ಕಾರವಾರದಲ್ಲಿ ರಸ್ತೆ ನಿರ್ಮಾಣಕ್ಕೆ ನಗರಸಭೆ ಬಜೆಟ್‌ನಲ್ಲಿ ₹2.70 ಕೋಟಿ ಮೀಸಲು

KannadaprabhaNewsNetwork | Published : Jan 16, 2025 12:49 AM

ಸಾರಾಂಶ

ಹೊಸ ರಸ್ತೆಗಳ ನಿರ್ಮಾಣಕ್ಕೆ ₹೨.೭೦ ಕೋಟಿ, ಯಂತ್ರೋಪಕರಣ ಖರೀದಿಗೆ ₹೧.೦೭ ಕೋಟಿ, ಚರಂಡಿ ನಿರ್ಮಾಣ, ಸ್ಲ್ಯಾಬ್ ಅಳವಡಿಸಲು ₹೨.೭೦ ಕೋಟಿ ಮೀಸಲಿಡಲಾಗಿದೆ.

ಕಾರವಾರ: ಇಲ್ಲಿನ ನಗರಸಭೆಗೆ ೨೦೨೫- ೨೬ನೇ ಸಾಲಿನಲ್ಲಿ ಒಟ್ಟೂ ವಾರ್ಷಿಕವಾಗಿ ₹೩೬.೬೬ ಕೋಟಿ ಆದಾಯದ ನಿರೀಕ್ಷೆಯಿದ್ದು, ₹೩೬.೪೯ ಕೋಟಿ ಖರ್ಚು ಮಾಡಬಹುದಾಗಿದೆ. ₹೧೬.೯೪ ಲಕ್ಷ ನಗರಸಭೆಗೆ ಉಳಿತಾಯವಾಗುವ ನಿರೀಕ್ಷೆಯಿದೆ ಎಂದು ಅಧ್ಯಕ್ಷ ರವಿರಾಜ್ ಅಂಕೋಲೇಕರ ತಿಳಿಸಿದರು.ಇಲ್ಲಿನ ನಗರಸಭೆಯ ಸಭಾಂಗಣದಲ್ಲಿ ಬುಧವಾರ ನಡೆದ ವಿಶೇಷ ಸಾಮಾನ್ಯ ಸಭೆಯಲ್ಲಿ 2025- 26ನೇ ಸಾಲಿನ ಆಯವ್ಯಯ ಮಂಡಿಸಿ ಮಾತನಾಡಿ, ಹೊಸ ರಸ್ತೆಗಳ ನಿರ್ಮಾಣಕ್ಕೆ ₹೨.೭೦ ಕೋಟಿ, ಯಂತ್ರೋಪಕರಣ ಖರೀದಿಗೆ ₹೧.೦೭ ಕೋಟಿ, ಚರಂಡಿ ನಿರ್ಮಾಣ, ಸ್ಲ್ಯಾಬ್ ಅಳವಡಿಸಲು ₹೨.೭೦ ಕೋಟಿ, ವಿದ್ಯುತ್ ಬಿಲ್ ಪಾವತಿಗೆ ₹ ೫.೩೫ ಕೋಟಿ, ಹೊರಗುತ್ತಿಗೆ ಆಧಾರದ ಮೇಲೆ ಲೋಡರ್ಸ್, ವಾಹನ ಚಾಲಕ, ವಾಚ್‌ಮನ್, ಕಾರ್ಮಿಕರ ಪೂರೈಕೆಗೆ ₹೧.೬೩ ಕೋಟಿ, ಜಲಮಂಡಳಿಯಿಂದ ನೀರು ಖರೀದಿಗೆ ₹೯೦ಲಕ್ಷ, ನೀರು ಸರಬರಾಜು ಪೈಪ್ ಲೈನ್ ದುರಸ್ತಿ, ನಿರ್ವಹಣೆ ಕಾಮಗಾರಿಗೆ ₹೩೦ ಲಕ್ಷ, ಹೊರಗುತ್ತಿಗೆ ಆಧಾರದ ಮೇಲೆ ಎಸ್‌ಟಿಪಿ ನಿರ್ವಹಣೆಗೆ ಕಾರ್ಮಿಕರ ಪೂರೈಕೆಗೆ ₹೩೨.೬೮ ಲಕ್ಷ, ಕಾಯಂ ಅಧಿಕಾರಿ, ಸಿಬ್ಬಂದಿ ವೇತನಕ್ಕೆ ₹೪೦.೮೦ ಕೋಟಿ ಮೀಸಲಿಡಲಾಗಿದೆ ಎಂದರು.ಹೊರಗುತ್ತಿಗೆ ಸಿಬಂದಿ ವೇತನ ಪಾವತಿ, ವಾಹನಗಳಿಗೆ ಇಂಧನ ಮತ್ತು ವಾಹನ ದುರಸ್ತಿ, ಸಾರ್ವಜನಿಕ ಶೌಚಾಲಯ ನಿರ್ಮಾಣ, ಉದ್ಯಾನವನ ನಿರ್ವಹಣೆಗೆ ಸಿಬ್ಬಂದಿ ಒಳಗೊಂಡು ಬೇರೆ ಬೇರೆ ಖರ್ಚು ವೆಚ್ಚಗಳಿಗೂ ಅನುದಾನ ಪ್ರತ್ಯೇಕ ಮೀಸಲಿಡಲಾಗಿದೆ ಎಂದರು. ಪೌರಾಯುಕ್ತ ಜಗದೀಶ ಹುಲಗೆಜ್ಜಿ ಮಾತನಾಡಿ, ಈ ಹಿಂದೆ ವಾರ್ಡ್‌ಗಳಲ್ಲಿ ನಡೆಯುವ ಕ್ರೀಡಾಕೂಟಕ್ಕೆ ನೀಡಲು ₹೫೦ ಸಾವಿರ ಮಾತ್ರ ಮೀಸಲಿಡಲಾಗುತ್ತಿತ್ತು. ಈ ಬಾರಿ ಎರಡೂವರೆ ಲಕ್ಷ ರು. ಇಡಲಾಗಿದೆ. ಬೀದಿನಾಯಿಗಳ ಹಾವಳಿ ಹೆಚ್ಚಾಗಿದ್ದು, ಸಂತಾನಶಕ್ತಿಹರಣ ಶಸ್ತ್ರಚಿಕಿತ್ಸೆಗೆ ಬೇಕಾದ ಎಲ್ಲ ವ್ಯವಸ್ಥೆ ಮಾಡಿಕೊಳ್ಳಲಾಗಿದೆ. ಆದಷ್ಟು ಶೀಘ್ರದಲ್ಲಿ ಪಶು ಸಂಗೋಪನಾ ಇಲಾಖೆ ಸಹಕಾರದಲ್ಲಿ ಈ ಪ್ರಕ್ರಿಯೆ ಪ್ರಾರಂಭಿಸಲಾಗುತ್ತದೆ ಎಂದು ಮಾಹಿತಿ ನೀಡಿದರು.

