ಗ್ರಾಹಕರಿಗೆ ಶೇ.15 ರಷ್ಟು ರಿಯಾಯಿತಿ ಘೋಷಿಸಿದ ಮೈಮುಲ್‌

KannadaprabhaNewsNetwork | Published : Jun 4, 2025 1:19 AM
ಇಡೀ ದೇಶದಲ್ಲಿ ನಂದಿನಿ ಮಾರಾಟ ಮಾಡುತ್ತಿದ್ದೇವೆ. ದೇಶದಲ್ಲಿ ಎಷ್ಟು ಉತ್ಪನ್ನಗಳಿವೆಯೋ ಅದೆಲ್ಲದಕ್ಕಿಂತಲೂ ಕಡಿಮೆ ದರದಲ್ಲಿ ನಂದಿನಿ ಹಾಲಿನ ದರವಿದೆ.

ಕನ್ನಡಪ್ರಭ ವಾರ್ತೆ ಮೈಸೂರು

ನಂದಿನಿ ಗ್ರಾಹಕರಿಗೆ ಶೇ.15 ರಷ್ಟು ರಿಯಾಯಿತಿಯಲ್ಲಿ ಹಲವು ಉತ್ಪನ್ನಗಳನ್ನು ನೀಡಲಾಗುತ್ತಿದ್ದು, ಇದರ ಸದುಪಯೋಗಪಡಿಸಿಕೊಳ್ಳುವಂತೆ ಮೈಸೂರು ಜಿಲ್ಲಾ ಸಹಕಾರಿ ಹಾಲು ಉತ್ಪಾದಕರ ಸಂಘಗಳ ಒಕ್ಕೂಟದ (ಮೈಮುಲ್) ಅಧ್ಯಕ್ಷ ಆರ್. ಚೆಲುವರಾಜು ತಿಳಿಸಿದರು.

ಸಿದ್ದಾರ್ಥನಗರದ ಶಿಕ್ಷಕರ ಭವನದಲ್ಲಿ ಜಿಲ್ಲಾ ಸಹಕಾರಿ ಹಾಲು ಉತ್ಪಾದಕರ ಸಂಘಗಳ ಒಕ್ಕೂಟವು ಮಂಗಳವಾರ ಆಯೋಜಿಸಿದ್ದ ವಿಶ್ವ ಹಾಲು ದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ವಿಶ್ವ ಹಾಗೂ ರಾಜ್ಯದ ಮಟ್ಟದಲ್ಲಿ ಹಾಲಿನ ಉತ್ಪನ್ನಗಳು ತನ್ನದೇ ಆದ ರೀತಿಯಲ್ಲಿ ಪ್ರಚಾರ ಪಡೆದುಕೊಂಡಿವೆ. ನಂದಿನಿಯ 68 ಉತ್ಪನ್ನಗಳ ಜೊತೆಗೆ ಅನೇಕ ಉತ್ಪನ್ನಗಳನ್ನು ಬಿಡುಗಡೆ ಮಾಡಿದ್ದೇವೆ ಎಂದರು.

ಇಡೀ ದೇಶದಲ್ಲಿ ನಂದಿನಿ ಮಾರಾಟ ಮಾಡುತ್ತಿದ್ದೇವೆ. ದೇಶದಲ್ಲಿ ಎಷ್ಟು ಉತ್ಪನ್ನಗಳಿವೆಯೋ ಅದೆಲ್ಲದಕ್ಕಿಂತಲೂ ಕಡಿಮೆ ದರದಲ್ಲಿ ನಂದಿನಿ ಹಾಲಿನ ದರವಿದೆ. ಯಾವುದೇ ಅತಿಯಾದ ಲಾಭದ ಆಸೆ ಇಲ್ಲದೆ, ಗ್ರಾಹಕರು ಹಾಗೂ ರೈತರ ಹಿತದೃಷ್ಠಿಯಿಂದ ಕೆಎಂಎಫ್‌ ನಿಭಾಯಿಸಿಕೊಂಡು ಹೋಗುತ್ತಿದೆ ಎಂದು ಅವರು ಹೇಳಿದರು.

ಎಲ್ಲರೂ ನಂದಿನಿ ಉತ್ಪನ್ನಗಳ ಬಳಕೆಗೆ ತಿಳಿಸಬೇಕು. ಇದಕ್ಕಾಗಿಯೇ ಇಂದಿನಿಂದ ಗ್ರಾಹಕರಿಗಾಗಿ ಮ್ಯಾಂಗೋ ಲಸ್ಸಿ, ರಾಗಿ ಅಂಬಲಿ, ಬಯೋಟಿಕ್‌ ಮಜ್ಜಿಗೆ, ಪ್ರೊ ಬಯೋಟಿಕ್‌ ಮೊಸರು, ಬರ್ಫಿ, ಸಮೃದ್ಧಿ ಹಾಲು, ಸಿಹಿ ಲಸ್ಸಿ, ಗೋಧಿ ಲಡ್ಡು ಇಷ್ಟು ಉತ್ಪನ್ನಗಳ ಮೇಲೆ ಶೇ.15 ರಷ್ಟು ರಿಯಾಯಿತಿ ನೀಡುತ್ತಿದ್ದೇವೆ. ಸಾರ್ವಜನಿಕರು ಹಾಗೂ ಗ್ರಾಹಕರು ಇದರ ಸದುಪಯೋಪಡಿಸಿಕೊಂಡು ಬೇರೆ ಉತ್ಪನ್ನಗಳ ಮೇಲೆ ವ್ಯಾಮೋಹ ಆಗದೇ ನಂದಿನಿ ಉತ್ಪನ್ನಗಳನ್ನೇ ಹೆಚ್ಚೆಚ್ಚು ಬಳಸಿ ಎಂದು ಅವರು ಕರೆ ನೀಡಿದರು.

