ಸಿಪಿಐ ದ್ವೇಷಕ್ಕೆ 40-50 ಜನರ ವಿರುದ್ಧ ಸುಳ್ಳು ರೇಪ್ ಕೇಸ್!

KannadaprabhaNewsNetwork |  
Published : Jun 24, 2026, 01:30 AM IST
23ಕೆಡಿವಿಜಿ5-ದಾವಣಗೆರೆಯಲ್ಲಿ ಮಂಗಳವಾರ ಚನ್ನಗಿರಿ ತಾ. ಹೊನ್ನೆಮರದಹಳ್ಳಿ ಗ್ರಾಮಸ್ಥರು ಸುದ್ದಿಗೋಷ್ಟಿಯಲ್ಲಿ ಮಾತನಾಡಿದರು. | Kannada Prabha

ಸಾರಾಂಶ

ವೈಯಕ್ತಿಕ ದ್ವೇಷದಿಂದ ಸುಮಾರು 40-50 ಜನರ ಮೇಲೆ ಅಮಾಯಕ ಮಹಿಳೆಯಿಂದ ಅತ್ಯಾಚಾರ, ಪ್ರಾಣ ಬೆದರಿಕೆ ಕೇಸ್ ದಾಖಲಿಸಿದ ಚನ್ನಗಿರಿ ವೃತ್ತ ನಿರೀಕ್ಷಕ ರವೀಶ್ ವಿರುದ್ಧ ಜಿಲ್ಲಾಧಿಕಾರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ದೂರು ನೀಡಿದ್ದರೂ ಈವರೆಗೆ ಯಾವುದೇ ಕ್ರಮ ಕೈಗೊಂಡಿಲ್ಲ. ಹೀಗೆ ಸುಳ್ಳು ಕೇಸ್ ಹಾಕುವ ಬದಲು, ನಮ್ಮೆಲ್ಲರನ್ನೂ ಸಾಮೂಹಿಕವಾಗಿ ಎನ್‌ಕೌಂಟರ್‌ ಮಾಡಿ ಎಂದು ಚನ್ನಗಿರಿ ತಾಲೂಕು ಹೊನ್ನೆಮರದಹಳ್ಳಿ ಗ್ರಾಮಸ್ಥರು ಒಕ್ಕೊರಲಿನಿಂದ ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.

- ನಮ್ಮನ್ನು ಎನ್‌ಕೌಂಟರ್ ಮಾಡಿ ಅಥವಾ ಸಾಮೂಹಿಕ ಆತ್ಮಹತ್ಯೆಗೆ ಅವಕಾಶ ಕೊಡಿ: ಒತ್ತಾಯ - ಹೊನ್ನೆಮರದಹಳ್ಳಿ ಗ್ರಾಮಸ್ಥರ ಮೇಲೆ ಚನ್ನಗಿರಿ ಸಿಪಿಐ ರವೀಶ್‌ಗೆ ಯಾಕಿಷ್ಟು ದ್ವೇಷ-ಅಸೂಯೆ?

- - -

ಕನ್ನಡಪ್ರಭ ವಾರ್ತೆ ದಾವಣಗೆರೆ

ವೈಯಕ್ತಿಕ ದ್ವೇಷದಿಂದ ಸುಮಾರು 40-50 ಜನರ ಮೇಲೆ ಅಮಾಯಕ ಮಹಿಳೆಯಿಂದ ಅತ್ಯಾಚಾರ, ಪ್ರಾಣ ಬೆದರಿಕೆ ಕೇಸ್ ದಾಖಲಿಸಿದ ಚನ್ನಗಿರಿ ವೃತ್ತ ನಿರೀಕ್ಷಕ ರವೀಶ್ ವಿರುದ್ಧ ಜಿಲ್ಲಾಧಿಕಾರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ದೂರು ನೀಡಿದ್ದರೂ ಈವರೆಗೆ ಯಾವುದೇ ಕ್ರಮ ಕೈಗೊಂಡಿಲ್ಲ. ಹೀಗೆ ಸುಳ್ಳು ಕೇಸ್ ಹಾಕುವ ಬದಲು, ನಮ್ಮೆಲ್ಲರನ್ನೂ ಸಾಮೂಹಿಕವಾಗಿ ಎನ್‌ಕೌಂಟರ್‌ ಮಾಡಿ ಎಂದು ಚನ್ನಗಿರಿ ತಾಲೂಕು ಹೊನ್ನೆಮರದಹಳ್ಳಿ ಗ್ರಾಮಸ್ಥರು ಒಕ್ಕೊರಲಿನಿಂದ ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.

