ದೇಶದಲ್ಲಿ ಶೇ.50ರಷ್ಟು ದಲಿತರು ಇನ್ನೂ ತಳವರ್ಗದಲ್ಲಿದ್ದಾರೆ: ಡಾ.ರಮೇಶ್‌ ಬಾಬು

KannadaprabhaNewsNetwork | Updated : May 29 2025, 12:04 AM IST
ಅಂಬೇಡ್ಕರ್ ಹಾಕಿರುವ ಸಂವಿಧಾನದ ಭದ್ರ ಬುನಾದಿಯನ್ನು ನಮ್ಮ ವಿದ್ಯಾರ್ಥಿಗಳು ಇನ್ನೂ ಅರ್ಥ ಮಾಡಿಕೊಂಡಿಲ್ಲ. ಅಂಬೇಡ್ಕರ್ ಒಬ್ಬ ಅಪ್ಪಟ ದೇಶ ಪ್ರೇಮಿಯಾಗಿದ್ದರು. ಶತಶತಮಾನಗಳಿಂದ ತುಳಿತಕ್ಕೆ ಒಳಗಾದ ಜನರ ಧ್ವನಿಯಾದವರು. ಹೆಣ್ಣಿಗೆ ಹೆಚ್ಚಿನ ಸ್ಥಾನಮಾನ ನೀಡಲು ಹಿಂದೂ ಕೋಡ್‌ ಬಿಲ್ ಜಾರಿಗೆ ತಂದರು.

ಕನ್ನಡಪ್ರಭ ವಾರ್ತೆ ಮೈಸೂರು

ದೇಶಕ್ಕೆ ಸ್ವಾತಂತ್ರ್ಯ ಬಂದು 78 ವರ್ಷಗಳಾದರೂ ಸಹ ಶೇ. 50 ದಲಿತರು ಇನ್ನೂ ತಳವರ್ಗದಲ್ಲಿರುವುದು ವಿಷಾದನೀಯ ಸಂಗತಿ ಎಂದು ಮಹಾರಾಣಿ ಮಹಿಳಾ ವಿಜ್ಞಾನ ಕಾಲೇಜಿನ ಸಹ ಪ್ರಾಧ್ಯಾಪಕ ಡಾ. ವಿ.ಆರ್. ರಮೇಶ್‌ ಬಾಬು ಹೇಳಿದರು.

ನಗರದ ಬೋಗಾದಿ 2ನೇ ಹಂತದಲ್ಲಿರುವ ಡಾ. ಬಿ.ಆರ್. ಅಂಬೇಡ್ಕರ್ ಸರ್ಕಾರಿ ವೈದ್ಯಕೀಯ ಮತ್ತು ತಾಂತ್ರಿಕ ಕಾಲೇಜು ಬಾಲಕರ ವಿದ್ಯಾರ್ಥಿನಿಲಯದಲ್ಲಿ ನಡೆದ ಜ್ಞಾನಾವರಣ-2025 ರ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಅಂಬೇಡ್ಕರ್ ಹಾಕಿರುವ ಸಂವಿಧಾನದ ಭದ್ರ ಬುನಾದಿಯನ್ನು ನಮ್ಮ ವಿದ್ಯಾರ್ಥಿಗಳು ಇನ್ನೂ ಅರ್ಥ ಮಾಡಿಕೊಂಡಿಲ್ಲ. ಅಂಬೇಡ್ಕರ್ ಒಬ್ಬ ಅಪ್ಪಟ ದೇಶ ಪ್ರೇಮಿಯಾಗಿದ್ದರು. ಶತಶತಮಾನಗಳಿಂದ ತುಳಿತಕ್ಕೆ ಒಳಗಾದ ಜನರ ಧ್ವನಿಯಾದವರು. ಹೆಣ್ಣಿಗೆ ಹೆಚ್ಚಿನ ಸ್ಥಾನಮಾನ ನೀಡಲು ಹಿಂದೂ ಕೋಡ್‌ ಬಿಲ್ ಜಾರಿಗೆ ತಂದರು. ಈ ದೇಶದ ಹೆಣ್ಣುಮಕ್ಕಳು ಅಂಬೇಡ್ಕರ್‌ ಅವರನ್ನು ಅರ್ಥಮಾಡಿಕೊಳ್ಳಬೇಕು. ಪ್ರತಿಯೊಬ್ಬ ವಿದ್ಯಾರ್ಥಿಯು ಅಂಬೇಡ್ಕರ್, ಕುವೆಂಪು, ಲಂಕೇಶ್‌ ಅವರ ಪುಸ್ತಕಗಳನ್ನು ಓದಿಕೊಂಡು ಗುರಿ ಇಟ್ಟುಕೊಂಡು ಸಾಧನೆ ಮಾಡಿರಿ ಎಂದರು.

