ಕಳೆದ 48 ಗಂಟೆಗಳಲ್ಲಿ 47 ಮನೆಗಳು ಭಾಗಶಃ ಹಾನಿ

KannadaprabhaNewsNetwork |  
Published : Aug 20, 2025, 01:30 AM IST
19ಡಿಡಬ್ಲೂಡಿ3ಕಲಘಟಗಿ ತಾಲೂಕು ಹಿರೇಹೊನ್ನಳ್ಳಿ ಗ್ರಾಮದಲ್ಲಿ ಬಿದ್ದಿರುವ ಮಣ್ಣಿನ ಮನೆ.  | Kannada Prabha

ಸಾರಾಂಶ

ರಂತರ ಮಳೆಯಿಂದ ಕುಂದಗೋಳ, ನವಲಗುಂದ, ಧಾರವಾಡ ಸೇರಿದಂತೆ ಹಲವು ಕಡೆಗಳಲ್ಲಿ ಹೆಸರು ಸೇರಿದಂತೆ ಹಲವು ಬೆಳೆಗಳು ಸಂಪೂರ್ಣವಾಗಿ ನೀರಿನಲ್ಲಿ ನಿಂತಿವೆ. ನಿರಂತರ ಮಳೆಯಿಂದಾಗಿ ರೈತರು ಮಮ್ಮುಲ ಮರಗುವಂತಾಗಿದೆ. ಅದೇ ರೀತಿ ಹತ್ತಿ, ಸೋಯಾ, ಉದ್ದಿನ ಸ್ಥಿತಿ ಬೇರಿಲ್ಲ.

ಧಾರವಾಡ: ಕಳೆದ ಎರಡು ದಿನಗಳಿಂದ ಹುಬ್ಬಳ್ಳಿ- ಧಾರವಾಡ ಅವಳಿ ನಗರ ಸೇರಿದಂತೆ ಜಿಲ್ಲಾದ್ಯಂತ ನಿರಂತರವಾಗಿ ಮಳೆ ಸುರಿಯುತ್ತಿದ್ದು, ಕಳೆದ 48 ಗಂಟೆಗಳಲ್ಲಿ ಮಳೆಯಿಂದಾಗಿ 47 ಮನೆಗಳಿಗೆ ಭಾಗಶಃ ಹಾನಿಯಾಗಿದೆ.

ಹವಾಮಾನ ಇಲಾಖೆ ಮುನ್ನೆಚ್ಚರಿಕೆ ಕ್ರಮದಂತೆ ಮಂಗಳವಾರ ಮಳೆ ಹಿನ್ನೆಲೆಯಲ್ಲಿ ಜಿಲ್ಲೆಯ ಎಲ್ಲ ಶಾಲಾ-ಕಾಲೇಜು, ಅಂಗನವಾಡಿಗಳಿಗೆ ರಜೆ ಸಹ ಘೋಷಿಸಲಾಗಿತ್ತು. ಅಂತೆಯೇ, ಮಂಗಳವಾರ ಬೆಳಗ್ಗೆಯಿಂದ ರಾತ್ರಿ ವರೆಗೂ ಆಗಾಗ ಜೋರು ಹಾಗೂ ಜಿಟಿ ಜಿಟಿ ಮಳೆ ಇತ್ತು. ಈ ಮಳೆಯಿಂದ ಈಗಾಗಲೇ ಜಿಲ್ಲೆಯ ಎಲ್ಲ ಕೆರೆ-ಕಟ್ಟೆಗಳು ತುಂಬಿದ್ದು, ಸಮೀಪದ ಅಳ್ನಾವರದ ಹುಲಿಕೇರಿ ಕೋಡಿ ಹರಿಯುತ್ತಿದೆ. ಇನ್ನು, ಮಳೆಯಿಂದ ಮಣ್ಣಿನ ಮನೆಗಳು ಬೀಳುತ್ತಿದ್ದು ಎಚ್ಚರದಿಂದ ಇರಲು ಜಿಲ್ಲಾಡಳಿತ ಸಾರ್ವಜನಿಕರಿಗೆ ಎಚ್ಚರಿಕೆ ಸಹ ನೀಡಿದೆ.