ವಿಧಾನಪರಿಷತ್ ಸದಸ್ಯ ಗಣಪತಿ ಉಳ್ವೇಕರ, ಉಪಾಧ್ಯಕ್ಷೆ ಪ್ರೀತಿ ಜೋಶಿ, ಸ್ಥಾಯಿ ಸಮಿತಿ ಅಧ್ಯಕ್ಷೆ ಮಾಲಾ ಹುಲಸ್ವಾರ ಇದ್ದರು.ಕುಸಿದ ಕಾಲುಸಂಕ: ದುರಸ್ತಿಗೆ ಆಗ್ರಹ

ಯಲ್ಲಾಪುರ: ತಾಲೂಕಿನ ಹಾಸಣಗಿ ಗ್ರಾಪಂ ವ್ಯಾಪ್ತಿಯ ಯಡಳ್ಳಿಯಿಂದ ಕುಂದೂರು ಮತ್ತು ಮದ್ಲಗಾರಿಗೆ ಹೋಗುವ ದಾರಿಯಲ್ಲಿರುವ ಕಾಲುಸಂಕ ಕುಸಿದಿದ್ದು, ಜನರಿಗೆ ಆತಂಕ ಮೂಡಿಸಿದೆ.ಈ ಕಾಲುಸಂಕದ ಮೇಲೆ ಅಂಗನವಾಡಿ ಮಕ್ಕಳು, ಶಾಲಾ ವಿದ್ಯಾರ್ಥಿಗಳು, ಕೂಲಿ ಕಾರ್ಮಿಕರು, ಸಾರ್ವಜನಿಕರು ತಿರುಗಾಡುತ್ತಿದ್ದು, ಇದೀಗ ಕುಸಿತದ ಸ್ಥಿತಿಯಿಂದ ಭಯಾನಕ ಪರಿಸ್ಥಿತಿ ಉಂಟಾಗಿದೆ.ಅನೇಕ ವರ್ಷಗಳ ಹಿಂದೆ ನಿರ್ಮಾಣಗೊಂಡಿದ್ದ ಈ ಕಾಲುಸಂಕ ಈ ಬಾರಿಯ ಅತ್ಯಧಿಕ ಮಳೆಯಿಂದಾಗಿ ಕಾಲುಸಂಕದ ತಳಭಾಗ ಕುಸಿದಿದೆ.

ಕೂಡಲೇ ಸಂಬಂಧಿಸಿದ ಇಲಾಖೆ ಈ ಕುರಿತು ಗಮನ ಹರಿಸಿ, ಕುಸಿದಿರುವ ಸಂಕವನ್ನು ದುರಸ್ತಿ ಮಾಡಬೇಕೆಂದು ಹಾಸಣಗಿ ಗ್ರಾಪಂ ಕುಂದೂರು ವಾರ್ಡಿನ ಸದಸ್ಯ ಎಂ.ಕೆ. ಭಟ್ಟ ಯಡಳ್ಳಿ ಆಗ್ರಹಿಸಿದ್ದಾರೆ.

Share this article