25ವರ್ಷದಿಂದ ಕ್ವಾರಿಯಲ್ಲಿ ಕೆಲಸ ಮಾಡುತ್ತಿದ್ದ ಮಂಡ್ಯ ಜಿಲ್ಲೆ ಕೆಆರ್ಎಸ್ ಗ್ರಾಮದ ಕುಟುಂಬ
ತಾಲೂಕಿನ ಹುಲಿಯೂರು ದುರ್ಗದ ಪಾವಸಂದ್ರದಲ್ಲಿ ಕಲ್ಲು ಕ್ವಾರಿಯಲ್ಲಿ 25 ವರ್ಷದಿಂದ ಕಾರ್ಮಿಕರಾಗಿ ದುಡಿಯುತ್ತಿದ್ದ ಒತ್ತೆ ಆಳುಗಳನ್ನು ಉಪವಿಭಾಗಾಧಿಕಾರಿಗಳ ನೇತೃತ್ವದ ತಂಡ ಬುಧವಾರ ಬಿಡುಗಡೆಗೊಳಿಸಿದೆ.ಉಪ ವಿಭಾಗಾಧಿಕಾರಿ ನಾಹಿದಾ ಜಮ್ ಜಮ್ ಅವರ ನೇತೃತ್ವದ ಅಧಿಕಾರಿಗಳ ತಂಡ ದಾಳಿ ನಡೆಸಿ ಗ್ರಾಮದಲ್ಲಿ ಬಂಡೆ ಕಲ್ಲು ಒಡೆಯಲು ಜೀತದಾಳುಗಳಾಗಿದ್ದ ಬೋವಿ ಜನಾಂಗದ 14ಮಂದಿ ಕಾರ್ಮಿಕರನ್ನು ರಕ್ಷಣೆ ಮಾಡಿದ್ದಾರೆ. ಮಂಡ್ಯ ಜಿಲ್ಲೆ ಕೆಆರ್ಎಸ್ ಗ್ರಾಮದ ಕೃಷ್ಣ. ಪುರುಷೋತ್ತಮ. ಚೆಲುವ ಭೋವಿ, ರಾಮಮ್ಮ, ಭಾಗ್ಯ ಸೇರಿದಂತೆ 14 ಮಂದಿ ಕಾರ್ಮಿಕರನ್ನು ಅಧಿಕಾರಿಗಳು ರಕ್ಷಣೆ ಮಾಡಿ ಪಟ್ಟಣದ ಮೆಟ್ರಿಕ್ ನಂತರದ ವಿದ್ಯಾರ್ಥಿ ನಿಲಯದಲ್ಲಿ ತಾತ್ಕಾಲಿಕ ವಸತಿ ವ್ಯವಸ್ಥೆ ಮಾಡಿದ್ದಾರೆ.ಪಾವಸಂದ್ರ ಗ್ರಾಮದ ಸರ್ಕಾರಿ ಗೋಮಾಳ ಸರ್ವೆ ನಂಬರ್ 34ರಲ್ಲಿ ಬಂಡೆ ಒಡೆಯುವ ಜೀತ ಕೆಲಸ ಮಾಡುತ್ತಿರುವ ಬಗ್ಗೆ ಖಚಿತ ಮಾಹಿತಿ ಮೇರೆಗೆ ಉಪ ವಿಭಾಗಾಧಿಕಾರಿ ನಾಹಿದಾ ಜಮ್ ಜಮ್, ತಹಸೀಲ್ದಾರ್ ಕರಿಯಾ ನಾಯ್ಕ, ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಶಿವಲಿಂಗಯ್ಯ, ಸಿಡಿಪಿಓ ಕಮಲ, ಎಸ್.ಜಿ. ಶ್ರೀನಿವಾಸ್ ಪ್ರಸಾದ್, ಕಾನೂನು ಸೇವಾ ಪ್ರಾಧಿಕಾರದ ಲೋಕೇಶ್, ಧನಪಾಲ್ ದಿಢೀರ್ ದಾಳಿ ಮಾಡಿ ಜೀತವಿದ್ದ ಕುಟುಂಬವನ್ನು ರಕ್ಷಣೆ ಮಾಡಿದ್ದಾರೆ. 25ವರ್ಷಗಳ ಹಿಂದೆ ಮಂಡ್ಯ ಜಿಲ್ಲೆ ಕೆಆರ್ಎಸ್ ಗ್ರಾಮದಿಂದ ಪಳನಿ ಹಾಗೂ ಅವರ ಕುಟುಂಬ ಉದ್ಯೋಗ ಅರಸಿಕೊಂಡು ತಾಲೂಕಿನ ಹುಲಿಯೂರುದುರ್ಗಕ್ಕೆ ಬಂದಿದ್ದರು. ಆ ವೇಳೆ ಪಾವಸಂದ್ರ ಗ್ರಾಮದ ಚನ್ನೇಗೌಡ, ಶಶಿ ಎಂಬುವರು ಪಳಿನಿಗೆ ಪರಿಚಯ ಮಾಡಿಕೊಂಡು ಪಳಿನಿ ಅವರ ಕುಟುಂಬದ ಬಡತನ ಕೇಳಿ ನಿಮಗೆ ನಾವು ಬಡ್ಡಿಗೆ ಹಣ ನೀಡುತ್ತೇವೆ. ನಮ್ಮ ಬಳಿ ಕೆಲಸ ಮಾಡಿ ಎಂದಿದ್ದಾರೆ
ಪಳಿನಿ ಕುಟುಂಬಕ್ಕೆ ಹಣ ನೀಡಿ ಚಕ್ರ ಬಡ್ಡಿ ಹಾಕಿ ನೀವು ತುಂಬಾ ಹಣ ನೀಡಬೇಕಿದೆ. ನಮಗೆ ಹಣ ಕೊಡದೇ ಊರಿಗೆ ಹೋಗಬಾರದೆಂದು ಜೀತದಾಳಾಗಿ ದುಡಿಸಿಕೊಳ್ಳುತ್ತಿದ್ದರು ಎನ್ನಲಾಗಿದೆ.ಮೂಲಭೂತ ಸೌಲಭ್ಯ ವಂಚಿತ ಸಂತ್ರಸ್ತರು: ಚನ್ನೇಗೌಡ ಮತ್ತು ಶಶಿ ಎಂಬುವವರು ಜೀತದಾಳುಗಳಿಗೆ ಮನೆ ನಿರ್ಮಾಣ ಮಾಡಿಕೊಡದ ಕಾರಣ ಸಂತ್ರಸ್ತರ ಕುಟುಂಬವೇ ಪಾವಸಂದ್ರ ಗ್ರಾಮದ ಸರ್ಕಾರಿ ಗೋಮಾಳದಲ್ಲಿ ಬಂಡೆ ಮೇಲೆ ಶೆಡ್ ಹಾಕಿಕೊಂಡು ವಾಸ ಮಾಡುತ್ತಿದ್ದರು ಎನ್ನಲಾಗಿದೆ.
ಫೋಟೋ ಇದೆ :- 22 ಕೆಜಿಎಲ್ 2: