ರೋಣ ತಾಲೂಕಿನಲ್ಲಿ 36 ಶುದ್ಧ ನೀರಿನ ಘಟಕಗಳೇ ಬಂದ್!

KannadaprabhaNewsNetwork |  
Published : Mar 04, 2026, 02:30 AM IST
3 ರೋಣ 1. ಸೋಮನಕಟ್ಟಿ ಗ್ರಾಮದ ಜನತೆ ಕರೆಯಲ್ಲಿ ಇಳಿದು ನೀರು ತುಂಬುತ್ತಿರುವದು.3 ರೋಣ 1ಎ.1ಬಿ. ಹೊನ್ನಿಗನೂರ ಗ್ರಾಮದಲ್ಲಿ ಮೂಲೆಗುಂಪಾದ ಶುದ್ದ ನೀರಿನ‌ ಘಟಕ.3 ರೋಣ 1 ಸಿ. ನೀರು ಪೂರೈಕೆಯಾಗದಿದ್ದರಿಂದ ನಿರುಪಯುಕ್ತವಾದ. ಬಳಗೋಡ ಗ್ರಾಮದಲ್ಲಿ‌ ನಿರೀನ  ಮಿನಿ  ಸಿಸ್ಟನ್. | Kannada Prabha

ಸಾರಾಂಶ

ತಾಲೂಕಿನಲ್ಲಿ 59 ಶುದ್ಧ ನೀರಿನ ಘಟಕಗಳಿವೆ. ಪೈಕಿ 23 ಘಟಕಗಳು ಚಾಲ್ತಿಯಲ್ಲಿವೆ. 36 ಘಟಕಗಳು ಸ್ಥಗಿತಗೊಂಡಿವೆ. ಇದರಿಂದ ಜನತೆಗೆ ಶುದ್ಧ ಕುಡಿಯುವ ನೀರು ಸಿಗುತ್ತಿಲ್ಲ. ಜತೆಗೆ ಲಕ್ಷಾಂತರ ರು. ಖರ್ಚು ಮಾಡಿ ನಿರ್ಮಿಸಲಾದ ಘಟಕಗಳು ಮೂಲೆಗುಂಪಾಗಿವೆ.

ಪಿ.ಎಸ್. ಪಾಟೀಲ

ರೋಣ: ಜನತೆಗೆ ಪ್ಲೋರೈಡ್ ಮುಕ್ತ ನೀರು ಪೂರೈಕೆಗಾಗಿ ತಾಲೂಕಿನ ಪ್ರತಿ ಹಳ್ಳಿಯಲ್ಲಿ ನಿರ್ಮಿಸಲಾದ ಶುದ್ಧ ಕುಡಿಯುವ ನೀರಿನ ಘಟಕಗಳು ನಿರ್ವಹಣೆ ಕೊರತೆ, ನೀರು ಪೂರೈಕೆ ಅಭಾವದಿಂದ ಶೇ. 75ರಷ್ಟು ಶುದ್ಧ ನೀರಿನ ಘಟಕಗಳು ಸ್ಥಗಿತಗೊಂಡಿವೆ.

ತಾಲೂಕಿನಲ್ಲಿ 59 ಶುದ್ಧ ನೀರಿನ ಘಟಕಗಳಿವೆ. ಪೈಕಿ 23 ಘಟಕಗಳು ಚಾಲ್ತಿಯಲ್ಲಿವೆ. 36 ಘಟಕಗಳು ಸ್ಥಗಿತಗೊಂಡಿವೆ. ಇದರಿಂದ ಜನತೆಗೆ ಶುದ್ಧ ಕುಡಿಯುವ ನೀರು ಸಿಗುತ್ತಿಲ್ಲ. ಜತೆಗೆ ಲಕ್ಷಾಂತರ ರು. ಖರ್ಚು ಮಾಡಿ ನಿರ್ಮಿಸಲಾದ ಘಟಕಗಳು ಮೂಲೆಗುಂಪಾಗಿವೆ.

