ಸಾವನ್ನಪ್ಪಿದ 53 ಮಂದಿ ಹಾಲು ಉತ್ಪಾದಕರ ಕುಟುಂಬಕ್ಕೆ 15 ಸಾವಿರ

KannadaprabhaNewsNetwork | Published : Mar 15, 2025 1:04 AM

ಸಾರಾಂಶ

ಗುಂಡ್ಲುಪೇಟೆ ತಾಲೂಕಿನ 53 ಮಂದಿ ಹಾಲು ಉತ್ಪಾದಕರು ಸಾವನ್ನಪ್ಪಿದ ವಾರಸುದಾರರಿಗೆ ಚಾಮುಲ್‌ ನಿರ್ದೇಶಕ ನಂಜುಂಡಪ್ರಸಾದ್‌, ಸುನೀಲ್‌ ಚೆಕ್‌ ಹಸ್ತಾಂತರಿಸಿದರು.

ಕನ್ನಡಪ್ರಭ ವಾರ್ತೆ ಗುಂಡ್ಲುಪೇಟೆ

ಚಾಮರಾಜನಗರ ಸಹಕಾರಿ ಹಾಲು ಒಕ್ಕೂಟ (ಚಾಮುಲ್) ರೈತ ಕಲ್ಯಾಣ ಟ್ರಸ್ಟ್‌ನಿಂದ ಸಾವನ್ನಪ್ಪಿದ ಹಾಲು ಉತ್ಪಾದಕ ಸದಸ್ಯರ 53 ಮಂದಿ ವಾರಸುದಾರರಿಗೆ ತಲಾ 15 ಸಾವಿರ ಚೆಕ್‌ನ್ನು ಚಾಮುಲ್‌ ನಿರ್ದೇಶಕ, ಜಿಲ್ಲಾ ಸಹಕಾರ ಒಕ್ಕೂಟದ ಅಧ್ಯಕ್ಷ ಎಚ್.‌ಎಸ್.ನಂಜುಂಡಪ್ರಸಾದ್‌, ಚಾಮುಲ್‌ ನಿರ್ದೇಶಕ ಎಂ.ಪಿ.ಸುನೀಲ್‌ ಜೊತೆಗೂಡಿ ಹಸ್ತಾಂತರಿಸಿದರು.

ಚೆಕ್‌ ವಿತರಿಸಿದ ಬಳಿಕ ಜಿಲ್ಲಾ ಸಹಕಾರ ಒಕ್ಕೂಟದ ಅಧ್ಯಕ್ಷ ಎಚ್.ಎಸ್.ನಂಜುಂಡ ಪ್ರಸಾದ್ ಮಾತನಾಡಿ, ಸಾವನ್ನಪ್ಪಿದ 53 ಮಂದಿ ಹಾಲು ಉತ್ಪಾದಕರ ಸಹಕಾರ ಸಂಘಗಳ ಸದಸ್ಯರ ವಾರಸುದಾರರಿಗೆ ₹7.95 ಲಕ್ಷ ಪರಿಹಾರ ನೀಡಲಾಗಿದ್ದು, ಪರಿಹಾರದ ಹಣವನ್ನು ಸದುಪಯೋಗ ಪಡಿಸಿಕೊಳ್ಳಿ ಎಂದರು. ೫೮ ವರ್ಷ ಒಳಪಟ್ಟ ಸದಸ್ಯರಿಗೆ ಸಂಘಗಳಲ್ಲಿ 1 ಲಕ್ಷ ವಿಮಾ ಸೌಲಭ್ಯಗಳಿವೆ. ರಾಸುಗಳಿಗೆ ತುರ್ತು ಚಿಕಿತ್ಸೆಗೆ ಪ್ರತ್ಯೇಕ ವ್ಯವಸ್ಥೆಯಿದೆ. ಚಾಮುಲ್‌ ನಿಂದ ಸಿಗುವ ಸೌಲಭ್ಯ ಉತ್ಪಾದಕರು ಬಳಕೆ ಮಾಡಿಕೊಳ್ಳಿ ಎಂದರು.

