ಉಡುಪಿ: ರಾಜ್ಯದ ಹೆಸರಾಂತ ಮಲ್ಪೆ ಬಂದರಿನಲ್ಲಿ ಮೀನುಗಾರಿಕೆಯಲ್ಲಿ ತೊಡಗಿರುವ ಕಾರ್ಮಿಕರ ಮೇಲೆ ನಿರಂತರವಾಗಿ ಹಲ್ಲೆ, ದಬ್ಬಾಳಿಕೆ, ದೌರ್ಜನ್ಯಗಳು ನಡೆಯುತ್ತಿದ್ದು ಇದನ್ನು ತಡೆಗಟ್ಟಲು ಮಲ್ಪೆ ಬಂದರಿನಲ್ಲಿ ಪೋಲಿಸ್ ಔಟ್ ಪೋಸ್ಟ್ ನಿರ್ಮಿಸಲು ಒತ್ತಾಯಿಸಿ ನಗರದ ಅಜ್ಜರಕಾಡು ಹುತಾತ್ಮ ಯೋಧರ ಸ್ಮಾರಕ ಬಳಿ ಪ್ರತಿಭಟನೆ ನಡೆಸಿ ನಂತರ ಅಪರ ಜಿಲ್ಲಾಧಿಕಾರಿ ಜೊತೆ ಮಲ್ಪೆಯಲ್ಲಿ ನಡೆದ ಘಟನೆ ಕುರಿತು ಚರ್ಚಿಸಿ ಮನವಿ ನೀಡಲಾಯಿತು.

ದಲಿತ ಸಂಘರ್ಷ ಸಮಿತಿ ರಾಜ್ಯ ಸಂಚಾಲಕಾ ಸುಂದರ್ ಮಾಸ್ಟರ್ ಮಾತನಾಡಿ, ಮಲ್ಪೆ ಪ್ರಾಕೃತಿಕ ಬಂದರಾಗಿದ್ದು, ಇಲ್ಲಿ ಸರ್ಕಾರದ ಕೊಟ್ಯಾಂತರ ರು. ಅನುದಾನದಲ್ಲಿ ಅಭಿವೃದ್ಧಿಗಳನ್ನು ನಡೆಸಲಾಗಿದೆ. ಆದ್ದರಿಂದ ಇದು ಸಾರ್ವಜನಿಕರ ಬಂದರಾಗಿದ್ದು, ಎಲ್ಲಾ ಜಾತಿ ಧರ್ಮದವರಿಗೆ ಸೇರಿದೆ. ಆದರೇ ಇಲ್ಲಿ ಒಂದು ಸಮುದಾಯವರು ಇದು ತಮ್ಮ ಹಿರಿಯ ಆಸ್ತಿ ಎಂಬಂತೆ ಇತರ ಸಮುದಾಯದವರು ಇಲ್ಲಿ ದುಡಿಯುವುದಕ್ಕೆ ಅಡ್ಡಿ ಮಾಡಿ ದೌರ್ಜನ್ಯ ಎಸಗುತಿದ್ದಾರೆ. ಇದರ ಬಗ್ಗೆ ಸರ್ಕಾರ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.ದಲಿತ ಮುಖಂಡರಾದ ಮಂಜುನಾಥ ಗಿಳಿಯಾರ್, ಶ್ಯಾಮ್ ರಾಜ್ ಬಿರ್ತಿ, ಸಹಬಾಳ್ವೆ ಸಂಘಟನೆ ಸಂಚಾಲಕರಾದ ಪ್ರೊ. ಕೆ. ಫಣಿರಾಜ್, ಸಿಐಟಿಯುನ ಶಶಿಧರ್ ಗೊಲ್ಲ, ಇತರ ಸಂಘಟನೆಗಳ ಮುಖಂಡರಾದ ಇದ್ರೀಸ್ ಹೂಡೆ, ಫಾದರ್ ವಿಲಿಯಂ ಮಾರ್ಟೀಸ್, ಹುಸೇನ್ ಕೋಡಿಬೆಂಗ್ರೆ, ಸುರೇಶ್ ಕಲ್ಲಾಗಾರ್, ಎಚ್. ನರಸಿಂಹ, ಕೆ. ಶಂಕರ್, ವಾಮನ ಪೂಜಾರಿ, ಚಿಕ್ಕ ಮೊಗವೀರ, ಉಮೇಶ್ ಕುಂದರ, ಬಲ್ಕೀಸ್ ಭಾನು, ಶೀಲಾವತಿ, ವೆಂಕಟೇಶ್ ಕೋಣಿ ಉಪಸ್ಥಿತರಿದ್ದರು ಉಡುಪಿ ಜಿಲ್ಲಾ ಮೀನುಗಾರ ಮತ್ತು ಮೀನು ಕಾರ್ಮಿಕರ ಸಂಘದ ಜಿಲ್ಲಾ ಕಾರ್ಯದರ್ಶಿ ಕವಿರಾಜ್ ಎಸ್.ಕಾಂಚನ್ ಸ್ವಾಗತಿಸಿ ನಿರೂಪಿಸಿದರು.