ನಗರದಲ್ಲಿ ಮಂಗ‍ಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಗ್ರಾಮಸ್ಥ ಬಿ.ಆರ್.ರಘು, ಚನ್ನಗಿರಿ ಪೊಲೀಸ್ ವೃತ್ತ ನಿರೀಕ್ಷಕ ರವೀಶ್ ಗ್ರಾಮದ ಸುಮಾರು 40-50 ಜನರ ವಿರುದ್ಧ ಅತ್ಯಾಚಾರ, ಕೊಲೆ ಬೆದರಿಕೆಯಂತಹ ಸುಳ್ಳು ಕೇಸ್‌ಗಳನ್ನು ಗ್ರಾಮದ ಅಮಾಯಕ ಮಹಿಳೆ ಮುಖಾಂತರ ಕೊಡಿಸಿದ್ದಾರೆ. ಅದೇ ಮಹಿಳೆ ತಮ್ಮಿಂದ ಹೀಗೆ ಸುಳ್ಳು ಕೇಸ್ ಮಾಡಿಸಿದ್ದಾರೆಂಬುದಾಗಿ ಗ್ರಾಮಸ್ಥರ ಸಮ್ಮುಖದಲ್ಲೇ ಹೇಳುತ್ತಿದ್ದಾರೆ. ಜವಾಬ್ದಾರಿಯುತ ಅಧಿಕಾರಿ ಈ ಮಟ್ಟಕ್ಕೆ ದ್ವೇಷ ಸಾಧಿಸುವುದು ಯಾವ ಕಾರಣಕ್ಕೆ ಎಂದರು.

ಸದರಿ ಕೇಸ್‌ಗೆ ಸಂಬಂಧಿಸಿದಂತೆ ಯಾವುದೇ ವಿಚಾರಣೆ, ತನಿಖೆ ಎದುರಿಸಲು ತಾವು ಸಿದ್ಧರಿದ್ದೇವೆ. ಸಿಪಿಐ ರವೀಶ ಹಾಗೂ ಅಧಿಕಾರಿ, ಸಿಬ್ಬಂದಿ ದೌರ್ಜನ್ಯ ಎಸಗದೇ, ಕಾನೂನು ಕ್ರಮ ಕೈಗೊಳ್ಳಲಿ. ತಮ್ಮಗಳ ವಿರುದ್ಧ ಸುಳ್ಳು ಕೇಸ್ ದಾಖಲಿಸಿದ್ದರೂ ನಮಗ್ಯಾರಿಗೂ ನೋಟೀಸ್ ನೀಡಿಲ್ಲ. ಯಾವುದೇ ಸಮನ್ಸ್‌ ಅಥ‍ವಾ ನೋಟೀಸ್ ನೀಡದೇ ಜಾಮೀನು ರಹಿತ ವಾರೆಂಟ್ ಹೊರಟಿಸಿರುವ ವಿಚಾರ ನಿಷ್ಟಾವಂತ, ಪ್ರಾಮಾಣಿಕ ಪೊಲೀಸ್ ಅಧಿಕಾರಿ, ಸಿಬ್ಬಂದಿ ಮೂಲಕ ನಮ್ಮ ಗಮನಕ್ಕೆ ಬಂದಿದೆ ಎಂದು ಅವರು ತಿಳಿಸಿದರು.

ಕೇಸ್‌ಗೆ ಸಂಬಂಧಿಸಿದಂತೆ ನ್ಯಾಯಾಲಯ ಅಥವಾ ಪೊಲೀಸರಿಂದ ಕರೆ ಬಂದರೆ ಸ್ವಯಂಪ್ರೇರಿತರಾಗಿ ಸುಳ್ಳು ಕೇಸ್‌ನಲ್ಲಿ ಹೆಸರಿಸಲಾದ ಎಲ್ಲರೂ ವಿಚಾರಣೆಗೆ ಹಾಜರಾಗುತ್ತೇವೆ. ನಾವು ಕಾನೂನನ್ನು ಗೌರವಿಸುವವರು. ಎಲ್ಲಿಯೂ ಓಡಿ ಹೋಗುವವರಲ್ಲ. ಕಾನೂನು ಪ್ರಕ್ರಿಯೆಗೆ ಸಂಪೂರ್ಣ ಸಹಕಾರ ನೀಡುತ್ತೇವೆ. ಆದರೆ, ಬಂಧನ ಅಥವಾ ವಿಚಾರಣೆಯ ಸಂದರ್ಭದಲ್ಲಿ ನಮ್ಮ ಕಾನೂನುಬದ್ಧ ಹಕ್ಕುಗಳನ್ನೂ ಗೌರವಿಸಬೇಕು. ನಮ್ಮಗಳ ಪೈಕಿ ಯಾರೊಬ್ಬರ ಮೇಲಾದರೂ ಅಕ್ರಮವಾಗಿ ಒತ್ತಡ ಹೇರುವುದು, ದೌರ್ಜನ್ಯ ಎಸಗುವುದು, ಕಾನೂನುಬಾಹಿರ ಕ್ರಮ ಕೈಗೊಂಡರೆ ಸಂಬಂಧಿಸಿದ ಇಲಾಖೆ ಅಧಿಕಾರಿಗಳ ನೇರ ಹೊಣೆ ಎಂದು ಅವರು ಎಚ್ಚರಿಸಿದರು.

ನಮ್ಮ ಪ್ರಾಣಕ್ಕೆ ಯಾವುದೇ ರೀತಿಯ ಹಾನಿಯಾದರೆ ಅದಕ್ಕೆ ಚನ್ನಗಿರಿ ಪೊಲೀಸ್ ವೃತ್ತ ನಿರೀಕ್ಷಕ ರವೀಶ್ ನೇರ ಕಾರಣ. ವೃತ್ತ ನಿರೀಕ್ಷಕ ರವೀಶ್‌ರಿಂದ ಆಗುತ್ತಿರುವ ನಿರಂತರ ದೌರ್ಜನ್ಯ, ಸುಳ್ಳು ಕೇಸ್‌ಗಳು, ಜೀವ ಬೆದರಿಕೆ ವಿರುದ್ಧ ನ್ಯಾಯಕ್ಕಾಗಿ ನಾವು ಹೋರಾಟ ನಡೆಸಿದ್ದೇವೆ. ನಮಗೆ ನ್ಯಾಯ ಸಿಗದಿದ್ದರೆ ಇಡೀ ಗ್ರಾಮಸ್ಥರು ಸಾಮೂಹಿಕವಾಗಿ ನೇಣಿಗೆ ಶರಣಾಗಲು ಸಿದ್ಧರಿದ್ದೇವೆ. ಇಚ್ಛಾಮರಣಕ್ಕೆ ನ್ಯಾಯಾಲಯ ಅನುಮತಿ ನೀಡಬೇಕು. ವೃತ್ತ ನಿರೀಕ್ಷಕ ರವೀಶರಿಂದ ನಮಗೆ ಅನ್ಯಾಯ, ತೊಂದರೆಯಾಗುತ್ತಿದೆ. ನಮಗೆ ನ್ಯಾಯ ಸಿಗಬೇಕೆಂಬ ಉದ್ದೇಶದಿಂದ ಸಾರ್ವಜನಿಕವಾಗಿ ನಮ್ಮ ಧ್ವನಿ ಎತ್ತುತ್ತಿದ್ದೇವೆ ಎಂದು ಅವರು ಹೇಳಿದರು.

