3 ದಿನದಲ್ಲಿ 28 ಕೃಷ್ಣಮೃಗ ನಿಗೂಢ ಮಾರಣಹೋಮ

KannadaprabhaNewsNetwork |  
Published : Nov 16, 2025, 02:00 AM IST
Black Buck

ಸಾರಾಂಶ

ಕೇವಲ 3 ದಿನಗಳ ಅವಧಿಯಲ್ಲಿ 28 ಕೃಷ್ಣಮೃಗಗಳು ನಿಗೂಢವಾಗಿ ಸಾವಿಗೀಡಾಗಿದ ಆಘಾತಕಾರಿ ಘಟನೆ ಬೆಳಗಾವಿ ಹೊರವಲಯದ ಭೂತರಾಮನಹಟ್ಟಿ ಬಳಿಯ ಕಿತ್ತೂರು ರಾಣಿ ಚನ್ನಮ್ಮ ಕಿರು ಮೃಗಾಲಯದಲ್ಲಿ ನಡೆದಿದೆ.

  ಬೆಳಗಾವಿ :  ಕೇವಲ 3 ದಿನಗಳ ಅವಧಿಯಲ್ಲಿ 28 ಕೃಷ್ಣಮೃಗಗಳು ನಿಗೂಢವಾಗಿ ಸಾವಿಗೀಡಾಗಿದ ಆಘಾತಕಾರಿ ಘಟನೆ ಬೆಳಗಾವಿ ಹೊರವಲಯದ ಭೂತರಾಮನಹಟ್ಟಿ ಬಳಿಯ ಕಿತ್ತೂರು ರಾಣಿ ಚನ್ನಮ್ಮ ಕಿರು ಮೃಗಾಲಯದಲ್ಲಿ ನಡೆದಿದೆ.

ಕೃಷ್ಣಮೃಗಗಳ ಸಾವಿಗೆ ಪರಿಸರ ಪ್ರೇಮಿಗಳಿಂದ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಮೃಗಾಲಯ ಅಧಿಕಾರಿಗಳ ನಿರ್ಲಕ್ಷ್ಯವೇ ಸಾವಿಗೆ ಕಾರಣ ಎಂಬ ಆರೋಪ ಸಾರ್ವಜನಿಕರಲ್ಲಿ ಕೇಳಿ ಬಂದಿದೆ. ಇದರ ಬೆನ್ನಲ್ಲೇ ತನಿಖೆಗೆ ಅರಣ್ಯ ಸಚಿವ ಈಶ್ವರ ಖಂಡ್ರೆ ಆದೇಶಿಸಿದ್ದಾರೆ.

10 ಮಾತ್ರ ಜೀವಂತ:

ನ.13ರಂದು 8 ಕೃಷ್ಣ ಮೃಗಗಳು ನಿಗೂಢವಾಗಿ ಸಾವಿಗೀಡಾಗಿದ್ದವು. ಶನಿವಾರ ಬೆಳಗ್ಗೆ ಮತ್ತೆ 20 ಕೃಷ್ಣಮೃಗಗಳು ಮೃತಪಟ್ಟಿವೆ. ಇದರೊಂದಿಗೆ ಸಾವಿನ ಸಂಖ್ಯೆ 28ಕ್ಕೇರಿದೆ.

ಮೃಗಾಲಯದಲ್ಲಿ ಒಟ್ಟು 38 ಕೃಷ್ಣಮೃಗಗಳಿದ್ದವು. ಈಗ 28 ಮೃಗಗಳ ಸಾವಿನೊಂದಿಗೆ ಕೇವಲ 10 ಮಾತ್ರ ಉಳಿದಿವೆ. ಇವುಗಳ ಮೇಲೆ ಬೆಂಗಳೂರಿನ ಬನ್ನೇರುಘಟ್ಟ ವನ್ಯಜೀವಿ ಉದ್ಯಾನವನದಿಂದ ಆಗಮಿಸಿರುವ ತಜ್ಞ ವೈದ್ಯರು ತೀವ್ರ ನಿಗಾ ಇಟ್ಟಿದ್ದಾರೆ. ಇವುಗಳ ಆರೋಗ್ಯ ತಪಾಸಣೆ ನಡೆಸುತ್ತಿದ್ದಾರೆ. 10 ಕೃಷ್ಣಮೃಗಗಳ ಆರೋಗ್ಯ ಚೆನ್ನಾಗಿದ್ದು, ಲವಲವಿಕೆಯಿಂದ ಓಡಾಡಿಕೊಂಡಿವೆ’ ಎಂದು ಎಸಿಎಫ್ ನಾಗರಾಜ ಬಾಲೇಹೂಸೂರ ಸ್ಪಷ್ಟಪಡಿಸಿದ್ದಾರೆ.