ಚಾಮುಲ್‌ ನಿರ್ದೇಶಕ ಎಂ.ಪಿ.ಸುನೀಲ್ ಮಾತನಾಡಿ, ಸಹಕಾರ ಸಂಸ್ಥೆಗಳು ಸದಸ್ಯರ ಸಂಸ್ಥೆಗಳಾಗಿವೆ.ಸಹಕಾರ ಸಂಘಗಳಲ್ಲಿ ಸಿಗುವ ಸೌಲಭ್ಯಗಳು ಖಾಸಗಿ ಡೈರಿಗಳಲ್ಲಿ ಸಿಗುವುದಿಲ್ಲ. ಖಾಸಗಿ ಡೇರಿಯ ಆಮಿಷಕ್ಕೆ ಒಳಗಾಗದೆ ಸಹಕಾರ ಸಂಘಕ್ಕೆ ಹಾಲು ಸರಬರಾಜು ಮಾಡಿ ಎಂದರು. ಸಂಘದಲ್ಲಿ ರಾಸುಗಳಿಗೆ ಅವಶ್ಯವಿರುವ ಜಂತುಹುಳ ಮಾತ್ರೆಗಳನ್ನು ಸಂಘದಲ್ಲಿ ವಿತರಿಸುತ್ತಿದ್ದು,ಉತ್ಪಾದಕರು ರಾಸುಗಳಿಗೆ ತಪ್ಪದೇ ಆರು ತಿಂಗಳಿಗೊಮ್ಮೆ ನೀಡಬೇಕು ಎಂದರು.

ಕಾರ್ಯಕ್ರಮದಲ್ಲಿ ಚಾಮುಲ್‌ನ ಗುಂಡ್ಲುಪೇಟೆ ಉಪ ವಿಭಾಗದ ಸಹಾಯಕ ವ್ಯವಸ್ಥಾಪಕ ಜಿ.ಪ್ರಭು, ವಿಸ್ತರಣಾಧಿಕಾರಿಗಳಾದ ಎಚ್.ಪ್ರಕಾಶ್, ರಂಜಿತಾ, ಸಿದ್ದಲಿಂಗೇಶ್ ಕೋರೆ, ಮುದ್ದಪ್ಪ ಉದಯ್, ಮಂಜೇಶ್, ಹಾಲು ಉತ್ಪಾದಕರ ಸಹಕಾರ ಸಂಘಗಳ ಮುಖ್ಯ ಕಾರ್ಯ ನಿರ್ವಾಹಕರು, ಫಲಾನುಭವಿಗಳು ಹಾಜರಿದ್ದರು.

ಖಾಸಗಿ ಡೇರಿಗಳಲ್ಲಿ ಹಾಲು ಉತ್ಪಾದಕರಿಗೆ ಯಾವುದೇ ಸೌಲಭ್ಯ ಸಿಗುವುದಿಲ್ಲ. ಸಹಕಾರ ಸಂಘಗಳಲ್ಲಿ ಹಲವು ಸೌಲಭ್ಯಗಳನ್ನು ಉತ್ಪಾಕರಿಗೆ ನೀಡಲಾಗುತ್ತಿದೆ. ಖಾಸಗಿ ಡೇರಿಯ ಆಮಿಷಕ್ಕೆ ಒಳಗಾಗದೆ ಚಾಮುಲ್‌ ಡೇರಿಗಳಿಗೆ ಹಾಲು ಹಾಕುವ ಮೂಲಕ ಸಹಕಾರ ಸಂಘಗಳ ಬಲವರ್ಧನೆಗೆ ಉತ್ಪಾದಕರು ನಾಂದಿ ಹಾಡಬೇಕು.

-ಎಚ್.ಎಸ್.ನಂಜುಂಡಪ್ರಸಾದ್‌, ಚಾಮುಲ್‌ ನಿರ್ದೇಶಕ

Share this article