ಕನ್ನಡಪ್ರಭ ವಾರ್ತೆ ಯಮಕನಮರಡಿ
2024ರ, ಏಪ್ರಿಲ್ನಲ್ಲಿ ಹುಕ್ಕೇರಿ ತಾಲೂಕಿನ ರಾಮಗೋನಟ್ಟಿ (ಹಟ್ಟಿಆಲೂರ)ಯ ಮಹಾಂತೇಶ ಭೀಮಪ್ಪಾ ಸುಟಗನ್ನವರ (38) ಎಂಬಾತ ಆತನ ಪತ್ನಿಯ ತವರೂರು ಹಟ್ಟಿ ಆಲೂರಲ್ಲಿ ರಾತ್ರಿ ಮಲಗಿದಾಗ ಏಕಾಏಕಿ ಅಸುನೀಗಿದ್ದ. ಮದ್ಯ ಸೇವಿಸಿ ಆತ ಮೃತಪಟ್ಟಿದ್ದಾನೆಂದು ಆತನ ಪತ್ನಿ ಮಾಲಾ ಎಲ್ಲರನ್ನು ನಂಬಿಸಿ ಅಂತ್ಯಕ್ರಿಯೆ ಕೂಡ ನಡೆಸಿದ್ದಳು. ಆದರೆ, ಇದರಿಂದ ಅನುಮಾನಗೊಂಡ ಮೃತ ಮಹಾಂತೇಶನ ಅಣ್ಣ ಕಲ್ಲಪ್ಪಾ ಭೀಮಪ್ಪಾ ಸುಟಗನ್ನವರ ಹುಕ್ಕೇರಿ ಠಾಣೆಯಲ್ಲಿ 2025, ಜ.10ರಂದು ಆತನ ಪತ್ನಿ ಮತ್ತು ಇತರರ ಮೇಲೆ ಸಂಶಯಗೊಂಡು ದೂರು ನೀಡಿದ್ದ. ಈ ದೂರಿನ ಆಧಾರದ ಮೇಲೆ ಮೃತಪಟ್ಟ ಮಹಾಂತೇಶನ ಪತ್ನಿ ಮಾಲಾಳನ್ನು ಜ.11ರಂದೇ ಪೊಲೀಸರು ವಿಚಾರಣೆ ನಡೆಸಿದ್ದಾರೆ. ಆಗ ಗಂಡನ ಕಿರುಕುಳಕ್ಕೆ ಬೇಸತ್ತು ಹಟ್ಟಿಆಲೂರಿನ ಆಕಾಶ ಬಸಲಿಂಗಪ್ಪ ಗೋಕಾವಿ ಎಂಬಾತನಿಗೆ ₹70,000 ನೀಡಿ ಕೊಲೆಗೆ ಸುಪಾರಿ ನೀಡಿದ್ದೇನೆ ಎಂದು ಸತ್ಯ ಒಪ್ಪಿಕೊಂಡಿದ್ದಾಳೆ. ಅಲ್ಲದೆ, ಮದ್ಯ ಸೇವಿಸಿ ನಶೆಯಲ್ಲಿ ಅಸುನೀಗಿದ್ದಾನೆಂದು ಜನರನ್ನು ನಂಬಿಸಿ ಹುಕ್ಕೇರಿಯ ರುದ್ರಭೂಮಿಯಲ್ಲಿ ಶವಸಂಸ್ಕಾರ ಮಾಡಿದ್ದಾಗಿ ಒಪ್ಪಿಕೊಂಡಿದ್ದಾಳೆ.
ಪ್ರಮುಖ ಆರೋಪಿಯಿಂದ ಹೊರಬಿತ್ತು ಮತ್ತೊಂದು ಕೃತ್ಯ:ಮಹಾಂತೇಶ ಸುಟಗನ್ನವರ ಕೊಲೆಯ ಪ್ರಮುಖ ಆರೋಪಿ ಆಕಾಶ ಗೋಕಾವಿಯನ್ನು ಜ.11ರಂದು ವಿಚಾರಣೆಗೆ ಒಳಪಡಿಸಿದಾಗ ಮತ್ತೊಂದು ಕೊಲೆಯ ಕೃತ್ಯ ಬಯಲಾಗಿದೆ. ತಾನು ಮತ್ತು ಸ್ನೇಹಿತರಾದ ರಮೇಶ ಲಗಮಪ್ಪಾ ಮಾಳಗಿ, ಪಾಶ್ಚಾಪೂರದ ಅಪಣ್ಣಾ ಮುಶಪ್ಪಾ ನಾಯಿಕ ಜತೆಗೂಡಿ ಹಣದ ಆಸೆಗಾಗಿ 2022ರಲ್ಲಿ ಹಟ್ಟಿ ಆಲೂರದ ನಾಗಪ್ಪಾ ವಿಠ್ಠಲ ಮರೆಪ್ಪಗೋಳ (34) ಎಂಬಾತನ ಹತ್ಯೆ ಮಾಡಿರುವ ಕೃತ್ಯ ಕೂಡ ಬಯಲಾಗಿದೆ.