ಹೊನ್ನೇಮರದಹಳ್ಳಿ ಗ್ರಾಮದ ಮಹಿಳೆಯರು, ಗ್ರಾಮಸ್ಥರ ಮೇಲೆ ಚನ್ನಗಿರಿ ಪೊಲೀಸ್ ಇನ್ಸ್‌ಪೆಕ್ಟರ್ ರವೀಶ್ ಈಚೆಗೆ ನಡೆಸಿದ ದೌರ್ಜನ್ಯ ಖಂಡಿಸಿ ಈವರೆಗೆ ನೀಡಿದ ದೂರುಗಳ ಮೇಲೆ ಯಾವುದೇ ಕ್ರಮವಾಗಿಲ್ಲ. ಗ್ರಾಮಸ್ಥರು ಆರ್‌ಟಿಐ ಮೂಲಕ ಕೈಗೊಂಡ ಕ್ರಮದ ಬಗ್ಗೆ ಮಾಹಿತಿ ಕೇಳಿದಾಗ, ಗ್ರಾಮಸ್ಥರ ಮೇಲೆಯೇ ಅತ್ಯಾಚಾರ ಮತ್ತು ಕೊಲೆ ಬೆದರಿಕೆ ಪ್ರಕರಣ ದಾಖಲು ಮಾಡಿಸಿದ್ದಾರೆ ಎಂದು ಆರೋಪಿಸಿದರು.

ಕಳೆದ ಏಳೆಂಟು ತಿಂಗಳಿನಿಂದ ಸಿಪಿಐ ರವೀಶ ತಮ್ಮ ಅಧಿಕಾರವನ್ನು ನಿರಂತರ ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆ. ಸಿಪಿಐ ರವೀಶ್ ಆರೋಪ ಮಾಡಿರುವ 25 ಜನರಲ್ಲಿ ಒಂದೇ ಕುಟುಂಬದ ಅಪ್ಪ, ಮಕ್ಕಳು ಇದ್ದಾರೆ. 60-70 ವರ್ಷದ ವಯಸ್ಸಿನವರೂ ಇದ್ದಾರೆ. ಮದುವೆ ನಿಶ್ಚಯವಾದ ಯುವಕರಿದ್ದಾರೆ. 40-45 ವರ್ಷದ ಮಹಿಳೆಯರೂ ಸೇರಿದ್ದಾರೆ. ಮುಗ್ದರ ಮೇಲಿನ ದೌರ್ಜನ್ಯಕ್ಕೆ ಕ್ರಾಂತಿಯೊಂದೇ ಮಾರ್ಗವಾಗಿದೆ. ವ್ಯವಸ್ಥೆ ಬದಲಾಗಬೇಕೆಂದರೆ ಬಲಿದಾನ ಅನಿವಾರ್ಯವೆಂದು ನಾವು ಭಾವಿಸಿದ್ದೇವೆ. ಹಾಗಾಗಿ, ನಾವು ನ್ಯಾಯಾಲಯದಿಂದ ಯಾವುದೇ ಜಾಮೀನು ಪಡೆಯಬಾರದೆಂದು ನಿರ್ಧರಿಸಿದ್ದೇವೆ ಎಂದು ತಿಳಿಸಿದರು.

ಹೊನ್ನೇಮರದಹಳ್ಳಿ ವಾಸಿಗಳಾದ ಎಸ್.ಆರ್. ಶಾಂತವೀರಪ್ಪ, ಎಲ್.ಎಸ್.ಚಂದ್ರಪ್ಪ, ಜಿ.ಬಿ.ರುದ್ರೇಶ, ಬಿ.ಜೆ.ಶಿವರಾಜ, ಬಿ.ಆರ್. ವೀರಭದ್ರಪ್ಪ, ಜಿ.ಎಸ್. ರವಿ, ಬಿ.ಟಿ.ಮಧು, ಎನ್.ಕೆ. ಮಹೇಂದ್ರ, ಜೆ.ಆರ್.ಚೇತನ್, ಎಚ್.ವಿ.ರಂಗನಾಥ, ಎಲ್.ಎಸ್.ಸಿದ್ದೇಶ, ಖಾದರ್, ಆರ್.ಎಂ.ಸಂಜು, ಎ.ಸಿ.ಸಾಗರ್, ಸಂಜಯ್ ಇತರರು ಇದ್ದರು.

