50 ಲಕ್ಷ ರು.ಮೌಲ್ಯದ ಬಂಗಾರ ಬೆಳ್ಳಿ ಆಭರಣ ವಶ

KannadaprabhaNewsNetwork | Published : Sep 14, 2024 1:52 AM

50 ಲಕ್ಷ ರು.ಮೌಲ್ಯದ ಬಂಗಾರ ಬೆಳ್ಳಿ ಆಭರಣ ವಶ

ಕನ್ನಡಪ್ರಭ ವಾರ್ತೆ

ತುಮಕೂರು: ಮನೆಯೊಂದರ ಹಿಂಬಾಗಿಲು ಒಡೆದು ನಗದು ಹಾಗೂ ಚಿನ್ನಾಭರಣವನ್ನು ಕಳ್ಳತನ ಮಾಡಿದ್ದ ಇಬ್ಬರು ಆರೋಪಿಗಳನ್ನು ಜಯನಗರ ಪೊಲೀಸರು ಪತ್ತೆಹಚ್ಚಿ ಬಂಧಿಸಿ, 50 ಲಕ್ಷ ರೂ. ಬೆಲೆಯ ಚಿನ್ನ-ಬೆಳ್ಳಿ ಆಭರಣಗಳನ್ನು ವಶಪಡಿಸಿಕೊಂಡಿದ್ದಾರೆ.ಆಂಧ್ರದ ಗುಂಟೂರಿನ ಬಂಡಿಕಾಳ್ಳ ರತ್ನರಾಜು ಅಲಿಯಾಸ್ ರಾಜು (36) ಹಾಗೂ ಮಧುಗಿರಿ ತಾಲೂಕು ಹಳೇ ಇಟಕಲೋಟಿ ಗ್ರಾಮದ ಎಚ್.ವಿ. ಶ್ರೀನಿವಾಸ ಅಲಿಯಾಸ್ ಕಳ್ಳಸೀನ (30) ಎಂಬುವರನ್ನು ಬಂಧಿಸಿದ್ದು, ಇವರಿಂದ 49,16,520 ರೂ. ಬೆಲೆಯ 819 ಗ್ರಾಂ ಚಿನ್ನದ ಒಡವೆಗಳು, 88 ಸಾವಿರ ರೂ. ಬೆಲೆ ಬಾಳುವ 1 ಕೆ.ಜಿ. 300 ಗ್ರಾಂ ತೂಕದ ಬೆಳ್ಳಿಯ ಆಭರಣಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ವಿ. ಅಶೋಕ್ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.ನಗರದ ಜಯನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಕುಟುಂಬ ಸಮೇತರಾಗಿ ಕಳೆದ ಮಾರ್ಚ್ 2 ರಂದು ಮದ್ದೂರಿಗೆ ಗೃಹಪ್ರವೇಶಕ್ಕಾಗಿ ಮನೆಯವರು ಹೋಗಿದ್ದರು. ಈ ಸಂದರ್ಭದಲ್ಲಿ ಹೊಂಚು ಹಾಕಿದ ಖದೀಮರು ಮನೆಯ ಹಿಂಬಾಗಿಲನ್ನು ಆಯುಧದಿಂದ ಮೀಟಿ ಒಳನುಗ್ಗಿ ಮನೆಯೊಳಗಿದ್ದ 100 ಗ್ರಾಂ ತೂಕದ ಚಿನ್ನದ ಒಡವೆಗಳು, 3 ಕೆ.