ಗುರು ಭವನ ನಿರ್ಮಾಣಕ್ಕೆ ₹30 ಲಕ್ಷ ಅನುದಾನದ ಭರವಸೆ: ಕೃಷ್ಣನಾಯ್ಕ

KannadaprabhaNewsNetwork |  
Published : Sep 10, 2025, 01:04 AM IST
ಹೂವಿನಹಡಗಲಿಯ ಶಿಕ್ಷಕರ ಸಂಘದಿಂದ ಪಂಚಮಸಾಲಿ ಸಮುದಾಯ ಭವನದಲ್ಲಿ ಆಯೋಜಿಸಿದ್ದ ಶಿಕ್ಷಕರ ದಿನಾಚರಣೆಗೆ ಚಾಲನೆ ನೀಡಿದ ಶಾಸಕ ಕೃಷ್ಣನಾಯ್ಕ. | Kannada Prabha

ಸಾರಾಂಶ

ಶಿಕ್ಷಕರ ಬಹುದಿನಗಳ ಕನಸಾಗಿರುವ ಗುರು ಭವನ ನಿರ್ಮಾಣಕ್ಕೆ ಪ್ರಸಕ್ತ ವರ್ಷದಲ್ಲಿ ₹30 ಲಕ್ಷ ಅನುದಾನ ನೀಡಿ ತಿಂಗಳೊಳಗೆ ಕಾಮಗಾರಿ ಆರಂಭಿಸಲಾಗುವುದು.

ತಾಲೂಕು ಮಟ್ಟದ ಶಿಕ್ಷಕರ ದಿನಾಚರಣೆಗೆ ಚಾಲನೆ ನೀಡಿದ ಶಾಸಕ

ಕನ್ನಡಪ್ರಭ ವಾರ್ತೆ ಹೂವಿನಹಡಗಲಿ

ಶಿಕ್ಷಕರ ಬಹುದಿನಗಳ ಕನಸಾಗಿರುವ ಗುರು ಭವನ ನಿರ್ಮಾಣಕ್ಕೆ ಪ್ರಸಕ್ತ ವರ್ಷದಲ್ಲಿ ₹30 ಲಕ್ಷ ಅನುದಾನ ನೀಡಿ ತಿಂಗಳೊಳಗೆ ಕಾಮಗಾರಿ ಆರಂಭಿಸಲಾಗುವುದು ಎಂದು ಶಾಸಕ ಕೃಷ್ಣನಾಯ್ಕ ಹೇಳಿದರು.

ಇಲ್ಲಿನ ಪಂಚಮಸಾಲಿ ಸಮುದಾಯ ಭವನದಲ್ಲಿ ಡಾ. ಸರ್ವಪಲ್ಲಿ ರಾಧಾಕೃಷ್ಣನ್‌ ಅವರ 137ನೇ ಜನ್ಮ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಶಿಕ್ಷಕರ ದಿನಾಚರಣೆಗೆ ಚಾಲನೆ ನೀಡಿ ಮಾತನಾಡಿದ ಅವರು, ತಾವು ವಿರೋಧ ಪಕ್ಷದ ಶಾಸಕರಾಗಿರುವ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಅನುದಾನ ನೀಡುತ್ತಿಲ್ಲ, ನನ್ನ ಕ್ಷೇತ್ರದ ಅಭಿವೃದ್ಧಿ ಬಗ್ಗೆ ಸಾಕಷ್ಟು ಕನಸುಗಳಿವೆ. ಆದರೆ ಅನುದಾನದ ಕೊರತೆ ಇದೆ ಎಂದು ಅಸಮಾಧಾನ ವ್ಯಕ್ತಪಡಿಸಿದ ಅವರು, ಅಲ್ಪ ಸ್ವಲ್ಪ ಅನುದಾನದಲ್ಲೇ ಶೈಕ್ಷಣಿಕ ಕ್ಷೇತ್ರಕ್ಕೆ ಅನುದಾನ ಬಳಕೆ ಮಾಡಿ ಶಾಲಾ-ಕಾಲೇಜು ಕೊಠಡಿಗಳ ದುರಸ್ತಿ, ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಲಾಗುತ್ತಿದೆ ಎಂದರು.

ಶಿಕ್ಷಕರು ಮಕ್ಕಳಿಗೆ ಉತ್ತಮ ಬೋಧನೆ ಮಾಡಿ ಗುಣಮಟ್ಟದ ಫಲಿತಾಂಶ ತರಲು ಶ್ರಮಿಸಬೇಕು, ಪ್ರತಿಯೊಂದು ಕ್ಷೇತ್ರದಲ್ಲಿ ಸಾಧನೆ ಮಾಡಲು ಶಿಕ್ಷಣ ಅಗತ್ಯವಾಗಿದೆ. ನಾನು ಶಿಕ್ಷಕನಾಗಬೇಕೆಂದು ನನ್ನ ತಂದಯೆ ಕನಸಾಗಿತ್ತು. ಆದರೆ ನಾನು ಎಂಜಿನಿಯರ್‌ ಆಗಿದ್ದೇನೆ. ಪ್ರಾಥಮಿಕ ಶಾಲೆಯಲ್ಲಿ ಕೊನೆ ಬೆಂಚ್‌ ವಿದ್ಯಾರ್ಥಿಯಾಗಿದ್ದು, ಅಂದಿನ ಶಿಕ್ಷಕರು ನಾನು ಸೇರಿ 5 ಜನ ವಿದ್ಯಾರ್ಥಿಗಳಿಗೆ ಪ್ರತ್ಯೇಕ ಬೋಧನೆ ಮಾಡಿದ ಫಲವಾಗಿ ನಾನು ಇಂದು ನಿಮ್ಮ ಮುಂದೆ ಶಾಸಕನಾಗಿ ನಿಂತಿದ್ದೇನೆಂದು ಹೇಳಿದರು.