ಎಲ್ಲೆಲ್ಲಿ ಘಟಕ ಸ್ಥಗಿತ?: ತಾಲೂಕಿನ ಸವಡಿ ಅರಹುಣಸಿ, ಬಳಗೋಡ, ಹೊನ್ನಿಗನೂರ, ಬಿ.ಎಸ್. ಬೇಲೇರಿ, ಬಸರಕೋಡ, ಮೆಣಸಗಿ, ಚಿಕ್ಕಮಣ್ಣೂರ, ತಳ್ಳಿಹಾಳ, ಮುದೇನಗುಡಿ, ಹುಲ್ಲೂರ, ಬಾಸಲಾಪುರ, ಹೊಸಳ್ಳಿ, ಯರೇಕುರಬನಾಳ, ಮೇಲ್ಮಠ, ಹಿರೇಹಾಳ, ಮಾಳವಾಡ, ಮುಗಳಿ, ಕೌಜಗೇರಿ, ಬೆಳವಣಕಿ, ಸಂದಿಗವಾಡ, ಹುನಗುಂಡಿ, ಮಾಡಲಗೇರಿ, ಮಲ್ಲಾಪುರ, ಸವಡಿ, ಹೊನ್ನಾಪುರ, ಸರ್ಜಾಪುರ, ಯಾವಗಲ್ಲ, ಹುನಗುಂಡಿ, ಹೊಳೆಆಲೂರು, ಅಮರಗೋಳ, ಅಬ್ಬಿಗೇರಿ, ಅಸೂಟಿ, ಬೆಳವಣಕಿ, ಕುರಡಗಿ, ಕುರಹಟ್ಟಿ ಸೇರಿದಂತೆ ಬಹುತೇಕ ಗ್ರಾಮಗಳಲ್ಲಿ ಶುದ್ಧ ನೀರಿನ ಘಟಕಗಳು ಸ್ಥಗಿತಗೊಂಡಿವೆ.

ಘಟಕ ಸ್ಥಗಿತಕ್ಕೆ ಕಾರಣ: ತಾಲೂಕಿನಲ್ಲಿರುವ ಬಹುತೇಕ ಶುದ್ಧ ನೀರಿನ ಘಟಕಗಳನ್ನು ಖಾಸಗಿ ಏಜೆನ್ಸಿಗಳು ನಿರ್ಮಿಸಿವೆ. ಆದರೆ ಅವುಗಳ ದುರಸ್ತಿ, ನಿರ್ವಹಣೆ ಜವಾಬ್ದಾರಿಯನ್ನು ಏಜೆನ್ಸಿಗಳು ಮಾಡದಿದ್ದರಿಂದ ಅವೆಲ್ಲವೂ ಸ್ಥಗಿತಗೊಂಡಿವೆ. ಇನ್ನೂ ಕೆಲ ಘಟಕಗಳು ಗ್ರಾಪಂನಿಂದ ಸಮರ್ಪಕ ನೀರು ಪೂರೈಕೆಯಾಗದಿದ್ದರಿಂದ ಬೀಗ ಹಾಕಲಾಗಿದೆ.

ನೀರು ಸಾಲುತ್ತಿಲ್ಲ: ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಮೂಲಕ ನೀರು ಶುದ್ಧಿಕರಿಸಿ ತಾಲೂಕಿನ ಪ್ರತಿಯಂದು ಗ್ರಾಮಕ್ಕೂ ಪೂರೈಕೆ ಮಾಡಲಾಗುತ್ತಿದೆ‌‌. ಆದರೆ ಕೆಲ ಗ್ರಾಮಗಳಿಗೆ ಅಲ್ಲಿನ ಜನ ಮತ್ತು ಜಾನುವಾರುಗಳ ಸಂಖ್ಯೆಗೆ ಅನುಗುಣವಾಗಿ ನೀರು ಪೂರೈಕೆಯಾಗುತ್ತಿಲ್ಲ. ಇಂತಹ ಗ್ರಾಮಗಳಿಗೆ ಸವಳು ನೀರೇ ಗತಿಯಾಗಿದೆ.

