ರಾಮನಗರದಲ್ಲಿ ಯುಜಿಡಿ ವ್ಯವಸ್ಥೆಗೆ 200 ಕೋಟಿ ಅಗತ್ಯ

KannadaprabhaNewsNetwork |  
Published : Sep 24, 2025, 01:00 AM IST
23ಕೆಆರ್ ಎಂಎನ್ 5.ಜೆಪಿಜಿರಾಮನಗರ ನಗರಸಭೆ ಸಭಾಂಗಣದಲ್ಲಿ ಕೆ.ಶೇಷಾದ್ರಿರವರು ಸ್ವತ್ತಿನ ಮಾಲೀಕರಿಗೆ ಇ ಖಾತೆ ವಿತರಿಸಿದರು. | Kannada Prabha

ಸಾರಾಂಶ

ರಾಮನಗರ: ನಗರದಲ್ಲಿ ಹಳೇ ಬಡಾವಣೆಗಳನ್ನು ಹೊರತು ಪಡಿಸಿದರೆ ಹೊಸ ಬಡಾವಣೆಗಳಲ್ಲಿ ಯುಜಿಡಿ ಸಮಸ್ಯೆಗಳಿದೆ. ಸಮರ್ಪಕವಾಗಿ ಯುಜಿಡಿ ವ್ಯವಸ್ಥೆ ಕಲ್ಪಿಸಲು 200 ಕೋಟಿ ರುಪಾಯಿ ಅಗತ್ಯವಿದ್ದು, ಸರ್ಕಾರದ ಗಮನ ಸೆಳೆಯುವ ಪ್ರಯತ್ನ ಮಾಡಲಾಗಿದೆ ಎಂದು ನಗರಸಭೆ ಅಧ್ಯಕ್ಷ ಕೆ.ಶೇಷಾದ್ರಿ ತಿಳಿಸಿದರು.

ರಾಮನಗರ: ನಗರದಲ್ಲಿ ಹಳೇ ಬಡಾವಣೆಗಳನ್ನು ಹೊರತು ಪಡಿಸಿದರೆ ಹೊಸ ಬಡಾವಣೆಗಳಲ್ಲಿ ಯುಜಿಡಿ ಸಮಸ್ಯೆಗಳಿದೆ. ಸಮರ್ಪಕವಾಗಿ ಯುಜಿಡಿ ವ್ಯವಸ್ಥೆ ಕಲ್ಪಿಸಲು 200 ಕೋಟಿ ರುಪಾಯಿ ಅಗತ್ಯವಿದ್ದು, ಸರ್ಕಾರದ ಗಮನ ಸೆಳೆಯುವ ಪ್ರಯತ್ನ ಮಾಡಲಾಗಿದೆ ಎಂದು ನಗರಸಭೆ ಅಧ್ಯಕ್ಷ ಕೆ.ಶೇಷಾದ್ರಿ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 1991-92ನೇ ಸಾಲಿನಲ್ಲಿ ಯುಜಿಡಿ ಕಾಮಗಾರಿ ನಡೆದಿತ್ತು. ತದ ನಂತರ ಹೊಸ ಹೊಸ ಬಡಾವಣೆಗಳು ತಲೆ ಎತ್ತಿ ನಗರ ವಿಶಾಲವಾಗಿ ಬೆಳೆಯುತ್ತಿದೆ. ಹೀಗೆ ತಲೆ ಎತ್ತಿರುವ ಕೆಲವು ಬಡಾವಣೆಗಳು ಸೇರಿದಂತೆ ಶೇಕಡ 45ರಷ್ಟು ಯುಜಿಡಿ ವ್ಯವಸ್ಥೆಯೇ ಇಲ್ಲ. ಯುಜಿಡಿ ಸಮರ್ಪಕವಾಗಿ ಇಲ್ಲದಿರುವ ಕಾರಣ ನಗರಸಭೆ ಮೇಲೆ ಒತ್ತಡ ಹೆಚ್ಚಾಗಿದೆ. ಈ ಭಾಗಗಳಲ್ಲಿ ಯುಜಿಡಿ ಕಾಮಗಾರಿಗೆ 200 ಕೋಟಿ ರುಪಾಯಿಗೂ ಹೆಚ್ಚಿನ ಹಣ ಬೇಕಾಗಿದೆ. ಹೀಗಾಗಿ ಸ್ಥಳೀಯ ಶಾಸಕರಾದ ಇಕ್ಬಾಲ್ ಹುಸೇನ್ , ಜಿಲ್ಲಾ ಉಸ್ತುವಾರಿ ಸಚಿವ ರಾಮಲಿಂಗಾರೆಡ್ಡಿ ಹಾಗೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ಗಮನಕ್ಕೆ ಈ ವಿಚಾರ ತರಲಾಗಿದೆ ಎಂದು ಹೇಳಿದರು.