ಬಿಇಒ ಮಹೇಶ ಪೂಜಾರ್‌ ಪ್ರಾಸ್ತಾವಿಕ ಮಾತನಾಡಿ, ಇಡೀ ವಿಶ್ವದಲ್ಲೇ ಮಾನವ ಸಂಪನ್ಮೂಲವನ್ನು ಸೃಷ್ಟಿಸುವ ಶಕ್ತಿ ಶಿಕ್ಷಣ ಕ್ಷೇತ್ರಕ್ಕೆ ಇದೆ. ಗುರು ಸ್ಥಾನಕ್ಕೆ ಗೌರವ ಸಿಗಬೇಕಾದರೇ ತಾವು ಪ್ರಾಮಾಣಿಕತೆಯಿಂದ ಕರ್ತವ್ಯ ನಿರ್ವಹಿಸಿ, ಮಕ್ಕಳಿಗೆ ಗುಣಮಟ್ಟದ ಬೋಧನೆ ಮಾಡಬೇಕಿದೆ ಎಂದರು.

ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ವಿ.ಬಿ. ಜಗದೀಶ ಮಾತನಾಡಿ, ತಾಲೂಕಿನ ಪ್ರಾಥಮಿಕ ಶಾಲೆಯಲ್ಲಿ ಇಂಗ್ಲಿಷ್‌, ಹಿಂದಿ ಸೇರಿದಂತೆ ದೈಹಿಕ ಶಿಕ್ಷಕರ ಕೊರತೆ ಸಾಕಷ್ಟಿದೆ, ಶಾಸಕರು ಸರ್ಕಾರ ಮಟ್ಟದಲ್ಲಿ ಒತ್ತಡ ಹಾಕಿ ಶಿಕ್ಷಕರನ್ನು ನಿಯೋಜಿನೆ ಮಾಡಬೇಕು, ಮಕ್ಕಳು ಶಿಕ್ಷಣದಿಂದ ವಂಚಿತರಾಗದಂತೆ, ಎಲ್ಲ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕೆಂದು ಹೇಳಿದರು.

ಮಾಜಿ ಶಾಸಕ ನಂದಿಹಳ್ಳಿ ಹಾಲಪ್ಪ ಮಾತನಾಡಿದರು. ಇದೇ ಸಂದರ್ಭ ನಿವೃತ್ತ ಶಿಕ್ಷಕರು ಹಾಗೂ ಶಾಲಾ ಭೂ ದಾನಗಳನ್ನು ಗೌರವಿಸಲಾಗಿಯಿತು.

ಪುರಸಭೆ ಅಧ್ಯಕ್ಷೆ ಗಂಟಿ ಜಮಾಲಾ ಬೀ, ಉಪಾಧ್ಯಕ್ಷ ಮಂಜುನಾಥ ಸೊಪ್ಪಿನ್‌, ತಹಸೀಲ್ದಾರ್‌ ಜಿ.ಸಂತೋಷಕುಮಾರ, ತಾಪಂ ಇಒ ಜಿ.ಪರಮೇಶ್ವರಪ್ಪ, ವಾರದ ಗೌಸ್‌ ಮೋಹಿದ್ದೀನ್‌, ಹಂಪಸಾಗರ ಕೋಟೆಪ್ಪ, ಮಂಜುನಾಥ ಜೈನ್‌, ಕೆ.ಮುದುಕಪ್ಪ, ಬಿಜೆಪಿ ಮಂಡಲ ಅಧ್ಯಕ್ಷ ಮಲ್ಲಿಕಾರ್ಜುನ ಪೂಜಾರ್‌, ಜೆಸಿಐ ಅಧ್ಯಕ್ಷ ವಿನಾಯಕ ಕೋಡಿಹಳ್ಳಿ, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಎ.ಕೊಟ್ರಗೌಡ, ಕೋರಿ ಹಾಲೇಶ ಸೇರಿದಂತೆ ಇತರರಿದ್ದರು.

PREV

Recommended Stories

ಫಾರಿನ್‌ಗೆ ಅನ್ನಭಾಗ್ಯ ಅಕ್ಕಿ 2 ರೈಸ್‌ಮಿಲ್‌ ಜಫ್ತಿ: ಕೇಸು
ಮುಂದೇಕೆ, ಈಗ್ಲೆ ಮುಸ್ಲಿಂ ಆಗ್ಬಿಡಿ : ಬಿಜೆಪಿಗರ ಕಿಡಿ