ದೇವರಾಜ ಅರಸು ಅವರ 43ನೇ ಪುಣ್ಯಸ್ಮರಣೆ

KannadaprabhaNewsNetwork | Published : Jun 7, 2025 2:16 AM
ಕರ್ನಾಟಕ ಸಂಸ್ಕೃತಿ ರಕ್ಷಣಾ ವೇದಿಕೆ ಅಧ್ಯಕ್ಷ ಹೊಸಕೋಟೆ ನಟರಾಜು, ಸಮಾಜ ಸೇವಕ ನಟರಾಜ ಶೆಟ್ಟರು, ದೇವರಾಜ ಅರಸು ರಾಜ್ಯದ ಹಿಂದುಳಿದ, ಶೋಷಿತ ವರ್ಗಗಳ ಪರವಾಗಿ ಜಾರಿಗೆ ತಂದ ಯೋಜನೆಗಳ ಬಗ್ಗೆ ತಿಳಿಸಿದರು.

ಕನ್ನಡಪ್ರಭ ವಾರ್ತೆ ತುಮಕೂರು

ನಗರದ ದೇವರಾಜ ಅರಸು ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಲ್ಲಿ ಶುಕ್ರವಾರ ಜಿಲ್ಲಾ ಕನ್ನಡ ಸೇನೆ ವತಿಯಿಂದ ಮಾಜಿ ಮುಖ್ಯಮಂತ್ರಿ ದಿ.ದೇವರಾಜ ಅರಸು ಅವರ 43ನೇ ಪುಣ್ಯಸ್ಮರಣೆ ಆಚರಿಸಲಾಯಿತು.

ಅರಸು ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ನಂತರ ಮಾತನಾಡಿದ ಕನ್ನಡ ಸೇನೆ ಜಿಲ್ಲಾಧ್ಯಕ್ಷ ಧನಿಯಾಕುಮಾರ್, ದೇವರಾಜ ಅರಸು ಅವರು ಮುಖ್ಯಮಂತ್ರಿಯಾಗಿದ್ದಾಗ ಬಡವರ ಪರ ಅನೇಕ ಯೋಜನೆಗಳನ್ನು ಜಾರಿಗೆ ತಂದರು. ಉಳುವವನೇ ಭೂಮಿಯ ಒಡೆಯ ಎಂಬ ಕ್ರಾಂತಿಕಾರಕ ಕಾರ್ಯಕ್ರಮ ಜಾರಿಗೊಳಿಸಿ, ಹಲವು ವರ್ಷಗಳಿಂದ ಉಳುಮೆ ಮಾಡುತ್ತಿದ್ದ ಶ್ರಮಜೀವಿಗಳು ಭೂಮಿಯ ಒಡೆತನ ಹೊಂದಲು ಕಾರಣರಾದರು. ಶೋಷಿತರು, ಹಿಂದುಳಿದ ವರ್ಗಗಳ ನಿರ್ಲಕ್ಷಿತ ಸಮಾಜಗಳನ್ನು ಒಗ್ಗೂಡಿಸಿ ಅವರಲ್ಲಿ ರಾಜಕೀಯ ಶಕ್ತಿ, ಸಾಮಾಜಿಕ ಸ್ಥಾನಮಾನ ದೊರೆಕಿಸಲು ನೆರವಾದರು ಎಂದು ಹೇಳಿದರು.

ಈ ಬಸ್ ನಿಲ್ದಾಣಕ್ಕೆ ಅರಸು ಅವರ ಹೆಸರಿಟ್ಟು ಸರ್ಕಾರ ಅವರಿಗೆ ಗೌರವ ಸಲ್ಲಿಸಿದೆ.ಈ ನಿಲ್ದಾಣದಲ್ಲಿ ಅರಸು ಅವರ ಪುತ್ಥಳಿ ಸ್ಥಾಪನೆ ಮಾಡಿ, ಅವರು ನಾಡಿಗೆ ನೀಡಿದ ಕೊಡುಗೆಯನ್ನು ಮುಂದಿನ ತಲೆಮಾರಿಗೆ ಪರಿಚಯಿಸಿ, ಅವರ ಸೇವೆಯನ್ನು ಸ್ಮರಣೀಯಗೊಳಿಸಬೇಕು. ದೇವರಾಜ ಅರಸು ಅವರು ಹುಟ್ಟಿದ ಮೈಸೂರು ಜಿಲ್ಲೆಯ ಕಲ್ಲಹಳ್ಳಿಯ ಮನೆ ಹಾಗೂ ಸಮಾದಿಯನ್ನು ಸರ್ಕಾರ ಜೀರ್ಣೋದ್ಧಾರ ಮಾಡಿ ಸ್ಮಾರಕವಾಗಿ ಅಭಿವೃದ್ಧಿಪಡಿಸಬೇಕು ಎಂದು ಮನವಿ ಮಾಡಿದರು.

ಕನ್ನಡ ಸೇನೆ ಜಿಲ್ಲಾ ಗೌರವಾಧ್ಯಕ್ಷ ಆರ್.ಎನ್.ವೆಂಕಟಾಚಲ ಅವರು ದೇವರಾಜ ಅರಸು ಅವರು ಮುಖ್ಯಮಂತ್ರಿಯಾಗಿದ್ದಾಗ ಜಾರಿಗೆ ತಂದ ಬಡವರ ಪರ ಯೋಜನೆಗಳನ್ನು ವಿವರಿಸಿದರು.

ಕರ್ನಾಟಕ ಸಂಸ್ಕೃತಿ ರಕ್ಷಣಾ ವೇದಿಕೆ ಅಧ್ಯಕ್ಷ ಹೊಸಕೋಟೆ ನಟರಾಜು, ಸಮಾಜ ಸೇವಕ ನಟರಾಜ ಶೆಟ್ಟರು, ದೇವರಾಜ ಅರಸು ರಾಜ್ಯದ ಹಿಂದುಳಿದ, ಶೋಷಿತ ವರ್ಗಗಳ ಪರವಾಗಿ ಜಾರಿಗೆ ತಂದ ಯೋಜನೆಗಳ ಬಗ್ಗೆ ತಿಳಿಸಿದರು.

ನಂತರ ಕಾರ್ಯಕ್ರಮದಲ್ಲಿ ಕೆಎಸ್‌ಆರ್‌ಟಿಸಿ ಸಿಬ್ಬಂದಿಯನ್ನು ಸನ್ಮಾನಿಸಿ ಗೌರವಿಸಲಾಯಿತು.

ಮುಖಂಡರಾದ ಗುರು ರಾಘವೇಂದ್ರ, ಜೆ.ವಿಠಲ್, ಸತೀಶ್, ನಟರಾಜ್, ವರದರಾಜು, ಬೆಸ್ಟೆಕ್ಸ್ ರಾಮರಾಜು, ಉಮೇಶ್‌ಕುಮಾರ್ ಮೊದಲಾದವರು ಭಾಗವಹಿಸಿದ್ದರು.