ಸಮಸ್ಯಾತ್ಮಕ ಗ್ರಾಮಗಳು: ತಾಲೂಕಿನಲ್ಲಿ ಅತಿ ನೀರಿನ ಸಮಸ್ಯೆಯನ್ನು ಎದುರಿಸುವ ಗ್ರಾಮಗಳ ಪೈಕಿ ಸೋಮನಕಟ್ಟಿ, ಮುದೇನಗುಡಿ, ಹೊಳೆಮಣ್ಣೂರ ನವಗ್ರಾಮ, ಗಾಡಗೋಳಿ ನವಗ್ರಾಮ, ಮೆಣಸಗಿ ನವಗ್ರಾಮ ಪ್ರಮುಖವಾಗಿವೆ. ಈ ಗ್ರಾಮಗಳಿಗೆ ಬಹುಗ್ರಾಮ ಕುಡಿಯುವ ನೀರಿನ ಯೋಜನೆಯಾಗಲಿ ಮತ್ತು ಜಲಜೀವನ್ ಮಿಷನ್(ಜೆಜೆಎಂ) ಯೋಜನೆಯಾಗಲಿ ಕೈಹಿಡಿದಿಲ್ಲ. ಇಲ್ಲಿನ ಜನತೆ ನೀರಿಗಾಗಿ ಎಲ್ಲೆಂದರಲ್ಲಿ ಅಲೆಯುತ್ತಿದ್ದಾರೆ.

ಸೋಮನಕಟ್ಟಿ ಗ್ರಾಮದ ಜನತೆಗೆ ಕೆರೆ ನೀರೆ ಗತಿಯಾಗಿದ್ದು, ನಿತ್ಯವು ಕೆರೆಗೆ ತಳ್ಳುಗಾಡಿ ಮೂಲಕ ತೆರಳಿ ನೀರು ತರುತ್ತಾರೆ. ನಿತ್ಯ ನೂರಾರು ಜನ ಕೆರೆಯಲ್ಲಿ ಇಳಿದು ನೀರು ತುಂಬಿಕೊಳ್ಳುತ್ತಾರೆ. ಇದರಿಂದ ನೀರು ಮಲಿನಗೊಂಡಿದ್ದು, ಕೆರೆಗೆ ಕಾಲುವೆ ಮೂಲಕ ನೀರು ಹರಿದು ಬರುತ್ತಿದ್ದು, ಕಾಲುವೆಗಳು ಸ್ವಚ್ಛತೆಯಿಂದ ಕೂಡಿಲ್ಲ. ಇದರಿಂದ ಕೆರೆ ನೀರು ಮಲಿನವಾಗುತ್ತಿದೆ. ಆದರೂ ಇಲ್ಲಿನ ಜನತೆ ಅನಿವಾರ್ಯವಾಗಿ ಇದೇ ನೀರನ್ನು ಕುಡಿಯಲು ಬಳಸುತ್ತಿದ್ದಾರೆ. ಕುಡಿಯಲು ಮತ್ತು ಬಳಸಲು ಕೆರೆ ನೀರನ್ನೆ ಆಶ್ರಯಿಸುತ್ತಿದ್ದಾರೆ.

ಹೊಸ ಪ್ಲಾಟ್(ನಾಗಪ್ಪನ ಕಟ್ಟೆ ಹತ್ತಿರ)ನಲ್ಲಿ 150ಕ್ಕೂ ಹೆಚ್ಚು ಮನೆಗಳಿವೆ. ಇಲ್ಲಿಯೂ ತೀವ್ರ ನೀರಿನ ಸಮಸ್ಯೆಯನ್ನು ನಿವಾಸಿಗಳು ಎದುರಿಸುತ್ತಿದ್ದಾರೆ. ನೀರಿನ ಸಮಸ್ಯೆ ಕುರಿತು ಸಾಕಷ್ಟು ಬಾರಿ ಹುಲ್ಲೂರು ಗ್ರಾಪಂ ಅಧಿಕಾರಿಗೆ ಹೇಳಿದರೂ ಯಾವುದೇ ಕ್ರಮ ಕೈಗೊಂಡಿಲ್ಲ. ನೀರಿನ ಸಮಸ್ಯೆಯಿಂದ ಯಾವಾಗ ಮುಕ್ತಿ ಸಿಗುತ್ತೊ ಅಂತ ಚಿಂತೆ ಕಾಡ್ತಿದೆ ಎನ್ನುತ್ತಾರೆ ಗ್ರಾಮದ ವಿಕ್ರಂ ಬರಡ್ಡಿ.

