ಯಕ್ಷಗಾನ ಅಕಾಡೆಮಿ ಘೋಷಿಸಿರುವ ಯಕ್ಷಸಿರಿ ಪ್ರಶಸ್ತಿಗೆ ಬಂಟ್ವಾಳ ತಾಲೂಕಿನ ಕೋಡಪದವು ಕುಕ್ಕಿಲ ನಿವಾಸಿ ಪರಂಪರೆಯ ಶೈಲಿಯ ಹವ್ಯಾಸಿ ಭಾಗವತೆ ದುರ್ಗಾಪರಮೇಶ್ವರಿ ಕುಕ್ಕಿಲ ಆಯ್ಕೆಗೊಂಡಿದ್ದಾರೆ.
ಬಂಟ್ವಾಳ: ಯಕ್ಷಗಾನ ಅಕಾಡೆಮಿ ಘೋಷಿಸಿರುವ ಯಕ್ಷಸಿರಿ ಪ್ರಶಸ್ತಿಗೆ ಬಂಟ್ವಾಳ ತಾಲೂಕಿನ ಕೋಡಪದವು ಕುಕ್ಕಿಲ ನಿವಾಸಿ ಪರಂಪರೆಯ ಶೈಲಿಯ ಹವ್ಯಾಸಿ ಭಾಗವತೆ ದುರ್ಗಾಪರಮೇಶ್ವರಿ ಕುಕ್ಕಿಲ ಆಯ್ಕೆಗೊಂಡಿದ್ದಾರೆ. ಸುಮಾರು 39 ವರ್ಷಗಳಿಂದ ಯಕ್ಷಗಾನದಲ್ಲಿ ತೊಡಗಿಸಿಕೊಂಡಿರುವ 55 ವರ್ಷದ ಹವ್ಯಾಸಿ ಮಹಿಳಾ ಭಾಗವತೆ ದುರ್ಗಾಪರಮೇಶ್ವರಿ ಕುಕ್ಕಿಲ ಪ್ರಸಿದ್ಧ ಭಾಗವತ ಮಾಂಬಾಡಿ ನಾರಾಯಣ ಭಾಗವತರ ಮೊಮ್ಮಗಳು. ಹಾಗೂ ಬಂಟ್ವಾಳ ತಾಲೂಕಿನ ಕೋಡಪದವು ನಿವಾಸಿ ಪ್ರಗತಿಪರ ಕೃಷಿಕ ಪುರಂದರವಿಠಲ ಕುಕ್ಕಿಲ ಅವರ ಪತ್ನಿ. ಅಣ್ಣಂದಿರು (ಶಂಕರನಾರಾಯಣ ಭಟ್ ಬಾಯಾರು ಮತ್ತು ನಾರಾಯಣ ಭಟ್) ಅಜ್ಜ ಮಾಂಬಾಡಿ ನಾರಾಯಣ ಭಾಗವತರಲ್ಲಿ ಯಕ್ಷಗಾನ ಹಿಮ್ಮೇಳ ಅಭ್ಯಸಿಸಿ, ಮನೆಯಲ್ಲಿ ಕಲಿಯುತ್ತಿದ್ದುದು ಅದು ಪೂರಕವಾಯಿತು. ಅಣ್ಣ ನಾರಾಯಣ ಭಟ್ ಅವರಿಂದ ಪೂರ್ವರಂಗದ ಪಾಠ ಹೇಳಿಸಿಕೊಂಡ ಅವರು, 1987ರಲ್ಲಿ ಮೊದಲ ಬಾರಿ ಬಯಲಾಟದಲ್ಲಿ ವೇದಿಕೆಯಲ್ಲಿ ಭಾಗವತಿಕೆ ಮಾಡಿದ್ದರು.
1993ರಿಂದ ಆಕಾಶವಾಣಿ ಕಲಾವಿದೆಯಾದ ಅವರು, ಅನೇಕ ಸಂಘ, ಸಂಸ್ಥೆ, ಹವ್ಯಾಸಿ ಆಟ, ತಾಳಮದ್ದಳೆ, ಮಹಿಳಾ, ಮತ್ತು ಮಕ್ಕಳ ಯಕ್ಷಗಾನ ಕಾರ್ಯಕ್ರಮಗಳಲ್ಲಿ ಭಾಗವತರಾಗಿ ವೇದಿಕೆಯನ್ನೇರಿದ್ದಾರೆ. ಬೆಂಗಳೂರು ದೂರದರ್ಶನದಲ್ಲಿ ಯಕ್ಷಗಾನ ಪ್ರದರ್ಶನ ನೀಡಿದ್ದಾರೆ.