ಸಮಯಕ್ಕೆ ಸಿಗದ ಚಿಕಿತ್ಸೆ, 11 ವರ್ಷದ ಬಾಲಕಿ ಸಾವು

KannadaprabhaNewsNetwork |  
Published : Jul 21, 2026, 01:15 AM IST
  ಸಿಕೆಬಿ-4 ತಾಲ್ಲೂಕಿನ ಪೆರೇಸಂದ್ರ ಗ್ರಾಮದಲ್ಲಿಸಮಯಕ್ಕೆ ಸರಿಯಾಗಿ ವೈದ್ಯಕೀಯ ಸೌಲಭ್ಯ ದೊರೆಯದೆ 11 ವರ್ಷದ ಬಾಲಕಿ ಸಾವು. ಆಸ್ಪತ್ರೆಗೆ ವೈದ್ಯರನ್ನು ನೇಮಕ ಮಾಡುವಂತೆ ಆಗ್ರಹಿಸಿ ಗ್ರಾಮಸ್ಥರು ಪ್ರತಿಭಟನೆ ನಡೆಸಿದರು | Kannada Prabha

ಸಾರಾಂಶ

ತಾನು ತಿನ್ನುತ್ತಿದ್ದ ತಿಂಡಿಯ ಪೊಟ್ಟಣವನ್ನು ಕೋತಿ ಕಿತ್ತುಕೊಂಡಿದ್ದಕ್ಕೆ ಭಯಬೀತಳಾಗಿ ಪ್ರಜ್ಞಾಹೀನಳಾದ ಬಾಲಕಿಯನ್ನು ತಾಲೂಕಿನ ಪೆರೆಸಂದ್ರ ಸರ್ಕಾರಿ ಆಸ್ಪತ್ರೆಗೆ ತಂದಾಗ ಆಸ್ಪತ್ರೆಯಲ್ಲಿ ಸಮಯಕ್ಕೆ ಸರಿಯಾಗಿ ವೈದ್ಯರು ಇಲ್ಲದೇ, ವೈದ್ಯಕೀಯ ಸೌಲಭ್ಯವೂ ದೊರೆಯಲಿಲ್ಲ.

ವೈದ್ಯರನ್ನು ನೇಮಿಸುವಂತೆ ಆಗ್ರಹಿಸಿ ಪೆರೇಸಂದ್ರದಲ್ಲಿ ಪ್ರತಿಭಟನೆ । ತಿಂಡಿ ಪೊಟ್ಟಣ ಕೋತಿ ಕಿತ್ತುಕೊಂಡಿದ್ದಕ್ಕೆ ಪ್ರಜ್ಞಾಹೀನಳಾದ ಬಾಲಕಿ

ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ

ಹಾಲಿ ಶಾಸಕ ಮತ್ತು ಸಂಸದರ ತವರೂರಿನ ಸಾರ್ವಜನಿಕ ಆಸ್ಪತ್ರೆಯಲ್ಲಿ ಕನಿಷ್ಠ ಬಿಪಿ, ಶುಗರ್, ಆಕ್ಸಿಜನ್ ಲೆವೆಲ್ ಚೆಕ್ ಮಾಡೋ ಮಿಷನ್ ಕೂಡ ಇಲ್ಲದೆ 11 ವರ್ಷದ ಮಗು ಜೀವ ಕಳೆದುಕೊಂಡ ಘಟನೆ ನಡೆದಿದ್ದು, ಇಡೀ ಊರೆ ರಸ್ತೆ ತಡೆ ಮಾಡಿ ಜನಪ್ರತಿನಿಧಿಗಳು ಸರ್ಕಾರಕ್ಕೆ ತರಾಟೆಗೆ ತಗೆದುಕೊಂಡು ಆಕ್ರೋಶ ಹೊರಹಾಕಿದ್ದಾರೆ.

