ಕನ್ನಡಪ್ರಭ ವಾರ್ತೆ ತುರುವೇಕೆರೆ
ಅರೇಮಲ್ಲೇನಹಳ್ಳಿಯ ಸುಜಾತಾರವರು ಡಿ. 21 ರಂದು ತಮ್ಮ ಜಮೀನಿನಲ್ಲಿ ದನಗಳನ್ನು ಮೇಯಿಸುವಾಗ ಹಾಡುಹಗಲೇ ಚಿರತೆ ದಾಳಿ ಮಾಡಿ ಅವರನ್ನು ಕೊಂದು ಹಾಕಿತ್ತು. ಅದೇ ದಿನ ಅರಣ್ಯ ಇಲಾಖಾ ವತಿಯಿಂದ ಮೃತರ ಕುಟುಂಬಕ್ಕೆ 20 ಲಕ್ಷ ರು.ಗಳ ಧನ ಸಹಾಯವನ್ನು ಮಾಡಲಾಗುವುದೆಂದು ಘೋಷಿಸಲಾಗಿತ್ತು. ಮೊದಲ ಕಂತಾಗಿ 5 ಲಕ್ಷ ರು.ಗಳ ಚೆಕ್ ಮೂಲಕ ನೀಡಲಾಗಿತ್ತು. ಮಂಗಳವಾರ ಮೃತರ ಮನೆಗೆ ತೆರಳಿದ ಶಾಸಕ ಎಂ.ಟಿ.ಕೃಷ್ಣಪ್ಪ ಕುಟುಂಬಸ್ಥರಿಗೆ ಸಾಂತ್ವನ ಹೇಳಿ ಚೆಕ್ ನ್ನು ಹಸ್ತಾಂತರಿಸಿದರು.
ಈ ವೇಳೆ ಮಾತನಾಡಿದ ಶಾಸಕ ಎಂ.ಟಿ.ಕೃಷ್ಣಪ್ಪ ಐದು ವರ್ಷದ ಅವಧಿಯ ವರೆಗೆ ಸುಜಾತಾರ ಮಗನಿಗೆ ಪ್ರತಿ ತಿಂಗಳು 4 ಸಾವಿರ ರು.ನಂತೆ ಆತನ ಶೈಕ್ಷಣಿಕ ಉದ್ದೇಶಕ್ಕಾಗಿ ನೀಡಲಾಗುವುದು. ಮೃತಳ ಮಗಳಿಗೆ ಮುಂಬರುವ ದಿನಗಳಲ್ಲಿ ಗುತ್ತಿಗೆ ಆಧಾರದ ಮೇಲೆ ಕೆಲಸ ಕೊಡಿಸಲಾಗುವುದು ಎಂದು ತಿಳಿಸಿದರು. ಈ ಸಂದರ್ಭದಲ್ಲಿ ತಿಪಟೂರು ಉಪ ವಿಭಾಗದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಡಿ.ಭರತ್, ಚಿಕ್ಕನಾಯಕನಹಳ್ಳಿ ಅರಣ್ಯ ವಲಯ ಅರಣ್ಯಾಧಿಕಾರಿ ಎಚ್.ಕೆ. ಅಮಿತ್, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಎ.ಬಿ.ಜಗದೀಶ್, ತಾಲೂಕು ಜೆಡಿಎಸ್ ಅಧ್ಯಕ್ಷ ದೊಡ್ಡೇಗೌಡ, ಗ್ರಾಮದ ಮುಖಂಡರಾದ ಆರ್.ಲಕ್ಷ್ಮಣ್, ಜಯರಾಮ್, ಕುಮಾರ್, ಗಗನ್, ತ್ಯಾಗರಾಜು, ವಿಜಯೇಂದ್ರ, ಮಂಗೀಕುಪ್ಪೆ ಬಸವರಾಜು, ಮಾದಿಹಳ್ಳಿ ಕಾಂತರಾಜು, ಹುಲಿಕಲ್ ಲೋಕೇಶ್ ಸೇರಿದಂತೆ ಹಲವರು ಇದ್ದರು.