ಮಂಗಳೂರು : ಗಣೇಶ ಚತುರ್ಥಿ, ದಸರಾ, ದೀಪಾವಳಿ ಹಬ್ಬಗಳ ಸಂದರ್ಭದಲ್ಲಿ ಪ್ರಯಾಣಿಕರ ಹೆಚ್ಚುವರಿ ದಟ್ಟಣೆ ನಿವಾರಿಸಲು ನೈಋತ್ಯ ರೈಲ್ವೆ ಎಸ್ಎಸ್ಎಸ್ ಹುಬ್ಬಳ್ಳಿ ಮತ್ತು ಮಂಗಳೂರು ಸೆಂಟ್ರಲ್ ನಡುವೆ ಹಾಗೂ ಬೆಂಗಳೂರು-ಮಡ್ಗಾಂವ್ ಜಂಕ್ಷನ್-ಸರ್ ಎಂ.ವಿಶ್ವೇಶ್ವರಯ್ಯ ಟರ್ಮಿನಲ್ ಬೆಂಗಳೂರು ನಡುವೆ ತಲಾ ಒಂದು ಟ್ರಿಪ್ ವಿಶೇಷ ರೈಲು ಸಂಚಾರ ಪ್ರಾರಂಭಿಸಲಿದೆ.
ರೈಲು ಸಂಖ್ಯೆ 07341 ಎಸ್ಎಸ್ಎಸ್ ಹುಬ್ಬಳ್ಳಿ-ಮಂಗಳೂರು ಸೆಂಟ್ರಲ್ ಎಕ್ಸ್ಪ್ರೆಸ್ ವಿಶೇಷ ರೈಲು ಆಗಸ್ಟ್ 26 ರಂದು ಸಂಜೆ 4 ಗಂಟೆಗೆ ಎಸ್ಎಸ್ಎಸ್ ಹುಬ್ಬಳ್ಳಿಯಿಂದ ಹೊರಟು ಮರುದಿನ ಬೆಳಗ್ಗೆ 11.45ಕ್ಕೆ ಮಂಗಳೂರು ಸೆಂಟ್ರಲ್ ತಲುಪಲಿದೆ. ರೈಲು ಸಂಖ್ಯೆ 07342 ಆಗಸ್ಟ್ 27 ರಂದು ಮಧ್ಯಾಹ್ನ 2.15ಕ್ಕೆ ಮಂಗಳೂರು ಸೆಂಟ್ರಲ್ನಿಂದ ಹೊರಟು ಮರುದಿನ ಬೆಳಗ್ಗೆ 9.45ಕ್ಕೆ ಎಸ್ಎಸ್ಎಸ್ ಹುಬ್ಬಳ್ಳಿ ತಲುಪಲಿದೆ. ಎಸ್ಎಸ್ಎಸ್ ಹುಬ್ಬಳ್ಳಿ-ಮಂಗಳೂರು ಸೆಂಟ್ರಲ್ ಎಕ್ಸ್ಪ್ರೆಸ್ ರೈಲು ಎಸ್ಎಂಎಂ ಹಾವೇರಿ, ಹರಿಹರ, ದಾವಣಗೆರೆ, ಬೀರೂರು, ಅರಸೀಕೆರೆ, ತುಮಕೂರು, ಯಶವಂತಪುರ, ಕುಣಿಗಲ್, ಚನ್ನರಾಯಪಟ್ಟಣ, ಹಾಸನ, ಸಕಲೇಶಪುರ, ಸುಬ್ರಹ್ಮಣ್ಯ ರಸ್ತೆ, ಕಬಕ ಪುತ್ತೂರು ಮತ್ತು ಬಂಟ್ವಾಳ ನಿಲ್ದಾಣದಲ್ಲಿ ನಿಲುಗಡೆ ಇರಲಿದೆ.