ಬರೀ ಎರಡು ದಿನಗಳಲ್ಲಿ ಜಿಲ್ಲೆಯ ಪೈಕಿ ಧಾರವಾಡದಲ್ಲಿ 25, ಹುಬ್ಬಳ್ಳಿ ನಗರ 10, ಕಲಘಟಗಿ 7, ಹುಬ್ಬಳ್ಳಿ ಗ್ರಾಮೀಣ 3 ಮತ್ತು ಕುಂದಗೋಳ ತಾಲೂಕಿನಲ್ಲಿ 2 ಸೇರಿದಂತೆ ಒಟ್ಟು 47 ಮನೆಗಳಿಗೆ ಭಾಗಶಃ ಹಾನಿಯಾಗಿದೆ. ಅದೃಷ್ಟವಶಾತ್‌ ಯಾವುದೇ ಮಾನವ ಮತ್ತು ಜಾನುವಾರು ಹಾನಿಯಾಗಿಲ್ಲ ಎಂದು ಜಿಲ್ಲಾಡಳಿತವು ಪ್ರಾಥಮಿಕ ವರದಿ ನೀಡಿದೆ. ಬೆಳೆನಷ್ಟ ಕುರಿತು ನಡೆಯುತ್ತಿರುವ ಜಂಟಿ ಸಮೀಕ್ಷೆ ಪ್ರಗತಿಯಲ್ಲಿದೆ ಎಂದು ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರ ಮಾಹಿತಿ ನೀಡಿದೆ.

ಇನ್ನು, ನಿರಂತರ ಮಳೆಯಿಂದ ಕುಂದಗೋಳ, ನವಲಗುಂದ, ಧಾರವಾಡ ಸೇರಿದಂತೆ ಹಲವು ಕಡೆಗಳಲ್ಲಿ ಹೆಸರು ಸೇರಿದಂತೆ ಹಲವು ಬೆಳೆಗಳು ಸಂಪೂರ್ಣವಾಗಿ ನೀರಿನಲ್ಲಿ ನಿಂತಿವೆ. ನಿರಂತರ ಮಳೆಯಿಂದಾಗಿ ರೈತರು ಮಮ್ಮುಲ ಮರಗುವಂತಾಗಿದೆ. ಅದೇ ರೀತಿ ಹತ್ತಿ, ಸೋಯಾ, ಉದ್ದಿನ ಸ್ಥಿತಿ ಬೇರಿಲ್ಲ.

ಇಂದು ಸಹ ಶಾಲೆಗೆ ರಜೆ: ಜಿಲ್ಲೆಯಲ್ಲಿ ಕಳೆದ ಕೆಲವು ದಿನಗಳಿಂದ ನಿರಂತರವಾಗಿ ಮಳೆ ಸುರಿಯುತ್ತಿರುವ ಹಿನ್ನೆಲೆಯಲ್ಲಿ ಮಕ್ಕಳ ಆರೋಗ್ಯ ಹಾಗೂ ಸುರಕ್ಷತೆ ದೃಷ್ಟಿಯಿಂದ ಬುಧವಾರವೂ ಆ. 20 ರಂದು ಜಿಲ್ಲೆಯ ಎಲ್ಲ ಅಂಗನವಾಡಿ ಕೆಂದ್ರಗಳಿಗೆ, ಪ್ರಾಥಮಿಕ ಶಾಲೆಗಳಿಗೆ, ಪ್ರೌಢಶಾಲೆಗಳಿಗೆ ಮತ್ತು ಪದವಿ ಹಾಗೂ ಪದವಿ ಪೂರ್ವ ಮಹಾವಿದ್ಯಾಲಯಗಳಿಗೆ ರಜೆ ಘೋಷಿಸಿ ಜಿಲ್ಲಾಧಿಕಾರಿ ದಿವ್ಯ ಪ್ರಭು ಆದೇಶ ಹೊರಡಿಸಿದ್ದಾರೆ.

ಈ ಆಗಸ್ಟ್ 20ರ ರಜಾ ದಿನವನ್ನು ಮುಂದಿನ ಸಾರ್ವತ್ರಿಕ ರಜಾ ದಿನಗಳಲ್ಲಿ ವರ್ಗಗಳನ್ನು ನಡೆಸುವ ಮೂಲಕ ಹೊಂದಾಣಿಕೆ ಮಾಡಲು ಸಂಬಂಧಿಸಿದ ಇಲಾಖೆ ಮುಖ್ಯಸ್ಥರಿಗೆ ಆದೇಶದಲ್ಲಿ ಅವರು ನಿರ್ದೇಶಿಸಿದ್ದಾರೆ.

PREV

Recommended Stories

ವೈದ್ಯರ ಕೊರತೆಗೆ ನಲುಗಿದ ಸಾರ್ವಜನಿಕ ಆಸ್ಪತ್ರೆ
ಸತ್ಯಕಾಮರ ಸುಮ್ಮನೆಯಲ್ಲಿ ಕಸಾಪ ವಾರ್ಷಿಕ ಸಭೆ: ಡಾ.ಮಹೇಶ ಜೋಷಿ