ಚನ್ನಗಿರಿ ತಾಲೂಕಿನಲ್ಲಿ 147.4 ಮಿಮೀ ಮಳೆ: 2 ಮನೆಗಳಿಗೆ ಹಾನಿ

KannadaprabhaNewsNetwork |  
Published : Mar 18, 2026, 01:45 AM IST
ತಾಲೂಕಿನ ಮಂಗೇನಹಳ್ಳಿ ಗ್ರಾಮದಲ್ಲಿ ಸೋಮವಾರ ರಾತ್ರಿ ಸುರಿದ ಮಳೆಗೆ ಬಿದ್ದಿರುವ ಕಚ್ಚಾ ಮನೆ) | Kannada Prabha

ಸಾರಾಂಶ

ಚನ್ನಗಿರಿ ಪಟ್ಟಣ ಸೇರಿದಂತೆ ತಾಲೂಕಿನಾದ್ಯಂತ ಸೋಮವಾರ ರಾತ್ರಿ 10.30ರಿಂದ ಗುಡುಗು, ಮಿಂಚಿನೊಂದಿಗೆ 12 ಗಂಟೆಯವರೆಗೆ ಬಿರುಸಿನ ಮಳೆ ಸುರಿಯಿತು.

ಕನ್ನಡಪ್ರಭ ವಾರ್ತೆ ಚನ್ನಗಿರಿ ಪಟ್ಟಣ ಸೇರಿದಂತೆ ತಾಲೂಕಿನಾದ್ಯಂತ ಸೋಮವಾರ ರಾತ್ರಿ 10.30ರಿಂದ ಗುಡುಗು, ಮಿಂಚಿನೊಂದಿಗೆ 12 ಗಂಟೆಯವರೆಗೆ ಬಿರುಸಿನ ಮಳೆ ಸುರಿಯಿತು.

ಮಳೆ ರಭಸಕ್ಕೆ ಮಂಗೇನಹಳ್ಳಿ ಗ್ರಾಮದ ಅಣ್ಣಯ್ಯ, ಗುರುಮೂರ್ತಿ ಎಂಬವರ 2 ಕಚ್ಚಾ ಮನೆಗಳು ಭಾಗಶಃ ಬಿದ್ದಿದ್ದು, ₹1 ಲಕ್ಷದಷ್ಟು ಹಾನಿ ಸಂಭವಿಸಿದೆ. ಸೋಮವಾರ ಬೆಳಗ್ಗೆಯಿಂದ ಬಿಸಿಲಿನ ತಾಪಕ್ಕೆ ಬಳಲಿದ್ದ ಜನತೆಗೆ ಅಕಾಲಿಕ ಮಳೆ ಸುರಿದಿದ್ದು ತಂಪಿನ ವಾತಾವರಣ ನಿರ್ಮಾಣ ಮಾಡಿತು.

ಮಳೆನೀರು ರಭಸವಾಗಿ ಹರಿದ ಪರಿಣಾಮ ಪಟ್ಟಣದ ಚರಂಡಿಗಳಲ್ಲಿ ಕಟ್ಟಿಕೊಂಡಿದ್ದ ಕಸವೆಲ್ಲ ಅಲ್ಲಲ್ಲಿ ರಸ್ತೆಗೆ ತೇಲಿ ಬಂದು ನಿಂತಿತ್ತು. ಬೆಳಗಿನ ಸಮಯದಲ್ಲಿ ವಾಯುವಿಹಾರಕ್ಕೆ ಬರುವ ಜನರು ಕೊಳಚೆ ದುರ್ವಾಸನೆಯಿಂದ ಮೂಗು ಮುಚ್ಚಿಕೊಂಡು ಸಂಚರಿಸುವ ಪರಿಸ್ಥಿತಿ ನಿರ್ಮಾಣವಾಗಿತ್ತು.

ಚನ್ನಗಿರಿ ತಾಲೂಕಿನಲ್ಲಿ 9 ಮಳೆಮಾಪನಗಳಿದ್ದು, ಈ ಮಳೆ ಮಾಪನ ಕೇಂದ್ರದಲ್ಲಿ ದಾಖಲಾದ ಮಳೆಯ ಪ್ರಮಾಣ ಇಂತಿದೆ. ಚನ್ನಗಿರಿ ಮಳೆ ಮಾಪನ ಕೇಂದ್ರದಲ್ಲಿ 22.0 ಮಿ.ಮೀ, ದೇವರಹಳ್ಳಿಯಲ್ಲಿ 38.6 ಮಿಮೀ, ಕತ್ತಲಗೆರೆಯಲ್ಲಿ 7.0 ಮಿಮೀ, ತ್ಯಾವಣಿಗೆಯಲ್ಲಿ 2.8 ಮಿಮೀ, ಬಸವಾಪಟ್ಟಣದಲ್ಲಿ 13.8 ಮಿಮೀ, ಸಂತೆಬೆನ್ನೂರು 36.4 ಮಿಮೀ, ಉಬ್ರಾಣಿಯಲ್ಲಿ 22.4 ಮಿಮೀ, ಕೆರೆಬಿಳಚಿಯಲ್ಲಿ 4.4 ಮಿಮೀ ಮಳೆ ದಾಖಲಾಗಿದೆ. ಆದರೆ, ಜೋಳದಾಳ್ ಮಳೆ ಮಾಪನ ಕೇಂದ್ರ ವ್ಯಾಪ್ತಿಯಲ್ಲಿ ಮಳೆಯಾಗಿಲ್ಲ. ತಾಲೂಕಿನ ಎಲ್ಲ ಮಳೆ ಮಾಪನ ಕೇಂದ್ರಗಳಲ್ಲಿ ದಾಖಲಾದ ಒಟ್ಟು ಮಳೆಯ ಪ್ರಮಾಣ 147.4 ಮಿಮೀ ಮಳೆ ದಾಖಲಾಗಿದೆ.

- - -

* ಹೊನ್ನಾಳಿ, ನ್ಯಾಮತಿಯಲ್ಲಿ ಮಳೆ: ರೈತರಲ್ಲಿ ಹರ್ಷದ ಹೊಳೆ ಹೊನ್ನಾಳಿ: ಕಳೆದ ಕೆಲವು ದಿನಗಳಿಂದ ಬೇಸಿಗೆ ಬಿರು ಬಿಸಿಲಿನ ಧಗೆಯಿಂದ ಜನರು ತತ್ತರಿಸುತ್ತಿದ್ದು, ಸೋಮವಾರ ತಡರಾತ್ರಿ ಹೊನ್ನಾಳಿ ತಾಲೂಕಿನ ಹಲವೆಡೆ ಗುಡುಗು, ಮಿಂಚು ಸಹಿತ ಮಳೆ ಸುರಿದಿದೆ. ರಾತ್ರಿ 11 ಗಂಟೆಯಿಂದ ಗುಡುಗು, ಗಾಳಿಸಹಿತ ಮಳೆಯಾಗಿ ಕಾದ ಕಾವಲಿಯಂತಾಗಿದ್ದ ಇಳೆಗೆ ತಂಪೆರೆಯಿತು. ಹೊನ್ನಾಳಿ ಪಟ್ಟಣ ಸೇರಿದಂತೆ ಗೊಲ್ಲರಹಳ್ಳಿ, ಮಾಸಡಿ, ಹಿರೇಗೋಣಿಗೆರೆ, ಕೊಣನತಲೆ, ಬೇಲಿಮಲ್ಲೂರು, ಕೋಟೆಮಲ್ಲೂರು, ತರಗನಹಳ್ಳಿ ಮುಂತಾದೆಡೆ ರಸ್ತೆ, ಹಳ್ಳ, ಚರಂಡಿಗಳಲ್ಲಿ ಮಳೆನೀರು ತುಂಬಿ ಹರಿಯುವಂತೆ ಮಳೆಯಾಗಿದೆ.

ಕಮ್ಮಾರಗಟ್ಟೆ, ಬೆನಕನಹಳ್ಳಿ, ಘಂಟ್ಯಾಪುರ, ಕುಂದುರು, ನೆಲಹೊನ್ನೆ, ಕುಂಬಳೂರು, ಕೂಲಂಬಿ, ಕೆಂಗಲಹಳ್ಳಿ, ಮುಕ್ತೆನಹಳ್ಳಿ, ನ್ಯಾಮತಿ ತಾಲೂಕಿನ ಸವಳಂಗ ಭಾಗದ ಸುತ್ತಲ ಬಹುತೇಕ ಹಳ್ಳಿಗಳಲ್ಲೂ ಒಂದರೆಡು ಗಂಟೆಗಳ ಕಾಲ ಮಳೆಯಾಗಿದೆ. ಹೊಲ-ಗದ್ದೆಗಳಲ್ಲಿ ಕೆಲ ಕಾಲ ನೀರು ನಿಲ್ಲುವಂತೆ ಮಳೆಯಾಗಿದೆ. ಈ ಭಾಗದ ಅಡಕೆ ತೋಟಗಳ ಬೆಳೆಗಾರರಲ್ಲಿ ತಂತಸ ತಂದಿದೆ.

* ನ್ಯಾಮತಿಯಲ್ಲೂ ಸಿಡಿಲು, ಬಿರುಗಾಳಿ ಮಳೆ

ನ್ಯಾಮತಿ ಪಟ್ಟಣ ಸೇರಿದಂತೆ ಸುತ್ತಮುತ್ತ ಹಳ್ಳಿಗಳಲ್ಲಿ ಸೋಮವಾರ ರಾತ್ರಿ 11 ಗಂಟೆಯಿಂದ ಸಿಡಿಲು, ಮಿಂಚು, ಬಿರುಗಾಳಿಯಿಂದ ಕೂಡಿದ ಮಳೆಯಾಗಿದೆ. ಮಂಗಳವಾರ ಮುಂಜಾನೆಯ 4 ಗಂಟೆಯವರೆಗೂ ಎಡಬಿಡದೇ ಮಳೆ ಆರ್ಭಟಿಸಿದ್ದು, ವಿದ್ಯುತ್‌ ಸರಬರಾಜು ಸ್ಥಗಿತಗೊಂಡು ಜನರು ಪರಿತಪಿಸಿದರು.

ಏಕಾಏಕಿ ಆರ್ಭಟಿಸಿದ ಮಳೆಯಿಂದಾಗಿ ಕೆಲವರ ಮನೆಗಳಲ್ಲಿ ಸೋರಿಕೆಯಾಗಿದ್ದು ವರದಿಯಾಗಿದೆ. ಸೋರಿದ ನೀರು ಮನೆಯವರು ಹೊರಹಾಕಿದ ಕಷ್ಟ ಅನುಭವಿಸಿದ್ದಾರೆ. ಈ ಮಳೆಗೆ ರೈತರು ಹರ್ಷ ವ್ಯಕ್ತಪಡಿಸಿದ್ದಾರೆ. ಹೊಲ- ಗದ್ದೆಗಳಿಗೆ, ತೋಟಗಳಿಗೆ ಮಳೆ ಕೃಪೆಯಿಂದ ನೀರು ಲಭಿಸಿದಂತಾಗಿದೆ. ಮುಂದಿನ 15 ದಿನಗಳಲ್ಲಿ ಮಳೆ ಬಾರದಿದ್ದರೂ ಅಡಕೆ ತೋಟಗಳು ಇನ್ನಷ್ಟು ಹಸಿರುಮಯವಾಗಲಿವೆ ಎಂಬ ಸಮಾಧಾನ ರೈತರಲ್ಲಿತ್ತು. ಸಿಡಿಲಿನ ಹೊಡೆತಕ್ಕೆ ರಾತ್ರಿಯಿಂದಲೇ ವಿದ್ಯುತ್‌ ಸರಬರಾಜು ನಿಂತು ಹೋಗಿತ್ತು. ಇದರಿಂದ ಸಾರ್ವಜನಿಕರಿಗೆ ತೊಂದರೆ ಅನುಭವಿಸಿದರು, ಮಂಗಳವಾರ ಮಧ್ಯಾಹ್ನ 2 ಗಂಟೆ ಬಳಿಕವೇ ವಿದ್ಯುತ್ ಸರಬರಾಜಾಗಿದೆ.

- - -

-17ಕೆಸಿಎನ್‌ಜಿ1: ಚನ್ನಗಿರಿ ತಾಲೂಕಿನ ಮಂಗೇನಹಳ್ಳಿಯಲ್ಲಿ ಸೋಮವಾರ ರಾತ್ರಿ ಸುರಿದ ಮಳೆಗೆ ಬಿದ್ದಿರುವ ಕಚ್ಚಾ ಮನೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಇಂದಿನಿಂದ ಎಸ್ಸೆಸ್ಸೆಲ್ಸಿ ಪರೀಕ್ಷೆ ಆರಂಭ; ಅಧಿಕಾರಿಗಳಿಂದ ಅಗತ್ಯ ಸಿದ್ಧತೆ
ಅಡುಗೆ ಅನಿಲ ಕೊರತೆ: ಸೌದೆ ಒಲೆಗಳತ್ತ ಜನರ ಚಿತ್ತ