- ಸುಪ್ರೀಂ ಕೋರ್ಟ್ ಆದೇಶದನ್ವಯ ದಾವಣಗೆರೆಯಲ್ಲೂ ಫುಟ್ಪಾತ್ ಅತಿಕ್ರಮಣ ಶೀಘ್ರ ತೆರವು: ಡಿಸಿ ಗಂಗಾಧರಸ್ವಾಮಿ ಹೇಳಿಕೆ - - -
ದಾವಣಗೆರೆ ಜಿಲ್ಲೆಯಲ್ಲಿ ರಸ್ತೆ ಸುರಕ್ಷತೆ ಹೆಚ್ಚಿಸುವ ಜೊತೆಗೆ ಅಪಘಾತ ನಿಯಂತ್ರಿಸಲು ಒಟ್ಟು 21 ಅಪಘಾತ ವಲಯಗಳನ್ನು ಗುರುತಿಸಿದ್ದು, ಅಂತಹ ವಲಯಗಳನ್ನು ಅಪಘಾತ ಮುಕ್ತ ವಲಯಗಳನ್ನಾಗಿಸಲು ಕ್ರಮ ಕೈಗೊಳ್ಳುವ ಜೊತೆಗೆ ಸುಪ್ರೀಂ ಕೋರ್ಟ್ ಆದೇಶದನ್ವಯ ನಗರದ ಆಕ್ರಮಿತ ಫುಟ್ಪಾತ್ ತೆರವುಗೊಳಿಸಲಾಗುವುದು ಎಂದು ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರ ಸ್ವಾಮಿ ತಿಳಿಸಿದರು.
ನಗರದ ಡಿಸಿ ಕಚೇರಿ ಸಭಾಂಗಣದಲ್ಲಿ ಸೋಮವಾರ ರಸ್ತೆ ಸುರಕ್ಷತಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಒಂದು ಜೀವ ಉಳಿದರೂ ಅದು ನಮಗೆ ಹೆಮ್ಮೆಯಾಗಿದ್ದು, ಮೂರು ವರ್ಷಗಳ ಅಪಘಾತದ ದತ್ತಾಂಶ ಪರಿಶೀಲಿಸಿ, ಎಲ್ಲ ಬ್ಲಾಕ್ ಸ್ಪಾಟ್ಗಳಲ್ಲಿ ಅಗತ್ಯ ಸುಧಾರಣೆ ತರಲು ವರದಿ ಸಿದ್ಧಪಡಿಸಲಾಗುವುದು. ಸುಪ್ರೀಂ ಕೋರ್ಟ್ ಆದೇಶದ ಪ್ರಕಾರ ನಗರದ ಆಕ್ರಮಿತ ಫುಟ್ಪಾತ್ಗಳನ್ನು ತೆರವುಗೊಳಿಸಲಾಗುವುದು ಎಂದರು.ಕಳೆದ ವರ್ಷಕ್ಕೆ ಹೋಲಿಸಿದರೆ ಜಿಲ್ಲೆಯಲ್ಲಿ ಈ ವರ್ಷ ಮಾರಣಾಂತಿಕ ಅಪಘಾತಗಳ ಸಂಖ್ಯೆ ಇಳಿಕೆಯಾಗಿದೆ. ಕಳೆದ ವರ್ಷ 146 ಮಾರಣಾಂತಿಕ ಅಪಘಾತಗಳು ವರದಿಯಾಗಿದ್ದು, ಈ ಸಲ 139ಕ್ಕೆ ಇಳಿದಿದೆ. ಒಟ್ಟು 7 ಅಪಘಾತ ಕಡಿಮೆಯಾಗಿವೆ. ಪೊಲೀಸ್ ಇಲಾಖೆಯ ನಿರಂತರ ಕಾರ್ಯಾಚರಣೆ, ಸ್ಪಾಟ್ ಫೈನ್, ಹೆಲ್ಮೆಟ್ ಕಡ್ಡಾಯ ಜಾರಿ, ಅಪ್ರಾಪ್ತ ವಯಸ್ಕರ ಚಾಲನೆಗೆ ತಡೆ ಇಂತಹ ಕ್ರಮಗಳೇ ಅಪಘಾತ ತಡೆಗೆ ಪ್ರಮುಖ ಕಾರಣಗಳಾಗಿವೆ ಎಂದು ಅವರು ಹೇಳಿದರು.
