ಹಾವೇರಿ: ಮುಂಬರುವ ಜಿಪಂ, ತಾಪಂ ಹಾಗೂ ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಆಮ್ ಆದ್ಮಿ ಪಕ್ಷವನ್ನು ಸಂಘಟಿಸಿ ಎಲ್ಲ ಕ್ಷೇತ್ರಗಳಲ್ಲೂ ಚುನಾವಣೆಗೆ ಸ್ಪರ್ಧಿಸಲು ಪಕ್ಷದಿಂದ ಅವಕಾಶ ನೀಡಲಾಗುವುದು ಎಂದು ಆಮ್ ಆದ್ಮಿ ಪಕ್ಷದ ರಾಜ್ಯ ಕಾರ್ಯಾಧ್ಯಕ್ಷ ಸೀತಾರಾಮ ಗುಂಡಪ್ಪ ತಿಳಿಸಿದರು.
ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಭ್ರಷ್ಟಾಚಾರ ನಿರ್ಮೂಲನೆ ಮಾಡುವ ನಿಟ್ಟಿನಲ್ಲಿ ಅಣ್ಣಾ ಹಜಾರೆ ಪಣ ತೊಟ್ಟಿದ್ದರು. ಇದರ ಭಾಗವಾಗಿ ಅರವಿಂದ ಕೇಜ್ರಿವಾಲರು ಆಪ್ ಪಕ್ಷವನ್ನು ಕಟ್ಟಿ ಸ್ಥಳೀಯ ಸಮಸ್ಯೆಗಳನ್ನು ಗುರುತಿಸಿ, ಹೋರಾಟ ಮಾಡುವ ಮೂಲಕ ಪಕ್ಷ ಸಂಘಟನೆ ಮಾಡಿದ್ದರು. ದಿಲ್ಲಿಯಲ್ಲಿರುವ 17ರಿಂದ 18 ಲಕ್ಷ ಮಕ್ಕಳನ್ನು ಖಾಸಗಿ ಶಾಲೆಗಳಿಂದ ಸರ್ಕಾರಿ ಶಾಲೆಗೆ ಸೇರ್ಪಡೆ ಮಾಡಿ ಗುಣಮಟ್ಟದ ಶಿಕ್ಷಣ ಕೊಡಿಸಿದ್ದೇವೆ. ಮುಂಬರುವ ದಿನಗಳಲ್ಲಿ ರಾಜ್ಯದಲ್ಲಿ ಎಎಪಿ ಅಧಿಕಾರಕ್ಕೆ ಬಂದು ಭ್ರಷ್ಟಾಚಾರ ರಹಿತ ಪಾರದರ್ಶಕ ಆಡಳಿತ ನೀಡುತ್ತೇವೆ ಎಂದರು.ಜಿಲ್ಲೆ, ತಾಲೂಕು, ಗ್ರಾಮ ಮಟ್ಟದಲ್ಲಿ ಆಡಳಿತ ಯಂತ್ರ ಸಂಪೂರ್ಣ ಕುಸಿದಿದೆ. ಭ್ರಷ್ಟಾಚಾರ ನಿರ್ಮೂಲನೆಗಾಗಿ ಸಿದ್ಧರಿರುವ ಕಾರ್ಯಕರ್ತರನ್ನು ಜಿಪಂ, ತಾಪಂಗಳಲ್ಲಿ ಆಕಾಂಕ್ಷಿಗಳನ್ನಾಗಿ ನೇಮಕ ಮಾಡುತ್ತೇವೆ. ದಿಲ್ಲಿ ಮತ್ತು ಪಂಜಾಬ್ ಮಾದರಿಯಲ್ಲಿ ರಾಜ್ಯವನ್ನು ಅಭಿವೃದ್ಧಿ ಪಡಿಸಲು ಮುಂದಾಗುತ್ತೇವೆ ಎಂದರು.