ರಾಜ್ಯದಲ್ಲಿ 500 ಕೆಪಿಎಸ್ ಶಾಲೆಗಳು : ಮಧು ಬಂಗಾರಪ್ಪ

KannadaprabhaNewsNetwork |  
Published : Feb 26, 2024, 01:33 AM IST
ಮಧು ಬಂಗಾರಪ್ಪ | Kannada Prabha

ಸಾರಾಂಶ

ಈ ಶೈಕ್ಷಣಿಕ ವರ್ಷದಿಂದ ರಾಜ್ಯದಲ್ಲಿ ಎಲ್.ಕೆ.ಜಿಯಿಂದ ಪಿಯುಸಿವರೆಗೆ ಮಕ್ಕಳಿಗೆ ಎಲ್ಲಾ ರೀತಿಯ ಸವಲತ್ತು ಒಳಗೊಂಡಿರುವ 500 ಕೆ ಪಿ ಎಸ್ ಶಾಲೆಗಳನ್ನು ತೆರೆಯಲಾಗುವುದು ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಹೇಳಿದರು.

ಕನ್ನಡ ಪ್ರಭ ವಾರ್ತೆ, ಕಡೂರು

ಈ ಶೈಕ್ಷಣಿಕ ವರ್ಷದಿಂದ ರಾಜ್ಯದಲ್ಲಿ ಎಲ್.ಕೆ.ಜಿಯಿಂದ ಪಿಯುಸಿವರೆಗೆ ಮಕ್ಕಳಿಗೆ ಎಲ್ಲಾ ರೀತಿಯ ಸವಲತ್ತು ಒಳಗೊಂಡಿರುವ 500 ಕೆ ಪಿ ಎಸ್ ಶಾಲೆಗಳನ್ನು ತೆರೆಯಲಾಗುವುದು ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಹೇಳಿದರು.

ಕಡೂರು ಕ್ಷೇತ್ರ ಗಡಿಯ ಮರವಂಜಿ ಗ್ರಾಮ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಶತಮಾನೋತ್ಸವ ಸಮಾರಂಭದಲ್ಲಿ ಜ್ಞಾನ ದೇಗುಲ ಸ್ಮರಣ ಸಂಚಿಕೆ ಬಿಡುಗಡೆ ಮಾಡಿ ಮಾತನಾಡಿ, 1 ವರ್ಷದಲ್ಲಿ ರಾಜ್ಯದಲ್ಲಿರುವ 6 ಸಾವಿರ ಗ್ರಾಪಂಗಳಲ್ಲಿ ಪಂಚಾಯ್ತಿಗೆ 1ರಂತೆ ಕೆ ಪಿ ಎಸ್ ಶಾಲೆಗಳನ್ನು ತೆರೆಯುವ ಉದ್ದೇಶವಿದ್ದು, ಇದಕ್ಕೆ ಉಪ ಮುಖ್ಯಮಂತ್ರಿ ಡಿ.ಕೆ. ಶಿವ ಕುಮಾರ್ ಹೆಚ್ಚಿನ ಆಸಕ್ತಿ ತೋರಿಸಿದ್ದು ಹಣವನ್ನು ನೀಡುತ್ತಾರೆ. ಕಳೆದ 8 ತಿಂಗಳಲ್ಲಿ ಮಕ್ಕಳಿಗೆ ಶಿಕ್ಷಣ ಕೊಡುವುದು ದೇವರ ಕೆಲಸ ಎಂದುಕೊಂಡು ಕೆಲಸ ಮಾಡುತ್ತಿದ್ದೇನೆ ಎಂದರು.

ಎಲ್ಲ ರೀತಿ ಸೌಲಭ್ಯವಿರುವ 500 ಕೆ ಪಿ ಎಸ್ ಶಾಲೆಗಳನ್ನು ಮೇಲ್ದ್ರರ್ಜೆಗೇರಿಸಲಾಗುವುದು. ಶಾಸಕರೊಂದಿಗೆ ಸಮಾ ಲೋಚಿಸಿ ಯಾವ ಶಾಲೆಗಳನ್ನು ಕೆಪಿಎಸ್ ಶಾಲೆಗಳಾಗಿ ಪರಿವರ್ತಿಸ ಬೇಕು ಎಂಬ ಪಟ್ಟಿ ನೀಡಬೇಕು ಎಂದು ಬಿಇಒ ರವರಿಗೆ ಸಚಿವರು ಸೂಚನೆ ನೀಡಿದರು.