ನಗರದಲ್ಲಿ ಯುಐಡಿಎಫ್ ಯೋಜನೆಯಡಿ ಶೇಕಡ 70ರಷ್ಟು ರಸ್ತೆಗಳು ಅಭಿವೃದ್ದಿಯಾಗಿವೆ. ಉಳಿದ ಕೆಲವು ರಸ್ತೆಗಳಲ್ಲಿ ಗುಂಡಿಗಳು ನಿರ್ಮಾಣವಾಗಿವೆ. ಹೀಗಾಗಿ ತಾವು, ನಗರಸಭಾ ಸದಸ್ಯರು ಮತ್ತು ಅಧಿಕಾರಿಗಳು ನಗರ ಪ್ರದಕ್ಷಿಣೆ ನಡೆಸಿ ವೀಕ್ಷಿಸಿದ್ದೇವೆ. ತುರ್ತಾಗಿ ವ್ಯವಸ್ಥೆಗಳನ್ನು ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದ್ದೇನೆ ಎಂದರು.

ಕೆಲವು ಬಡಾವಣೆಗಳಲ್ಲಿ ರಸ್ತೆ ಅಭಿವೃಧ್ದಿಗಾಗಿಯೇ 100 ಕೋಟಿ ರುಪಾಯಿ ಅವಶ್ಯಕತೆ ಇದೆ. ಇನ್ನು ಭಕ್ಷಿ ಕೆರೆ ಒಡೆದು ಸೀರಳ್ಳದಲ್ಲಿ ಪ್ರವಾಹ ಉಂಟಾಗಿ, ಆಸ್ತಿ ಪಾಸ್ತಿ ನಷ್ಟವಾಗಿತ್ತು. ಇದೀಗ

ಸೀರಳ್ಳದ ತಡೆಗೋಡೆ ನಿರ್ಮಾಣ ಕಾರ್ಯ ಪ್ರಗತಿಯಲ್ಲಿದ್ದು, ಶೇ.70 ರಷ್ಟು ಕಾಮಗಾರಿ ಪೂರ್ಣಗೊಂಡಿದೆ ಎಂದು ಹೇಳಿದರು.

6 ಸಾವಿರ ಇ ಖಾತೆ ವಿತರಣೆ:

ಇ-ಖಾತಾ ಸೃಜನೆಗೆ ತಾಂತ್ರಿಕ ಕಾರಣಗಳು, ರಜೆಗಳ ನಡುವೆ ಪೌರಾಯುಕ್ತರು ಮತ್ತು ನಗರಸಭೆಯ ಸಿಬ್ಬಂದಿ ಕೆಲಸದ ಸಮಯವನ್ನು ಮೀರಿ ಕೆಲಸ ಮಾಡುತ್ತಿದ್ದಾರೆ. ನಾಗರೀಕರಿಗೆ ತಮ್ಮ ಆಸ್ತಿಯ ಹಕ್ಕು ದೊರಕಿಸಿಕೊಡುವ ಉದ್ದೇಶದಿಂದ ನಾವೆಲ್ಲರು ಶ್ರಮಿಸುತ್ತಿದ್ದೇವೆ ಎಂದು ತಿಳಿಸಿದರು.

ಇಲ್ಲಿಯವರೆಗೆ ಸುಮಾರು 6 ಸಾವಿರಕ್ಕೂ ಹೆಚ್ಚು ಇ-ಖಾತಾಗಳನ್ನು ಸೃಜಿಸಿ ಆಸ್ತಿ ಮಾಲೀಕರಿಗೆ ನೀಡಲಾಗಿದೆ. ತಾಂತ್ರಿಕ ಕಾರಣಗಳಿಂದಾಗಿ ಕೆಲವೊಮ್ಮೆ ವಿಳಂಬವಾಗಿದೆ. ಆದರೆ, ನಗರಸಭೆಯ ಸಿಬ್ಬಂದಿ ತಮ್ಮ ರಜೆಗಳನ್ನು ಬಳಸಿಕೊಳ್ಳದೆ, ಕಚೇರಿ ವೇಳೆಯನ್ನು ಮೀರಿ ಶ್ರಮಿಸುತ್ತಿರುವುದರಿಂದ ಇ-ಖಾತಾಗಳು ಆಸ್ತಿ ಮಾಲೀಕರಿಗೆ ದೊರೆಯುತ್ತಿದೆ ಎಂದರು.