ಜಿ. 300 ಗ್ರಾಂ ತೂಕದ ಬೆಳ್ಳಿ ವಸ್ತುಗಳು ಹಾಗೂ 1 ಲಕ್ಷ ರೂ. ನಗದನ್ನು ದೋಚಿಕೊಂಡು ಪರಾರಿಯಾಗಿದ್ದರು. ಈ ಸಂಬಂಧ ಪ್ರಕರಣ ಜಯನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು ಎಂದರು.ಅಡಿಷನಲ್ ಎಸ್ಪಿಗಳಾದ ವಿ. ಮರಿಯಪ್ಪ, ಬಿ.ಎಸ್. ಅಬ್ದುಲ್ ಖಾದರ್ ಮಾರ್ಗದರ್ಶನದಲ್ಲಿ ಡಿವೈಎಸ್ಪಿ ಚಂದ್ರಶೇಖರ್ ನೇತೃತ್ವದಲ್ಲಿ ತಿಲಕ್‌ಪಾರ್ಕ್ ವೃತ್ತದ ಸರ್ಕಲ್ ಇನ್ಸ್‌ಪೆಕ್ಟರ್ ಪುರುಷೋತ್ತಮ್, ಜಯನಗರ ಪಿಎಸ್ಐ-2 ಬಿ.ಕೆ. ಹನುಮಂತರಾಯಪ್ಪ, ಸಿಬ್ಬಂದಿಗಳಾದ ಎಂ.ಎಸ್. ಅಬೀದ್, ಸಿದ್ದಲಿಂಗರಾಧ್ಯ, ಮಂಜುನಾಥ್, ಚಾಲಕ ಸಿದ್ದೇಶ್ವರ, ಪಿ.ಸಿ. ನಿಜಾಮುದ್ದೀನ್ ಷಾ, ಲೋಕೇಶ್, ನವೀನ್‌ಕುಮಾರ್, ಸುನೀಲ್ ಲಮಾಣಿ, ಸುನೀಲ್‌ಕುಮಾರ್, ರಾಮಕೃಷ್ಣ, ಸುಶ್ಮಿತಾ ಹಾಗೂ ಜಿಲ್ಲಾ ಪೊಲೀಸ್ ಕಚೇರಿಯ ಹೆಚ್.ಸಿ. ನರಸಿಂಹರಾಜು, ಹೆಚ್.ಸಿ. ಜಗದೀಶ್ ಅವರು ಕಾರ್ಯಾಚರಣೆ ನಡೆಸಿ ಸದರಿ ಆರೋಪಿಗಳನ್ನು ಮಾಲು ಸಮೇತ ಬಂಧಿಸುವಲ್ಲಿ ಶ್ರಮಿಸಿದ್ದಾರೆ ಎಂದು ಅವರು ವಿವರಿಸಿದರು.ಈ ಆರೋಪಿಗಳ ವಿರುದ್ಧ ಜಯನಗರ ಪೊಲೀಸ್ ಠಾಣೆಯಲ್ಲಿ 10 ಪ್ರಕರಣ, ಹೊಸ ಬಡಾವಣೆ ಪೊಲೀಸ್ ಠಾಣೆಯ 1 ಪ್ರಕರಣ, ನಗರ ಪೊಲೀಸ್ ಠಾಣೆ 2 ಪ್ರಕರಣ ಹಾಗೂ ಹೆಬ್ಬೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ 1 ಪ್ರಕರಣ ಸೇರಿ ಒಟ್ಟು 15 ಪ್ರಕರಣಗಳು ದಾಖಲಾಗಿವೆ ಎಂದು ಅವರು ಮಾಹಿತಿ ನೀಡಿದರು.

