ಕೋಳಿ ಪುಕ್ಕದ ಬಾಂಬ್ ಸ್ಫೋಟಕ್ಕೆ 2 ನರಿಗಳು ಬಲಿ!

KannadaprabhaNewsNetwork |  
Published : Jun 24, 2026, 01:30 AM IST
ಬೆಳಗಾವಿ  | Kannada Prabha

ಸಾರಾಂಶ

ಕೋಳಿ ಪುಕ್ಕದಲ್ಲಿ ಸ್ಫೋಟಕ ಅಡಗಿಸಿಟ್ಟು, ಅದರ ಮೇಲೆ ಕೋಳಿ ಮಾಂಸವನ್ನು ಕಟ್ಟಿ, ಬಿಸಾಕಿದ್ದನ್ನು ಕಚ್ಚಿದ್ದರಿಂದ ಸಂಭವಿಸಿದ ಸ್ಫೋಟದಲ್ಲಿ ಎರಡು ಸಾಕು ನಾಯಿಗಳು ಸತ್ತಿದ್ದ ಬೆನ್ನಲ್ಲೇ ಎರಡು ನರಿಗಳೂ ಇಂತಹ ಕೃತ್ಯಕ್ಕೆ ಬಲಿಯಾದ ಮಾಹಿತಿ ಹೊರಬಿದ್ದಿದೆ.

- ಚನ್ನಗಿರಿ ತಾಲೂಕಿನ ಕಚ್ಚಾ ಬಾಂಬ್‌ಗಳಿಗೆ 2 ನಾಯಿ, 2 ನರಿಗಳ ಸಾವು - - -

ಕನ್ನಡಪ್ರಭ ವಾರ್ತೆ ದಾವಣಗೆರೆ

ಕೋಳಿ ಪುಕ್ಕದಲ್ಲಿ ಸ್ಫೋಟಕ ಅಡಗಿಸಿಟ್ಟು, ಅದರ ಮೇಲೆ ಕೋಳಿ ಮಾಂಸವನ್ನು ಕಟ್ಟಿ, ಬಿಸಾಕಿದ್ದನ್ನು ಕಚ್ಚಿದ್ದರಿಂದ ಸಂಭವಿಸಿದ ಸ್ಫೋಟದಲ್ಲಿ ಎರಡು ಸಾಕು ನಾಯಿಗಳು ಸತ್ತಿದ್ದ ಬೆನ್ನಲ್ಲೇ ಎರಡು ನರಿಗಳೂ ಇಂತಹ ಕೃತ್ಯಕ್ಕೆ ಬಲಿಯಾದ ಮಾಹಿತಿ ಹೊರಬಿದ್ದಿದೆ.

ಚನ್ನಗಿರಿ ತಾಲೂಕಿನಲ್ಲಿ ಕಳೆದೆರಡು ದಿನಗಳಲ್ಲಿ 2 ಸಾಕು ನಾಯಿಗಳು ಹಾಗೂ 2 ನರಿಗಳು ಕಾಡು ಪ್ರಾಣಿಗಳ ಬೇಟೆಗೆ ನಾಡ ಬಾಂಬು ಇಡುತ್ತಿರುವ ಕಿಡಿಗೇಡಿಗಳ ಕೃತ್ಯಕ್ಕೆ ಬಲಿಯಾಗಿವೆ. ಇಂತಹ ಕೃತ್ಯವನ್ನು ಪೊಲೀಸ್ ಇಲಾಖೆ ಗಂಭೀರವಾಗಿ ಪರಿಗಣಿಸಿ, ಕಿಡಿಗೇಡಿಗಳನ್ನು ಮಟ್ಟ ಹಾಕಬೇಕಾಗಿದೆ.

ಗುಡ್ಡಗಾಡು ಪ್ರದೇಶದಲ್ಲಿ ಹೀಗೆ ನಾಡ ಬಾಂಬ್‌ಗಳನ್ನು ಇಟ್ಟು, ಕಾಡು ಪ್ರಾಣಿಗಳನ್ನು ಬೇಟೆಯಾಡುತ್ತಾರೆ. ಅಂತಹ ಕಿಡಿಗೇಡಿಗಳು ಇದೀಗ ಚನ್ನಗಿರಿ ತಾ. ನಲ್ಕುದುರೆ, ಹಿರೇಕೋಗಲೂರು ಭಾಗದಲ್ಲಿ ಎರಡು ದಿನಗಳ ಅಂತರದಲ್ಲಿ 2 ನರಿಗಳು ಹಾಗೂ 2 ಸಾಕು ನಾಯಿಗಳನ್ನು ಬಲಿ ಪಡೆದಿದ್ದು, ಇನ್ನೂ ಎಷ್ಟು ಮೂಕ ಪ್ರಾಣಿಗಳನ್ನು ಬಲಿ ಪಡೆಯಲು ಮುಂದಾಗಿದ್ದಾರೆಂಬ ಆಕ್ರೋಶ ವ್ಯಕ್ತವಾಗುತ್ತಿದೆ.

