ದುರಂತ ಪ್ರಕರಣದಲ್ಲಿ 17 ಜನರ ಬದುಕು ದಾರುಣ ಅಂತ್ಯ । ಸಂತ್ರಸ್ತರಿಗೆ ಸರ್ಕಾರದ ಪರಿಹಾರ ಘೋಷಣೆಗೆ ಸೀಮಿತ ಜಿ. ದೇವರಾಜನಾಯ್ದುಕನ್ನಡಪ್ರಭ ವಾರ್ತೆ ಹನೂರು
ಹನೂರು ತಾಲೂಕಿನ ಕಿಚ್ಚುಗುತ್ತಿ ಮಾರಮ್ಮನ ದೇವಾಲಯದಲ್ಲಿ ವಿಷ ಪ್ರಸಾದ ದುರಂತ ಪ್ರಕರಣ ಸಂಭವಿಸಿ 5 ವರ್ಷಗಳು ಕಳೆದರೂ ಕೂಡ ಸಂತ್ರಸ್ತರು ಇಂದಿಗೂ ಅನಾರೋಗ್ಯದಿಂದ ಬಳಲುತ್ತಿದ್ದಾರೆ. ಸರ್ಕಾರ ನೀಡಿದ ಭರವಸೆಗಳು ಭರವಸೆಯಾಗಿಯೇ ಉಳಿದಿದೆ. ವಿಷ ಪ್ರಸಾದ ದುರಂತ ಪ್ರಕರಣಕ್ಕೂ ಮುನ್ನ ಭಕ್ತರಿಂದ ತುಂಬಿ ತುಳುಕುತ್ತಿದ್ದ ದೇವಾಲಯ 5 ವರ್ಷ ಕಳೆದರೂ ಭಕ್ತರಿಲ್ಲದೇ ಬಣಗುಡುತ್ತಿದೆ. ಈ ಪ್ರಕರಣದಲ್ಲಿ 17 ಜನ ಸಾವನ್ನಪ್ಪಿದ್ದು, ಹಲವು ಜನರು ಇನ್ನೂ ಸಹ ವಿವಿಧ ನೂನ್ಯತೆಗಳಿಂದ ಬಳಲುತ್ತಿದ್ದು, ಮೃತರ ಕುಟುಂಬಗಳಿಗೆ ಸರ್ಕಾರ ಈ ಹಿಂದೆ ಘೋಷಿಸಿದ್ದ ಪರಿಹಾರ ಹಾಗೂ ಮನೆನಿರ್ಮಿಸಿ ಕೊಡುವ ಭರವಸೆಗಳು ನೆನಗೊಂದಿಗೆ ಬಿದ್ದಿವೆ. ಘಟನೆ ಸಂಭವಿಸಿದಾಗಿನಿಂದ ಎರಡು ವರ್ಷಗಳ ಕಾಲ ಬಾಗಿಲು ಮುಚ್ಚಿದ್ದ ಮಾರಮ್ಮನ ದೇವಾಲಯವನ್ನು ಮುಜರಾಯಿ ಇಲಾಖೆಯು ಸಾರ್ವಜನಿಕರಿಗೆ ಲೋಕಾರ್ಪಣೆ ಮಾಡಿತ್ತು.ಘಟನೆಗೂ ಮೊದಲು ದೇವಾಲಯದಲ್ಲಿ ಧಾರ್ಮಿಕ ಪೂಜಾ ಕೈಂಕರ್ಯಗಳಿಂದ ಜನಜಂಗುಳಿ ತುಂಬಿರುತ್ತಿತ್ತು. ಆದರೀಗ ಮಾರಮ್ಮನ ಪೂಜಾ ಕಾರ್ಯಕ್ರಮಗಳು ಮಾತ್ರ ದಿನನಿತ್ಯ ನಡೆಯುತ್ತಿದೆ. ವಾರಂತ್ಯ ಹೊರತುಪಡಿಸಿ ಈ ದೇವಾಲಯವು ಭಕ್ತರಿಲ್ಲದೆ ಬಣಗುಡುತ್ತಿದೆ.ಸುತ್ತಲು ಗಿಡ ಗಂಟೆಗಳು:
ಧಾರ್ಮಿಕ ಕೈಂಕರ್ಯಗಳು ನಡೆಯುತ್ತಿದ್ದ ದೇವಾಲಯದ ಸುತ್ತಲೂ ಗಿಡಗಂಟೆಗಳು ಬೆಳೆದು ಪಾಳು ಕೊಂಪೆಯಂತಾಗಿದೆ. ಇನ್ನಾದರೂ ಸಂಬಂಧಪಟ್ಟ ಜಿಲ್ಲಾಡಳಿತ ಇಲ್ಲಿನ ಧಾರ್ಮಿಕ ಸ್ಥಳದಲ್ಲಿ ಭಕ್ತರಿಗೆ ಬೇಕಾದ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕು ಎಂದು ಪ್ರಜ್ಞಾವಂತ ನಾಗರಿಕರು ಆಗ್ರಹಿಸಿದ್ದಾರೆ.ಹನೂರು ತಾಲೂಕಿನ ಕಿಚ್ಚುಗುತ್ತಿ ಮಾರಮ್ಮ ದೇವಸ್ಥಾನ ಭಕ್ತರಿಲ್ಲದೇ ಬಣಗುಡುತ್ತಿರುವುದು. ಕಿಚ್ಚು ಗುತ್ತಿಯ ತಾಯಿ ಮಾರಮ್ಮದೇವಿ.