400ಕ್ಕೂ ಹೆಚ್ಚು ಮನೆಗೆ ಒಂದೇ ಸಿಸ್ಟನ್: ಮುದೇನಗುಡಿ ಗ್ರಾಮದಲ್ಲಿ ಬಳಕೆ ನಲ್ಲಿಗಳ ಮೂಲಕ ಸವಳು ನೀರು ಪೂರೈಸಲಾಗುತ್ತಿದೆ. ಆದರೆ ಕುಡಿಯುವ ನೀರಿಗೆ 400ಕ್ಕೂ ಹೆಚ್ಚು ಮನೆಗಳಿಗೆ ಒಂದೇ ಸಣ್ಣದಾದ ಸಿಸ್ಟನ್ ಇದ್ದು, ದಿನವಿಡಿ ನೀರಿಗಾಗಿ ಕಾಯುವ ಪರಿಸ್ಥಿತಿಯಿದೆ. 50 ಸಾವಿರ ಲೀಟರ್ ನೀರು ಸಂಗ್ರಹಗಾರ ಮೆಲ್ಮಟ್ಟದ ಜಲಗಾರವಿದ್ದರೂ ಅದಕ್ಕೆ ನೀರು ಸಂಗ್ರಹಿಸುವ ಮೂಲಗಳೇ ಇಲ್ಲ. ಗ್ರಾಮದಲ್ಲಿನ ಶುದ್ಧ ನೀರಿನ ಘಟಕ ಸ್ಥಗಿತಗೊಂಡು 6 ವರ್ಷ ಗತಿಸಿದ್ದು, ಈವರೆಗೂ ದುರಸ್ತಿ ಮಾಡಿಲ್ಲ. ಈ ಕುರಿತು ಕುರಹಟ್ಟಿ ಗ್ರಾಪಂ ಅಧಿಕಾರಿಗಳು ಗಮನ ಹರಿಸದಿರುವುದಕ್ಕೆ ಮುದೇನಗುಡಿ ಜನ ಹಿಡಿಶಾಪ ಹಾಕುತ್ತಿದ್ದಾರೆ.

ಮೆಣಸಗಿ, ಹೊಳೆಮಣ್ಣೂರು, ಗಾಡಗೋಳಿ ನವಗ್ರಾಮಗಳಲ್ಲೂ ತೀವ್ರ ನೀರಿನ ಸಮಸ್ಯೆ ಎದುರಿಸುತ್ತಿವೆ. ಬಹುಗ್ರಾಮ ಕುಡಿಯುವ ನೀರಿನ ಯೋಜನೆಯಲ್ಲಿ ಸೋಮನಕಟ್ಟಿ ರಸ್ತೆಯ ಬಳಿ ಕೆರೆ ನಿರ್ಮಿಸಲಾಗಿದ್ದು, ಇದರಿಂದ ನೀರು ಪೂರೈಕೆಯಾಗುತ್ತಿಲ್ಲ.

ಬಳಗೋಡ, ಅರಹುಣಸಿ, ಶಾಂತಗೇರಿ, ಸವಡಿ, ಹಿರೇಹಾಳ ಸೇರಿದಂತೆ ಬಹುತೇಕ ಗ್ರಾಮಗಳಲ್ಲಿ ನೀರಿನ ಮಿನಿ ಸಿಸ್ಟನ್ ನಿರ್ಮಿಸಲಾಗಿದ್ದು, ಅವು ನೀರು ಪೂರೈಕೆಯಾಗದೇ ನಿರುಪಯುಕ್ತವಾಗಿವೆ. ಬೇಸಿಗೆ ಆರಂಭದಲ್ಲೇ ತಾಲೂಕಿನ ಅನೇಕ‌ ಗ್ರಾಮಗಳು ನೀರಿನ ಸಮಸ್ಯೆ ಎದುರಿಸುತ್ತಿದ್ದು, ಸಂಬಂಧಿಸಿದ ಇಲಾಖೆ ಮುಂಜಾಗ್ರತಾ ಕ್ರಮ ಕೈಗೊಳ್ಳದಿದ್ದರೆ ಮತ್ತಷ್ಟು ನೀರಿನ‌ ಸಮಸ್ಯೆ ಉಲ್ಬಣವಾಗುವ ಸಾಧ್ಯತೆಗಳಿವೆ.