ಕಾಡು ಹಂದಿ, ಕಾಡು ಬೆಕ್ಕು, ನವಿಲುಗಳು, ಮೊಲಗಳಂತಹ ಪ್ರಾಣಿ, ಪಕ್ಷಿಗಳನ್ನು ಬೇಟೆಯಾಡಲು ಇಂತಹ ಕಚ್ಚಾ ಬಾಂಬ್‌ಗಳನ್ನು ಕಿಡಿಗೇಡಿಗಳು ಇಡುತ್ತಿರುವ ಮಾಹಿತಿ ಸಿಗುತ್ತಿದೆ. 2 ದಿನಗಳಲ್ಲಿ ಒಟ್ಟು 4 ಮೂಕ ಪ್ರಾಣಿಗಳು ಜೀವ ತೆತ್ತಿವೆ. ನಲ್ಕುದುರೆ ಗ್ರಾಮದಲ್ಲಿ ನಾಗರಾಜ ಎಂಬುವರಿಗೆ ಸೇರಿದ ನಾಯಿಯು ಭಾನುವಾರ ಸ್ಫೋಟಕ ಸಿಡಿದು ಮೃತಪಟ್ಟಿತ್ತು. ಅದೇ ದಿನ ಚಿಕ್ಕಕೋಗಲೂರು ಗ್ರಾಮದಲ್ಲೂ ಇಂತಹ ನಾಡಬಾಂಬ್‌ಗೆ ರುದ್ರೇಶ ಎಂಬುವರಿಗೆ ಸೇರಿದ ನಾಯಿಗೆ ಸ್ಫೋಟಕ್ಕೆ ಬಲಿಯಾಗಿತ್ತು.

ನಲ್ಕುದುರೆ ಗೋಮಾಳ ರಸ್ತೆಯಲ್ಲೂ ಇದೇ ಮಾದರಿಯಲ್ಲಿ 2 ನರಿಗಳು ಸಾವನ್ನಪ್ಪಿದ್ದವು. ಸ್ಥಳಕ್ಕೆ ಸಂತೇಬೆನ್ನೂರು ಪೊಲೀಸರು ಭೇಟಿ ನೀಡಿ, ಪರಿಶೀಲಿಸಿದರು. ಶ್ವಾನದಳ, ಸೋಕೋ ತಂಡವೂ ಸ್ಥಳ ಪರಿಶೀಲನೆ ನಡೆಸಿದೆ. ಕಚ್ಚಾ ಬಾಂಬ್ ಸ್ಫೋಟವನ್ನಿಟ್ಟು, ಮೂಕ ಪ್ರಾಣಿಗಳನ್ನು ಬಲಿ ಪಡಿಯುತ್ತಿರುವ ದುಷ್ಕರ್ಮಿಗಳ ಕೃತ್ಯಕ್ಕೆ ಆಕಸ್ಮಾತ್ ಯಾರಾದರೂ ಚಿಕ್ಕಪುಟ್ಟ ಮಕ್ಕಳು, ಹಿರಿಯರು, ವಯೋವೃದ್ಧರು ಬಲಿಯಾದರೆ ಯಾರು ಹೊಣೆ ಎಂಬ ಆತಂಕ ಜನರನ್ನು ಕಾಡುತ್ತಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾವು ತಿನ್ನಲು ಅಡ್ಡಿಯಾದ ಕಾರು ಜಖಂ ಮಾಡಿದ ಕಾಡಾನೆ
ಪಿಯು ಉಪನ್ಯಾಸಕರು ಪ್ರೌಢಶಾಲೆಗೆ ಬೋಧಿಸಲು ತಿದ್ದುಪಡಿ ವಿರೋಧಿಸಿ ಉಪನ್ಯಾಸಕರ ಪ್ರತಿಭಟನೆ