ಮೈಮುಲ್ ವ್ಯವಸ್ಥಾಪಕ ನಿರ್ದೇಶಕ ಕೆ.ಎನ್. ಸುರೇಶ್ ನಾಯ್ಕ್ ಪ್ರಸ್ತಾವಿಕವಾಗಿ ಮಾತನಾಡಿ, ಈಗಾಗಲೇ ಮೈಮುಲ್‌ ರೈತ ಹಾಗೂ ಗ್ರಾಹಕ ಸ್ನೇಹಿಯಾಗಿ ಅನೇಕ ರಿಯಾಯಿತಿ ಘೋಷಣೆ ಮಾಡಿದೆ. ಈಗ ನೂತನ ಉತ್ಪನ್ನಗಳನ್ನು ಸಹ ವಿಶ್ವ ಹಾಲು ದಿನದಂದು ಬಿಡುಗಡೆ ಮಾಡಿದ್ದು, ಗ್ರಾಹಕರು ಇದರ ಸದುಪಯೋಗಪಡಿಸಿಕೊಂಡು ರೈತರನ್ನು ಪ್ರೋತ್ಸಾಹಿಸುವ ಕೆಲಸ ಮಾಡಬೇಕು ಎಂದು ಹೇಳಿದರು.

ಕೆ.ಆರ್. ನಗರ ಪಶುವೈದ್ಯಾಧಿಕಾರಿ ಡಾ. ಮಂಜುನಾಥ್, ಅಪೊಲೋ ಆಸ್ಪತ್ರೆ ಪ್ರಸೂತಿ ತಜ್ಞೆ ಡಾ. ಕವಿತಾ, ಕಾವೇರಿ

‌ಮಲ್ಟಿಸೆಷಾಲಿಟಿ ಆಸ್ಪತ್ರೆಯ ಪೌಷ್ಠಿಕ ತಜ್ಞೆ ಶಶಿಕಲಾ ಅವರು ಹಾಲಿನ ಮಹತ್ವ ಕುರಿತು ಮಾತನಾಡಿದರು.

ಮೈಮುಲ್ ನಿರ್ದೇಶಕರಾದ ಎ.ಟಿ. ಸೋಮಶೇಖರ್, ಕೆ.ಜಿ. ಮಹೇಶ್, ಕೆ. ಉಮಾಶಂಕರ್, ಸಿ. ಓಂಪ್ರಕಾಶ್, ಕೆ. ಈರೇಗೌಡ, ದ್ರಾಕ್ಷಯಿಣಿ ಬಸವರಾಜಪ್ಪ, ಲೀಲಾ ಬಿ.ಕೆ. ನಾಗರಾಜು, ನೀಲಾಂಬಿಕೆ ಮಹೇಶ್ ಕುರಹಟ್ಟಿ, ಶಿವಗಾಮಿ ಷಣ್ಮುಗಂ, ಬಿ. ಗುರುಸ್ವಾಮಿ, ಬಿ.ಎ. ಪ್ರಕಾಶ್, ಎ.ಬಿ. ಮಲ್ಲಿಕಾ ರವಿಕುಮಾರ್, ಪಶುಸಂಗೋಪನಾ ಇಲಾಖೆ ನಿರ್ದೇಶಕ ಮತ್ತು ಮೈಮುಲ್‌ ಪದನಿಮಿತ್ತ ನಿರ್ದೇಶಕ ಡಾ. ನಾಗರಾಜು ಮೊದಲಾದವರು ಇದ್ದರು.

----

ಬಾಕ್ಸ್‌... ಆನೆ ಮೇಲೆ ಹಾಲಿನ ಅಂಬಾರಿಫೋಟೋ- 3ಎಂವೈಎಸ್2

-----

ಹಾಲಿನ ಉತ್ಪನ್ನಗಳ ಚಿತ್ರವನ್ನು ಹೊತ್ತ ಆನೆಯ ನಡಿಗೆ ಕಂಡು ಒಂದು ಕ್ಷಣ ಜಂಬೂಸವಾರಿ ಬಂದೇ ಬಿಟ್ಟಿತೇ ಎಂದು ಸಾರ್ವಜನಿಕರ ಕೂತೂಹಲದ ಮೂಡಿಸಿತು.

