ರಾಮನಗರ: ದಿ ಭಾರತಿ ಕೋ ಆಪರೇಟಿವ್ ಸೊಸೈಟಿ 2025-26 ನೇ ಸಾಲಿಗೆ ಆಡಳಿತಾತ್ಮಕ ಖರ್ಚು ಕಳೆದು 44 ಲಕ್ಷದ 37 ಸಾವಿರ ನಿವ್ವಳ ಲಾಭ ಗಳಿಸಿದೆ ಎಂದು ಸೊಸೈಟಿ ಅಧ್ಯಕ್ಷ ಕೆ.ಚಂದ್ರಯ್ಯ ಸಂತಸ ವ್ಯಕ್ತಪಡಿಸಿದರು.
ಸೊಸೈಟಿಯ ನಿರ್ದೇಶಕರು, ಸಿಬ್ಬಂದಿ ವರ್ಗದವರ ಸಹಕಾರ ಸೇವಾ ಮನೋಭಾವದಿಂದ ಸೊಸೈಟಿ ಈ ವರ್ಷವೂ ಸಹ ಲಾಭದಲ್ಲಿದ್ದು, ಸಾಲಗಾರರಿಂದ ಬರಬೇಕಿರುವ ಬಡ್ಡಿ ಹಣ ಪೂರ್ತಿ ಬಂದಿದ್ದರೆ ಸದರಿ ಸಾಲಿನ ನಿವ್ವಳ ಲಾಭ ಹೆಚ್ಚಾಗುತ್ತಿತ್ತು. ನಮ್ಮ ಸೊಸೈಟಿ ಸಾಲ ರೈತಾಪಿ ವರ್ಗದ ಸಾಲವಾಗದಿದ್ದರೂ ಸಹ ಸರ್ಕಾರದ ಸಾಲ ಬಡ್ಡಿ ಮನ್ನಾ ಅನುಕೂಲತೆಯನ್ನು ಮನಸ್ಸಿನಲ್ಲಿ ಇಟ್ಟುಕೊಂಡು ಸಾಲ ಮತ್ತು ಬಡ್ಡಿ ಮರುಪಾವತಿ ಮಾಡದಿರುವುದರಿಂದ ಬಡ್ಡಿ ಲಾಭಕ್ಕೆ ಕುಂಠಿತವಾಗಿದೆ ಎಂದು ಚಂದ್ರಯ್ಯ ಹೇಳಿದರು.
ಸೊಸೈಟಿ ಸಿಇಒ ಬಿ.ಎಸ್.ಸುರೇಶ್ ಮಾತನಾಡಿ, ವಾರ್ಷಿಕ ವರದಿ ಮಂಡಿಸಿ ನಿವ್ವಳ ಲಾಭವನ್ನು ರಿಸರ್ವ್ ಫಂಡ್ ಗೆ ಶೇ.25, ಸಹಕಾರ ಶಿಕ್ಷಣ ನಿಧಿಗೆ ಶೇ.2, ಸದಸ್ಯರ ಷೇರು ಡಿವಿಡೆಂಡ್ ಗೆ ಶೇ.14, ಕರಡು ಸಾಲ ಶೇ.5, ಕಟ್ಟಡ ನಿಧಿಗೆ ಶೇ.10 ವಿಲೇವಾರಿ ಮಾಡಲಾಗಿದೆ. 23 ಸದಸ್ಯರ ಮಕ್ಕಳ ವಿದ್ಯಾಭ್ಯಾಸ ಪ್ರೋತ್ಸಾಹ ಧನ, ಮರಣೋತ್ತರ ಪರಿಹಾರ ವಿತರಣೆಗೆ ಕ್ರಮ ವಹಿಸಲಾಗಿದೆ ಎಂದು ಪ್ರಗತಿಯ ಪಕ್ಷಿನೋಟ ವಿವರಿಸಿದರು.2025-26 ನೇ ಸಾಲಿನ ಆಡಿಟ್ ವರದಿ ಮತ್ತು ಖರ್ಚು ವೆಚ್ಚಗಳಿಗೆ ಒಪ್ಪಿಗೆ ಹಾಗೂ 2026-27 ನೇ ಸಾಲಿಗೆ ಬೇಕಾಗುವ ಬಜೆಟ್ ಗೆ ಅನುಮೋದನೆ ನೀಡುವಂತೆ ವಿಷಯ ಗಳನ್ನು ಮಂಡಿಸಿದರು. ಸದಸ್ಯರು ಸೊಸೈಟಿಯ ಪ್ರಗತಿಗೆ ಮೆಚ್ಚುಗೆ ವ್ಯಕ್ತಪಡಿಸಿ ಸರ್ವಾನುಮತದಿಂದ ಒಪ್ಪಿಗೆ ಸೂಚಿಸಿದರು.
20ಕೆಆರ್ ಎಂಎನ್ 2.ಜೆಪಿಜಿ