ಆನ್‌ಲೈನ್ ಮೂಲಕ ಅರ್ಜಿಗಳು ಸಲ್ಲಕೆಯಾಗಬೇಕು ಎಂಬ ನಿಯಮ ಜಾರಿಯಾದ ನಂತರ ಅಧಿಕೃತ ಮತ್ತು ಅನಧಿಕೃತ ಆಸ್ತಿಗಳ ಖಾತೆಗಳಿಗಾಗಿ ಅರ್ಜಿ ಸಲ್ಲಿಕೆಯ ಸಂಖ್ಯೆಯೂ ಏರಿಕೆಯಾಗಿದೆ.

ಅಗತ್ಯ ದಾಖಲೆಗಳನ್ನು ಸಲ್ಲಿಸಿ ಇ-ಖಾತಾಗಳನ್ನು ಪಡೆಯಿರಿ ಎಂಬ ಅಭಿಯಾನವನ್ನು ನಗರದಲ್ಲಿ ಆರಂಭಿಸಲಾಗಿತ್ತು. ಅರ್ಜಿಗಳ ಸಂಖ್ಯೆ ಹೆಚ್ಚಾಗುತ್ತಿದ್ದು, ಅವೆಲ್ಲವೂ ವಿಲೇವಾರಿ ಆಗಬೇಕಾಗಿದೆ. ಕೆಲವು ವಾರ್ಡುಗಳಲ್ಲಿ ಈ ಅಭಿಯಾನ ಶೀಘ್ರದಲ್ಲಿಯೇ ಆರಂಭಿಸಲಾಗುವುದು ಎಂದು ಕೆ.ಶೇಷಾದ್ರಿ ತಿಳಿಸಿದರು.

ಈ ಸಂದರ್ಭದಲ್ಲಿ 200ಕ್ಕೂ ಹೆಚ್ಚು ಇ-ಖಾತಾ ಪ್ರಮಾಣ ಪತ್ರಗಳನ್ನು ಆಸ್ತಿ ಮಾಲೀಕರಿಗೆ ವಿತರಿಸಲಾಯಿತು.

ಸುದ್ದಿಗೋಷ್ಠಿಯಲ್ಲಿ ನಗರಸಭೆಯ ಉಪಾಧ್ಯಕ್ಷೆ ಆಯಿಷಾಬಾನು, ಆಯುಕ್ತರಾದ ಡಾ.ಜಯಣ್ಣ, ನಗರಸಭೆ ಸದಸ್ಯರಾದ ಬಿ.ಸಿ.ಪಾರ್ವತಮ್ಮ, ಮೊಯಿನ್ ಖುರೇಷಿ, ದೌಲತ್ ಷರೀಫ್, ಗೋವಿಂದರಾಜು, ಗಿರಿಜಮ್ಮ , ಆರ್‌ಒ ಕಿರಣ್ ಇದ್ದರು.

23ಕೆಆರ್ ಎಂಎನ್ 5.ಜೆಪಿಜಿ

ರಾಮನಗರ ನಗರಸಭೆ ಸಭಾಂಗಣದಲ್ಲಿ ಕೆ.ಶೇಷಾದ್ರಿ ಸ್ವತ್ತಿನ ಮಾಲೀಕರಿಗೆ ಇ ಖಾತೆ ವಿತರಿಸಿದರು.

PREV

Recommended Stories

ಪರ್ವ ಅಂತ್ಯ - ಎಸ್.ಎಲ್. ಭೈರಪ್ಪ ನಿಧನ । ಬೆಂಗಳೂರಲ್ಲಿ ಮಧ್ಯಾಹ್ನವರೆಗೆ ಅಂತಿಮ ದರ್ಶನ
ಬ್ಯಾಂಕರ್‌ಗಳು ಅಗತ್ಯ ಭದ್ರತಾ ವ್ಯವಸ್ಥೆ ಕೈಗೊಳ್ಳಿ