ರಾಜ್ಯದಲ್ಲಿ ಕೇವಲ 20 ಮಕ್ಕಳಿರುವ 10 ಸಾವಿರ ಶಾಲೆಗಳಿವೆ ಎಂದು ಆತಂಕ ವ್ಯಕ್ತಪಡಿಸಿದ ಸಚಿವರು, ತಮಗೆ ಕಷ್ಟದ ಶಿಕ್ಷಣ ಇಲಾಖೆಯನ್ನು ನೀಡಿದ್ದು, ದೊಡ್ಡ ಜವಾಬ್ದಾರಿ ಹೊತ್ತಿದ್ದೇನೆ. ಈ ಸರ್ಕಾರಿ ಶಾಲೆ ಅದ್ಭುತ ಕಾರ್ಯಕ್ರಮ ನನಗೆ ಸಂತೋಷ ತಂದಿದೆ ಎಂದರು.ಗುಡಿ ಚಿಕ್ಕದು ಮಾಡಿ ಶಾಲೆ ದೊಡ್ಡದು ಮಾಡಿ ಎಂಬ ಘೋಷಣೆಯಂತೆ ಗ್ರಾಮಸ್ಥರು ದೇವಾಲಯಗಳಿಗಿಂತ ದೇವರಾಗಿರುವ ನಿಮ್ಮ ಮಕ್ಕಳಿಗೆ ಶಿಕ್ಷಣ ಕೊಡಿಸಿ ಅವರನ್ನು ತಿದ್ದುವ ಶಿಕ್ಷಕರ ಪಾತ್ರ ದೊಡ್ಡದು. ವಿಜ್ಞಾನಿ ಬಾಲಕೃಷ್ಣರವರು ಈ ಸರಕಾರಿ ಶಾಲೆಯಲ್ಲಿ ಓದಿ ಉನ್ನತ ಸ್ಥಾನ ಗಳಿಸಿರುವುದು ಗುಣಮಟ್ಟದ ಶಿಕ್ಷಣ ನೀಡಿರುವ ಸರ್ಕಾರಿ ಶಾಲೆ ಸಾಧನೆ ಎಂದರು.

ರಾಜ್ಯದ 76,000 ಶಾಲೆಗಳು ಶಿಕ್ಷಣ ಇಲಾಖೆ ವ್ಯಾಪ್ತಿಗೆ ಬರುತ್ತದೆ. 13 ಸಾವಿರ ಅನುದಾನಿತ ಶಾಲೆಗಳು ಸೇರಿ 1. 20 ಕೋಟಿ ಮಕ್ಕಳು ಸರ್ಕಾರಿ ಶಾಲೆಗಳಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ಈ ಬಾರಿ ಬಜೆಟ್ ನಲ್ಲಿ 44,500 ಕೋಟಿ ರು. ಶಿಕ್ಷಣ ಇಲಾಖೆಗೆ ಮೀಸಲಿಡಲಾಗಿದೆ. ಇಂದು ತಮಗೆ ಊಟಕ್ಕೆ ಇಲ್ಲದಿದ್ದರೂ ಪರವಾಗಿಲ್ಲ ಮಕ್ಕಳಿಗೆ ಶಿಕ್ಷಣ ನೀಡಬೇಕೆಂಬ ಪೋಷಕರ ಹಠ ಮತ್ತು ಛಲಕ್ಕೆ ಮೆಚ್ಚಬೇಕು ಎಂದರು. ಈ ಶಾಲೆಗೆ ಹೆಚ್ಚುವರಿ ಕೊಠಡಿ ನಿರ್ಮಾಣಕ್ಕೆ ಈ ವರ್ಷವೇ ಅನುದಾನ ಕೊಡುತ್ತೇನೆ ಎಂದು ಘೋಷಿಸಿದರು. ವಿರೋಧ ಪಕ್ಷದವರಿಗೆ ಮಾಡಲು ಕೆಲಸವಿಲ್ಲ ಇದಕ್ಕೆ ನೀವು ಉತ್ತರ ಕೊಡಬೇಕು. ಸರ್ಕಾರದ ಗ್ಯಾರಂಟಿಗಳ ಮೂಲಕ ಮಹಿಳೆಯರಿಗೆ ಪ್ರಯೋಜನ ಆಗಿದೆ. ನೀವು ಆಶೀರ್ವಾದ ಮಾಡಬೇಕು. 1- 10ನೇ ತರಗತಿವರೆಗೂ ಮಕ್ಕಳಿಗೆ ವಾರಕ್ಕೆರಡು ಬಾರಿ ಮೊಟ್ಟೆ ನೀಡುತ್ತಿದ್ದೇವೆ. ಒಂದು ವರ್ಷಕ್ಕೆ 55 ಲಕ್ಷ ಮಕ್ಕಳಿಗೆ 1020 ಕೋಟಿ ರು. ಹೆಚ್ಚಾಗುತ್ತಿದೆ, 60 ಲಕ್ಷ ಲೀ. ಪ್ರತಿದಿನ ಹಾಲು ಕೊಡುತ್ತಿದ್ದೇವೆ. ರಾಗಿ ಮಾಲ್ಟಿನ ಜೊತೆ ಮೊಟ್ಟೆ ಕಡ್ಡಾಯವಾಗಿ ನೀಡಲಾಗುತ್ತಿದೆ ಎಂದರು ಸಭೆಯಲ್ಲಿ ಗ್ಯಾರಂಟಿಗಳ ಕುರಿತು ಹೆಣ್ಣುಮಕ್ಕಳಿಗೆ ಪ್ರಶ್ನೆ ಮಾಡಿದ ಅವರು ಗ್ಯಾರಂಟಿಗಳ ಮೂಲಕ ವರ್ಷಕ್ಕೆ 24 ಸಾವಿರ ರು. ನೀಡಿ ಕುಟುಂಬವನ್ನು ಆರ್ಥಿಕವಾಗಿ ಸ್ವಾವಲಂಬಿ ಮಾಡುತ್ತಿದೆ. ವೋಟು ಯಾರಿಗೆ ಹಾಕಿದರೂ ಇದು ನಿಮ್ಮ ಸರ್ಕಾರ ರಾಜ್ಯದ 7 ಕೋಟಿ ಜನರ ಸರ್ಕಾರವಾಗಿದ್ದು ಈ ಸರ್ಕಾರ ಉಳಿಸುವುದು ನಿಮ್ಮ ಕೈಯಲ್ಲಿದೆ.

