೇವು ಹಾಗೂ ಕುಡಿಯುವ ನೀರಿನ ಅನುದಾನ ಒದಗಿಸಲು ಬರುವುದಿಲ್ಲ. ಇದರ ಬದಲು ಗ್ರಾಮಸ್ಥರು 50ಕ್ಕಿಂತಲೂ ಹೆಚ್ಚಿನ ದೇವರ ಎತ್ತುಗಳನ್ನು ಒಳಗೊಂಡತೆ ಟ್ರಸ್ಟ್ ರಚಿಸಿ, ನಿರ್ವಹಣೆ ಹೊಣೆ ವಹಿಸಿಕೊಂಡರೆ, ಸರ್ಕಾರದಿಂದ ಪ್ರತಿ ಗೋವಿಗೂ ವಾರ್ಷಿಕ ನಿರ್ವಹಣೆ ವೆಚ್ಚವಾಗಿ ₹11,000 ಅನುದಾನ ಲಭಿಸಲಿದೆ. ಚಳ್ಳಕೆರೆ ಹಾಗೂ ಮೊಳಕಾಲ್ಮೂರು ತಹಸೀಲ್ದಾರಿಗೆ ಈ ಕುರಿತು ಸೂಚನೆ ನೀಡುತ್ತೇನೆ. ಪಶು ಇಲಾಖೆ ಅಧಿಕಾರಿಗಳು ಟ್ರಸ್ಟ್ ರಚನೆ ಪ್ರೇರೇಪಣಾ ಕಾರ್ಯದಲ್ಲಿ ತೊಡಗಿಕೊಳ್ಳಬೇಕು ಎಂದರು.ಅಕ್ರಮ ಪ್ರಾಣಿವಧೆಗೆ ಕಡಿವಾಣ ಹಾಕಿ:
ಪಶು ವೈದ್ಯಕೀಯ ಹಾಗೂ ಸೇವಾ ಇಲಾಖೆ ಉಪನಿರ್ದೇಶಕಿ ಡಾ.ಇಂದಿರಾ ಬಾಯಿ ಮಾತನಾಡಿ, ಬಕ್ರೀದ್ ಅಂಗವಾಗಿ 13 ವರ್ಷ ದಾಟಿದ ಪ್ರಮಾಣೀಕರಿಸಿದ ಎಮ್ಮೆ ಹಾಗೂ ಕೋಣಗಳನ್ನು ಮಾತ್ರ ವಧಿಸಬಹುದಾಗಿದೆ. ಗೋವು ಹಾಗೂ ಒಂಟೆ ವಧೆಯನ್ನು ಸಂಪೂರ್ಣ ನಿಷೇಧಿಸಲಾಗಿದೆ. ಉಳಿದಂತೆ ಕುರಿ, ಮೇಕೆಗಳ ವಧೆಗೆ ನಿರ್ಬಂಧವಿಲ್ಲ ಎಂದರು.
ಜಿಲ್ಲೆಯ ವಿವಿಧ ಕಂಪನಿಗಳ ಸಾಮಾಜಿಕ ಹೊಣೆಗಾರಿಕೆ ನಿಧಿಯಡಿ ಸರ್ಕಾರಿ ಗೋಶಾಲೆಗಳನ್ನು ನಿರ್ಮಿಸಲು ಯೋಜನಾ ವರದಿ ನೀಡುವಂತೆ ಪಶು ಇಲಾಖೆ ಅಧಿಕಾರಿಗಳಿಗೆ ಅಪರ ಜಿಲ್ಲಾಧಿಕಾರಿ ಬಿ.ಟಿ. ಕುಮಾರಸ್ವಾಮಿ ಸೂಚನೆ ನೀಡಿದರು. ಸಭೆಯಲ್ಲಿ ಸರ್ಕಾರಿ ಗೋಶಾಲೆಯ ಸಗಣಿ ವಿಲೇವಾರಿ, ಹೆಚ್ಚುವರಿ ಗೋಶಾಲೆಗಳ ನಿರ್ಮಾಣ, ಗೋಶಾಲೆಗಳಲ್ಲಿ ಡಿ ದರ್ಜೆ ನೌಕರರ ನೇಮಕ, ಜಿಲ್ಲಾ ಜಾನುವಾರು ಮಾರುಕಟ್ಟೆ ಮೇಲ್ವಿಚಾರಣೆ ಸಮಿತಿ ಹಾಗೂ ವಿವಿಧ ಸಂಘ ಸಂಸ್ಥೆಗಳ ಅಡಿ ಜಿಲ್ಲೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಪಿಂಜಾರ್ ಪೋಲ್ ಹಾಗೂ ಇತರೆ ಗೋಶಾಲೆಗಳಿಗೆ ಬೆಂಬಲ ನೀಡುವ ಕಾರ್ಯಕ್ರಮಗಳ ಪ್ರಸ್ತಾವನೆಗಳನ್ನು ಬಗ್ಗೆ ಚರ್ಚಿಸಿ ನಿರ್ಣಯ ಕೈಗೊಳ್ಳಲಾಯಿತು.