ತಾನು ತಿನ್ನುತ್ತಿದ್ದ ತಿಂಡಿಯ ಪೊಟ್ಟಣವನ್ನು ಕೋತಿ ಕಿತ್ತುಕೊಂಡಿದ್ದಕ್ಕೆ ಭಯಬೀತಳಾಗಿ ಪ್ರಜ್ಞಾಹೀನಳಾದ ಬಾಲಕಿಯನ್ನು ತಾಲೂಕಿನ ಪೆರೆಸಂದ್ರ ಸರ್ಕಾರಿ ಆಸ್ಪತ್ರೆಗೆ ತಂದಾಗ ಆಸ್ಪತ್ರೆಯಲ್ಲಿ ಸಮಯಕ್ಕೆ ಸರಿಯಾಗಿ ವೈದ್ಯರು ಇಲ್ಲದೇ, ವೈದ್ಯಕೀಯ ಸೌಲಭ್ಯವೂ ದೊರೆಯದೆ, ಜಿಲ್ಲಾಸ್ಪತ್ರೆಗೆ ಸಾಗಿಸುವ ವೇಳೆ 11 ವರ್ಷದ ಬಾಲಕಿ ಸಾವನ್ನಪ್ಪಿದಳು. ಘಟನೆಯಿಂದ ರೊಚ್ಚಿಗೆದ್ದ ಸಾರ್ವಜನಿಕರು ಆಸ್ಪತ್ರೆಗೆ ವೈದ್ಯರನ್ನು ನೇಮಕ ಮಾಡುವಂತೆ ಆಗ್ರಹಿಸಿ ಪ್ರತಿಭಟನೆ ನಡೆಸಿದರು.

ಏನಿದು ಘಟನೆ:

ತಾಲೂಕು ಪೆರೆಸಂದ್ರ ಗ್ರಾಮದಲ್ಲಿ ಪಂಚರ್ ಶಾಪ್ ಇಟ್ಟುಕೊಂಡು ಜೀವನ ಸಾಗಿಸುತಿದ್ದ ನವೀನ್ ಮತ್ತು ಚಂದ್ರಿಕಾ ಎನ್ನುವವರ ಮಗಳು ಶಶಿಕಲಾ ಭಾನುವಾರ ಸಂಜೆ ಸುಮಾರು 6 ಗಂಟೆ ವೇಳೆಗೆ ಮನೆ ಮೇಲೆ ಬಟ್ಟೆ ಒಣಗಿಸುತಿದ್ದ ತಾಯಿ ಜತೆ ಕುರುಕುರೆ ತಿನ್ನುತಿದ್ದ ವೇಳೆ ಕೋತಿಯೊಂದು ದಾಳಿ ಮಾಡಿ ಮಗುವಿನ ಕೈಯಿಂದ ಅದನ್ನು ಕಿತ್ತುಕೊಂಡಿತು. ಈ ವೇಳೆ ಗಾಬರಿಗೊಳಗಾದ ಬಾಲಕಿ ಓಡಿ ಬಂದು ನೀರು ಕುಡಿದ ರಭಸಕ್ಕೆ ಉಸಿರಾಟಕ್ಕೆ ತೊಂದರೆಯಾಗಿ ಒದ್ದಾಡಿದಳು. ಇದನ್ನು ಕಂಡ ಪೋಷಕರು ಸ್ಥಳೀಯ ಸರ್ಕಾರಿ ಆಸ್ಪತ್ರೆಗೆ ಕರೆತಂದು ಚಿಕಿತ್ಸೆ ಕೊಡಿಸಲು ಮುಂದಾದರೆ ಅಲ್ಲಿ ಒಬ್ಬೆ ಒಬ್ಬ ನರ್ಸ್ ಬಿಟ್ಟರೆ ಯಾರು ಇರಲಿಲ್ಲ. ಆ ಮಗುಗೆ ಪಲ್ಸ್ ಚೆಕ್ ಮಾಡೋ ಮಿಷನ್ ಚಾರ್ಜ್ ಅಗಿರಲಿಲ್ಲ. ಚಾರ್ಜ್ ಹಾಕೋ ಬ್ಯಾಟರಿಯೂ ಇರಲಿಲ್ಲ. ಅಲ್ಲಿ ಚಿಕಿತ್ಸೆ ಸಾಧ್ಯವಿಲ್ಲ ಎಂದರಿತ ಪೊಷಕರು ಕೂಡಲೇ ಅದೆ ಗ್ರಾಮದ ಇನ್ನೊಂದೆರಡು ಖಾಸಗಿ ಆಸ್ಪತ್ರೆಗಳನ್ನ ಸುತ್ತಿ ಅಲ್ಲಿಯೂ ಎನೂ ಪ್ರಯೋಜನ ಆಗಲಿಲ್ಲ. ಕೊನೆಗೆ ಜಿಲ್ಲಾಸ್ಪತ್ರೆಗೆ ಹೋಗಲು ಆ್ಯಂಬುಲೆನ್ಸ್‌ಗೆ ಕರೆ ಮಾಡಿದರೆ ಬಾರದ ಕಾರಣ ಯಾರದೊ ಒಂದು ಕಾರಲ್ಲಿ ಸಾಗಿಸಿದರೂ ಆಸ್ಪತ್ರೆ ತಲುಪುವ ಮಾರ್ಗ ಮಧ್ಯೆಯೇ ಮಗು ಜೀವ ಕಳೆದುಕೊಂಡಿತ್ತು.

