ಶಿರಾ: ಹಾಡು ಹಗಲೇ ಚಿನ್ನದಂಗಡಿಗೆ ನುಗ್ಗಿ 30 ಲಕ್ಷ ಕ್ಕೂ ಅಧಿಕ ಮೌಲ್ಯದ ಚಿನ್ನ ಹಾಗೂ ಬೆಳ್ಳಿ ಆಭರಣ ಕದ್ದಿದ್ದ ಕಳ್ಳರನ್ನು ಘಟನೆ ನಡೆದ 24 ಗಂಟೆಯೊಳಗೆ ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಭಾನುವಾರ ಮಧ್ಯಾಹ್ನ ತಾಲೂಕಿನ ಕಳ್ಳಂಬೆಳ್ಳ ಹೋಬಳಿಯ ಬೆಂಚೆ ಗೇಟ್ ಬಳಿಯ ಆಭರಣದ ಅಂಗಡಿಗೆ ನುಗ್ಗಿದ್ದ ಕಳ್ಳರು ಅಂಗಡಿಯಲ್ಲಿದ್ದವರ ಮೇಲೆ ಖಾರದ ಪುಡಿ ಎರಚಿ ಚಿನ್ನದ ಆಭರಣವನ್ನು ಕದ್ದುಕೊಂಡು ಹೋಗಿದ್ದರು. ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಪೊಲೀಸರು ಕಾರ್ಯಾಚರಣೆ ನಡೆಸಿದ್ದರು. ಈ ವೇಳೆ ಸಾರ್ವಜನಿಕರೊಬ್ಬರು ಕಳ್ಳರು ಬೋಲೇರೋ ವಾಹನದಲ್ಲಿ ಹೋಗಿದ್ದ ಕುರಿತು ಪೊಲೀಸರಿಗೆ ಮಾಹಿತಿ ನೀಡಿದ್ದ ಹಿನ್ನೆಲೆಯಲ್ಲಿ ಬುಕ್ಕಾಪಟ್ಟಣ ಮಾರ್ಗದಲ್ಲಿ ನಾಕಾಬಂದಿ ಹಾಕಿದ್ದರು. ಈ ವೇಳೆ ಪೊಲೀಸರು ಇರುವುದನ್ನು ಅರಿತ ಕಳ್ಳರು ಬುಕ್ಕಾಪಟ್ಟಣ ಅರಣ್ಯ ಪ್ರದೇಶದಲ್ಲಿ ತಮ್ಮ ವಾಹನವನ್ನು ಬಿಟ್ಟು ಪರಾರಿಯಾಗಿದ್ದು ಈ ವೇಳೆ ಓರ್ವ ಆರೋಪಿ ಸ್ಥಳದಲ್ಲಿಯೇ ಸಿಕ್ಕಿಬಿದ್ದಿದ್ದ. ನಂತರ ಆತ ನೀಡಿದ ಮಾಹಿತಿಯಿಂದಾಗಿ ಉಳಿದ ಮೂವರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದು, ಕದ್ದಿದ್ದ ಚಿನ್ನಾಭರಣವನ್ನು ಸಹ ಪೊಲೀಸರು ವಶಪಡಿಸಿಕೊಂಡಿದ್ದಾರೆ. ತ್ವರಿತ ಗತಿಯಲ್ಲಿ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಖೆಡ್ಡಾಕ್ಕೆ ಕೆಡವಿದ ಪೊಲೀಸರ ಕಾರ್ಯಕ್ಕೆ ಸಾರ್ವಜನಿಕ ವಲಯದಲ್ಲಿ ಮೆಚ್ಚುವೆ ವ್ಯಕ್ತವಾಗಿದೆ.