ಮಂಡ್ಯದ ಮಹಿಳಾ ಸರ್ಕಾರಿ ಕಾಲೇಜಿನ ಇಂಗ್ಲಿಷ್ ಅಧ್ಯಾಪಕ ಪ್ರಸನ್ನಕುಮಾರ್ ಕೆರಗೋಡು ಮಾತನಾಡಿ, ಅಂಬೇಡ್ಕರ್ ಒಬ್ಬ ದಾರ್ಶನೀಕ ಹಾಗೂ ಸಮಾಜದ ಚಿಕಿತ್ಸಕರಾಗಿದ್ದರು. ಅಂಬೇಡ್ಕರ್‌ರವರ ಪ್ರೇರಣೆಯಿಂದ ನಾವೆಲ್ಲರೂ ಸಧೃಡರಾಗಿದ್ದೇವೆ. ನಮ್ಮ ಮನೆಯಲ್ಲಿ 12 ಜನ ಸರ್ಕಾರಿ ಕೆಲಸದಲ್ಲಿದ್ದೇವೆ. ವಿದ್ಯಾರ್ಥಿಗಳಾದ ನೀವು ಸಧೃಡರಾಗಬೇಕಾದರೆ ಶ್ರಮಪಟ್ಟು ಶಿಕ್ಷಣದಲ್ಲಿ ಉನ್ನತ ಸ್ಥಾನಕ್ಕೆ ಹೋಗಬೇಕು. ನಿಮಗೆ ಸರ್ಕಾರ ಎಲ್ಲ ಸೌಲಭ್ಯಗಳನ್ನು ನೀಡಿದೆ. ಅಂಬೇಡ್ಕರ್‌ ಅವರ ಚಿಂತನೆ ಅರ್ಥಮಾಡಿಕೊಳ್ಳಲು ಪ್ರತಿದಿನ ಅವರ ಪುಸ್ತಕಗಳನ್ನು ಓದಿರಿ. ನಿಮ್ಮ ಉದ್ದೇಶ ಈಡೇರಿಸಿಕೊಳ್ಳಿರಿ. ಹಾಸ್ಟೆಲ್‌ ಗಳಲ್ಲಿ ಅಂಬೇಡ್ಕರ್, ಬುದ್ಧ ಅವರ ಹಾಡುಗಳನ್ನು ಮೆಲು ಧ್ವನಿಯಲ್ಲಿ ಹಾಕಿದರೆ ಒಳ್ಳೆಯದು ಎಂದರು.