ರಾಜ್ಯ ಸಂಚಾಲಕ ಜಗದೀಶ ಸದಂ ಮಾತನಾಡಿ, ಸ್ಥಳೀಯ ಜ್ವಲಂತ ಸಮಸ್ಯೆಗಳ ವಿರುದ್ಧ ಹೋರಾಟ ಮಾಡಿ ಸಂಘಟನೆ ಮಾಡುತ್ತೇವೆ. ಬಿತ್ತನೆ ಬೀಜ ಹಾಗೂ ರಸಗೊಬ್ಬರವನ್ನು ರೈತರಿಗೆ ಕೊರತೆ ಆಗದಂತೆ ಕಾಲ ಕಾಲಕ್ಕೆ ಪೂರೈಸಬೇಕು. ಶೈಕ್ಷಣಿಕ ವಾತಾವರಣ ಜಿಲ್ಲೆಯಲ್ಲಿ ಸರಿಯಿಲ್ಲದ ಕಾರಣ ಸರ್ಕಾರಿ ಶಾಲೆಗಳು ಕಳಪೆ ಮಟ್ಟದಲ್ಲಿದ್ದು, ಹಲವೆಡೆ ಚಾವಣಿ ಬೀಳುತ್ತಿವೆ. ಜಿಲ್ಲಾ ಉಸ್ತುವಾರಿ ಸಚಿವರು ನಿಷ್ಕ್ರಿಯರಾಗಿದ್ದಾರೆ. ಜಿಲ್ಲೆಯ ಅಭಿವೃದ್ಧಿಗೆ ಗಮನ ಕೊಡಬೇಕು ಎಂದು ಒತ್ತಾಯಿಸಿದರು.ರಾಜ್ಯ ಸಂಘಟನಾ ಕಾರ್ಯದರ್ಶಿ ಅರ್ಜುನ್ ಹಲಗಿಗೌಡ್ರ, ಆಪ್ ಜಿಲ್ಲಾಧ್ಯಕ್ಷ ಹನುಮಂತಪ್ಪ ಕಬ್ಬಾರ ಮಾತನಾಡಿ, ರೈತರು ಹಾಗೂ ಸಾರ್ವಜನಿಕರು ಎದುರಿಸುತ್ತಿರುವ ಸಮಸ್ಯೆಗಳನ್ನು ಮುಂದಿಟ್ಟುಕೊಂಡು ಹೋರಾಟ ಮಾಡುತ್ತೇವೆ. ಜಿಲ್ಲೆಯಲ್ಲಿ ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿ ಮಾಡಬೇಕು ಎಂದು ಆಗ್ರಹಿಸಿದರು.ಫರೀದ ನದಾಫ, ಎಂ.ಎನ್. ನಾಯಕ, ರವಿ, ಕುಮಾರಸ್ವಾಮಿ ಯೋಗಿಮಠ, ಭುವನೇಶ್ವರಿ ಬಡಮ್ಮನವರ, ರಾಜು ಅಂಗಡಿ, ಮಂಜಪ್ಪ ಸಂಭೋಜಿ ಇದ್ದರು.ಜಾನಪದ ವಿವಿ ಆವರಣದಲ್ಲಿ ಇಂದು ಕರಾಳ ದಿನಾಚರಣೆಹಾವೇರಿ: ಕರ್ನಾಟಕ ಜಾನಪದ ವಿಶ್ವವಿದ್ಯಾಲಯದಲ್ಲಿ ನಡೆದಿರುವ ಅಕ್ರಮ ನೇಮಕಾತಿಗೆ ಇದೀಗ ಎರಡು ವರ್ಷಗಳು ತುಂಬಿವೆ. ಈ ಹಿನ್ನೆಲೆ ಮೇ 29ರಂದು ವಿಶ್ವವಿದ್ಯಾಲಯದ ಆವರಣದಲ್ಲಿ ಕರಾಳ ದಿನವನ್ನು ಆಚರಿಸಲಾಗುವುದು ಎಂದು ಕರ್ನಾಟಕ ರಾಜ್ಯ ಜಾನಪದ ಸ್ನಾತಕೋತ್ತರ ಹಾಗೂ ಸಂಶೋಧಕರ ಒಕ್ಕೂಟದ ಅಧ್ಯಕ್ಷ ಡಾ. ಶಿವಸೋಮಪ್ಪ ನಿಟ್ಟೂರ ತಿಳಿಸಿದರು.
ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ದೇಶದ ಏಕೈಕ ಜಾನಪದ ವಿವಿಯಲ್ಲಿ ಜಾನಪದ ಸಂಸ್ಕೃತಿ ಮತ್ತು ಹಿನ್ನೆಲೆಗಳ ಅರಿವಿಲ್ಲದ ಕುಲಪತಿಗಳು ಇದ್ದು, ಅಲ್ಲಿ ಕೇವಲ ವ್ಯವಹಾರಗಳು ಮಾತ್ರ ನಡೆಯುತ್ತಿವೆಯೇ ಹೊರತು ಶೈಕ್ಷಣಿಕ ಮತ್ತು ಜಾನಪದೀಯ ಕಾರ್ಯಕ್ರಮಗಳು ನಡೆಯುತ್ತಿಲ್ಲ. ಈ ಜಾನಪದ ವಿವಿಯಲ್ಲಿ ಅಕ್ರಮ ನೇಮಕಾತಿ ನಡೆದ ಬಗ್ಗೆ ದಾಖಲೆ ಸಮೇತ ದೂರು ನೀಡಿದರೂ ಯಾವುದೇ ತನಿಖೆ ನಡೆಯುತ್ತಿಲ್ಲ ಎಂದು ಆರೋಪಿಸಿದರು.ಕರ್ನಾಟಕ ಜಾನಪದ ವಿವಿ ಹಿತರಕ್ಷಣಾ ಟ್ರಸ್ಟ್ನ ಅಧ್ಯಕ್ಷ ಬಸವರಾಜ ಗೊಬ್ಬಿ ಮಾತನಾಡಿ, ಜಾನಪದ ವಿವಿಯಲ್ಲಿ ಇಂದಿಗೂ ಹಲವು ಅಕ್ರಮಗಳು ನಡೆಯುತ್ತಲೇ ಇದ್ದು, ಅವುಗಳಿಗೆ ಕಡಿವಾಣ ಹಾಕಲು ಸರ್ಕಾರ ಮುಂದಾಗುತ್ತಿಲ್ಲ. ವಿವಿಯ ಸಹಾಯಕ ಕುಲಸಚಿವ ಶಹಜಹಾನ್ ಮುದಕವಿ ಶೈಕ್ಷಣಿಕ ದಾಖಲೆಗಳು ಸಮರ್ಪಕವಾಗಿ ಇಲ್ಲದೇ ಇದ್ದರೂ, ಅವರ ನೇಮಕಾತಿ ಮಾಡಿಕೊಂಡಿದ್ದಾರೆ. 2023ರ ಮೇ ತಿಂಗಳಲ್ಲಿ ವಿಧಾನಸಭೆ ಚುನಾವಣೆಯ ನೀತಿ ಸಂಹಿತೆ ಜಾರಿ ಇದ್ದಾಗಲೇ ಪರೀಕ್ಷೆ ನಡೆಸಿದ್ದಾರೆ. 2023ರ ಮೇ 26ರಂದು ಸರ್ಕಾರದ ಉನ್ನತ ಶಿಕ್ಷಣ ಸಚಿವರು ಸಿಂಡಿಕೇಟ್ ಸಭೆ ನಡೆಸದಂತೆ ಸೂಚನೆ ನೀಡಿದಾಗ್ಯೂ ಅದನ್ನು ಧಿಕ್ಕರಿಸಿ ಸಭೆ ಮಾಡಿದ್ದಾರೆ. ಯಾವುದೇ ನೇಮಕಾತಿಗೆ ಸಮಾಜ ಕಲ್ಯಾಣ ಇಲಾಖೆಯ ಸಿಂಧುತ್ವ ಪ್ರಮಾಣಪತ್ರ ಅಗತ್ಯ. ಆದರೆ ಈ ಸಿಂಧುತ್ವ ಪ್ರಮಾಣಪತ್ರ ಇಲ್ಲದೇ ಕಾಯಮಾತಿ ಪತ್ರ ನೀಡುವ ಮೂಲಕ ಕರ್ನಾಟಕ ಜಾನಪದ ವಿವಿ ಕುಲಪತಿಗಳು ಹಲವು ಅಕ್ರಮಗಳಲ್ಲಿ ನೇರವಾಗಿ ಭಾಗಿಯಾಗಿದ್ದಾರೆ ಎಂದು ದೂರಿದರು.ಕೂಡಲೇ ಉನ್ನತ ಶಿಕ್ಷಣ ಸಚಿವರು ಮತ್ತು ಕಾನೂನು ಸಚಿವ ಎಚ್.ಕೆ. ಪಾಟೀಲ ಈ ಬಗ್ಗೆ ತುರ್ತು ತನಿಖೆ ನಡೆಸಿ ತಪ್ಪಿತಸ್ಥರಿಗೆ ಶಿಕ್ಷೆಯಾಗುವಂತೆ ಕ್ರಮ ಜರುಗಿಸಬೇಕೆಂದು ಆಗ್ರಹಿಸಿದರು. ಡಾ. ಬಸವರಾಜ ದುಗಾನಿ ಮತ್ತು ಡಾ. ನಾಗರಾಜ ಎಸ್. ಇದ್ದರು.