ಕಿರಿದಾದ ಸೇತುವೆಯೊಂದರ ಮೇಲೆ ಈಚೆಗೆ ನಡೆದ ಅಪಘಾತದಲ್ಲಿ ಟ್ರ್ಯಾಕ್ಟರ್ಗೆ ಇನ್ಶೂರೆನ್ಸ್ ಹಾಗೂ ಚಾಲಕನಿಗೆ ಲೈಸೆನ್ಸ್ ಇಲ್ಲದ್ದು ಕಂಡುಬಂದಿದೆ. ಟ್ರ್ಯಾಕ್ಟರನ್ನು ಇತರ ಉದ್ದೇಶಗಳಿಗೆ ಬಳಸುವುದು, ಕರ್ಕಶ ಶಬ್ದ ಮಾಡುವುದು, ಪರವಾನಗಿ ಇಲ್ಲದೇ ಚಾಲನೆ ಮಾಡುವವರ ವಿರುದ್ಧ ಆರ್ಟಿಒ ಅಧಿಕಾರಿಗಳು ವಿಶೇಷ ಜಾಗೃತಿ ಮತ್ತು ತಪಾಸಣಾ ಅಭಿಯಾನ ಹಮ್ಮಿಕೊಳ್ಳಬೇಕು. ಬಿತ್ತನೆ ಚಟುವಟಿಕೆ ಆರಂಭ ಆಗುತ್ತಿರುವುದರಿಂದ ರಸ್ತೆಗೆ ಇಳಿಯುವ ಎಲ್ಲಾ ಟ್ರ್ಯಾಕ್ಟರ್, ಬಂಡಿಗಳ ಹಿಂಭಾಗದಲ್ಲಿ ಕಡ್ಡಾಯವಾಗಿ ರೇಡಿಯಂ ಸ್ಟಿಕ್ಕರ್ **(Reflective Stickers)** ಅಳವಡಿಸಬೇಕು ಎಂದು ಅವರು ತಿಳಿಸಿದರು.
ಅಪಘಾತ ತೆಡೆಗೆ ರಸ್ತೆ ಉಬ್ಬುಗಳನ್ನು ನಿರ್ಮಿಸುವಂತೆ ಜನರು ಒತ್ತಾಯಿಸುತ್ತಾರೆ. ಅವೈಜ್ಞಾನಿಕ ಹಂಪ್ಸ್ಗಳಿಂದಲೇ ಹೆಚ್ಚು ಅಪಘಾತ ಸಂಭವಿಸುತ್ತಿವೆ. ಸುಪ್ರೀಂ ಕೋರ್ಟ್ ಆದೇಶದ ಅನ್ವಯ ಅವೈಜ್ಞಾನಿಕ ಉಬ್ಬುಗಳನ್ನು ತೆರವುಗೊಳಿಸಬೇಕಿದೆ. ಬದಲಿಗೆ ವೈಜ್ಞಾನಿಕವಾಗಿ ರಂಬ್ಲರ್ ಸ್ಟ್ರಿಪ್ಸ್ಅಳವಡಿಸಿ, ರಸ್ತೆಯ ಎರಡೂ ಬದಿ ಕನಿಷ್ಟ 20ರಿಂದ 50 ಮೀಟರ್ ದೂರದಲ್ಲೇ ಎಚ್ಚರಿಕೆ ಫಲಕ ಅಳವಡಿಸಲು ಕ್ರಮ ಕೈಗೊಳ್ಳುವಂತೆ ಲೊಕೋಪಯೋಗಿ ಇಲಾಖೆ ಎಂಜಿನಿಯರ್ಗೆ ಡಿಸಿ ಗಂಗಾಧರ ಸ್ವಾಮಿ ಸೂಚಿಸಿದರು.