ಪತ್ರಿಕಾಗೋಷ್ಠಿಯಲ್ಲಿ ಡಿವೈಎಸ್ಪಿ ಕೆ.ಆರ್. ಚಂದ್ರಶೇಖರ್, ತಿಲಕ್‌ಪಾರ್ಕ್ ಸಿಪಿಐ ಜಿ. ಪುರುಷೋತ್ತಮ, ಜಯನಗರ ಪಿಎಸ್ಐಗಳಾದ ಮಹಾಲಕ್ಷ್ಮಮ್ಮ, ಹನುಮಂತರಾಯಪ್ಪ ಮತ್ತು ಸಿಬ್ಬಂದಿ ಉಪಸ್ಥಿತರಿದ್ದರು.

ಮೂವರು ಸರಗಳ್ಳರ ಬಂಧನ

ತುಮಕೂರುಮಹಿಳೆಯ ಕೊರಳಲ್ಲಿದ್ದ ಚಿನ್ನದ ಸರವನ್ನು ಅಪಹರಿಸಿಕೊಂಡು ಪರಾರಿಯಾಗಿದ್ದ ಮೂವರು ಸರಗಳ್ಳರನ್ನು ಇಲ್ಲಿನ ಜಯನಗರ ಠಾಣೆ ಪೊಲೀಸರು ಪತ್ತೆಹಚ್ಚಿ ಬಂಧಿಸಿ, 5,99 ಲಕ್ಷ ಬೆಲೆಯ ಚಿನ್ನದ ಸರಗಳು ಹಾಗೂ ದ್ವಿಚಕ್ರ ವಾಹನವನ್ನು ವಶಪಡಿಸಿಕೊಂಡಿದ್ದಾರೆ.ಮಂಡ್ಯ ಜಿಲ್ಲೆಯ ನಾಗಮಂಗಲ ಮೂಲದ ಬೆಂಗಳೂರಿನ ಲಗ್ಗೆರೆಯಲ್ಲಿ ವಾಸವಿರುವ ಎಂ. ಶಶಿಧರ ಅಲಿಯಾಸ್ ಶಶಿ (37), ಸಿರಾ ತಾಲ್ಲೂಕು ತಡಕಲೂರು ಮೂಲದ ಬೆಂಗಳೂರಿನ ನೆಲಗದರಹಳ್ಳಿಯಲ್ಲಿ ವಾಸವಾಗಿರುವ ಅಭಿಷೇಕ್ ಅಲಿಯಾಸ್ ಅಭಿ (21) ಹಾಗೂ ದೊಡ್ಡ ಬಿದರಕಲ್ಲು ನಿವಾಸಿ ರೋಹನ್‌ಕುಮಾರ್ ಅಲಿಯಾಸ್ ರೋಹನ್ (20) ಎಂಬುವರೇ ಬಂಧಿತ ಆರೋಪಿಗಳು. ಕಳೆದ ಜುಲೈ 23 ರಂದು ಮಹಿಳೆಯೊಬ್ಬರು ಎದುರು ಮನೆಯವರೊಂದಿಗೆ ಮಾತನಾಡಿಕೊಂಡು ಹೋಗುತ್ತಿದ್ದಾಗ ದ್ವಿಚಕ್ರ ವಾಹನದಲ್ಲಿ ಬಂದ ಈ ಖದೀಮರು ಆಕೆಯ ಕೊರಳಿನಲ್ಲಿದ್ದ ಸುಮಾರು 3.50 ಲಕ್ಷ ರೂ. ಬೆಲೆಯ 68 ಗ್ರಾಂ ತೂಕದ ಚಿನ್ನದ ಮಾಂಗಲ್ಯ ಸರವನ್ನು ಕಿತ್ತುಕೊಂಡು ಪರಾರಿಯಾಗಿದ್ದರು. ಈ ಬಗ್ಗೆ ಜಯನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ವಿ. ಅಶೋಕ್ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.ಅಡಿಷನಲ್ ಎಸ್ಪಿಗಳಾದ ವಿ. ಮರಿಯಪ್ಪ, ಬಿ.