ಮುಂದಿನ ದಿನಗಳಲ್ಲಿ ಕಡೂರು ಕ್ಷೇತ್ರಕ್ಕೆ ನೀರಾವರಿ ಸೇರಿದಂತೆ ಯಾವುದೇ ಯೋಜನೆಗಳನ್ನು ತರಲು ಆನಂದ್ ರವ ರೊಂದಿಗೆ ಕೈಜೋಡಿಸುತ್ತೇವೆ. ದುಡ್ಡು ಕೊಟ್ಟು ಶಿಕ್ಷಣಪಡೆಯಲು ಸಾಧ್ಯವಿಲ್ಲ ಅದು ಗುರುವಿನ ಮೂಲಕ ತಲುಪಬೇಕು ಎಂದು ಶಿಕ್ಷಕರಿಗೆ ಕರೆ ನೀಡಿದರು.ಭೋಜನಶಾಲೆ ಮತ್ತು ಹೈಟೆಕ್ ಶೌಚಾಲಯ ನಿರ್ಮಾಣಕ್ಕೆ ಚಾಲನೆ ನೀಡಿದ ಶಾಸಕ ಕೆ.ಎಸ್ ಆನಂದ್ ಮಾತನಾಡಿ, ಸಚಿವ ಮಧು ಬಂಗಾರಪ್ಪನವರು ಶಾಲೆ ಶತಮಾನ ಸಂಭ್ರಮದಲ್ಲಿ ಭಾಗವಹಿಸಿರುವುದು ನಮ್ಮೆಲ್ಲರ ಅದೃಷ್ಟ. ಸರಕಾರಿ ಶಾಲೆಗಳನ್ನು ಮುಚ್ಚುತ್ತಿರುವ ಸಂದರ್ಭದಲ್ಲಿ ಮರವಂಜಿ ಗ್ರಾಮದವರು ತಮ್ಮೂರಿನ ಐತಿಹಾಸಿಕ ಶಾಲಾ ಕಾರ್ಯಕ್ರಮಕ್ಕೆ ಹೆಚ್ಚು ಉತ್ಸಾಹದಿಂದ ಭಾಗವಹಿಸುತ್ತಿರುವುದು ನನಗೂ ಸಚಿವರಿಗೂ ಸಂತೋಷ ತಂದಿದೆ ಎಂದರು. ಈ ಶಾಲೆಯ ಜ್ಞಾನ ದೇಗುಲ ಇಂತಹ ಶಾಲೆಗಳ ಉಳಿವಿಗೆ ಕೈಜೋಡಿಸಬೇಕು. ಇಂದು ಯಾವುದೇ ಖಾಸಗಿ ಶಾಲೆಗೆ ಕಡಿಮೆ ಇಲ್ಲದಂತೆ ಆಂಗ್ಲ ಮಾಧ್ಯಮ ತೆರೆಯಲಾಗುತ್ತಿದೆ ಬಡವರ ದನಿಯಾಗಿ ಮುಂದಿನ ದಿನಗಳಲ್ಲಿ ಮುಖ್ಯಮಂತ್ರಿ ಆಗುವ ನಿಟ್ಟಲ್ಲಿ ಮಧು ಬಂಗಾರಪ್ಪ ಬೆಳೆಯುತ್ತಿದ್ದಾರೆ. ನಮ್ಮ ಕ್ಷೇತ್ರದ ಶಿಕ್ಷಣಕ್ಕೆ ಆದ್ಯತೆ ಕೊಡಬೇಕು ಎಂದು ಮನವಿ ಮಾಡಿದರು

