ಶ್ರೀ ಕ್ಷೇತ್ರ ಹೊರನಾಡು ಅನ್ನಪೂರ್ಣೆಶ್ವರಿ ದೇವಸ್ಥಾನದಲ್ಲಿ ಸಮಾರಂಭ
ಹೊರನಾಡು ಆದಿಶಕ್ತ್ಯಾತ್ಮಕ ಅನ್ನಪೂರ್ಣೇಶ್ವರಿ ದೇವಾಲಯದ ಲಲಿತಕಲಾ ಮಂಟಪದಲ್ಲಿ ಶ್ರೀ ಕ್ಷೇತ್ರದ ಗ್ರಾಮೀಣಾಭಿವೃದ್ಧಿ ಯೋಜನೆಯ ಸಪ್ತಪದಿ ಯೋಜನೆಯಡಿ ಹಮ್ಮಿಕೊಳ್ಳಲಾಗಿದ್ದ ಸಾಮೂಹಿಕ ವಿವಾಹದಲ್ಲಿ 14 ಜೋಡಿ ಸಪ್ತಪದಿ ತುಳಿದರು.
ಇದಕ್ಕೂ ಮುನ್ನಾ ಧರ್ಮಕರ್ತ ಜಿ.ಭೀಮೇಶ್ವರ ಜೋಷಿ ಮತ್ತು ಧರ್ಮಪತ್ನಿರಾಜಲಕ್ಷ್ಮೀಜೋಷಿ ದಂಪತಿ ವರನಿಗೆ ತಾಳಿ ಮತ್ತು ಕಾಲುಂಗುರ ನೀಡಿದರು. ಈ ವಿವಾಹದ ಪೌರೋಹಿತ್ಯವನ್ನು ಉದಯ ಶಂಕರ್ ಶರ್ಮ ವಹಿಸಿದ್ದರು.ಕಾರ್ಯಕ್ರಮ ಉದ್ಘಾಟಿಸಿದ ಶಾಸಕಿ ನಯನಾ ಮೋಟಮ್ಮ ಮಾತನಾಡಿ ಶ್ರೀ ಕ್ಷೇತ್ರದಲ್ಲಿ ಬಹಳ ವರ್ಷಗಳಿಂದ ಹತ್ತು ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಾ ಬಂದಿದೆ. ಗ್ರಾಮೀಣಾಭಿವೃದ್ಧಿ ಯೋಜನೆಗಳಿಂದ ಶೈಕ್ಷಣಿಕವಾಗಿ ಹಿಂದುಳಿದಿರುವ ನಾಗರಿಕ ಸೌಲಭ್ಯಗಳಿಂದ ವಂಚಿತರಾಗಿ ದಯನೀಯ ಸ್ಥಿತಿಯಲ್ಲಿ ಬದುಕುತ್ತಿರುವ ಗ್ರಾಮೀಣ ಪ್ರದೇಶದ ಬಡ ಕುಟುಂಬ ಗಳನ್ನು ಗುರುತಿಸುವ ಮೂಲಕ ದಯನೀಯ ಕನಿಷ್ಠ ಮೂಲ ಸೌಲಭ್ಯ ಒದಗಿಸಿಕೊಡುವ ಮೂಲಕ ಮುಖ್ಯವಾಹಿನಿಗೆ ಕರೆತರುವಲ್ಲಿ ಯಶಸ್ವಿಯಾಗಿದ್ದಾರೆ ಎಂದರು.
