ಕಡೂರು ತಾಲೂಕಿನ 13,819 ಗೃಹಲಕ್ಷ್ಮಿ ಫಲಾನುಭವಿಗಳಿಗೆ ಹಣದ ಕೊರತೆ

KannadaprabhaNewsNetwork |  
Published : Nov 08, 2025, 01:45 AM IST
ಕಡೂರು ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಅಧ್ಯಕ್ಷ ಟಿ. ಆಸಂದಿ ಕಲ್ಲೇಶ್ ಅವರ ಅಧ್ಯಕ್ಷತೆಯಲ್ಲಿ ಸಭೆ ನಡೆಯಿತು. | Kannada Prabha

ಸಾರಾಂಶ

ಕಡೂರು, ತಾಲೂಕಿನಲ್ಲಿ 70,314 ಗೃಹಲಕ್ಷ್ಮಿ ಯೋಜನೆ ಫಲಾನುಭವಿಗಳಿದ್ದು ಇವರಲ್ಲಿ ಜುಲೈ-25 ತಿಂಗಳಲ್ಲಿ ಸರ್ಕಾರದಿಂದ ಹಣದ ಕೊರತೆಯಾಗಿ 13,819 ಫಲಾನುಭವಿಗಳಿಗೆ ಹಣ ನೀಡಿಲ್ಲ ಎಂಬ ಮಾಹಿತಿ ಬಹಿರಂಗವಾಗಿದೆ.

ಕನ್ನಡಪ್ರಭ ವಾರ್ತೆ ಕಡೂರು

ತಾಲೂಕಿನಲ್ಲಿ 70,314 ಗೃಹಲಕ್ಷ್ಮಿ ಯೋಜನೆ ಫಲಾನುಭವಿಗಳಿದ್ದು ಇವರಲ್ಲಿ ಜುಲೈ-25 ತಿಂಗಳಲ್ಲಿ ಸರ್ಕಾರದಿಂದ ಹಣದ ಕೊರತೆಯಾಗಿ 13,819 ಫಲಾನುಭವಿಗಳಿಗೆ ಹಣ ನೀಡಿಲ್ಲ ಎಂಬ ಮಾಹಿತಿ ಬಹಿರಂಗವಾಗಿದೆ.

ಕಡೂರು ತಾಪಂ ಸಭಾಂಗಣದಲ್ಲಿ ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಟಾನ ಸಮಿತಿ ಅಧ್ಯಕ್ಷ ಟಿ.ಆಸಂದಿ ಕಲ್ಲೇಶ್ ಅಧ್ಯಕ್ಷತೆಯಲ್ಲಿ ಗುರುವಾರ ನಡೆದ ಸಭೆಯಲ್ಲಿ ಅಧಿಕಾರಿ ನೀಡಿದ ಮಾಹಿತಿಯಾಗಿತ್ತು.

ಕಳೆದ 21 ತಿಂಗಳಿಂದ ಹಣ ಫಲಾನುಭವಿಗಳ ಬ್ಯಾಂಕ್ ಖಾತೆಗೆ ಜಮಾವಾಗಿದ್ದು ಜುಲೈನಲ್ಲಿ 70,314 ಫಲಾನುಭವಿಗಳಿಗೆ ಹಣ ನೀಡಬೇಕಾಗಿದ್ದು ಹಣದ ಕೊರತೆಯಿಂದ 13,819 ಫಲಾನುಭವಿಗಳಿಗೆ ಹಣ ನೀಡಲಾಗಿಲ್ಲ. ತಾಂತ್ರಿಕ ಸಮಸ್ಯೆಯಿಂದಲ್ಲ ಹಣದ ಕೊರತೆ ಎಂಬ ಮಾಹಿತಿಯನ್ನು ಸಿಡಿಪಿಒ ಶಿವಪ್ರಕಾಶ್ ಅಧ್ಯಕ್ಷರಿಗೆ ನೀಡಿದರು.