ಈ ಘಟನೆಯಿಂದ ಬಾಲಕಿಯ ಅಪ್ಪ, ಅಮ್ಮ,ಅಜ್ಜಿ, ತಾತಾ, ಸಂಬಂಧಿಕರು ಅವರ ಅಣ್ಣ ತಮ್ಮಂದಿರ ಆಕ್ರಂದನ ಮುಗಿಲು ಮುಟ್ಟಿತ್ತು. ಅವರಿಗೆ ದಿಕ್ಕು ತೋಚದೆ ಮುಖಂಡರಿಗೆ ಪೋನ್ ಮಾಡಿ ಸಹಾಯ ಬೇಡಿದ್ದಾರೆ. ಅದೇ ಗ್ರಾಮದ ಸಮಾಜ ಸೇವಕ ಸಂದೀಪರೆಡ್ಡಿಗೆ ದೂರವಾಣಿ ಮೂಲಕ ಮಗುವನ್ನ ಕಳೆದುಕೊಂಡ ನಾವು ದುಖಿತರಾಗಿದ್ದೇವೆ. ನಮ್ಮ ಮಗು ಹೋಗಿಬಿಟ್ಟಿದೆ. ಇನ್ನಾರಿಗೂ ವೈದ್ಯರಿಲ್ಲದೇ ಜೀವ ಕಳೆದು ಕೊಳ್ಳುವ ಗತಿ ಬರಬಾರದು ಮೊದಲು ಆಸ್ಪತ್ರೆ ಸಿಬ್ಬಂದಿ ನಿರ್ಲಕ್ಷ್ಯ ನಿವಾರಿಸಿ, ಅಲ್ಲಿಗೆ ಬೇಕಾಗಿರೋ ಮೂಲಸೌಕರ್ಯ ಮತ್ತು ದಿನದ 24 ಗಂಟೆಯೂ ವೈದ್ಯರ ಸೌಲಭ್ಯ ಕೊಡಿಸಿ ಎಂದು ಅಂಗಲಾಚಿ ಬೇಡಿಕೊಂಡ ಆಡೀಯೋ ಸಾಮಾಜಿಕತಾಣದಲ್ಲಿ ಲಭ್ಯವಾಗಿದೆ.