ಆಲನಹಳ್ಳಿಯ ಮೈಮುಲ್‌ ನಿಂದ ವಿಶ್ವ ಹಾಲು ದಿನದ ಅಂಗವಾಗಿ ಹೈನೋದ್ಯಮದ ಸಂಭ್ರಮವನ್ನು‌ ಸಂಭ್ರಮಿಸೋಣ ಎಂಬ ದ್ಯೇಯದೊಂದಿಗೆ ಹಾಲಿನ ಉತ್ಪನ್ನಗಳು ಮತ್ತು ಹಾಲಿನ ಮಹತ್ವ, ಅದರ ಅನೂಕೂಲಗಳ ಬಗ್ಗೆ ಕುರಿತು ಪ್ರಚಾರ ಮಾಡುವ ಮೆರವಣಿಗೆಯಲ್ಲಿ ಹಾಲಿನ ಅಂಬಾರಿ ಆಕರ್ಷಣೆಯಾಗಿತ್ತು.

ಹೌದು ಇದೇ ಮೊಟ್ಟ ಮೊದಲ ಬಾರಿಗೆ ತುಮಕೂರು ಜಿಲ್ಲೆಯ ನೊಣವಿನಕೆರೆಯ ಕಾಡು ಸಿದ್ದೇಶ್ವರ ಮಠದ ಸಾಕಾನೆಯ ಮೇಲೆ ನಂದಿನಿ ಹಾಲಿನ ಉತ್ಪನ್ನವನ್ನು ಮಾದರಿ ಅಂಬಾರಿ ಮೇಲೆ ಇರಿಸಿ ಆನೆಯೊಂದಿಗೆ ಮೆರವಣಿಗೆ ಮಾಡಲಾಯಿತು.

ಆಲನಹಳ್ಳಿ ಕೇಂದ್ರದಿಂದ ಹೊರಟ ಹಾಲಿನ ಅಂಬಾರಿಗೆ ಅಧ್ಯಕ್ಷ ಹಾಗೂ ಆಡಳಿತ ಮಂಡಳಿಯವರು ಬಲೂನ್‌ ಹಾರಿ ಬಿಡುವ ಮೂಲಕ ಚಾಲನೆ ನೀಡಿದರು. ಬಳಿಕ ಟೆರಿಷಿಯನ್‌ ಕಾಲೇಜು ವೃತ್ತ, ಬನ್ನೂರು ಮುಖ್ಯ ರಸ್ತೆಯ ನೂತನ ಜಿಲ್ಲಾಧಿಕಾರಿ ಕಚೇರಿ ಮಾರ್ಗವಾಗಿ ಶಿಕ್ಷಕರ ಭವನದವರೆಗೆ ಮೆರೆವಣಿಗೆ ನಡೆಯಿತು.

----

ಕೋಟ್...

ವಿಶ್ವವನ್ನು ಉಳಿಸುವ ಹಾಲು

ಅಮೃತ ರೂಪದಲ್ಲಿ ಹಾಲಿನ ಸೇವನೆ ಮಾಡುತ್ತಿದ್ದೇವೆ. ಜೀವಂತವಾಗಿ ಇರಬೇಕಾದರೂ ಶುದ್ಧಗಾಳಿ, ನೀರು ಮೊದಲಾದವರು ಸಿಗಬೇಕಾದರೆ ನಾವೆಲ್ಲರೂ ಹಾಲು ಕುಡಿಯಬೇಲಕಿದೆ. ಸಕ್ಕರೆ ಪಿಷ್ಟ, ಸಾಸರಜನಕ ಸೇರಿ ಅನೇಕ‌‌ ಅಂಶಗಳನ್ನು ಹಾಲಿನಲ್ಲಿ ನೋಡಬಹುದಾಗಿದೆ. ಆರು ತಿಂಗಳವರೆಗೂ ಯಾವ ಮಗು ತಾಯಿಯ ಹಾಲು ಕುಡಿಯುತ್ತದೆಯೋ ಡಯಾಬಿಟಿಸ್, ಡ್ರೈಪೋಟೆಷನ್ ಬರುವುದಿಲ್ಲ. ವಿಶ್ವವನ್ನು ಉಳಿಸುವ ನಿಟ್ಟಿನಲ್ಲಿ ಹೋರಾಟ‌ ಮಾಡುತ್ತಿರುವುದರಲ್ಲಿ ಹಾಲು ದಿನಾಚರಣೆಯೂ ಒಂದಾಗಿದೆ. ಅಪೌಷ್ಠಿಕತೆ ಹೋಗಲಾಡಿಸುವಲ್ಲಿ ಪ್ರಮುಖ ಪಾತ್ರ ವಹಿಸಿರುವ ನಂದಿನಿಯ ಬಳಕೆಯನ್ನು ಹೆಚ್ಚೆಚ್ಚು ಮಾಡಿ.

- ಡಾ. ಗೋಪಾಲಗೌಡ, ಮಕ್ಕಳ ತಜ್ಞ