ತಾಲೂಕಿನಲ್ಲಿ 308 ಜನ ಫಲಾನುಭವಿಗಳಿಗೆ ಐಟಿ-ಜಿಎಸ್‍ಟಿಗೆ ಒಳಪಡುವುದರಿಂದ ಇಂತಹವರ ಅರ್ಜಿ ತಿರಸ್ಕರಿಸಲಾಗಿದೆ ಅವರಿಗೆ ಹಿಂಬರಹ ನೀಡಲಾಗಿದೆ ಎಂದರು.

ಕಳೆದ ಬಾರಿ ಸೂಚಿಸಿದ್ದರೂ ನ್ಯಾಯಬೆಲೆ ಅಂಗಡಿಗಳ ಮುಂದೆ ಅನ್ನಭಾಗ್ಯ ನಾಮಫಲಕ ಅಳವಡಿಸಿಲ್ಲ. ನ್ಯಾಯಬೆಲೆ ಅಂಗಡಿಗಳಲ್ಲಿ ನಿಗದಿತ ಸಮಯದಲ್ಲಿ ಆಹಾರ ವಿತರಣೆಗೆ ವ್ಯವಸ್ಥೆ ಮಾಡಬೇಕು ಎಂದು ಅನುಷ್ಠಾನ ಸಮಿತಿ ಸದಸ್ಯ ಸಪ್ತಕೋಟಿ ಧನಂಜಯ ಆರೋಪಿಸಿದರು. ಇದಕ್ಕೆ ಉತ್ತರಿಸಿದ ಆಹಾರ ನಿರೀಕ್ಷಕ ಎಚ್.ಶ್ರೀನಿವಾಸ, ನ್ಯಾಯಬೆಲೆ ಅಂಗಡಿ ಭೇಟಿ ಸಂದರ್ಭದಲ್ಲಿ ಅಂಗಡಿಯವರಿಗೆ ಈ ಎರಡೂ ಸೂಚಿಸಿದೆ. ಹಲವರು ಅನುಷ್ಠಾನಗೊಳಿಸಿದ್ದಾರೆ. ಈ ತಿಂಗಳ ಪಡಿತರ ವಿತರಣೆ ಒಳಗೆ ಸಮರ್ಪಕ ವ್ಯವಸ್ಥೆಗೆ ಕ್ರಮ ವಹಿಸಲಾಗುವುದು ಎಂದು ತಿಳಿಸಿದರು.

ತಾಲೂಕಿನಲ್ಲಿ ಸರ್ವೇ ಮೂಲಕ 3308 ಅನರ್ಹ ಪಡಿತರ ಚೀಟಿಗಳ ಪಟ್ಟಿ ಮಾಡಿ 1110 ಕಾರ್ಡುಗಳನ್ನು ಎಪಿಎಲ್ ಆಗಿ ಗುರುತಿಸಿದೆ ಎಂದು ಮಾಹಿತಿ ನೀಡುತ್ತಿದ್ದಂತೆ, ಮಧ್ಯ ಪ್ರವೇಶಿಸಿದ ಸಭಾಧ್ಯಕ್ಷ ಕಲ್ಲೇಶ್, ಅಧಿಕಾರಿಗಳು ಯಾವ ಕಾರ್ಡನ್ನೂ ರದ್ದುಪಡಿಸಕೂಡದು, ತಾಲೂಕು ಸಮಿತಿಯಿಂದ ಜಿಲ್ಲಾ ಸಮಿತಿ ಹಾಗೂ ಆಹಾರ ಸಚಿವರ ಮನ ಒಲಿಸುತ್ತೇವೆ ಎಂದದ್ದಕ್ಕೆ ತಬ್ಬಿಬ್ಬಾದ ಆಹಾರ ನಿರೀಕ್ಷಕ ಅನರ್ಹ ಕಾರ್ಡುಗಳನ್ನು ಗುರುತಿಸಿ ರದ್ದುಪಡಿಸುವಂತೆ ಮುಖ್ಯಮಂತ್ರಿ ಆದೇಶವೇ ಇದೆ ಎಂದು ಉತ್ತರಿಸಿದರು.