ಮಡ್ಗಾಂವ್ ಜಂಕ್ಷನ್-ಬೆಂಗಳೂರು ರೈಲು:
ರೈಲು ನಂಬರ್ 06569 ಸರ್ ಎಂ.ವಿಶ್ವೇಶ್ವರಯ್ಯ ಟರ್ಮಿನಲ್ ಬೆಂಗಳೂರು-ಮಡ್ಗಾಂವ್ ಜಂಕ್ಷನ್ ವಿಶೇಷ ರೈಲು ಆ. 26ರಂದು ಮಧ್ಯಾಹ್ನ 1 ಗಂಟೆಗೆ ಬೆಂಗಳೂರಿನಿಂದ ಹೊರಟು ಮರುದಿನ ಬೆಳಗ್ಗೆ 5.30ಕ್ಕೆ ಮಡ್ಗಾಂವ್ ಜಂಕ್ಷನ್ ತಲುಪಲಿದೆ. ನಂಬರ್ 06570 ಮಡ್ಗಾಂವ್ ಜಂಕ್ಷನ್-ಸರ್ ಎಂ.ವಿಶ್ವೇಶ್ವರಯ್ಯ ಟರ್ಮಿನಲ್ ಬೆಂಗಳೂರು ವಿಶೇಷ ರೈಲು ಆ. 27 ರಂದು ಮಡ್ಗಾಂವ್ ಜಂಕ್ಷನ್ನಿಂದ ಬೆಳಗ್ಗೆ 6.30 ಗಂಟೆಗೆ ಹೊರಟು ರಾತ್ರಿ 11.40ಕ್ಕೆ ಬೆಂಗಳೂರು ತಲುಪಲಿದೆ.
ಈ ರೈಲು ಚಿಕ್ಕಬಾಣಾವರ, ಕುಣಿಗಲ್, ಚನ್ನರಾಯಪಟ್ಟಣ, ಹಾಸನ, ಸಕಲೇಶಪುರ, ಸುಬ್ರಹ್ಮಣ್ಯ ಮಾರ್ಗ, ಕಬಕ ಪುತ್ತೂರು, ಬಂಟ್ವಾಳ, ಸುರತ್ಕಲ್, ಮೂಲ್ಕಿ, ಉಡುಪಿ, ಕುಂದಾಪುರ, ಮೂಕಾಂಬಿಕಾ ರೋಡ್, ಬೈಂದೂರು, ಭಟ್ಕಳ್, ಮುರುಡೇಶ್ವರ, ಹೊನ್ನಾವರ, ಕುಮಟಾ, ಗೋಕರ್ಣರೋಡ್, ಅಂಕೋಲ ಹಾಗೂ ಕಾರವಾರದಲ್ಲಿ ನಿಲುಗಡೆ ಹೊಂದಲಿದೆ. ಈ ರೈಲು ಮಂಗಳೂರು ಜಂಕ್ಷನ್ ಅಥವಾ ಸೆಂಟ್ರಲ್ ಪ್ರವೇಶಿಸದೆ ನೇರವಾಗಿ ಪಡೀಲ್ ಮೂಲಕ ಸಂಚರಿಸಲಿದೆ.
ಈ ರೈಲಿಗೆ ಆ.22ರಿಂದ ಮುಂಗಡ ಬುಕ್ಕಿಂಗ್ ಲಭ್ಯವಿರಲಿದೆ ಎಂದು ನೈರುತ್ಯ ರೈಲ್ವೆ ಪ್ರಕಟಣೆ ತಿಳಿಸಿದೆ.
ದ.ಕ. ಸಂಸದ ಕ್ಯಾ.ಬ್ರಿಜೇಶ್ ಚೌಟ ಹಾಗೂ ಉಡುಪಿ-ಚಿಕ್ಕಮಗಳೂರು ಸಂಸದ ಕೋಟ ಶ್ರೀನಿವಾಸ ಪೂಜಾರಿ ಅವರು ವಿಶೇಷ ರೈಲು ಸಂಚಾರಕ್ಕಾಗಿ ಕೇಂದ್ರ ರೈಲ್ವೆ ಸಚಿವಾಲಯಕ್ಕೆ ಪತ್ರ ಬರೆದು ಆಗ್ರಹಿಸಿದ್ದರು. ಈ ಬಗ್ಗೆ ಕರಾವಳಿಯ ರೈಲು ಸಂಘಟನೆಗಳು ಸಂಸದರಿಗೆ ಮನವಿ ಸಲ್ಲಿಸಿದ್ದವು.