ಮಾಹಿತಿ ತಿಳಿಯುತಿದ್ದಂತೆ ಸೋಮವಾರ ಗ್ರಾಮಕ್ಕೆ ತೆರಳಿದ ಭಗತ್ ಸಿಂಗ್ ಚಾರಿಟಬಲ್ ಅಧ್ಯಕ್ಷ ಸಂದೀಪ ಬಿ.ರೆಡ್ಡಿ ಪೋಷಕರನ್ನು ಸಮಾಧಾನ ಮಾಡಿ ಸಾಂತ್ವನ ಹೇಳಿದರು. ಗ್ರಾಮದಲ್ಲಿ ಜಮಾಯಿಸಿದ ಜನ ಆಸ್ಪತ್ರೆ ಸಿಬ್ಬಂದಿ, ಅವ್ಯವಸ್ಥೆ, ಜನಪ್ರತಿನಿಧಿಗಳ ವಿರುದ್ಧ ಆಕ್ರೋಶ ಹೊರಗಾಕಿದರು.

ಈ ವೇಳೆ ನೆರೆದ ಜನರಲ್ಲಿ ಕೆಲವರು ಶಾಸಕ ಪ್ರದೀಪ್ ಈಶ್ವರ್‌ಗೆ ದೂರವಾಣಿ ಕರೆ ಮಾಡಲು ಹೋಗಿದ್ದಾರೆ. ಆದರೆ ಶಾಸಕರು ನೀಡಿದ್ದ ಮೊಬೈಲ್ ನಂಬರ್‌ಗೆ ಪೋನ್ ಕನೆಕ್ಟ್ ಆಗದಿದ್ದರಿಂದ ರೊಚ್ಚಿಗೆದ್ದ ಅವರು ಪೋನ್ ಹೋಗುತಿಲ್ಲ. ಶಾಸಕರು ಹಣ ಇಲ್ಲದೇ ಪೋನ್ ರೀಚಾರ್ಜ್ ಮಾಡಿಸಿಲ್ಲ, ಶಾಸಕರೇ ನಿಮ್ಮ ಪೋನ್ ರಿಚಾರ್ಜ್‌ಗಾಗಿ ನಿನಗೆ ಗತಿಯಿಲ್ಲದಿದ್ರೆ, ಪೋನ್ ಪೇ ಮಾಡಿ ನಾವೆ ಹಣ ಕೊಡ್ತೀವಿಧೆಂದು ಅವರ ವಿರುದ್ಧ ಘೋಷಣೆ ಕೂಗಿದ ಪ್ರಸಂಗವೂ ನಡೆದಿದೆ.

ಸಂಬಂಧಪಟ್ಟ ಅಧಿಕಾರಿಗಳು ಸ್ಥಳಕ್ಕೆ ಬರುವರೆಗೂ, ಪರಿಹಾರ ಸಿಗುವವರೆಗೂ ರಸ್ತೆ ಬಂದ್ ಮಾಡುವುದಾಗಿ ಪ್ರತಿಭಟನೆ ನಡೆಸಿದರು. ಕೊನೆಗೆ ಸ್ಥಳಕ್ಕೆ ಬಂದ ಅಪರ ಜಿಲ್ಲಾಧಿಕಾರಿ ಡಾ.ಎನ್. ಭಾಸ್ಕರ್, ಡಿವೈಎಸ್‌ಪಿ ಪ್ರಕಾಶ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಎಸ್.ಎಸ್.ಮಹೇಶ್ ಕುಮಾರ್ ಸ್ಥಳಕ್ಕೆ ಬಂದು ಎರಡು ದಿನಗಳೊಳಗೆ ಆಸ್ಪತ್ರೆಗೆ ತಾತ್ಕಾಲಿಕವಾಗಿ ವೈದ್ಯರು ಮತ್ತು 20 ದಿನದೊಳಗೆ ಶಾಶ್ವತ ವೈದ್ಯರು, ಮೂಲಭೂತ ಸೌಲಭ್ಯಗಳು ನೀಡುವುದಾಗಿ, ತಿಳಿಸಿದರು. ದಿನದಲ್ಲಿ ಮತ್ತು ರಾತ್ರಿ ಪಾಳಿಯಲ್ಲಿಯೂ ವೈದ್ಯರನ್ನು ನೀಡಬೇಕು. ನಿಮಗೆ ಸಾಧ್ಯ ವಾಗದಿದ್ದರೆ ನಾವೇ ರಾತ್ರಿ ಪಾಳಿ ವೈದ್ಯರಿಗೆ ಚಂದಾ ಹಾಗಿ ಸಂಬಳ ನೀಡುತ್ತೇವೆ ಎಂದರು. ಬಳಿಕ ಪ್ರತಿಭಟನೆ ವಾಪಸ್ಸು ಪಡೆದಿದರು.