ಬಿಡಾಡಿ ದನಗಳಿಗೆ ಮಾರಕವಾದ ಪ್ಲಾಸ್ಟಿಕ್: ನಗರ ಪ್ರದೇಶದ ರಸ್ತೆ, ಮಾರುಕಟ್ಟೆ ಸೇರಿದಂತೆ ಎಲ್ಲೆಂದರಲ್ಲಿ ಬಿಡಾಡಿ ಓಡಾಡುವ ದನ-ಕರುಗಳನ್ನು ಸರ್ಕಾರಿ ಗೋವು ಶಾಲೆಗಳಿಗೆ ಕಳುಹಿಸುವ ಕುರಿತು ಸಭೆಯಲ್ಲಿ ಚರ್ಚಿಸಲಾಯಿತು. ಸರ್ಕಾರದಿಂದ ಜಿಲ್ಲೆಯಲ್ಲಿ 1 ಗೋಶಾಲೆ ಮಾತ್ರ ನಡೆಸಲಾಗುತ್ತಿದೆ. ಇದರಲ್ಲಿ ಈಗಾಗಲೇ 81 ಜಾನುವಾರುಗಳು ಆಶ್ರಯ ಪಡೆದಿವೆ. ನಗರದ ತಿಪ್ಪೆಗುಂಡಿಗಳಲ್ಲಿ ಹರಡಿರುವ ಪ್ಲಾಸ್ಟಿಕ್ ತಿನ್ನುವ ಬಿಡಾಡಿ ದನಗಳು ಗೋಶಾಲೆಗೆ ದಾಖಲಾದರೆ, ಅವುಗಳ ಜೀವನ ಸುಗಮವಾಗುವ ಬದಲು, ಸಾವಿಗೆ ಈಡಾಗುವ ಪ್ರಸಂಗ ಉಂಟಾಗುತ್ತಿದೆ. ನಗರದಲ್ಲಿ ಎಲ್ಲ ವಯಸ್ಕ ಗೋವುಗಳ ಜಠರಗಳಲ್ಲಿ ಪ್ಲಾಸ್ಟಿಕ್ ಸೇರ್ಪಡೆಯಾಗಿದ್ದು, ಗೋವುಗಳು ಮೇವು ತಿಂದ ನಂತರ, ದೇಹದಲ್ಲಿನ ಪ್ಲಾಸ್ಟಿಕ್ನಿಂದ ತೊಂದರೆ ಅನುಭವಹಿಸಿ ಅಸುನೀಗುತ್ತಿವೆ. ಇದು ಪಶು ಇಲಾಖೆ ವೈದ್ಯಾಧಿಕಾರಿಗಳನ್ನು ಚಿಂತೆಗೆ ಈಡುಮಾಡಿದೆ. ಗೋವುಗಳ ಹೊಟ್ಟೆ ಸೇರಿದ ಪ್ಲಾಸ್ಟಿಕ್ ಅನ್ನು ಆಪರೇಷನ್ ಮಾಡಿ ಹೊರೆತೆಗದರೂ ಗೋವುಗಳು ಗುಣಮುಖವಾಗದೇ ಮತ್ತೆ ಸಾವಿನ ಕಡೆ ಸಾಗುತ್ತಿವೆ. ಈ ಕುರಿತು ಪಶು ಇಲಾಖೆ ವೈದ್ಯಾಧಿಕಾರಿಗಳು ಸಂಪೂರ್ಣ ಅಧ್ಯಯನ ವರದಿ ಸಿದ್ಧಪಡಿಸಿ ಪ್ರಾಣಿ ದಯಾ ಸಂಘಕ್ಕೆ ನೀಡಬೇಕು ಎಂದು ಅಪರ ಜಿಲ್ಲಾಧಿಕಾರಿ ಸಭೆಯಲ್ಲಿ ನಿರ್ದೇಶನ ನೀಡಿದರು. ವಯಸ್ಕ ಗೋವುಗಳ ಬದಲಿಗೆ ಸಣ್ಣ ಕರುಗಳನ್ನು ಮುಂಜಾಗೃತ ಕ್ರಮವಾಗಿ ಗೋಶಾಲೆಗಳಿಗೆ ದಾಖಲಿಸುವಂತೆಯೂ ಅವರು ತಿಳಿಸಿದರು.