- - -

(ಬಾಕ್ಸ್‌) * ನಾವೆಲ್ಲರೂ ಅನುಮತಿ ಪಡೆದು ಸಾವಿಗೆ ಶರಣಾಗ್ತೇವೆ ರಾಷ್ಟ್ರಪತಿ, ರಾಜ್ಯಪಾಲರು, ಸುಪ್ರೀಂ ಕೋರ್ಟ್‌, ಹೈಕೋರ್ಟ್, ಜಿಲ್ಲಾ, ತಾಲೂಕು ನ್ಯಾಯಮೂರ್ತಿಗಳು, ಪ್ರಧಾನಿ, ಸಿಎಂ, ರಾಜ್ಯ ಪೊಲೀಸ್ ಮಹಾ ನಿರ್ದೇಶಕರು, ಮಾನವ ಹಕ್ಕುಗಳ ಆಯೋಗ, ರಾಷ್ಟ್ರೀಯ ಮಹಿಳಾ ಆಯೋಗ ಸೇರಿದಂತೆ ಸಂಬಂಧಿಸಿದ ಇತರೆ ಇಲಾಖೆಗೆ ಪತ್ರ ಬರೆಯುತ್ತಿದ್ದೇವೆ. ನಮ್ಮ ಪ್ರಕರಣದ ಕಾನೂನಾತ್ಮಕ ಪ್ರಕ್ರಿಯೆಗೆ ಸಾರ್ವಜನಿಕ ಹಣ ವ್ಯಯಿಸುವುದು ಬೇಡ, ನ್ಯಾಯಾಲಯದ ಸಮಯ ಹಾಳು ಮಾಡುವುದೂ ಬೇಡ. ಸುಳ್ಳು ಕೇಸಿನಿಂದಾಗಿ ನಮ್ಮನ್ನು ಜೈಲಿನಲ್ಲಿಟ್ಟು ಊಟ ಹಾಕುವುದೂ ಬೇಡ. ಬದಲಿಗೆ ಈ ಹಣವನ್ನು ದೌರ್ಜನ್ಯಕ್ಕೆ ಒಳಗಾಗುವ ಹೆಣ್ಣುಮಕ್ಕಳ ಭವಿಷ್ಯಕ್ಕೆ ಬಳಸಲಿ. ನಮ್ಮ ಆಸ್ತಿಗಳನ್ನೂ ಸರ್ಕಾರದ ಹೆಸರಿಗೆ ಬರೆದು, ನಾವೆಲ್ಲರೂ ಅನುಮತಿ ಪಡೆದು ಸಾವಿಗೆ ಶರಣಾಗಲು ನಿರ್ಧರಿಸಿದ್ದೇವೆ ಎಂದು ಯುವಕ ಬಿ.ಆರ್.ರಘು ಹೇಳಿದರು.

- - -

-23ಕೆಡಿವಿಜಿ5: ದಾವಣಗೆರೆಯಲ್ಲಿ ಮಂಗಳವಾರ ಚನ್ನಗಿರಿ ತಾ. ಹೊನ್ನೆಮರದಹಳ್ಳಿ ಗ್ರಾಮಸ್ಥರು ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾವು ತಿನ್ನಲು ಅಡ್ಡಿಯಾದ ಕಾರು ಜಖಂ ಮಾಡಿದ ಕಾಡಾನೆ
ಪಿಯು ಉಪನ್ಯಾಸಕರು ಪ್ರೌಢಶಾಲೆಗೆ ಬೋಧಿಸಲು ತಿದ್ದುಪಡಿ ವಿರೋಧಿಸಿ ಉಪನ್ಯಾಸಕರ ಪ್ರತಿಭಟನೆ