ಸಹಾಯಕ ನಿರ್ದೇಶಕ ಜನಾರ್ಧನ್, ನಿಲಯಪಾಲಕರಾದ ಎಸ್‌. ಮಹೇಶ್, ಪ್ರದೀಪ್‌ ಕುಮಾರ್, ಚಿಕ್ಕೀರಮ್ಮ, ರಾಮಚಂದ್ರ, ಮಹೇಶ್, ಶಿವಮಲ್ಲಯ್ಯ, ಕಾರ್ತಿಕ್, ಮೋಹನಕುಮಾರಿ, ಗಾಯಕ ಅಮ್ಮರಾಮಚಂದ್ರ, ಭುವನ್, ಚಿನ್ಮಯ್ ಇದ್ದರು.ನಾಳೆ ಡಾ.ರಾಜ್‌ ಕುಮಾರ್‌ ದಿ ಲೆಂಜೆಂಡ್ ಕೃತಿ ಬಿಡುಗಡೆ

ಕನ್ನಡಪ್ರಭ ವಾರ್ತೆ ಮೈಸೂರು

ಕದಂಬ ರಂಗವೇದಿಕೆ, ಕನ್ನಡ ಸಾಹಿತ್ಯ ಕಲಾಕೂಟದ ವತಿಯಿಂದ ಡಿ. ಗುರುಮೂರ್ತಿ ಹಾರೋಹಳ್ಳಿ ಅವರ ಡಾ. ರಾಜ್‌ಕುಮಾರ್‌ ದಿ ಲೆಜೆಂಡ್‌ ಕೃತಿ ಬಿಡುಗಡೆ ಸಮಾರಂಭವು ಮೇ 30 ರಂದು ಸಂಜೆ 5.30ಕ್ಕೆ ನಗರದ ಜೆಎಲ್‌ಬಿ ರಸ್ತೆಯ ಎಂಜಿನಿಯರ್‌ಗಳ ಸಂಸ್ಥೆಯಲ್ಲಿ ನಡೆಯಲಿದೆ.

ಸುತ್ತೂರ ಶ್ರೀ ಶಿವರಾತ್ರಿ ದೇಶಿಕೇಂದ್ರಸ್ವಾಮೀಜಿ ಸಾನ್ನಿಧ್ಯ ವಹಿಸಲಿದ್ದು, ವಿಶ್ರಾಂತ ಕುಲಪತಿ ಪ್ರೊ.ಕೆ.ಎಸ್‌. ರಂಗಪ್ಪ ಕೃತಿ ಬಿಡುಗಡೆಗೊಳಿಸುವರು. ಲೇಖಕ ಡಾ.ಸಿ. ನಾಗಣ್ಣ ಕೃತಿ ಕುರಿತು ಮಾತನಾಡುವರು ಎಂದು ವೇದಿಕೆ ಅಧ್ಯಕ್ಷ ರಾಜಶೇಖರ ಕದಂಬ ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಮೈಸೂರು ವಿವಿ ಕುಲಪತಿ ಪ್ರೊ.ಎನ್‌.ಕೆ. ಲೋಕನಾಥ್‌ ಅಧ್ಯಕ್ಷತೆ ವಹಿಸಲಿದ್ದು, ಡಿ. ದೇವರಾಜ ಅರಸು ಹಿಂದುಳಿದ ವರ್ಗಗಳ ನಿಗಮದ ಮಾಜಿ ಅಧ್ಯಕ್ಷ ರಘು ಕೌಟಿಲ್ಯ, ಮೈಸೂರು ಮತ್ತು ಚಾಮರಾಜನಗರ ಜಿಲ್ಲಾ ಆರ್ಯ ಈಡಿಗರ ಸಂಘದ ಅಧ್ಯಕ್ಷ ಎಂ.ಕೆ. ಪೋತರಾಜು ಮುಖ್ಯ ಅತಿಥಿಯಾಗಿ ಪಾಲ್ಗೊಳ್ಳುವರು. ಕಲಾಕೂಟದ ಅಧ್ಯಕ್ಷ ಎಂ. ಚಂದ್ರಶೇಖರ್‌ ಪಾಲ್ಗೊಳ್ಳುವುದಾಗಿ ಅವರು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಎಂ. ಚಂದ್ರಶೇಖರ್‌, ಗುರುಮೂರ್ತಿ ಹಾರೋಹಳ್ಳಿ, ಡಿ. ತಿಪ್ಪಣ್ಣ ಇದ್ದರು.