ಸಂಸದ ಡಾ.ಕೆ. ಸುಧಾಕರ್ ಅವರು ಸಚಿವರಾಗಿದ್ದ ವೇಳೆ ಇದೇ ಪೆರೇಸಂದ್ರ ಸಾರ್ವನಿಕ ಆಸ್ಪತ್ರೆಯ ಆವರಣದಲ್ಲಿ ಸುಮಾರು 9 ಕೋಟಿ ವೆಚ್ಚದಲ್ಲಿ ಆಸ್ಪತ್ರೆ ಮೇಲ್ದರ್ಜೆಗೇರಿಸಿ ಕಟ್ಟಡ ಕಟ್ಟಿಸಿ ಮೂರು ವರ್ಷಗಳಾದರೂ ಆರಂಭವಾಗಿಲ್ಲ, ಅದೇ ರೀತಿ ಪೆರೆಸಂದ್ರ ಗ್ರಾಮದಿಂದ ಕೂಗಳತೆ (ಕೇವಲ 2 ಕಿಮೀ) ದೂರದಲ್ಲಿ ಡಾ.ಕೆ.ಸುಧಾಕರ್ ಅವರು ತಮ್ಮ ಶಾಸಕ ಸ್ಥಾನ ಪಣಕ್ಕಿಟ್ಟು ನಂದಿ ಮೆಡಿಕಲ್ ಕಾಲೇಜು ಮತ್ತು ಸಂಶೋಧನಾ ಸಂಸ್ಥೆಯನ್ನು ತಂದು ಸುಮಾರು 900 ಕೋಟಿ ರು.ಗಳ ವೆಚ್ಚದಲ್ಲಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆ ಕಟ್ಟಿಸಿದ್ದು, ಕಾಲೇಜು ಆರಂಭವಾಗಿ ಒಂದು ಬ್ಯಾಚ್ ಸಹ ಹೊರ ಹೋಗಿದೆ. ಆಸ್ಪತ್ರೆ ಕಟ್ಟಡದ ಕಾಮಗಾರಿ ಮುಗಿದು ಒಂದು ವರ್ಷವಾದರೂ ಸಹಾ ಆಸ್ಪತ್ರೆ ಪ್ರಾರಂಭವಾಗದಿರುವುದು ರಾಜ್ಯ ಸರ್ಕಾರದ ವೈಫಲ್ಯಕ್ಕೆ ಹಿಡಿದ ಕನ್ನಡಿಯಾಗಿದೆ.

ಸಿಕೆಬಿ-4 ತಾಲ್ಲೂಕಿನ ಪೆರೇಸಂದ್ರ ಗ್ರಾಮದಲ್ಲಿಸಮಯಕ್ಕೆ ಸರಿಯಾಗಿ ವೈದ್ಯಕೀಯ ಸೌಲಭ್ಯ ದೊರೆಯದೆ 11 ವರ್ಷದ ಬಾಲಕಿ ಸಾವು. ಆಸ್ಪತ್ರೆಗೆ ವೈದ್ಯರನ್ನು ನೇಮಕ ಮಾಡುವಂತೆ ಆಗ್ರಹಿಸಿ ಗ್ರಾಮಸ್ಥರು ಪ್ರತಿಭಟನೆ ನಡೆಸಿದರು

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಆಯುರ್ವೇದ ಜೀವನಶೈಲಿಯಿಂದ ಆರೋಗ್ಯಕರ ಬದುಕು
ರೈತ ಸಂಪರ್ಕ ಕೇಂದ್ರಗಳಲ್ಲಿ ಬಿತ್ತನೆ ಬೀಜ ವಿತರಣೆ