ಡಿಡಿಪಿಐ ಕೆ.ಎಸ್ ಪ್ರಕಾಶ್, ಬಿಇಒ ಸಿದ್ದರಾಜು ನಾಯ್ಕ ಮಾಜಿ ಜಿಪಂ ಸದಸ್ಯ ಶರತ್ ಕೃಷ್ಣಮೂರ್ತಿ, ಷಣ್ಮುಖ ಭೋವಿ, ಎಪಿಎಂಸಿ ಮಾಜಿ ಅಧ್ಯಕ್ಷ ರಾಜಪ್ಪ ತಾಪಂ ಮಾಜಿ ಅಧ್ಯಕ್ಷ ಎಚ್ ಆರ್ ಭೋಗಪ್ಪ, ಕಲ್ಲೇಶ್, ಚಂದ್ರಮೌಳಿ, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷೆ ಮಮತಾ ಪುನೀತ್, ಗ್ರಾಪಂ ಅಧ್ಯಕ್ಷೆ ನೇತ್ರಾವತಿ, ಲಿಂಗರಾಜು, ಬಿಬಿಎಂಪಿ ಇಂಜಿನಿಯರ್ ತಿಪ್ಪೇಶ್, ಗ್ರಾಪಂ ಸದಸ್ಯ ರಂಗನಾಥ್, ವಿಜ್ಞಾನಿ ಬಾಲಕೃಷ್ಣ ಹಾಜರಿದ್ದರು. -- ಬಾಕ್ಸ ಸುದ್ದಿ--

ಬಿಜೆಪಿ ಅಂಗಡಿ ರದ್ದಾಗುತ್ತದೆ

ಮುಂದೆ ಬಿಜೆಪಿ ಅಂಗಡಿ ರದ್ದಾಗುತ್ತದೆ. ನಮ್ಮ ಅಂಗಡಿ ಯಾವತ್ತು ಓಪನ್ ಆಗಿರುತ್ತವೆ. ಉಚಿತ ಗ್ಯಾಸ್ ಎಂದು ಬಿಜೆಪಿಯವರು ನೀಡಿದ್ದ ಗ್ಯಾಸ್ ಗೆ 950 ರು. ಎಂದಾಗ ಜನ ಸಿಲಿಂಡರ್ ಬಿಸಾಕಿದರು. ಇನ್ನು ಸಾಕಷ್ಟು ಯೋಜನೆಗಳನ್ನು ರಾಜ್ಯ ಸರ್ಕಾರ ತರಲಿದ್ದು ಗ್ಯಾರಂಟಿ ಯೋಜನೆಗಳ ಕಮಿಟಿಯಲ್ಲಿ ಡಾ. ಪರಮೇಶ್ವರ್, ರಾಧಾಕೃಷ್ಣ ಮತ್ತು ನಾನು ಇದ್ದೇನೆ. ನುಡಿದಂತೆ ನಡೆದಿದ್ದೇವೆ . ಆದರೆ ರಾಮನ ಹೆಸರು ಹೇಳಿಕೊಂಡು ರಾಜಕಾರಣ ಮಾಡಿ ರಾಮನನ್ನು ಬೀದಿಗೆ ತರಲಾಗಿದೆ ಎಂದು ಟೀಕಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ನಾಯಕತ್ವ ಗೊಂದಲ ಮಧ್ಯೆ 13 ಕೈ ಶಾಸಕರು ವಿದೇಶಕ್ಕೆ :
ವಿದ್ಯಾರ್ಥಿಗಳ ಗೋಳು, ಕೇಳೋರು ಯಾರು?