ಕನ್ನಡಪ್ರಭ ವಾರ್ತೆ ಗುಬ್ಬಿ
ಸುಪ್ರೀಂಕೋರ್ಟ್ ನಿರ್ದೇಶನದಂತೆ ಪ್ರತಿ 3 ತಿಂಗಳಿಗೊಮ್ಮೆ ಲೋಕ್ ಅದಾಲತ್ ಏರ್ಪಡಿಸಲಾಗುತ್ತಿದೆ. ಸಾರ್ವಜನಿಕರು ಇದರ ಸದುಪಯೋಗಪಡಿಸಿಕೊಂಡರೆ ಅನುಕೂಲವಾಗುವುದು ಎಂದು ಪ್ರಧಾನ ಹಿರಿಯ ಸಿವಿಲ್ ನ್ಯಾಯಾಧೀಶರಾದ ಅನುಪಮ ಡಿ ತಿಳಿಸಿದರು.ಗುರುವಾರ ನ್ಯಾಯಾಲಯದ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ನ್ಯಾಯಾಲಯದಲ್ಲಿ ಒಟ್ಟು 7170 ಪ್ರಕರಣಗಳು ಬಾಕಿ ಇದ್ದು ಲೋಕ್ ಅದಾಲತ್ ನಲ್ಲಿ 1417 ಕೇಸುಗಳನ್ನು ತೆಗೆದುಕೊಳ್ಳಲಾಗಿತ್ತು. ಅವುಗಳಲ್ಲಿ 1167 ಪ್ರಕರಣಗಳನ್ನು ಇತ್ಯರ್ಥಗೊಳಿಸುವ ಮೂಲಕ ಜಿಲ್ಲೆಯಲ್ಲಿಯೇ ಉತ್ತಮ ಸಾಧನೆ ಮಾಡಲಾಗಿದೆ ಎಂದು ಹೇಳಿದರು.
ಸಿವಿಲ್ ವ್ಯಾಜ್ಯಗಳು, ಕೌಟುಂಬಿಕ ದೌರ್ಜನ್ಯ,ವಿವಾಹ ವಿಚ್ಛೇದನ ಪ್ರಕರಣಗಳನ್ನು ಒಳಗೊಂಡಂತೆ ಸಣ್ಣ ಪುಟ್ಟ ಪೊಲೀಸ್ ಪ್ರಕರಣಗಳನ್ನು ಇತ್ಯರ್ಥ ಗೊಳಿಸುವ ಮೂಲಕ ಕಕ್ಷಿದಾರರಿಗೆ ನೆಮ್ಮದಿಯನ್ನು ನೀಡಲಾಗಿದೆ. ಇದರ ಜೊತೆಗೆ ವಿವಿಧ ಬ್ಯಾಂಕುಗಳಲ್ಲಿ ಸುಸ್ತಿ ಯಾಗಿದ್ದ ಹಣವನ್ನು ಕಕ್ಷಿದಾರರಿಂದ ಕಟ್ಟಿಸುವ ಮೂಲಕ ಸುಮಾರು 2 ಕೋಟಿ 50 ಲಕ್ಷ ವಸೂಲಾತಿ ಯಾಗಿರುವುದು ಲೋಕ್ ಅದಾಲತ್ ಯಶಸ್ಸಿಗೆ ಸಾಕ್ಷಿಯಾಗಿದೆ ಎಂದು ಹೇಳಿದರು.ಅಧಿಕ ಹಿರಿಯ ಸಿವಿಲ್ ನ್ಯಾಯಾಧೀಶರಾದ ಪೂರ್ಣಿಮಾ ಕೆ ಯಾದವ್ ಮಾತನಾಡಿ, ಸಣ್ಣಪುಟ್ಟ ಕಾರಣಗಳಿಂದಾಗಿ ವಿವಾಹ ವಿಚ್ಛೇದನಕ್ಕೆ ಮುಂದಾಗಿದ್ದ ದಂಪತಿಗಳನ್ನು ಮನವೊಲಿಸಿ ಒಂದು ಗೂಡಿಸುವ ಮೂಲಕ ಹೊಸ ಬದುಕನ್ನು ಕಟ್ಟಿಕೊಳ್ಳಲು ಲೋಕ್ ಅದಾಲತ್ ಕಾರಣವಾಯಿತು ಎಂದರು.
ಪ್ರಧಾನ ಸಿವಿಲ್ ನ್ಯಾಯಾಧೀಶರಾದ ಕಿರಣ್ ಎಸ್ ಪಿ ಮಾತನಾಡಿ ಲೋಕ್ ಅದಾಲತ್ ನಲ್ಲಿ ವಿವಿಧ ರೀತಿಯ ಪ್ರಕರಣಗಳನ್ನು ಇತ್ಯರ್ಥ ಪಡಿಸಿಕೊಳ್ಳಲು ಸಾಧ್ಯವಿರುವುದರಿಂದ ಕಚ್ಚಿದಾರರಿಗೆ ಹಣ,ಸಮಯ ಉಳಿತಾಯವಾಗುವ ಜೊತೆಗೆ ಉತ್ತಮ ಬಾಂಧವ್ಯಗಳನ್ನು ಉಳಿಸಿಕೊಳ್ಳಲು ಸಾಧ್ಯವಾಗುವುದು ಎಂದ ಅವರು ಲೋಕ್ ಅದಾಲತ್ ಮಹತ್ವದ ಬಗ್ಗೆ ಎಲ್ಲರಲ್ಲಿಯೂ ಜಾಗೃತಿ ಮೂಡಿಸಿದಲ್ಲಿ ಮುಂದಿನ ದಿನಗಳಲ್ಲಿ ಹೆಚ್ಚಿನ ಪ್ರಕರಣಗಳನ್ನು ಇತ್ಯರ್ಥ ಗೊಳಿಸಲು ಸಾಧ್ಯವಾಗುವುದು.ನ್ಯಾಯಾಲಯದ ಎಲ್ಲ ವಕೀಲರು ಉತ್ತಮ ಸಹಕಾರ ನೀಡಿದ್ದರಿಂದಲೇ ಅದಾಲತ್ ಯಶಸ್ವಿಯಾಗಲು ಸಾಧ್ಯವಾಯಿತು ಎಂದು ಹೇಳಿದರು.ಹೆಚ್ಚು ಪ್ರಕರಣಗಳನ್ನು ಇತ್ಯರ್ಥಪಡಿಸಲು ಸಹಕರಿಸಿದ ವಕೀಲರನ್ನು ಅಭಿನಂದಿಸಿ ಪ್ರೋತ್ಸಾಹಿಸಲಾಯಿತು. ಈ ಸಂದರ್ಭದಲ್ಲಿ ಅಧಿಕ ಸಿವಿಲ್ ನ್ಯಾಯಾಧೀಶರಾದ ಮೇಧಾ, ಸರ್ಕಾರಿ ವಕೀಲರು, ವಕೀಲರ ಸಂಘದ ಅಧ್ಯಕ್ಷರು, ಪದಾಧಿಕಾರಿಗಳು, ನ್ಯಾಯಾಲಯದ ಸಿಬ್ಬಂದಿ ಹಾಜರಿದ್ದರು.