ತಾಲೂಕಿನಲ್ಲಿ 80034 ಗೃಹ ಜ್ಯೋತಿ ಯೋಜನೆ ಫಲಾನುಭವಿಗಳಿದ್ದು, ತಿಂಗಳಿಗೆ ಅಂದಾಜು ₹2ಕೋಟಿ ಸರ್ಕಾರ ಭರಿಸುತ್ತಿದೆ. ಈ ಯೋಜನೆಯಲ್ಲಿ ಹೊಸ ನೋಂದಣಿ ಕೂಡಾ ನಡೆಯುತ್ತಿವೆ ಎಂದು ಮೆಸ್ಕಾಂ ಅಧಿಕಾರಿಗಳು ಮಾಹಿತಿ ನೀಡಿದರು. ಮತಿಘಟ್ಟ ವ್ಯಾಪ್ತಿ ಹಳ್ಳಿಗಳಲ್ಲಿ ಅನಧಿಕೃತ ಲೈನ್‍ ಎಳೆದು ಸಂಪರ್ಕ ಪಡೆದಿರುವ ಮಾಹಿತಿ ಇದೆ. ಅಧಿಕಾರಿಗಳು ಏನು ಮಾಡುತ್ತಿರುವಿರಿ ಎಂದು ಸದಸ್ಯ ಮಧು ಸಿಂಗಟಗೆರೆ ಆಕ್ರೋಶ ವ್ಯಕ್ತಪಡಿಸಿದರು. ಅಧಿಕಾರಿಗಳು ಐ ಪಿ ಸೆಟ್‍ಗಳು ಅನಧಿಕೃತ ಸಂಪರ್ಕ ಪಡೆದಿರುವುದನ್ನು ಅನಿವಾರ್ಯ ಸಂದರ್ಭದಲ್ಲಿ ಸಹಿಸಿಕೊಳ್ಳಬೇಕಾದ ಸ್ಥಿತಿ ಇದೆ. ನಾವು ಸಂಪರ್ಕ ಕಡಿತಗೊಳಿಸಲು ಹೋದಾಗ ರೈತರು ತಮ್ಮ ಅಸಹಾಯಕ ಸ್ಥಿತಿ ಹೇಳಿಕೊಳ್ಳುತ್ತಾರೆ. ಇದು ಬಗೆಹರಿಸಲಾಗದ ಸಮಸ್ಯೆ ಎಂದರು.

ಬಿಳುವಾಲ ಮತ್ತು ನಾಗಗೊಂಡನಹಳ್ಳಿ ವಲಯದಲ್ಲಿ ಅನಿಯಂತ್ರಿತ ವಿದ್ಯುತ್ ನಿಲುಗಡೆ ಮಾಡಲಾಗುತ್ತಿದೆ, ಅಧಿಕಾರಿಗಳು ಮಾಹಿತಿ ನೀಡಲ್ಲ, ಕರೆ ಸ್ವೀಕರಿಸಲ್ಲ. ಜಾತ್ರೆ ರಥೋತ್ಸವ ಇರುವ ಬಗ್ಗೆ ಮುಂಚಿತವಾಗಿಯೇ ಅರ್ಜಿ ಸಲ್ಲಿಸಿ ವಿದ್ಯುತ್ ನಿಲುಗಡೆ ಮಾಡದಂತೆ ಕೋರಿದರೂ ಸಹಕರಿಸುವುದಿಲ್ಲ ಎಂದು ಆರೋಪಿಸಿದರು.

ಅಕ್ಟೋಬರ್ ನಲ್ಲಿ ಕಡೂರು ಡಿಪೋದಲ್ಲಿ 7ಲಕ್ಷಕ್ಕೂ ಹೆಚ್ಚು ಮಹಿಳಾ ಪ್ರಯಾಣಿಕರು ಬಸ್‌ ಸಂಚಾರ ಮಾಡಿದ್ದು, ಸುಮಾರು ₹3ಕೋಟಿ ಆದಾಯ ಬಂದಿದೆ. ಈವರೆಗೆ ಡಿಪೊ ₹ 68ಕೋಟಿ ಆದಾಯ ಗಳಿಸಿದೆ ಎಂದು ಅಧಿಕಾರಿ ರಾಮಚಂದ್ರ ನಾಯಕ ತಿಳಿಸಿದರು. ಈ ಸಮಯದಲ್ಲಿ ಮಹಿಳಾ ಸದಸ್ಯರೊಬ್ಬರು ಗ್ರಾಮೀಣ ಪ್ರದೇಶಗಳಲ್ಲಿ ಬಸ್ ನಿಲುಗಡೆಗೆ ಅವಕಾಶವಿದ್ದರೂ ಬಸ್ ನಿಲ್ಲಿಸುವುದಿಲ್ಲ, ಕೆಲವು ಬಾರಿ ಬಸ್ ಬರುವುದಿಲ್ಲ ಎಂದು ದೂರಿದರು.