ಎಸ್. ಅಬ್ದುಲ್ ಖಾದರ್ ಮಾರ್ಗದರ್ಶನದಲ್ಲಿ ಈ ಪ್ರಕರಣದ ಆರೋಪಿಗಳ ಪತ್ತೆಗಾಗಿ ಡಿವೈಎಸ್ಪಿ ಚಂದ್ರಶೇಖರ್ ನೇತೃತ್ವದಲ್ಲಿ ವಿಶೇಷ ತಂಡವನ್ನು ರಚಿಸಲಾಗಿತ್ತು. ಈ ವಿಶೇಷ ತಂಡದ ತಿಲಕ್‌ಪಾರ್ಕ್ ವೃತ್ತದ ಸರ್ಕಲ್ ಇನ್ಸ್‌ಪೆಕ್ಟರ್ ಪುರುಷೋತ್ತಮ್, ಜಯನಗರ ಪಿಎಸ್ಐ-2 ಬಿ.ಕೆ. ಹನುಮಂತರಾಯಪ್ಪ ಮತ್ತು ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಮಾಲು ಸಮೇತ ಪತ್ತೆಹಚ್ಚಿ ಬಂಧಿಸುವಲ್ಲಿ ಶ್ರಮಿಸಿದ್ದಾರೆ ಎಂದರು.ಜಯನಗರ ಪೊಲೀಸ್ ಠಾಣೆ ವ್ಯಾಪ್ತಿಯ ಎರಡು ಪ್ರಕರಣಗಳಲ್ಲಿ ಆರೋಪಿಗಳನ್ನು ಬಂಧಿಸಿದ್ದು, ವಿಚಾರಣೆ ವೇಳೆ ನೀಡಿದ ಸುಳಿವಿನ ಮೇರೆಗೆ 5.99 ಲಕ್ಷ ರೂ. ಬೆಲೆಯ 99 ಗ್ರಾಂ ತೂಕದ ಚಿನ್ನದ ಒಡವೆಗಳ ಸಮೇತ ಆರೋಪಿಗಳನ್ನು ಪತ್ತೆಹಚ್ಚಿ ಬಂಧಿಸುವಲ್ಲಿ ಶ್ರಮಿಸಿದ ತಿಲಕ್‌ಪಾರ್ಕ್ ವೃತ್ತದ ಸರ್ಕಲ್ ಇನ್ಸ್‌ಪೆಕ್ಟರ್ ಪುರುಷೋತ್ತಮ್, ನಿಸ್ತಂತು ವಿಭಾಗದ ಇನ್ಸ್‌ಪೆಕ್ಟರ್ ಸುನೀಲ್‌ಕುಮಾರ್, ಜಯನಗರ ಪಿಎಸ್ಐ-2 ಬಿ.ಕೆ. ಹನುಮಂತರಾಯಪ್ಪ, ಎಎಸ್ಐ ದೇವರಾಜು, ಸಿಬ್ಬಂದಿಗಳಾದ ಎಂ.ಎಸ್. ಅಬೀದ್, ಸಿದ್ದಲಿಂಗರಾಧ್ಯ, ಮಂಜುನಾಥ್, ಚಾಲಕ ಸಿದ್ದೇಶ್ವರ, ಪಿ.ಸಿ. ನಿಜಾಮುದ್ದೀನ್ ಷಾ, ಲೋಕೇಶ್, ನವೀನ್‌ಕುಮಾರ್, ಸುನೀಲ್ ಲಮಾಣಿ, ಸುನೀಲ್‌ಕುಮಾರ್, ರಾಮಕೃಷ್ಣ, ಶಶಿಕಲಾ ಹಾಗೂ ಜಿಲ್ಲಾ ಪೊಲೀಸ್ ಕಚೇರಿಯ ಹೆಚ್.ಸಿ. ನರಸಿಂಹರಾಜು, ರಮೇಶ್ ರವರ ಕಾರ್ಯವೈಖರಿಯನ್ನು ಎಸ್ಪಿ ಅಶೋಕ್ ಶ್ಲಾಘಿಸಿದರು. ಪತ್ರಿಕಾಗೋಷ್ಠಿಯಲ್ಲಿ ಡಿವೈಎಸ್ಪಿ ಕೆ.ಆರ್. ಚಂದ್ರಶೇಖರ್ ಉಪಸ್ಥಿತರಿದ್ದರು.