27 ವರ್ಷಗಳ ದೈಹಿಕ ಶಿಕ್ಷಣದ ಶಿಕ್ಷಕರ ಸೇವೆ ತೃಪ್ತಿ ತಂದಿದೆ: ಎಂ.ಮಲ್ಲಯ್ಯ

KannadaprabhaNewsNetwork | Published : Aug 4, 2024 1:24 AM

ಸಾರಾಂಶ

ಕಳೆದ 28 ವರ್ಷಗಳ ಸೇವೆಯಲ್ಲಿ ನನ್ನ ಶಿಷ್ಯಂದಿರಲ್ಲಿ 9 ಮಂದಿ ದೈಹಿಕ ಶಿಕ್ಷಣ ಶಿಕ್ಷಕರಾಗಿ ವಿವಿಧ ಜಿಲ್ಲೆಗಳಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಹಲವು ಕ್ರೀಡಾಪಟುಗಳು ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಚಿನ್ನದ ಪದಕ ಗಳಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಭಾರತೀನಗರ

ಗ್ರಾಮೀಣ ವಿದ್ಯಾರ್ಥಿಗಳನ್ನು ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಪರಿಚಯಿಸುವ ಜೊತೆಗೆ 27ವರ್ಷಗಳಿಂದ ಸಲ್ಲಿಸಿದ್ದ ದೈಹಿಕ ಶಿಕ್ಷಣದ ಶಿಕ್ಷಕರ ಸೇವೆ ತೃಪ್ತಿ ತಂದಿದೆ ಎಂದು ದೈಹಿಕ ಶಿಕ್ಷಕ ಎಂ.ಮಲ್ಲಯ್ಯ ತಿಳಿಸಿದರು.

ಕ್ಯಾತಘಟ್ಟ ಸರ್ಕಾರಿ ಪ್ರೌಢಶಾಲೆಯಲ್ಲಿ ಹಳೆಯ ವಿದ್ಯಾರ್ಥಿಗಳ ಬಳಗದಿಂದ ಆಯೋಜಿಸಿದ್ದ ಬೀಳ್ಕೊಡುಗೆ ಮತ್ತು ಗುರುವೃಂದಕ್ಕೆ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿ, ಕಳೆದ 28 ವರ್ಷಗಳ ಸೇವೆಯಲ್ಲಿ ನನ್ನ ಶಿಷ್ಯಂದಿರಲ್ಲಿ 9 ಮಂದಿ ದೈಹಿಕ ಶಿಕ್ಷಣ ಶಿಕ್ಷಕರಾಗಿ ವಿವಿಧ ಜಿಲ್ಲೆಗಳಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಹಲವು ಕ್ರೀಡಾಪಟುಗಳು ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಚಿನ್ನದ ಪದಕ ಗಳಿಸಿದ್ದಾರೆ ಎಂದರು.

ಸಮಾರಂಭದಲ್ಲಿ ಶಾಲೆ ಮುಖ್ಯ ಶಿಕ್ಷಕ ಎಚ್.ಎಂ.ರಮೇಶ್ ಅಧ್ಯಕ್ಷತೆ ವಹಿಸಿ ಮಾತನಾಡಿ, ಎಂ.ಮಲ್ಲಯ್ಯ ಅವರ ಕಾರ್ಯ ಪ್ರವೃತ್ತಿ ನೆನೆದು ಇಂತಹ ಶಿಕ್ಷಕರು ಎಲ್ಲಾ ಶಾಲೆಗಳಲ್ಲಿ ಇದ್ದರೆ ಶಾಲೆಗೆ ಶೋಭೆ ಇದ್ದಂತೆ ಎಂದರು.

ಇದೇ ವೇಳೆ 1994 ರಿಂದ 2024ರವರೆಗೂ ಶಾಲೆಯಲ್ಲಿ ಸೇವೆಸಲ್ಲಿಸಿದ ಗುರುಗಳಿಗೆ ಹಳೆಯ ವಿದ್ಯಾರ್ಥಿಗಳು ಅಭಿನಂದಿಸಿ ಗೌರವಿಸಿದರು. ಹಿರಿಯ ವಿದ್ಯಾರ್ಥಿಗಳಾದ ಉಮೇಶ್, ಕೆ ಎಂ ರೇಖಾ, ಬಾಲಗಂಗಾಧರ, ಪ್ರಕಾಶ್, ಸತೀಶ್, ಕೆ.ಎಂ.ರೇಖಾ, ಟಿ.ಬಿ.ರಾಜೇಶ್, ಬಿ.ಕೆ.ದೇವರಾಜು, ಸಿ.ಹೆಚ್.ಬೋರೇಗೌಡ, ಅಂದಾನಿ, ಅರುಣಾಕ್ಷಿ, ಶೀಲಾ ಮತ್ತು ಶಿವರಾಜಕುಮಾರ್ ತಮ್ಮ ಗುರುಗಳ ಅಭಿವೃದ್ದಿ ಬಗ್ಗೆ ಗುಣಗಾನ ಮಾಡಿದರು.

ಸಮಾರಂಭಕ್ಕೆ ತಡವಾಗಿ ಆಗಮಿಸಿದ ವಿಧಾನ ಪರಿಷತ್ ಮಾಜಿ ಸದಸ್ಯ ಕೆ.ಟಿ. ಶ್ರೀಕಂಠೇಗೌಡ ಹಾಗೂ ಶಿಕ್ಷಕರ ಕ್ಷೇತ್ರದ ವಿಧಾನ ಪರಿಷತ್ ಸದಸ್ಯ ವಿವೇಕಾನಂದರವರು ಭಾಗವಹಿಸಿ ಎಂ.ಮಲ್ಲಯ್ಯರನ್ನು ಸನ್ಮಾನಿಸಿದರು.

ವೇದಿಕೆಯಲ್ಲಿ ಶಾಲಾ ಶಿಕ್ಷಕರಾದ ಈರೇಗೌಡ, ಎಚ್.ವೀಣಾ, ವಿ.ಮಾರುತಿ, ಶಿವಕುಮಾರಸ್ವಾಮಿ, ವೈ.ಎಸ್.ಬಸವರಾಜು, ಚಿಕ್ಕಬೋರಯ್ಯ, ನಾಗೇಶ್ ಮತ್ತು ಕೆ.ಟಿ.ಸುನೀತಾ, ಪುಟ್ಟರಾಮ ರಾಜೇ ಅರಸ್, ಸಿ.ಕೆ.ರಾಜಣ್ಣ, ಎಂ.ಕೃಷ್ಣಮೂರ್ತಿ ಮತ್ತು ಎಚ್.ಡಿ. ಸುಭಾಷ್ ಚಂದ್ರ, ಪಿ. ಸಿದ್ದರಾಜು, ಅಪ್ಪಾಜಿಗೌಡ, ಪುಟ್ಟಸ್ವಾಮಿ ಮತ್ತು ವರಲಕ್ಷಿ ಮತ್ತು ಶಾಂತಮ್ಮ ಉಪಸ್ಥಿತರಿದ್ದರು.

Share this article