ತನ್ನ ಸಹೋದರರನ್ನೇ ಕೊಂದ ದುರುಳ
ಎರಡನೇ ಪ್ರಕರಣದ ಆರೋಪಿ ರಮೇಶ ಲಗಮಪ್ಪಾ ಮಾಳಗಿಯು ತನ್ನ ಅಣ್ಣನನ್ನೇ ಹತ್ಯೆ ಮಾಡಿರುವ ಕೃತ್ಯ ಬಯಲಾಗಿದೆ.2023ರಲ್ಲಿ ನಡೆದ ಈ ಕೃತ್ಯ ಈಗ ಬೆಳಕಿಗೆ ಬಂದಿದೆ. ಆರೋಪಿ ರಮೇಶ ಲಗಮಪ್ಪಾ ಮಾಳಗಿ ತನ್ನ ಅಣ್ಣನಾದ ವಿಠ್ಠಲ ಮಾಳಗಿ ಎಂಬಾತನನ್ನು ಸ್ನೇಹಿತರೊಟ್ಟಿಗೆ ಸೇರಿ ಹತ್ಯೆ ಮಾಡಿದ್ದಾನೆ. ವಿಠ್ಠಲ ಮದ್ಯ ಚಟಕ್ಕೆ ಬಿದ್ದು ತನ್ನ ಜಮೀನನ್ನು ₹22 ಲಕ್ಷಕ್ಕೆ ಅಡವಿಟ್ಟಿದ್ದ. ಇದರಿಂದ ನನ್ನ ಮುಂದಿನ ಜೀವನ ಹಾಳು ಮಾಡುತ್ತಾನೆಂದು ತನ್ನ ಗೆಳೆಯರಾದ ಆಕಾಸ ಬಸಲಿಂಗಪ್ಪಾ ಗೋಕಾವಿ, ಅಪ್ಪಣ್ಣಾ ಜತೆಗೆ ಸಂಚು ರೂಪಿಸಿದೆವು.
ಮೃತ ವಿಠ್ಠಲನನ್ನು ಪಾಶ್ಚಾಪೂರದ ಕುಂದರಗಿಯ ಗುಡ್ಡಕ್ಕೆ ರಾತ್ರಿವೇಳೆ ಕರೆದುಕೊಂಡು ಹೋಗಿ ಕಂಠಪೂರ್ತಿ ಮದ್ಯ ಕುಡಿಸಿ, ಕುತ್ತಿಗೆಗೆ ಹಗ್ಗ ಬಿಗಿದು ಕೊಲೆ ಮಾಡಿದ್ದಾರೆ. ನಂತರ ಹೆಣವನ್ನು ಮೋಟಾರ ಸೈಕಲ್ ಮೇಲೆ ತೆಗೆದುಕೊಂಡು ಬಂದು ಅವರ ಮನೆಯ ಹತ್ತಿರ ರಸ್ತೆಯಲ್ಲಿ ದ್ವಿಚಕ್ರ ವಾಹನದ ಸಮೇತ ಕೆಡವಿ ಹೋಗಿದ್ದಾರೆ. ನಂತರ ಇದು ಅಪಘಾತವಾಗಿದೆ ಎಂದು ಬಿಂಬಿಸಿದ್ದರು. ಜತೆಗೆ ಪೊಲೀಸ್ ಕೇಸ್ ಕೂಡ ದಾಖಲಿಸದೇ ತಮ್ಮ ಜಮೀನಿನಲ್ಲೇ ಸುಟ್ಟಿದ್ದರು. ಅಲ್ಲದೆ, ಪುರಾವೆಗಳನ್ನು ನಾಶಪಡಿಸಿದ್ದರು. ಹೀಗಾಗಿ ಆರೋಪಿ ಆಕಾಶನನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.