- - -
* ದೊಣೆಹಳ್ಳಿ ಬಳಿ ಅಪಘಾತ ವಲಯ, ಜಂಟಿ ಪರಿಶೀಲನೆ
ನಗರದ ಡಿಸಿ ಕಚೇರಿ ಸಭಾಂಗಣದಲ್ಲಿ ಸೋಮವಾರ ರಸ್ತೆ ಸುರಕ್ಷತಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ರಾಷ್ಟ್ರೀಯ ಹೆದ್ದಾರಿ-48ರ ಅಂಡರ್ ಪಾಸ್ ಸೇತುವೆಯು ಎಸ್ಸೆಸ್ ಹೈಟೆಕ್ ಆಸ್ಪತ್ರೆ, ರಾಮನಗರ ಸೇರಿದಂತೆ ಅನೇಕ ಹಳ್ಳಿಗೆ ಸಂಪರ್ಕ ಕಲ್ಪಿಸುವ ಅಂಡರ್ ಪಾಸ್ ಬಹಳ ಕಿರಿದಾಗಿದ್ದು ಅಂಬುಲೆನ್ಸ್, ಲಾರಿ, ಬಸ್ಸುಗಳ ಸಂಚಾರಕ್ಕೆ ಬಹಳ ದುಸ್ತರವಾಗಿದೆ. ಆ ಅಂಡರ್ ಪಾಸ್ ಸೇತುವೆ ಅಗಲೀಕರಣಕ್ಕೆ ಎನ್ಎಚ್ಎಐ ಅಧಿಕಾರಿಗಳು ಮುಂದಾಗಲಿ ಎಂದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಎಚ್.ಟಿ. ಶೇಖರ್ ಮಾತನಾಡಿ, ಹೆದ್ದಾರಿಯ ಹಲವು ಕಡೆ ಮೀಡಿಯನ್ (ರಸ್ತೆ ವಿಭಜಕ) ಗ್ಯಾಪ್ಗಳು ಇರುವುದರಿಂದ ಚಾಲಕರು ಆಹಾರ ಮತ್ತಿತರ ಕಾರಣಕ್ಕೆ ರಸ್ತೆ ದಾಟುವಾಗ ಭೀಕರ ಅಪಘಾತ ಸಂಭವಿಸುತ್ತಿವೆ. ವಿಶೇಷವಾಗಿ ಬಾಡಾ ಕ್ರಾಸ್ ಬಳಿ 4 ತಿಂಗಳಲ್ಲಿ 2ರಿಂದ 3 ಸಾವು ಸಂಭವಿಸಿವೆ. ಈ ಹಿನ್ನೆಲೆಯಲ್ಲಿ, ವಾಹನ ಸವಾರರು, ಪಾದಚಾರಿಗಳು ನಿಯಮ ಬಾಹಿರವಾಗಿ ರಸ್ತೆ ದಾಟುವುದನ್ನು ತಡೆಯಲು ಮೀಡಿಯನ್ಗಳಿಗೆ ಕನಿಷ್ಠ 2ರಿಂದ 3 ಅಡಿ ಎತ್ತರದ ಕಬ್ಬಿಣದ ಮೆಶ್ಗಳನ್ನು ಎನ್ಎಚ್ಎಐನಿಂದ ಅಳವಡಿಸಬೇಕು. ರಾತ್ರಿವೇಳೆ ಆ ಭಾಗದಲ್ಲಿ ಹೈವೇ ಪೆಟ್ರೋಲಿಂಗ್ ವಾಹನ ನಿಯೋಜಿಸಲಾಗುವುದು ಎಂದರು.