ಮುಂಜಾಗ್ರತಾ ಕ್ರಮ: ತಾಲೂಕಿನಲ್ಲಿ 59 ಶುದ್ದ ನೀರಿನ‌ ಘಟಕಗಳಿವೆ. ಇವುಗಳನ್ನು ಖಾಸಗಿ ಏಜೆನ್ಸಿ ವತಿಯಿಂದ ನಿರ್ಮಿಸಿದ್ದು, ಅವರೇ ನಿರ್ವಹಣೆ ಮಾಡಬೇಕಿತ್ತು. ಆದರೆ ನಿರ್ವಹಣೆ ಮಾಡುತ್ತಿಲ್ಲ. ಇದರಿಂದ ಘಟಕಗಳು ಸ್ಥಗಿತವಾಗಿವೆ. ಘಟಕಗಳ ದುರಸ್ತಿಗೆ ಏಜೆನ್ಸಿಗಳಿಗೆ ಸಾಕಷ್ಟು ಬಾರಿ ಪತ್ರ ಬರೆದಿದ್ದು, ಮೌಖಿಕವಾಗಿಯೂ ಹೇಳಿದರೂ ಸ್ಪಂದಿಸುತ್ತಿಲ್ಲ. ‌ಗ್ರಾಮಗಳಲ್ಲಿ ನೀರಿನ ಸಮಸ್ಯೆಯಾಗದಂತೆ ಅಗತ್ಯ ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗುವುದು ಎಂದು ತಾಪಂ ಇಒ ಚಂದ್ರಶೇಖ ಕಂದಕೂರ ತಿಳಿಸಿದರು.ಆಗ್ರಹ: ಜನ, ಜಾನುವಾರುಗಳಿಗೆ ನೀರಿನ ಸಮಸ್ಯೆಯಾಗದಂತೆ ಗ್ರಾಪಂ, ತಾಪಂ, ಜಿಪಂ ಅಧಿಕಾರಿಗಳು ಜವಾಬ್ದಾರಿ ವಹಿಸಬೇಕು. ಕುರಿ, ಆಡು, ಮೇಕೆ, ಎಮ್ಮೆ, ಎತ್ತು, ಆಕಳು, ಪಕ್ಷಿಗಳಿಗೆ, ಕಾಡುಪ್ರಾಣಿಗಳಿಗೆ ನೀರಿನ ಸಮಸ್ಯೆ ಎದುರಾಗದಂತೆ ಹೊಲ, ಗದ್ದೆ, ಹಳ್ಳ, ಕೊಳ್ಳಗಳು, ಗುಡ್ಡ ಸೇರಿದಂತೆ ಅಗತ್ಯವಿದ್ದಲ್ಲಿ ಸಣ್ಣ ಹೊಂಡಗಳನ್ನು ನಿರ್ಮಿಸಬೇಕು ಎಂದು ರೈತ ಸಂಘದ ಜಿಲ್ಲಾಧ್ಯಕ್ಷ ಮುತ್ತನಗೌಡ ಚೌಡರಡ್ಡಿ ಆಗ್ರಹಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಕ್ಕಳಲ್ಲಿ ಮೌಲ್ಯಯುತ ಶಿಕ್ಷಣ ಬೆಳೆಸುವುದು ಅವಶ್ಯಕ
ರೋಗಿಗಳಿಗೆ ಮೆನು ಪ್ರಕಾರ ಗುಣಮಟ್ಟದ ಆಹಾರ ನೀಡಿ: ಡಾ. ಕೃಷ್ಣ