‘ಕೃಷ್ಣಮೃಗಗಳಿಗೆ ಎಂದಿನಂತೆ ಆಹಾರ ನೀಡುತ್ತಿದ್ದೆವು. ಅದರಲ್ಲಿ 8 ಮೃತಪಟ್ಟಿವೆ. ಆಹಾರದಲ್ಲಿ ವ್ಯತ್ಯಾಸ ಆಗಿದ್ದರೆ ಇತರ ಮೃಗಾಲಯದಲ್ಲಿ ಇರುವ ಇತರ ಪ್ರಾಣಿಗಳ ಆರೋಗ್ಯದಲ್ಲಿ ವ್ಯತ್ಯಾಸ ಆಗಬೇಕಿತ್ತು. ಆದರೆ ಕೃಷ್ಣಮೃಗಗಳು ಮಾತ್ರ ಸಾವನ್ನಪ್ಪಿವೆ. ಉಳಿದವುಗಳಿಗೆ ತೊಂದರೆ ಆಗಿಲ್ಲ. ಹಾಗಾಗಿ ಸಾಂಕ್ರಾಮಿಕ ಕಾಯಿಲೆಯಿಂದ ಮೃತಪಟ್ಟಿರುವ ಶಂಕೆ ಇದೆ’ ಎಂದು ಅವರು ಹೇಳಿದ್ದಾರೆ.

‘ಗುರುವಾರ ಮೃತಪಟ್ಟ 8 ಕೃಷ್ಣಮೃಗಗಳ ಮರಣೋತ್ತರ ಪರೀಕ್ಷೆ ನಡೆಸಿ ಕೆಲವು ಸ್ಯಾಂಪಲ್‌ಗಳನ್ನು ಸಂಗ್ರಹಿಸಿ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ಸಾವಿಗೆ ಬ್ಯಾಕ್ಟೀರಿಯಲ್ ಇನ್‌ಫೆಕ್ಸನ್‌ ಕಾರಣ ಎನ್ನಲಾಗುತ್ತಿದ್ದು, ನಿಯಮಾನುಸಾರ ಪರೀಕ್ಷೆ ನಡೆಸಲಾಗಿದೆ. ಇನ್ನುಳಿದಂತೆ 3 ಕೃಷ್ಣಮೃಗಳ ಮೃತದೇಹ ಶೇಖರಿಸಿಡಲಾಗಿದೆ. ಬನ್ನೇರುಘಟ್ಟದ ಮೃಗಾಲಯದಿಂದ ತಜ್ಞರು ಬಂದ ಬಳಿಕ ಅವುಗಳ ಪರೀಕ್ಷೆ ನಡೆಸಲಾಗುತ್ತದೆ’ ಎಂದರು.

ನಿರ್ಲಕ್ಷ್ಯ?:‘ಗುರುವಾರ 8 ಕೃಷ್ಣಮೃಗಗಳು ಮೃತಪಟ್ಟಾಗಲೇ ಪ್ರಕರಣ ಗಂಭೀರವಾಗಿ ಪರಿಗಣಿಸಿದ್ದರೆ ಶನಿವಾರ ಮೃತಪಟ್ಟಿರುವ 20 ಕೃಷ್ಣಮೃಗಗಳ ಜೀವ ಉಳಿಸಬಹುದಿತ್ತು. ಸಾಮೂಹಿಕವಾಗಿ 28 ಕೃಷ್ಣಮೃಗಗಳು ಸಾವಿಗೀಡಾಗಿರುವುದು ಇಲ್ಲಿನ ಅಧಿಕಾರಿಗಳು ಮತ್ತು ಸಿಬ್ಬಂದಿ ನಿರ್ಲಕ್ಷ್ಯವೇ ಕಾರಣ’ ಎಂಬ ಆರೋಪ ಸಾರ್ವಜನಿಕರಿಂದ ಕೇಳಿ ಬಂದಿದೆ.

ತನಿಖೆಗೆ ಆದೇಶ

ಕೃಷ್ಣಮೃಗ ಸಾವು ಆತಂಕದ ವಿಚಾರ. ತನಿಖೆಗೆ ತಜ್ಞರ ಸಮಿತಿ ರಚಿಸಲಾಗುತ್ತದೆ. ಇಂಥ ಘಟನೆ ಮರುಕಳಿಸದಂತೆ ತಡೆಯಬೇಕು, ಸಿಬ್ಬಂದಿ ನಿರ್ಲಕ್ಷ್ಯ ಇದೆಯೇ ಎಂಬುದನ್ನು ಪತ್ತೆ ಮಾಡಬೇಕು.

- ಈಶ್ವರ ಖಂಡ್ರೆ, ಅರಣ್ಯ ಸಚಿವ

PREV
Read more Articles on

Recommended Stories

ಹನಿಟ್ರ್ಯಾಪ್ ಖೆಡ್ಡಾಗೆ ಬಿದ್ದ ಬ್ಯಾಂಕ್‌ ಮ್ಯಾನೇಜರ್‌
ವಿದ್ಯಾರ್ಥಿಗಳು ಸರ್ಕಾರಿ ಸೌಲಭ್ಯ ಬಳಸಿಕೊಳ್ಳಿ