ಅಧಿಕಾರಿ ಉತ್ತರಿಸಿ ಬಸ್‍ನಲ್ಲಿ ಸಮಸ್ಯೆ ಇದ್ದರೆ ಬಂದಿರುವುದಿಲ್ಲ, ತಾವು ಇತ್ತೀಚೆಗಷ್ಟೇ ಅಧಿಕಾರ ವಹಿಸಿಕೊಂಡಿದ್ದು ರೂಟ್‍ ಗಳಿಗೆ ಸಮರ್ಪಕ ಬಸ್ ಓಡಿಸಲು ಕ್ರಮ ವಹಿಸುತ್ತೇನೆ. ಹೊಸ ರೂಟ್ ಇದ್ದರೆ ಶಾಸಕರ ಗಮನಕ್ಕೆ ತಂದು ಬಸ್ ಮಂಜೂರು ಮಾಡಿಸಿ ಓಡಿಸಲಾಗುವುದು ಎಂದು ಸಮಜಾಯಿಷಿ ನೀಡಿದರು.

1187 ಯುವಜನರು ನೋಂದಾಯಿಸಿದ್ದು ಈವರೆಗೆ ₹2.53ಕೋಟಿ ವಿತರಿಸಲಾಗಿದೆ ಎಂದು ಜಿಲ್ಲಾ ಉದ್ಯೋಗ ವಿನಿಮಯ ಅಧಿಕಾರಿ ಉತ್ತರಿಸಿದರು. ಕಾಲೇಜು, ತಾಂತ್ರಿಕ ಶಿಕ್ಷಣ ಕೇಂದ್ರಗಳಿಗೆ ಭೇಟಿ ನೀಡಿ ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿ ಈ ವಿಷಯವಾಗಿ ಹೆಚ್ಚು ಪ್ರಚಾರ ಮಾಡಬೇಕಾದ ಅಗತ್ಯವಿದೆ ಎಂದು ಸದಸ್ಯರು ತಿಳಿಸಿದರು.

ಈ ಸಂದರ್ಭದಲ್ಲಿ ತಾ.ಪಂ ಕಾರ್ಯನಿರ್ವಹಣಾಧಿಕಾರಿ ಪ್ರವೀಣ್ ಸಿ.ಆರ್, ಅನುಷ್ಠಾನ ಸಮಿತಿ ಮಚ್ಚೇರಿ ಚಂದ್ರಪ್ಪ, ಸುಜಾತಾ, ಮೂರ್ತಿ, ಮನು, ಸೋಮೇಶ್, ಗಿರೀಶ್ ನಾಯ್ಕ, ಪುಷ್ಪ ಮತ್ತು ಅಧಿಕಾರಿಗಳು ಇದ್ದರು.6ಕೆಕೆಡಿಯು1

ಕಡೂರು ತಾಪಂ ಸಭಾಂಗಣದಲ್ಲಿ ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಟಿ. ಆಸಂದಿ ಕಲ್ಲೇಶ್ ಅಧ್ಯಕ್ಷತೆಯಲ್ಲಿ ಸಭೆ ನಡೆಯಿತು.

PREV

Recommended Stories

ಬ್ರಾಹ್ಮಣ ಸಮುದಾಯಕ್ಕೆ ಸೌಲಭ್ಯ ನೀಡಲು ಬದ್ಧ : ಸಚಿವ ದಿನೇಶ್‌ ಗುಂಡೂರಾವ್‌
ಬೆಂಗಳೂರು ನಗರದ 6 ಆರ್‌ಟಿಒ ಕಚೇರಿ ಮೇಲೆ ದಾಳಿ: ಹಲವು ಅಕ್ರಮ ಪತ್ತೆ