ಜಿಲ್ಲೆಯಲ್ಲಿ ಇನ್ನು 8 ಕಡೆ ಸಿಗ್ನಲ್ಗಳ ಅಳವಡಿಸಲು ಕ್ರಿಯಾ ಯೋಜನೆ ಸಿದ್ದಪಡಿಸಲಾಗಿದೆ. ಒಂದು ಸಿಗ್ನಲ್ ನಿರ್ಮಿಸಲು ₹30 ಲಕ್ಷ ವೆಚ್ಚವಾಗುತ್ತದೆ. ಅನುದಾನದ ಲಭ್ಯತೆ ನೋಡಿಕೊಂಡು ಹಂತ ಹಂತವಾಗಿ ನಿರ್ಮಿಸಲಾಗುವುದು. ಅಪಘಾತ ಹೆಚ್ಚಿರುವ ಮತ್ತು ಅಗತ್ಯವಿರುವ ಚನ್ನಗಿರಿ, ಹರಿಹರದಲ್ಲಿ ನಿರ್ಮಿಸಲು ಕ್ರಮವಹಿಸಲಾಗುವುದು. ಐಐಎಂಎಸ್, ಬ್ಯಾಂಕ್ಗಳು ಅಥವಾ ಇತರೆ ಖಾಸಗಿಯವರ ಸಹಭಾಗಿತ್ವದಲ್ಲಿ ಸಿಗ್ನಲ್ಗಳನ್ನು ಅಳವಡಿಸಲು ಕ್ರಮ ವಹಿಸಲಾಗುವುದು ಎಂದು ಅವರು ತಿಳಿಸಿದರು.ಎನ್ಎಚ್ಎಐ ಅಧಿಕಾರಿ ಸುನಿಲ್ ಮಾತನಾಡಿ, ಬಾಡಾ ಕ್ರಾಸ್ ಬಳಿ ರಸ್ತೆ ಕಾಮಗಾರಿ ಟೆಂಡರ್ ಪ್ರಕ್ರಿಯೆ ಅಂತಿಮಗೊಂಡಿದ್ದು, ಶೀಘ್ರವೇ ಕಾಮಗಾರಿ ಆರಂಭವಾಗಲಿದೆ. ಅಪಘಾತ ವಲಯಗಳ ಸುಧಾರಣೆಗೆ ಪ್ರಾಧಿಕಾರದಿಂದ ತಲಾ ₹10 ಲಕ್ಷಗಳ ತಕ್ಷಣದ ನಿಧಿ ಲಭ್ಯವಿದೆ. ಅಗತ್ಯ ಬಿದ್ದರೆ ಪ್ರಾದೇಶಿಕ ಅಧಿಕಾರಿಗಳ ಅನುಮತಿಯೊಂದಿಗೆ ₹25 ಲಕ್ಷವರೆಗೆ ಅನುದಾನ ಬಳಸಿಕೊಳ್ಳಬಹುದು. ಎಸ್.ಎಸ್. ಹೈಟೆಕ್ ಆಸ್ಪತ್ರೆ ಬಳಿ ಅಂಡರ್ ಪಾಸ್ ವಿಸ್ತೀರ್ಣ ಹೆಚ್ಚಿಸುವ ಬಗ್ಗೆ ಕ್ರಮ ಕೈಗೊಳ್ಳಲಾಗುವುದು ಎಂದು ಸಭೆ ಗಮನಕ್ಕೆ ತಂದರು.
- - --13ಕೆಡಿವಿಜಿ2. 3:
ದಾವಣಗೆರೆ ಡಿಸಿ ಕಚೇರಿ ಸಭಾಂಗಣದಲ್ಲಿ ಸೋಮವಾರ ರಸ್ತೆ ಸುರಕ್ಷತಾ ಸಮಿತಿ ಸಭೆಯಲ್ಲಿ ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರ ಸ್ವಾಮಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಜಿಲ್ಲಾ ಎಸ್ಪಿ ಡಾ.ಎಚ್.ಟಿ.ಶೇಖರ್ ಇತರರು ಇದ್ದರು.