ಸಮಾಜಕ್ಕೆ ದೊಡ್ಡ ಕೊಡುಗೆ ನೀಡಿರುವುದು ಶ್ರೀ ಕ್ಷೇತ್ರ, ಶ್ರೀಕ್ಷೇತ್ರದಲ್ಲಿ 942 ಜೋಡಿಗಳು ಸತಿಪತಿಗಳಾಗಿ ಸುಖಮಯ ಜೀವನ ನಡೆಸುತ್ತಿದ್ದಾರೆ. ಕೂಡಿ ಬಾಳಲು ಅಮ್ಮನವರ ಆಶಿರ್ವಾದರಿದೆ ಎಂದರೆ ತಪ್ಪಾಗದು. ನೂತನ ವಧುವರರು ಪರಸ್ಪರ ಅರಿತು ಬಾಳು ನಡೆಸುವಂತೆ ತಿಳಿಸಿದರು. ಜಿ.ಬಿ.ಗಿರಿಜಾಶಂಕರ್ ಜೋಷಿ ಮಾತನಾಡಿ, 1991-92ರಲ್ಲಿ ಶ್ರೀಕ್ಷೇತ್ರದಲ್ಲಿ ತೀರ ಬಡತನದ ಕುಟುಂಬದವರಿಗೆ ಉಚಿತವಾಗಿ ಸರಳ ಸಮೂಹಿಕ ವಿವಾಹ ಆರಂಬಿಸಿದ್ದು ಈವರೆಗೂ 942 ಜೋಡಿಗಳ ವಿವಾಹ ನೆರವೇರಿಸಲಾಗಿದೆ. ಸಾಮೂಹಿಕ ಉಪ ನಯನ, ಗೃಹಲಕ್ಷ್ಮೀ ಯೋಜನೆಯಡಿ ಉಚಿತ ಹಂಚು ವಿತರಣೆ, ಆನಂದ ಜ್ಯೋತಿ ಯೋಜನೆ, ಅನ್ನದಾಸೋಹ, ಮಹಿಳಾ ಭಿವೃದ್ಧಿ ಯೋಜನೆಯಡಿ ಹೊಲಿಗೆ ಯಂತ್ರಗಳ ವಿತರಣೆ, ಧನ್ವಂತರಿ ಯೋಜನೆ, ಧಾರ್ಮಿಕ, ಶೈಕ್ಷಣಿಕ, ಸಾಮಾಜಿಕ, ಸಾಂಸ್ಕೃತಿಕ ಯೋಜನೆಗಳಡಿ ಇದುವರೆಗೂ ₹20,24,63,556 ವಿನಿಯೋಗಿಸಲಾಗಿದೆ ಎಂದರು.ಕಾರ್ಯಕ್ರಮದಲ್ಲಿ ಕಳಸ ರುದ್ರಪಾದದ ವೇ.ಬ್ರ.ಶ್ರೀ ಪವಮಾನ ಎಸ್ ಚಂದ್ರಶೇಖರ್ ಭಟ್, ಕೊಡಿಗೆ ಹಿತ್ಲುವಿನ ಸಂಗೀತ ಮತ್ತು ಹರಿಕಥೆ ದಾಸರಾದ ಪುಂಡರೀಕ ಭಾಗವತರು, ಕಳಸ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಜಿ.ಕೆ. ಮಂಜಪ್ಪಯ್ಯ ಸನ್ಮಾನಿಸಿ ಅಭಿನಂದಿಸಲಾಯಿತು.ವೇದಿಕೆಯಲ್ಲಿ ದೇವಸ್ಥಾನದ ಟ್ರಸ್ಟಿ ರಾಜಗೋಪಾಲ್ ಜೋಷಿ, ಕಳಸ ಪ್ರಥಮ ದರ್ಜೆ ಕಾಲೇಜು ಕಾರ್ಯಾಧ್ಯಕ್ಷ ರಾಜೇಂದ್ರ ಹಿತ್ಲಮಕ್ಕಿ, ಕಳಸ ಬ್ಲಾಕ್ಕಾಂಗ್ರೆಸ್ ಸಮಿತಿ ಅಧ್ಯಕ್ಷ ಕೆ.ಎ.ಶ್ರೇಣಿಕ್ ಜೈನ್, ಬಿಜೆಪಿ ಮುಖಂಡ ನಾಗಭೂಷಣ್ ಜೆಡಿಎಸ್ ಅಧ್ಯಕ್ಷ ಎಲ್.ಎಂ.ಬಿ.ಸಂತೋಷ್ ಹಿನಾರಿ , ಬಿಜೆಪಿ ಅಧ್ಯಕ್ಷ ಶ್ರೀಕಾಂತ್, ಹೊರನಾಡು ಗ್ರಾ.ಪಂ ಮಾಜಿ ಅಧ್ಯಕ್ಷ ಮಧು ಪ್ರಸಾದ್ ಜೈನ್ ಉಪಸ್ಥಿತರಿದ್ದರು.-- ಬಾಕ್ಸ್--
ಅಧ್ಯಕ್ಷತೆ ವಹಿಸಿದ್ದ ಧರ್ಮಕರ್ತ ಜಿ.ಭೀಮೇಶ್ವರ ಜೋಷಿ ಮಾತನಾಡಿ. ಅಗತ್ಯವಿದ್ದಷ್ಟು ಹಣವನ್ನು ಮಾತ್ರಖರ್ಚು ಮಾಡಿ ದುಂದು ವೆಚ್ಚ ಮಾಡಬೇಡಿ, ಜಗನ್ಮಾತೆ ಸಾಕ್ಷಿಯಾಗಿ ಮದುವೆಯಾಗಿದ್ದೀರಿ, ಅರಿತು ಬಾಳಿ ಎಂದರು.